Friday, 25 January 2013

ಜನವರಿ ೨೫.. ಮತದಾರರ ದಿನ....

ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ದನಿ. ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತುಮಾಡುವ ನಾಯಕನನ್ನು ಚುನಾಯಿಸುವುದು ಪ್ರಜೆಗಳ ಜವಾಬ್ದಾರಿ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ನಮ್ಮದೇಶದಲ್ಲಿ ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

ಹಿಂದೆ ರಾಜರ ಆಳ್ವಿಕೆಯ ಸಮಯದಲ್ಲಿ ತಮ್ಮ ರಾಜನನ್ನು ಆರಿಸಿಕೊಳ್ಳುವ ಅವಕಾಶ ಪ್ರಜೆಗಳಿಗೆ ಇರಲಿಲ್ಲ. ರಾಜ್ಯ ರಾಜ್ಯಗಳ ನಡುವಿನ ಕಲಹದಿಂದಾಗಿ, ಆಗಾಗ ಬದಲಾಗುವ ರಾಜರಿಂದ, ಜನಸಾಮಾನ್ಯನಿಗೆ ತನ್ನ ರಾಜ ಯಾರು, ತಾವು ಯಾವ ರಾಜ್ಯಕ್ಕೆ ಒಳಪಟ್ಟಿದ್ದೇವೆ ಇಂಬ ಪರಿವೆಯೂ ಇರುತ್ತಿರಲಿಲ್ಲ. ರಾಜಕೀಯ ವಿಚಾರದಲ್ಲಿ ಅಷ್ಟರ ಮಟ್ಟಿಗೆ ಪ್ರಜೆ ಕಡೆಗಣಿಸಲ್ಪಟ್ಟಿದ್ದ.

ನಂತರ ಬಂದ ಬ್ರಿಟೀಷರ ಆಳ್ವಿಕೆಯಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದಿತ್ತು. ಭಾರತೀಯ ಪ್ರಜೆಗಳು ಕಡೆಗಣಿಸಲ್ಪಟ್ಟರು. ಆದರೆ, ಯಾವಾಗ ನಮ್ಮದೇಶ ತನ್ನದೇ ಆದ ಸಂವಿಧಾನವನ್ನು ಸಿದ್ಧಪಡಿಸಿ, ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಯಲ್ಲಿ ತಂದಿತ್ತೋ..ಆಗಲೇ ಭಾರತೀಯ ಪ್ರಜೆ ನಿಜವಾದ ಸ್ವಾತಂತ್ರ‍್ಯ ಪಡೆದ. ಜನತಂತ್ರ ವ್ಯವಸ್ಥೆಯಿಂದಾಗಿಯೇ ಪ್ರತಿ ಪ್ರಜೆಗೂ ಬೆಲೆ ಬಂತು. ಪ್ರಜೆಗಳ ನಿರ್ಣಯಕ್ಕೆ ಗೌರವ ಸಿಕ್ಕಿತ್ತು. ಅದೆಲ್ಲವೂ ಸಾಧ್ಯವಾಗಿದ್ದು ಮತದಾನ ಎಂಬ ಸಂವಿಧಾನದ ಒಂದು ಪ್ರಮುಖ ಅಂಗದ ಮೂಲಕವೇ.
2011ರ ವರ್ಷದಿಂದ ನಮ್ಮ ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಜ.25ನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೂ ಕಾರಣವಿದೆ. ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡದ್ದು 1950ರ ಜನವರಿ 25ನೆ ದಿನಾಂಕದಂದು. ಹೀಗಾಗಿ ಇದೇ ದಿನದಂದು ರಾಷ್ಟ್ರಿಯ ಮತದಾರರ ದಿನವನ್ನು ಆಚರಿಸಲು ಸರಕಾರ ನಿರ್ಧರಿಸಿತು.

18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತದೆ. ವಿದ್ಯಾವಂತರೇ ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ಕಡೆಗಣಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಜನತೆ ಹೆಚ್ಚುಹೆಚ್ಚು ವಿದ್ಯಾವಂತರಾದಂತೆ, ಮತದಾನದ ಕಡೆ ನಿರ್ಲಕ್ಷ್ಯಧೋರಣೆ ತೋರುತ್ತಿದ್ದಾರೆ.

