Monday 7 March 2022

"ಬಕುಲದ ಬಾಗಿಲಿನಿಂದ" - ಪುಸ್ತಕ ಪರಿಚಯ

  ಎಲ್ಲ ಹೆಣ್ಣುಮನಸ್ಸಿನ ಹೃದಯಗಳಿಗೂ "ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು"


ಪುಸ್ತಕದ ಹೆಸರು -



ಬಕುಲದ ಬಾಗಿಲಿನಿಂದ 

ಲೇಖಕಿ -  ಸುಧಾ ಆಡುಕಳ

ಪುಸ್ತಕದ ಬೆಲೆ - ೨೦೦ ರೂಪಾಯಿಗಳು

ಪ್ರಕಾಶನ - ಬಹುರೂಪಿ ಪ್ರಕಾಶನ ಬೆಂಗಳೂರು 

ಲಭ್ಯತೆ - Bahuroopi.in  ಆನ್‌ ಲೈನ್‌ ಬುಕ್‌ ಸ್ಟೋರ್‌


"ಬಕುಲದ ಬಾಗಿಲಿನಿಂದ"  ಇತ್ತೀಚೆಗೆ ನಾನು ಓದಿದ ಅತ್ಯಂತ ಅಪರೂಪದ ಪುಸ್ತಕ.  ಅಂತಾರಾಷ್ಟ್ರೀಯ ಮಹಿಳಾ ದಿನದಂದು ಈ ಪುಸ್ತಕದ ಬಗ್ಗೆ ಬರೆಯಲೇ ಬೇಕು ಎಂಬ ಕಾರಣಕ್ಕೆ ನಾನು ಮತ್ತೊಮ್ಮೆ ಓದಿ ಎದೆಗಿಳಿಸಿಕೊಂಡೆ.  ಪುರಾಣಗಳ  ಕಾಲದಿಂದ ಇಲ್ಲಿಯ ತನಕ ಹೆಣ್ಣು ಸಾಗಿ ಬಂದ ಕಥೆಗಳು ಇಲ್ಲಿವೆ.  ಪುರಾಣಕ್ಕೂ ವಾಸ್ತವಕ್ಕೂ ಕೊಂಡಿ ಹಾಕಿ ಹೆಣ್ಣಿನ ನಾನಾ ರೂಪವನ್ನು ವಿಷ್ಲೇಶಿಸಿ ಚಿತ್ರಿಸಿರುವ ಕಥನಗಳ, ಹೆಣ್ಣಿನ ಸಂವೇದನೆಗಳ ಗೊಂಚಲು ಇದು.  ಹೀಗಾಗಿ ಇವತ್ತಿಗಾಗಿ ಈ ಪುಸ್ತಕವನ್ನೇ ನಾನು ಆಯ್ಕೆ ಮಾಡಿಕೊಂಡೆ. 

ಈ ಪುಸ್ತಕವು ಕವನ ಸಂಕಲನವೂ ಅಲ್ಲ, ಕಥಾ ಸಂಕಲನವೂ ಅಲ್ಲ.  ಅವೆರಡೂ ಹದವಾಗಿ ಮಿಳಿತಗೊಂಡ ಅದ್ಭುತ ರುಚಿಯ ಮಾಕ್‌ಟೇಲ್‌ ಇದು.  ಅಂದಿನ ಹೆಣ್ಣಿನ ಕಥನಗಳನ್ನು ಇಂದಿನ ಕಣ್ಣಲ್ಲಿ ನೋಡಿ, ಸೃಜಿಸಿದ ಅಂಕಣ ಬಹರದ ಸಂಗ್ರಹ ರೂಪವಿದು.  ಆತ್ಮೀಯ ಭಾಷೆಯಲ್ಲಿ ಹೆಣ್ಣಿನ ಕಥೆಗಳನ್ನು ಹೇಳುತ್ತಾ ಓದುಗರ ಮನಸ್ಸಿನ ಕದ ತೆರೆಸುತ್ತಾ,  ಸಾಗುವ ಲೇಖಕಿ ಅಲ್ಲಲ್ಲಿ  ಚೆಂದದ ಕವನದ ಸಾಲುಗಳನ್ನು ಸೇರಿಸಿ ಓದುಗರ ಹೃದಯ ಮೀಟುತ್ತಾರೆ. 