ತಮ್ಮ ನಾಯಕರ ಬ್ರಷ್ಟಾಚಾರ, ಆಳುವ ಜನರಿಂದಲೇ ನಡೆಯುತ್ತಿರುವ ಲೂಟಿ, ಅನಾಚಾರವೇ ವಿಚಾರವಂತ ಪ್ರಜೆಗಳಲ್ಲಿ ಮತದಾನ, ಚುನಾವಣೆ ಕುರಿತ ಆಸಕ್ತಿಯನ್ನು ಕುಂದಿಸಿರಬಹುದು. ಆದರೆ ದೇಶವನ್ನು ಬದಲಾಯಿಸುವ ಶಕ್ತಿ ಪ್ರಜೆಗಳ ಕೈಯಲ್ಲೇ ಇದೆ. ಅರ್ಹ ಪ್ರತಿನಿಧಿಯನ್ನು ಚುನಾಯಿಸಿ ದೇಶದಲ್ಲಿ ನ್ಯಾಯಪರ ಸರಕಾರವನ್ನು ಜಾರಿಗೆ ತರುವ ಜವಾಬ್ದಾರಿ ಪ್ರಜೆಗಳಮೇಲಿದೆ ಎಂಬುದನ್ನು ಯಾವ ಪ್ರಜೆಯೂ ಮರೆಯಬಾರದು.
ಹಲವು ಆಮಿಷಗಳಿಂಗ ಮತದಾರರನ್ನು ಸೆಳೆದು ಗೆದ್ದುಬರುವ ಪ್ರಯತ್ನ ಅಭ್ಯರ್ಥಿಗಳಿಂದ ನಡೆಯುತ್ತದೆ. ಚುನಾವಣೆ ಹತ್ತಿರ ಬರುತ್ತಿರುವಾಗ, ಆಶ್ವಾಸನೆಗಳೂ ಹೆಚ್ಚುತ್ತಾ ಹೋಗುತ್ತದೆ. ಚುನಾವಣಾ ಪ್ರಚಾರಕ್ಕಾಗಿ ನಾನಾ ಪಕ್ಷಗಳಿಂದ ಏನೇ ಕಾರ್ಯಕ್ರಮಗಳೂ ನಡೆದರೂ ಮತದಾರರ ನಿಲುವು ಮಾತ್ರ ನಿರ್ದಿಷ್ಟವಾಗಿರಬೇಕು. ಜಾತಿ,ಧರ್ಮ,ಮೀರಿದ ನಿಜವಾದ ಜನಸೇವಕನನ್ನೇ ಆಯ್ಕೆ ಮಾಡಿ, ದೇಶದ ಅಭಿವೃದ್ಧಿಗೆ, ಜನರ ಒಳಿತಿಗೆ ಪರೋಕ್ಷವಾಗಿ ಮತದಾರರೇ ಕಾರಣರಾಗುತ್ತಾರೆ ಎಂಬುದು ಪ್ರತಿ ಮತದಾರನ ಗಮನದಲ್ಲಿರಬೇಕು.

ಮತದಾನ ಪ್ರಕ್ರಿಯೆಯಿಂದ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರನ್ನು ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನ ಪವಿತ್ರ‍್ಯತೆಯ ಬಗ್ಗೆ ಅರಿವು ಮೂಡಿಸುವುದು ,18 ವರ್ಷ ತುಂಬಿದ ವಯಸ್ಕರಲ್ಲಿ ಮತದಾನದ ಹಕ್ಕು ಪಡೆಯುವಂತೆ ಸ್ಫೂರ್ತಿ ನೀಡುವುದು, ಪ್ರಜೆಗಳ ಹಕ್ಕಿನ ಕುರಿತು ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನದ ಉದ್ದೇಶ. ಮತದಾರರಿಗೆ ಪ್ರಜಾಪ್ರಭುತ್ವದ ಅಗತ್ಯತೆ ಅನಿವಾರ್ಯತೆ ಯನ್ನು ಒತ್ತಿ ಹೇಳಿ ಪ್ರಬುದ್ಧ ಮತದಾರ ರಾಗಿ ಕಾರ್ಯನಿರ್ವಹಿಸುವಂತೆ ಉತ್ತೇಜಿಸುವುದು ಈ ದಿನಾಚರಣೆಯ ಗುರಿ.

ಇನ್ನು ಕೆಲವೇ ತಿಂಗಳಿನಲ್ಲಿ, ನಮ್ಮ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಪ್ರಜೆಗಳೂ ಮತದಾನ ಮಾಡಿ, ನಾಯಕರ ಆಯ್ಕೆಯ ಜವಾಬ್ಧಾರಿಯನ್ನು ಸೂಕ್ತರೀತಿಯಲ್ಲಿ ನಿಭಾಯಿಸಲು ಪ್ರತಿಜ್ಞೆ ಮಾಡುವುದರ ಮೂಲಕ ‘ರಾಷ್ಟ್ರೀಯ ಮತದಾರರ ದಿನ’ವನ್ನು ಆಚರಿಸಬೇಕಿದೆ.

Wednesday, 16 January 2013

ಶುಭ ತರಲಿ ಸಂಕ್ರಮಣ


ನವವರ್ಷದ ಆಗಮನವಾಗುತ್ತಿದ್ದಂತೆ ಬರುವ ಪ್ರಥಮ ಹಬ್ಬವೇ ಸಂಕ್ರಮಣ. ’ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ’ ಎನ್ನುವ ಶುಭ ಆಶಯದೊಂದಿಗೆ ಸಂಕ್ರಾಂತಿ ಕಾಳನ್ನು ಹಂಚುತ್ತಾ ಖುಷಿ ಪಡುವ ದಿನ ಇದು. ಹೊಸ ಅಂಗಿತೊಟ್ಟು ಸಿಹಿತಿಂಡಿ ಮೆಲ್ಲುತ್ತಾ ಪರಸ್ಪರ ಶುಭಹಾರೈಸುತ್ತಾ ಕುಣಿದಾಡುವ ಮಕ್ಕಳಿಗಂತೂ ಸಂಕ್ರಾಂತಿ ಹಬ್ಬವೆಂದರೆ ಎಲ್ಲಿಲ್ಲದ ಖುಷಿ. ಅರಿಶಿಣ ಕುಂಕುಮ, ಉಡುಗೊರೆ, ಎಳ್ಳು-ಬೆಲ್ಲ ಕೊಟ್ಟು, ತಾವೂ ಪಡೆದು ಸಂಭ್ರಮಿಸುವ ಮಹಿಳೆಯರಿಗೂ ಇದೊಂದು ಸ್ನೇಹ ಸಂಬಂಧ ಬೆಸೆಯುವ ಸಂತಸದ ಹಬ್ಬ.

ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಕಬ್ಬಿನ ತುಂಡುಗಳನ್ನು ಸಹ ಎಳ್ಳು ಬೆಲ್ಲದ ಜೊತೆ ಇಟ್ಟು ಮನೆಯಲ್ಲಿ ಬೀರಿ, ಹಂಚಿ ತಿಂದು ಸಂಭ್ರಮಿಸಲಾಗುತ್ತದೆ. ವರ್ಷಪೂರ್ತಿ ಮನೆಯ ತುಂಬಾ ಧಾನ್ಯ, ಸಂಪತ್ತು ತುಂಬಿರಲಿ ಎಂಬ ಸದಾಶಯ ಈ ಆಚರಣೆಯಲ್ಲಿದೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ,ಒಣ ಕೊಬ್ಬರಿ,ಹುರಿಗಡಲೆ,ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ. ಎಳ್ಳು ದೇಹಕ್ಕೆ ತಂಪು ನೀಡುವ ವಸ್ತುವೂ ಹೌದು. ಉತ್ತರಾಯಣದ ಉಷ್ಣ ವಾತಾವರಣದಿಂದ ಆರೋಗ್ಯ ಕೆಡದಿರಲಿ ಎಂಬ ಉದ್ದೇಶ ಈ ಎಳ್ಳು ಬೆಲ್ಲ ಹಂಚುವ ಆಚರಣೆಯ ಹಿಂದಿದೆ. ಸಂಕ್ರಾಂತಿ, ಹುಗ್ಗಿ ಹಬ್ಬವೂ ಹೌದು. ಚಾಂದ್ರಮಾನದ ಪ್ರಕಾರ ಸಂಕ್ರಾಂತಿ ಹಬ್ಬ ಜನವರಿ 14 ಅಥವಾ 15 ರಂದು, ಬರುತ್ತದೆ.