"ಬಕುಲದ ಬಾಗಿಲಿನಿಂದ" ಒಳಹೊಕ್ಕ ನನಗೆ ಕೇಳಿಸಿದ್ದು ಲೇಖಕಿಯ ಭಾವಗಾನದ ಅನುರಣನ. ಕೃತಿಯನ್ನ ಓದುತ್ತಾ ಓದುತ್ತಾ ಹೆಣ್ಣಿನ ಭಾವ ಕೊಳದೊಳಕ್ಕೇ ಬಿದ್ದ ಅನುಭವವಾಯ್ತು ನನಗೆ.   ಯಾಕಂದರೆ ಇಲ್ಲಿ ಹೆಣ್ಣಿನ ಧಿಟ್ಟತನದ ಕಥೆಯಿದೆ,  ಹುಮ್ಮಸ್ಸಿದೆ, ಆತ್ಮವಿಶ್ವಾಸವಿದೆ, ಆತ್ಮಪ್ರೀತಿಯಿದೆ, ಅಧಮ್ಯ ಪ್ರೇಮವಿದೆ,  ಶೃಂಗಾರವಿದೆ, ಹತಾಶೆಯಿದೆ, ಯಾತನೆಯಿದೆ, ಅಸಹಾಯಕತೆಯಿದೆ, ಕೋಪವಿದೆ, ತ್ಯಾಗವೂ ಇದೆ. 

ಈ ಕೃತಿಯಲ್ಲಿರುವ ಎಲ್ಲ ಲೇಖನಗಳೂ, ಪುಸ್ತಕವಾಗುವುದಕ್ಕೂ ಮುಂಚೆ  "ಬಕುಲದ ಬಾಗಿಲಿನಿಂದ" ಎಂಬ ಹೆಸರಿನಲ್ಲಿಯೇ ಅವಧಿ ವೆಬ್‌ಸೈಟ್‌ನಲ್ಲಿ ಅಂಕಣವಾಗಿ ಪ್ರಕಟವಾಗುತ್ತಿದ್ದವು. ಆ ಲೇಖನಗಳೆಲ್ಲವನ್ನೂ ಸೇರಿಸಿ ಗುಚ್ಛ ಮಾಡಿಕೊಟ್ಟ ಬಹೂರೂಪಿ ಪ್ರಕಾಶನಕ್ಕೆ ಧನ್ಯವಾದಗಳು. "ಈ ಅಂಕಣವನ್ನು ಬರೆಯುವಷ್ಟೂ ಕಾಲ ಒಂದೊಂದು ವಾರ ನಾನು ಒಬ್ಬ ಹೆಣ್ಣುಮಗಳೊಂದಿಗೆ ಮುಖಾಮುಖಿಯಾಗಿದ್ದೇನೆ. ಅವಳನ್ನು ಪ್ರೀತಿಯಿಂದ ಮಾತನಾಡಿಸಿ ಮೈದಡವಿದ್ದೇನೆ. ಅವರು ನಗುವಾಗ ನಕ್ಕು ಅಳುವಾಗ ಅತ್ತು ಹಗುರಾಗಿದ್ದೇನೆ." ಎನ್ನುತ್ತಾರೆ ಲೇಖಕಿ ಸುಧಾ ಆಡುಕಳ. ಖಂಡಿತ ಓದುವಾಗಲೂ ನನಗೆ ಅಂಥದ್ದೇ ಅನುಭವವಾಯ್ತು. ಓದುತ್ತಾ ಓದುತ್ತಾ ಅವರು ಬರೆದ ಆ ಪಾತ್ರಗಳೊಳಗೆ ಹೋಗಿ ಉಸಿರಾಡಿದ್ದೇನೆ. ನಕ್ಕಿದ್ದೇನೆ. ಅತ್ತಿದ್ದೇನೆ.  