ದಕ್ಷಿಣಾಯಣ ಮುಗಿದು ಉತ್ತರಾಯಣ ಪ್ರಾರಂಭವಾಗುವ ಸಂದರ್ಭದಲ್ಲಿ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ಇದು ಚಳಿಗಾಲ ಮುಗಿದು ಮುಂಬರುವ ಬೇಸಿಗೆಯ ಮುನ್ಸೂಚನೆ. ಇಲ್ಲಿಂದ ಸೂರ್ಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾನೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯ ಆಗಮನವಾಗುತ್ತದೆ.

ಮಹಾಭಾರತದಲ್ಲಿಯೂ ಮಕರ ಸಂಕ್ರಮಣದ ಉಲ್ಲೇಖವಿದೆ. ಸಂಕ್ರಾತಿಯ ಸಂದರ್ಭದಲ್ಲಿ ಭೀಷ್ಮ ಪಿತಾಮಹ ಶರಶಯ್ಯೆಯ ಮೇಲೆ ಮಲಗಿ ಉತ್ತರಾಯಣದ ಬರುವಿಕೆಗೆ ಕಾದು, ಪ್ರಾಣ ತ್ಯಜಿಸುತ್ತಾನೆ. ಭಗೀರಥ ಮಹಾರಾಜನೂ ಉತ್ತರಾಯಣದಲ್ಲಿಯೇ ಗಂಗೆಯನ್ನು ಭೂಮಿಗೆ ತಂದು ಪಿತೃಗಳಿಗೆ ಗಂಗಾಜಲದ ತರ್ಪಣವನ್ನು ಕೊಡುತ್ತಾನೆ. ಹೀಗೆ ಮಕರ ಸಂಕ್ರಮಣ ಕಾಲಕ್ಕೆ ಪುರಾಣ, ಮಹಾಕಾವ್ಯಗಳಲ್ಲಿಯೂ ವಿಶೇಷ ಸ್ಥಾನ ನೀಡಲಾಗಿದೆ.
ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಹಬ್ಬ ಇದು. ಸಾಮಾನ್ಯವಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಆಚರಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಈ ಹಬ್ಬಕ್ಕೆ ಸಂಕ್ರಮಣ ಎಂದು ಕರೆದರೆ, ತಮಿಳುನಾಡಿನಲ್ಲಿ ಪೊಂಗಲ್ಎಂದು ಸಂಭೋದಿಸಲಾಗುತ್ತದೆ. ಈ ಹಬ್ಬದ ವಿಶೇಷ ತಿನಿಸಾದ, ಹಾಲು ,ಬೆಲ್ಲ, ಅನ್ನವನ್ನು ಕುದಿಸಿ ಪೊಂಗಲ್ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ತಾವೂ ಸವಿಯುತ್ತಾರೆ. ಹಲವೆಡೆ ಗೋಪೂಜೆಯೂ ನಡೆಯುತ್ತೆ. ಹಾಗೇ ಗೂಳಿಯನ್ನು ಪಳಗಿಸುವ ಆಟವನ್ನೂ ಏರ್ಪಾಟು ಮಾಡಿರುತ್ತಾರೆ. ಕೇರಳದಲ್ಲಂತೂ ಸಂಭ್ರಮವೋ ಸಂಭ್ರಮ. ಸ್ವಾಮಿ ಅಯ್ಯಪ್ಪ ತನ್ನ ಅಸಂಖ್ಯ ಭಕ್ತರಿಂದ ವಿಶೇಷವಾಗಿ ಪೂಜಿಸಲ್ಪಡುತ್ತಾನೆ. ಸಂಕ್ರಾಂತಿಯ ದಿನ ಗೋಚರಿಸುವ ಮಕರಜ್ಯೋತಿಯ ರೂಪದಲ್ಲಿ ಅಯ್ಯಪ್ಪ ಕಾಣಿಸಿಕೊಳ್ಳುತ್ತಾನೆ ಎಂಬ ನಂಬಿಕೆ ಇದೆ. ದೇಶದೆಲ್ಲಡೆಯಿಂದ ಅಯ್ಯಪ್ಪನ ಭಕ್ತರು ಕೇರಳದ ಶಬರೀಮಲೈಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿ ಪುನೀತರಾಗುತ್ತಾರೆ. ಗಾಳಿಪಟವನ್ನು ಹಾರಿಬಿಡುವುದು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ಹಬ್ಬದಂದು ಆಚರಿಸುವ ವಿಶೇಷ ಆಚರಣೆ. ಮಹಾರಾಷ್ಟ್ರದಲ್ಲಿಯೂ ಎಳ್ಳನ್ನು ಹಂಚುವ ಸಂಪ್ರದಾಯವಿದೆ ಆದರೆ ಬಿಡಿ ಬಿಡಿ ಎಳ್ಳನ್ನು ಹಂಚದೆ, ಎಳ್ಳು ಉಂಡೆಯನ್ನು ಮಾಡಿ ಹಂಚುತ್ತಾರೆ. ಪಂಜಾಬ್, ಹರಿಯಾಣದಲ್ಲಿಯೂ ಸಂಕ್ರಾಂತಿ ’ಲೋಹರಿ’ ಎಂಬ ಹೆಸರಲ್ಲಿ ಆಚರಿಸಲ್ಪಡುತ್ತದೆ.