ಬಕುಲದ ಬಾಗಿನಿಲಿನೊಳಗೆ ನನಗೆ ಮೊದಲು ಸಿಕ್ಕಿದ್ದು "ರಾಧೆ". ಬೃಂದಾವನದಲ್ಲಿ ತನ್ನ ಬಿಟ್ಟು ಹೋದ ಶ್ಯಾಮನಿಗಾಗಿ ಕಾಯದೇ ಕೊರಗದೇ, ಅವನನ್ನ ತನ್ನ ಹೃದಯದಲ್ಲಿಯೇ ಇರಿಸಿಕೊಂಡು ಜೀವನವೆಂಬ ದಿನದ ಸೂರ್ಯಾಸ್ತದ ಕೊಟ್ಟ ಕೊನೆಯ ಕ್ಷಣದವರೆಗೂ ಬದುಕಿದ ರಾಧೆಯ ಕಥೆ ಅದು. ಈ ಕಥೆಯ ಕೊನೆಯಲ್ಲಿ, ಅಂತೂ ಬದುಕಿನ ಮುಸ್ಸಂಜೆಯ ಹೊತ್ತಲ್ಲಿ ಶ್ಯಾಮ ರಾಧೆಯನ್ನರಸಿ ಬರುತ್ತಾನೆ, ಪುನಃ ಅವರು ರಾಧಾಕೃಷ್ಣರಾಗುತ್ತಾರೆ. 

ರಾಧೆ ಕಥೆಯ ಕೊನೆಯಲ್ಲಿರುವ ಕವನದ ಸೊಗಸು ಹೀಗಿದೆ ನೋಡಿ. 


 ಶ್ಯಾಮ ಬಂದ ರಾಧೆಯೆಡೆಗೆ ಸೂರ್ಯನಿಳಿವ ಹೊತ್ತು

ರಾಧೆಯೀಗ ಹಣ್ಣುಮುದುಕಿ ಕುಳಿತಿದ್ದಳು ಕೌದಿಯ ಹೊದ್ದು

ಬಂದೇ ರಾಧೆ ಎಂದ ಶ್ಯಾಮ, ಬರುವಿಯೆಂದು ಗೊತ್ತು

ಕಾಯುತ್ತಿದ್ದೆಯೇನು ರಾಧೆ ? ಶ್ಯಾಮ ನುಡಿದ ಸೋತು


ಕಾಯುವ ಮಾತು ಯಾಕೆ ಬಂತು? ಇಲ್ಲೇ ಇದ್ದೆ ನೀನು

ಹೋದೆ ಕಾದೆ ಎಂಬುದೆಲ್ಲ ಬರಿಯ ಭ್ರಮೆಯ ತಂತು

ರಾಧೆ ಕೈಯ್ಯ ಹಿಡಿದ ಶ್ಯಾಮ ಕೈಯ್ಯ ತುಂಬ ಸುಕ್ಕು

 ಇಷ್ಟು ಒರಟು ! ಎಷ್ಟು ದುಡಿದೆ ? ಎಂದ ಮುತ್ತನಿಟ್ಟು


ಲೆಕ್ಕಕ್ಕಿಲ್ಲಿ ಜಾಗವಿಲ್ಲ ಸುರಿದ ಬೆವರ ಧಾರೆ

ಹನಿಹನಿಯಲು ನೀನೆ ಇದ್ದೆ ಈಗ ಬಂದೆ ಎದುರಿಗೆ

ಸುಕ್ಕಲ್ಲ ಇದು ನಿನ್ನ ರುಜು ನನ್ನೆಲ್ಲ ಶ್ರಮದ ದುಡಿಮೆಗೆ

ಹಸಿರ ರಾಶಿ ವನದ ತುಂಬ ಸಾಕ್ಷಿಯಾಗಿದೆ ಒಲವಿಗೆ


ಬೃಂದಾವನವೇ ವಲಸೆ ಬಂದು ನೆಲೆಸಿದಂತಿದೆ ಇಲ್ಲಿಯೆ

ನಾನು ಬರದೆ ಹೇಗೆ ಇರಲಿ ? ಶ್ಯಾಮ ನುಡಿದ ರಾಧೆಗೆ

ಕಣ್ಣಾ ನಿನ್ನ ಮೈಯ್ಯ ನುಣುಪು ಚಿಗುರ ತುದಿಯ ನವಿರಲಿ

ನಿನ್ನ ಕೊಳಲ ಮಧುರಗಾನ ಹೂವಿನ ಪಿಸುಮಾತಲಿ


ಕೌದಿಯೊಳಗೆ ಬಿಸಿಯ ಗಾಳಿ ಶ್ಯಾಮನೆದೆಯ ಸೋಕಿತು

ಸುಕ್ಕುಗಟ್ಟಿದ ರಾಧೆ ಕರವು ಪ್ರೇಮ ಕವನವಾಯಿತು.