ಮನೆ ಮನೆಯಲ್ಲಿ ಸಂಭ್ರಮ ತಂದಿರುವ ಸಂಕ್ರಮಣ ಎಲ್ಲರಿಗೂ ಶುಭ ತರಲಿ ಹಾಗೂ ಎಳ್ಳು ಬೆಲ್ಲದ ಸಿಹಿಯಂತೆ ವರ್ಷಪೂರ್ತಿ ಸಿಹಿ ನಿಮ್ಮ ಜೊತೆಗಿರಲಿ ಎಂಬ ಹಾರೈಕೆ ನನ್ನದು..

Friday, 11 January 2013

ಸ್ವಾಮಿ ವಿವೇಕಾನಂದರ ಜನ್ಮದಿನ

ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ಏಕೆಂದರೆ ದೌರ್ಬಲ್ಯವೇ ಪಾಪ, ದೌರ್ಬಲ್ಯವೇ ಮರಣ. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಎಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು, ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು…” ಇಂಥ ಘೋಷಣೆಯೊಂದಿಗೆ ದೇಶದ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಮಹಾನ್‌ ವ್ಯಕ್ತಿಗಳೇ ಸ್ವಾಮಿ ವಿವೇಕಾನಂದರು. ದೇಶದ ಯುವ ಶಕ್ತಿಗಳಿಗೆ ಆಂತರ್ಯದ ಸತ್ವ ತುಂಬುವಲ್ಲಿ ಯಶಸ್ವಿಯಾದ ಅದ್ಭುತ ತತ್ವಜ್ಞಾನಿಗಳು ಇವರು. ನಮ್ಮ ದೇಶದ ತತ್ವವನ್ನು - ಸತ್ವವನ್ನು ಪ್ರಪಂಚಕ್ಕೆ ಸಾರಿದ ದೇಶದ ಈ ಹೆಮ್ಮೆಯ ಪುತ್ರನಲ್ಲಿತ್ತು ತಾಯ್ನಾಡು ಮತ್ತು ದೇಶದ ಸಂಸ್ಕೃತಿಯ ಬಗ್ಗೆ ಅಗಾಧವಾದ ಪ್ರೀತಿ. ಯುವ ಶಕ್ತಿಯೇ ದೇಶದ ಶಕ್ತಿ ಎಂಬ ಘೋಷಣೆ ಸಾರಿದ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವುದರ ಮೂಲಕ ಸರಕಾರ ವಿವೇಕಾನಂದರಿಗೆ ಗೌರವ ಸೂಚಿಸಿದೆ.