ಈ ಆಶಾವಾದಿ ರಾಧೆಯ ಕತೆ ಕೇಳಿ ಮುಂದೆ ಹೋದರೆ,  ನಮಗೆ ಸಿಗುವವಳೇ ಮಣಿಪುರದ ರಾಜಕುಮಾರಿ ಚಿತ್ರಾ.    ತಾನು ಮೆಚ್ಚಿದ ಪುರುಷ ಅರ್ಜುನಿನಾಗಿ ಸಂಪೂರ್ಣ ಬದಲಾಗುವ ಚಿತ್ರಾಗೆ, ಮದನನೇ ಧರೆಗಿಳಿದು ಬಂದು ಹೆಣ್ಣಾಗುವುದನ್ನು ಕಲಿಸಿಹೋಗುತ್ತಾನೆ. ಬಯಸಿದ್ದು ಸಿಕ್ಕಮೇಲೆ ಅದೆಷ್ಟು ಹೊತ್ತು ಆ ಬದಲಾವಣೆಯ ಸೋಗು?  ಪುನಃ ಆಕೆಗೆ ತನ್ನತನವನ್ನು ಮರಳಿ ಪಡೆಯುವ ಆಶೆಯಾಗುತ್ತದೆ.  ಪಾರ್ಥನನ್ನು ಪಡೆಯುವ ತವಕದಲ್ಲಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಂಡ ಚಿತ್ರಾಗೆ ತನ್ನದೇ ಹೊಸ ರೂಪ ಚುಚ್ಚತೊಡಗುತ್ತದೆ. "ನನ್ನನ್ನು ನಾನಾಗಿಯೇ ಇರಲುಬಿಡು. ಈ ಕೃತಕ ಸೌಂದರ್ಯದ ಪರದೆಯನ್ನು ಸರಿಸಿಬಿಡು" ಎನ್ನುವ ಚಿತ್ರಾ ಮದನನಿಂದ ತನ್ನ ಮೊದಲ ರೂಪವನ್ನೇ ವಾಪಾಸ್ ಪಡೆಯುತ್ತಾಳೆ.  ಈ ಕಥೆಯನನ್ನ ಬಂಡವಾಳಶಾಹಿ ಪದ್ಧತಿಯ ಪ್ರಭಾವಕ್ಕೆ ಬಿದ್ದು ನಮ್ಮ ಜೀವನಶೈಲಿಯ ದೃಷ್ಟಿಕೋನವನ್ನೇ ಬದಲಾಯಿಸಿಕೊಂಡು,  ಕೂದಲು, ಚರ್ಮ, ದೇಹ ಎಲ್ಲವನ್ನೂ ಆಧುನಿಕವಾಗಿಸಿಕೊಳ್ಳಲು ಹೆಣಗಾಡುವ ಆಧುನಿಕ ಚಿತ್ರೆಯರಿಗೆ ಹೋಲಿಸಿ ಬರೆದಿದ್ದಾರೆ ಲೇಖಕರು. 

ನಂತರ ಬರುವವರೇ ಸೀತೆಯರು. ಗಂಡ ಕೊಡುವ ಕಷ್ಟ,ಅಪಮಾನಗಳನ್ನೆಲ್ಲ ಅವಡುಗಚ್ಚಿ ಸಹಿಸಿಕೊಂಡು ನಗುನಗುತ್ತ ಬದುಕ ಸಾಗಿಸುವ ಅಪ್ಪಟ ಸೀತೆಯರು ಅವರು.  ಲೇಖಕಿ ಸುಧಾ ಆಡುಕಳ ಸೀತೆಯನ್ನ ತನ್ನ ತಾಯಿಗೆ ಹೋಲಿಸಿ ಬರೆದ ಈ ಲೇಖನ ನನ್ನೊಳಗೆ ಸಿಕ್ಕಿಹಾಕಿಕೊಂಡಿದ್ದ ಅಂಥದ್ಧೇ ಭಾವಕ್ಕೆ ದನಿಯಾಯಿತು.  ಮಾಧವಿಯ ಕಥೆಯ ಮನಸ್ಸಿನೊಳಗೆ ನೋವಿನ ಚಳುಕು ನೀಡಿತು.  ಗಾಲವನಂಥ ಅದೆಷ್ಟು ವ್ಯಕ್ತಿಗಳು ಈ ಸಮಾಜದಲ್ಲಿದ್ದಾರಲ್ಲವೇ..? ಮಾಧವಿಯಂಥ ಅದೆಷ್ಟು ಹೆಣ್ಣುಗಳು ಗಾಲವನಂಥವರಿಗೆ ಸಿಕ್ಕು ನರಳುತ್ತಿರಬಹುದು ಎಂದೆನಿಸಿತು ನನಗೆ. ಆಕೆಯ ಬವಣೆಯನ್ನ ಹಾಸು ಹೊದ್ದಿರುವ ಬಾಡಿಗೆ ತಾಯಿಯರೊಳಗೆ ಮಾಧವಿಯನ್ನ ಕಂಡರು ಲೇಖಕಿ.  

ಮಾಧವಿಯ ನಂತರ ಬರುವವಳೇ ಊರ್ಮಿಳೆ, ಲಕ್ಷ್ಮಣನ ಹೆಂಡತಿ ಊರ್ಮಿಳೆ. ವನವಾಸಕ್ಕೆ ಹೋಗಿರುವ ಗಂಡನನ್ನ ನೆನೆಸಿಕೊಳ್ಳುತ್ತಾ ಆತನಿಗಾಗಿ ಪರಿತಪಿಸಿ ಅವಿರತ ಕಾದಿದ್ದಕ್ಕೂ, ಇಂದಿನ ಆಧುನಿಕ ಊರ್ಮಿಳೆಯರು ವಿದೇಶದಲ್ಲಿರುವ ಗಂಡನಿಂದ ದೂರವಿದ್ದು ಅವನ ಬರುವಿಕೆಗಾಗಿ ವರ್ಷವೆಲ್ಲ ಕಾಯುವುದಕ್ಕೂ ಸಾಮ್ಯತೆ ಕಂಡಿದ್ದಾರೆ ಲೇಖಕಿ. ಊರ್ಮಿಳೆಯ ನಂತರ ಹೊಯ್ಸಳ ಸಾಮ್ರಾಜ್ಯದ ರಾಣಿ ಶಾಂತಲೆ, ಅಕ್ಕಮಹಾದೇವಿ,  ಮಹಾರಾಣಿ ಅವಧೇಶ್ವರಿ, ಅಹಲ್ಯೆ, ಯಶೋಧರೆ, ರವೀಂದ್ರ ನಾಥ ಠಾಕೂರರ ಚಂದ್ರಾ,  ಬಂದು ಓದುಗರ ಒಳಗಿಳಿಯುತ್ತಾರೆ.  