‘ಸ್ವಾಮಿ ವಿವೇಕಾನಂದರಾಗುವ ಮೊದಲು ಅಂದರೆ, ಇವರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. 1863 ಜನವರಿ 12ರಂದು ಜನಿಸಿದ ನರೇಂದ್ರ, ಮುಂದೆ ಇಡೀ ದೇಶದ ಶಕ್ತಿಯಾಗಿ ಬೆಳೆದರು. ಅತ್ಯಂತ ಚೂಟಿ ಮತ್ತು ತುಂಟತನದ ಸ್ವಭಾವದ ಈ ಬಾಲಕನಲ್ಲಿದ್ದ ಅಧಮ್ಯ ಚೇತನವನ್ನು ಮೊದಲು ಗುರುತಿಸಿದ್ದು ಶಿವಭಕ್ತೆಯಾಗಿದ್ದ ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ. ತನ್ನ ಶಿವಪೂಜೆಯ ಫಲವಾಗಿ ಹುಟ್ಟಿದ್ದ ಮಗ ನರೇಂದ್ರ, ಸಾಕ್ಷಾತ್‌ ಶಿವನೇ ಎಂದು ನಂಬಿದ್ದರು ಅವರು. ನರೇಂದ್ರ ಪುಟ್ಟ ಮಗುವಾಗಿದ್ದಾಗಲೇ ರಾಮಾಯಣ, ಮಹಾಭಾರತ, ಪುರಾಣಗಳನ್ನು ಓದಿ ತಿಳಿಸಿದ್ದರು ತಾಯಿ ಭುವನೇಶ್ವರಿ ದೇವಿ. ವೃತ್ತಿಯಲ್ಲಿ ವಕೀಲರಾಗಿದ್ದ ತಂದೆ ವಿಶ್ವನಾಥದತ್ತ, ದೈವಭಕ್ತರಲ್ಲದಿದ್ದರೂ ಜನಾನುರಾಗಿಗಳಾಗಿದ್ದರು. ಸಾಕಷ್ಟು ದಾನ ಧರ್ಮ ಮಾಡಿ ಜನರ ಪ್ರೀತಿ ಸಂಪಾದಿಸಿಕೊಂಡಿದ್ದರು. ಇಂಥ ಆದರ್ಶ ತಂದೆ-ತಾಯಿಗಳ ಆರೈಕೆಯಲ್ಲಿ ಬೆಳೆದ ನರೇಂದ್ರನಿಗೆ ದೈವಭಕ್ತಿ, ದೇಶಭಕ್ತಿ, ತೀಕ್ಷ್ಣ ಬುದ್ಧಿಶಕ್ತಿ, ಆತ್ಮವಿಶ್ವಾಸ, ನಿರ್ಭಯತೆ ಮತ್ತು ದೃಢತೆ, ಜನ್ಮದತ್ತವಾಗಿ ಬಂದಿತ್ತು.