ಈ ಪುಸ್ತಕದಲ್ಲಿ ಹನ್ನೆರಡನೇಯವಳಾಗಿ ಬರುವವಳೇ  "ನಂಗೇಲಿ".  ನಂಗೇಲಿಯ ಕಥೆ ಓದುತ್ತಾ ಓದುತ್ತಾ ನನ್ನೆದೆಯೊಳಗೂ ನೋವಿನ ಚಳುಕು ಸೆಳೆದು ಕಣ್ಣೀರು ಹರಿಯತೊಡಗಿತ್ತು.  ನಂಗೇಲಿ ಕೇರಳದ ದಲಿತ ಹೆಣ್ಣು. ೧೯ ನೇ ಶತಮಾನದ ಆರಂಭದಲ್ಲಿ ಬದುಕಿ, ತನ್ನ ಸುತ್ತಲಿದ್ದ ಕೆಟ್ಟ ಕಠೋರ ವ್ಯವಸ್ಥೆಯ ವಿರುದ್ಧ ಹೋರಾಡಿ ಬಲಿದಾನ ಮಾಡಿದ ಶೂರೆ.   ಆ ಕಾಲದಲ್ಲಿ ಕೇರಳದ ಒಂದು ಭಾಗದಲ್ಲಿ ಜಾರಿಯಲ್ಲಿದ್ದ "ಬ್ರೆಸ್ಟ್‌ ಟ್ಯಾಕ್ಸ್‌" ( ಮೊಲೆ ಕರ ) ವ್ಯವಸ್ಥೆಯ ವಿರುದ್ಧ ಆಕೆ ಹೋರಾಡಿದ್ದಾಳೆ.  ದಲಿತ ಹೆಣ್ಣುಮಕ್ಕಳು ಸೊಂಟಕ್ಕಿಂತ ಮೇಲೆ ಮತ್ತು ಮೊಣಕಾಲಿಗಿಂತ ಕೆಳಗೆ ಬಟ್ಟೆ ಧರಿಸುವಂತಿರಲಿಲ್ಲವಂತೆ.  ಒಂದು ವೇಳೆ ಎದೆ ಬಟ್ಟೆಯನ್ನೇನಾದರೂ ಅವರು ಧರಿಸಿದರೆ ಅವರನ್ನು ತೀವ್ರ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು.  ಬೆತ್ತಲೆ ಎದೆ ಹೊತ್ತು ಜೀವಿಸುತ್ತಿದ್ದ ಆ ಬುಡಕಟ್ಟು ಕುಟುಂಬದಲ್ಲಿಯೇ ಹು‌ಟ್ಟಿದ ನಂಗೇಲಿ, ಧೈರ್ಯವಾಗಿ ಎದೆ ಬಟ್ಟೆ ಧರಿಸಿದ್ದಲ್ಲದೇ, ಶಿಕ್ಷೆ ವಿಧಿಸಲು ಮನೆ ಬಾಗಿಲಿಗೆ ಬಂದ ಅಧಿಕಾರಿಗೆ ತನ್ನೆರಡೂ ಮೊಲೆಗಳನ್ನೂ ಕತ್ತಿಯಲ್ಲಿ ಕುಯ್ದು ಬಾಳೆಎಲೆಯಲ್ಲಿ ಹಾಕಿ ಕೊಟ್ಟುಬಿಡುತ್ತಾಳೆ. ಮತ್ತು ಅತೀವ ರಕ್ತಸ್ರಾವದಿಂದ ಪ್ರಾಣ ಬಿಡುತ್ತಾಳೆ.  ನಂಗೇಲಿ ಬಲಿದಾನ ಮಾಡಿದ ಜಾಗ ಇಂದಿಗೂ "ಮುಲಚಿಪರಂಬು" (ಮೊಲೆಯ ಕೊರೆದಿಟ್ಟವಳ ನಾಡು) ಎಂದೇ ಪ್ರಸಿದ್ಧವಾಗಿದೆಯಂತೆ.  ಸುಧಾ ಆಡುಕಳರ ಭಾಷೆಯಲ್ಲಿ ನಂಗೇಲಿ ಕಥೆ ಓದಿ ಕಣ್ಣೀರಾದೆ. 

ಧಿಟ್ಟ ಬರಹಗಾರ್ತಿ, ಕವಿಯತ್ರಿ ಸಾಹಿತಿ ಅಮೃತಾ ಪ್ರೀತಮ್‌ ಅವರ ಜೀವನ ಪ್ರೀತಿ,  ಕಂಸನ ಮೋಸದ ಜಾಲಕ್ಕೆ ಬಿದ್ದ ಪೂತನಿಯ ಅಸಹಾಯಕತೆ, ತ್ರಿವಕ್ರೆಯ ನಿಷ್ಕಾಮ ಪ್ರೀತಿ ಓದುಗರನ್ನ ಕಾಡುತ್ತದೆ.  ಮೀನಿನ ಹೊಟ್ಟೆಯಲ್ಲಿ ಸಿಕ್ಕ ಉಂಗುರದಿಂದ ಶಕುಂತಲೆಯನ್ನು ನೆನೆಪಿಸಿಕೊಂಡ ದುಶ್ಯಂತ ಅವಳನ್ನು ಅರಮನೆಗೆ ಕರೆಯಲು ಬಂದಾಗ, ತನ್ನ ಮಗನನ್ನು ಮಾತ್ರ ದುಶ್ಯಂತನೊಂದಿಗೆ ಕಳಿಸಿಕೊಡುವ ಶಕುಂತಲೆ, ಸ್ವೀಕಾರ ಮತ್ತು ನಿರಾಕರಣೆಗಳ ಸಂಗಮವಾಗಿ ನಿಂತುಬಿಡುತ್ತಾಳೆ.  ಸುಖಕ್ಕಿಂತ ಜಾಸ್ತಿ ಕಷ್ಟಗಳನ್ನೇ ಹಾಸಿ ಹೊದ್ದಿರುವ ದ್ರೌಪದಿ ತನ್ನ ಒಡಲಾಳವನ್ನೆಲ್ಲ ಅರುಹಿ, ಕೃಷ್ಣ ಅವಳ ಪಾಲಿಗೆ ಏನಾಗಿದ್ದ ಎಂಬುದನ್ನ ಓದುಗರೊಂದಿಗೆ ಸೂಕ್ಷ್ಮವಾಗಿ ಹೇಳಿಕೊಳ್ಳುತ್ತಾಳೆ. 

ಆಹ್ವಾನವಿಲ್ಲದಿದ್ದರೂ ಸ್ವಯಂವರ ಪ್ರವೇಶಿಸಿ, ಎಲ್ಲ ರಾಜರನ್ನೂ ಸೋಲಿಸಿ, ಅಂಬೆ, ಅಂಬಾಲಿಕೆ, ಅಂಬಿಕೆಯರನ್ನ ಗೆದ್ದು ತಂದ ವೀರ ಭೀಷ್ಮ, ಆ ಹೆಣ್ಣುಗಳನ್ನು ತಾನೇ ವರಿಸದೇ ತಮ್ಮನಿಗೆ ಮದುವೆ ಮಾಡಿಕೊಡುತ್ತಿರುವುದರ ವಿರುದ್ಧ ಅಂಬೆ ಬಂಡಾಯವೇಳುತ್ತಾಳೆ.   ಅವಮಾನಿತಳಾಗಿ ತೊಳಲಾಡುವ ಅವಳು ಕೊನೆಗೂ ಯಾರ ಸಹಾಯವೂ ದೊರಕದೆ ಮತ್ತೊಂದು ಜನ್ಮವೆತ್ತಿಬರುವುದಕ್ಕಾಗಿ ಜೀವ ಬಿಡುವುದಕ್ಕೆ ಸಿದ್ಧಳಾಗಿಬಿಡುತ್ತಾಳೆ. ಅಂಥ ಅಪ್ರತಿಮ ಧೈರ್ಯವಂತೆ ಅಂಬೆಯ ಅಂತರಾಳ ಮತ್ತೆ ಮತ್ತೆ ಕಾಡುತ್ತದೆ. ಸಮಾಜದ ಕಟ್ಟುಪಾಡುಗಳನ್ನು, ಓರೆಕೋರೆಗಳನ್ನು ಪ್ರಶ್ನಿಸದೇ ಹೊಂದಿಕೊಂಡು ಹೋಗುವ ಹೆಣ್ಮಕ್ಕಳು ನಮ್ಮ ಸಾಮಾಜದ ದೃಷ್ಟಿಯಲ್ಲಿ ಸಂಸ್ಕೃತಿಯ ಹರಿಕಾರ ದೇವತೆಗಳಾದರೆ, ಪ್ರಶ್ನಿಸುವ ಮನಸ್ಥಿತಿಯ ಹೆಣ್ಣು ಸಮಾಜ ನಿಂದನೆಗೊಳಗಾಗಿ, ಅವಮಾನಿತಳಾಗುವಂಥ ಪರಿಸ್ಥಿತಿ ಇಂದಿಗೂ ಇದೆ. ಎಂಬುದನ್ನು ಲೇಖಕಿ ಇಲ್ಲಿ ನೆನೆಪಿಸುತ್ತಾರೆ.   