ಸ್ವಾಮಿ ವಿವೇಕಾನಂದ
1879ರಲ್ಲಿ ಕಲ್ಕತ್ತಾದ ಸ್ಕೊಟಿಷ್‌ಚರ್ಚ್‌ ಕಾಲೇಜಿನಲ್ಲಿ ನರೇಂದ್ರ ನಾಥ ದತ್ತ, ಪಾಶ್ಚಾತ್ಯ ತರ್ಕ, ತತ್ವಶಾಸ್ತ್ರ ಹಾಗೂ ಇತಿಹಾಸವನ್ನು ಅಧ್ಯಯನ ಮಾಡಿದರು. ನಂತರ 1881ರಲ್ಲಿ ಲಲಿತ ಕಲೆಯ ಪದವಿಯನ್ನು ಹಾಗೂ 1884ರಲ್ಲಿ ಕಲಾ ಪದವಿಯನ್ನೂ ಪಡೆದರು. ಇಷ್ಟರಲ್ಲೇ ನರೇಂದ್ರನಾಥ ದತ್ತನಿಗೆ ಶ್ರೀ ರಾಮಕೃಷ್ಣ ಪರಮಹಂಸರ ಪರಿಚಯವಾಗಿತ್ತು. 1881ರಲ್ಲಿಯೇ ಪರಮಹಂಸರನ್ನು ಭೇಟಿಯಾಗಿದ್ದ ನರೇಂದ್ರ, ಮೊದಲ ಭೇಟಿಯಲ್ಲಿಯೇ ರಾಮಕೃಷ್ಣರ ಶಕ್ತಿಯನ್ನು ನಂಬದೇ ಅವರನ್ನು ಪರೀಕ್ಷಿಸುವ ನಿರ್ಧಾರಕ್ಕೆ ಬಂದರು. ಆನಂತರದ ನಿರಂತರ ಒಡನಾಟದಿಂದ ನರೇಂದ್ರನಿಗೆ ರಾಮಕೃಷ್ಣರ ಶಕ್ತಿಯ ಪರಿಚಯವಾಯ್ತು. ಅವರ ಸರಳತೆ, ನಿಶ್ಕಲ್ಮಶ ಭಕ್ತಿ ಮತ್ತು ಸಿದ್ಧಾಂತಗಳಿಗೆ ಆಕರ್ಷಿತರಾದರು. ನರೇಂದ್ರನಲ್ಲಿರುವ ಅಪರಿಮಿತ ಚೈತನ್ಯವನ್ನು ಗುರುತಿಸಿದ ರಾಮಕೃಷ್ಣರು, ಶಿಷ್ಯನನ್ನಾಗಿ ಸ್ವೀಕರಿಸಿ, ವಿವೇಕಾನಂದ ಎಂದು ನಾಮಕರಣ ಮಾಡಿದರು.

ಅಮೇರಿಕಾದ ಚಿಕಾಕೋದಲ್ಲಿ ನಡೆದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೌಲ್ಯ’ದ ಪರಿಚಯ ಮಾಡಿಕೊಟ್ಟ ವಿವೇಕಾನಂದರ ಭಾಷಣ ವಿಶ್ವ ವಿಖ್ಯಾತವಾಗಿದೆ. ‘ಅಮೇರಿಕಾದ ಸಹೋದರ ಸಹೋದರಿಯರೇ’ ಎಂಬ ಸಂಬೋಧನೆಯೊಂದಿಗೆ ಪ್ರಾರಂಭವಾದ ವಿವೇಕಾನಂದ ಭಾಷಣ ಅಲ್ಲಿ ನೆರೆದಿದ್ದ ಅಸಂಖ್ಯ ಜನರ ಚಿತ್ತವನ್ನು ಗೆದ್ದಿತ್ತು. ಪಾಶ್ಚಾತ್ಯರಿಂದ ‘ವಿಚಿತ್ರ ಧರ್ಮ’ ಎಂದು ಕರೆಯಿಸಿಕೊಂಡಿದ್ದ ಹಿಂದೂ ಧರ್ಮದ ನಿಜವಾದ ಅರ್ಥವನ್ನು,ಸಿದ್ಧಾಂತಗಳನ್ನು ಪಾಶ್ಚಾತ್ಯರಿಗೆ ಮನದಟ್ಟು ಮಾಡುವಲ್ಲಿ ಸ್ವಾಮಿ ವಿವೇಕಾನಂದ ಯಶಸ್ವಿಯಾದರು. ವಿಶ್ವ ಪರ್ಯಟನೆ ಮಾಡಿ ಹಿಂದೂ ಧರ್ಮದ ಸಿದ್ಧಾಂತಗಳು ಹಾಗೂ ಮೌಲ್ಯಗಳನ್ನು ಪರಿಚಯ ಮಾಡಿಕೊಟ್ಟ ಸ್ವಾಮಿ ವಿವೇಕಾನಂದರ ಎಲ್ಲಾ ಭಾಷಣಗಳು ಈಗ ಪುಸ್ತಕ ರೂಪದಲ್ಲಿವೆ. ಅವುಗಳನ್ನು ಹಿಂದೂ ಧರ್ಮದ ಯೋಗ ಸಿದ್ಧಾಂತಗಳಾಗಿ ಪರಿಗಣಿಸಲಾಗಿದೆ. ಅಮೇರಿಕಾದ ‘ಸರ್ವಧರ್ಮ ಸಮ್ಮೇಳನ’ದ ನಂತರ ತಾಯ್ನಾಡಿಗೆ ಮರಳಿದ ವಿವೇಕಾನಂದರು ಗುರು ರಾಮಕೃಷ್ಣ ಪರಮಹಂಸರ ಸ್ಮರಣಾರ್ಥ 1892, ಮೇ 1ರಂದು ‘ರಾಮಕೃಷ್ಣ ಮಿಶನ್‌’ ಸ್ಥಾಪಿಸಿದರು.

ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತ 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆ ವಿವೇಕಾನಂದರಿಂದ ಜಗತ್‌ಪ್ರಸಿದ್ಧವಾಯ್ತು. ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿ ರಾಮಕೃಷ್ಣ ಮಿಶನ್‌ಗುರುತಿಸಿಕೊಂಡಿತು.

ಕಾಳಿಯ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರು ಹಾಗೂ ಅವರ ಪತ್ನಿ ಮಾತೆ ಶಾರದಾ ದೇವಿಯವರ ನೆಚ್ಚಿನ ಶಿಷ್ಯರಾಗಿದ್ದ ವಿವೇಕಾನಂದರು, ತಮ್ಮದೇ ಆದ ವೈಚಾರಿಕ ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಂಡರು.
‘ಸುಖಕ್ಕಿಂತ ದುಃಖವೇ, ಐಶ್ವರ್ಯಕ್ಕಿಂತಲೂ ದಾರಿದ್ರ್ಯವೇ, ಹೊಗಳಿಕೆಗಿಂತಲೂ ಪೆಟ್ಟುಗಳೇ ಮನುಷ್ಯನಲ್ಲಿ ಅಡಕವಾಗಿರುವ ಅಂತರಾಗ್ನಿಯನ್ನು ಹೊರಗೆಡಹುತ್ತದೆ’ ಎಂದು ಬೋಧಿಸಿದ ವಿವೇಕಾನಂದರು ಬಡವರ, ನೊಂದವರ, ಸಮಾಜದಲ್ಲಿ ತುಳಿತಕ್ಕೊಳಗಾದವರ ಕಷ್ಟಕ್ಕೆ ಸ್ಪಂದಿಸಿದರು. ‘ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!’ ಇದು ಯುವ ಶಕ್ತಿಗಳಲ್ಲಿರುವ ಉತ್ಸಾಹವನ್ನು ಬಡಿದೆಬ್ಬಿಸಲು ವಿವೇಕಾನಂದರು ಘೋಷಿಸಿದ ಪ್ರೋತ್ಸಾಹ ವಾಕ್ಯ. ಇದು ಬಿಸಿರಕ್ತದ ಯುವ ಚೈತನ್ಯವನ್ನು ಜಾಗೃತಗೊಳಿಸುವ ಮಂತ್ರವಾಯಿತು. ಗಾಂಭೀರ್ಯ, ಸರಳತೆ, ಧೈರ್ಯ, ಅಸ್ವಾರ್ಥತೆ, ದಯೆ, ಸೇವಾಶಕ್ತಿಯಿಂದಲೇ ದೇಶದ ಜನತೆಯನ್ನು ಗೆದ್ದ ಸ್ವಾಮಿ ವಿವೇಕಾನಂದರು ತಮ್ಮ 29 ನೇ ವಯಸ್ಸಿನಲ್ಲಿ ಧೈವಾಧೀನರಾದರು. ಅತೀ ಚಿಕ್ಕ ವಯಸ್ಸಿನಲ್ಲಿ ಮಹಾ ಸಾಧನೆ ತೋರಿದ ಈ ಶಕ್ತಿ ಅಸ್ತಂಗತವಾದ ದಿನ 1902ರ ಜುಲೈ 4.

ಯುವ ಜನತೆಗೆ ಪ್ರೋತ್ಸಾಹಿಸಿ, ಆ ಮೂಲಕ ಯಶಸ್ವಿ ಮಾರ್ಗವನ್ನು ಸೂಚಿಸಿದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆ ಇವತ್ತು. ಯುವ ಶಕ್ತಿಯ ದ್ಯೋತಕವಾಗಿದ್ದ ವಿವೇಕಾನಂದರ ಸ್ಮರಣಾರ್ಥ ಇಂದು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...