ಹೆಣ್ಣು ನಿಜವಾದ ಅರ್ಥದಲ್ಲಿ ಹೆಣ್ಣಾಗುವ ಆ ದೈಹಿಕ ಬದಲಾವಣೆಯನ್ನೇ ಮೈಲಿಗೆ ಎಂದು ಕರೆದು, ಸಾಮಾಜಿಕವಾಗಿ, ವೈಯಕ್ತಿಕವಾಗಿ, ಕೌಟುಂಬಿಕವಾಗಿ ಆಕೆಯನ್ನು ದೂರವಿರಿಸಿ ಶಾಸ್ತ್ರ, ಕಟ್ಟಳೆಗಳನ್ನು ಮಾಡಿ ಹೆಣ್ಣುಮಕ್ಕಳಿಗೆ ಇನ್ನಿಲ್ಲದ ತೊಂದರೆ ಕೊಡುವ ಮೂಢ ನಂಬಿಕೆಯ ವಿರುದ್ಧವೂ ಸುಧಾ ದನಿಎತ್ತಿದ್ದಾರೆ.  ಪೃಕೃತಿ ಹೆಣ್ಣಿಗೆ  ಮಾತ್ರ ನೀಡಿರುವ "ಮುಟ್ಟು" ಎಂಬ ಶಕ್ತಿಯು ಮೈಲಿಗೆಯಾಗಿದ್ದಾದರೂ ಏಕೆ ? ಎಂಬ ಪ್ರಶ್ನೆಯನ್ನ ಓದುಗರ ಮುಂದೆಯೂ ಅವರು ಪ್ರಸ್ತಾಪಿಸಿದ್ದಾರೆ. 

ಮತ್ತದೇ ಮಹಾಭಾರತದ ಇನ್ನೊಬ್ಬ ಅಸಹಾಯಕಿ ಹೆಣ್ಣು ಗಾಂಧಾರಿಯ ಮನದಿಂಗಿತ ಹೇಳುತ್ತಾ ಹೇಳುತ್ತಾ,  "ಹೊರನೋಟವನ್ನು ಕಸಿದಿಟ್ಟ ಯಾವ ತಾಯಿಯೂ ಅನಾಹುತವನ್ನು ತಡೆಯಲಾರಳು. ತನ್ನ ಮಕ್ಕಳನ್ನು ಪೊರೆಯಲಾರಳು. ಹೆಣ್ಣನೋಟಕ್ಕೆ ಪಟ್ಟಿ ಕಟ್ಟದಿರೋಣ, ಮಕ್ಕಳ ಬದುಕನ್ನು ಹಸನುಗೊಳಿಸೋಣ" ಎಂಬ ಕರೆ ನೀಡುತ್ತಾರೆ.  ಗುರುದೇವ ರವೀಂದ್ರರ ನಂದಿನಿ, ಮೃಣಾಲ್‌ ಎಲ್ಲ ಪಾತ್ರಗಳ ಕಥೆ ಹೇಳುತ್ತಾ, ಅವಳ ಭಾವನೆಗಳನ್ನು, ಹೆಣ್ತನದ ಒಡಲಾಳವನ್ನು,  ಆ ಎಲ್ಲ ಹೆಣ್ಣುಗಳ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿವಿರಿಸುವ ಸುಧಾ ಅವರ ಭಾಷೆಯ ಸೊಗಸಿಗೆ ಅವರೇ ಸಾಟಿ.   ಈ ಪುಸ್ತಕ ಓದುವಷ್ಟೂ ಹೊತ್ತು ನಾನೂ ಕೂಡ ಸಂಪೂರ್ಣ ಹೆಣ್ತನವನ್ನ ಅನುಭವಿಸಿದ್ದೇನೆ. ಅದು ಹೆಮ್ಮೆಯೋ, ?ಸಾರ್ಥಕ್ಯವೋ ? ಸಂಕಟವೋ ? ತಿಳಿಯೆ.   ಅದ್ಯಾವುದೋ ಹೆಸರಿಲ್ಲದ ಭಾವದೊಳಗೆ ಮುಳುಗೆದ್ದ ನಾನು  ಸುಧಾ ಅವರ "ಬಕುಲದ ಬಾಗಿಲಿನಿಂದ" ಕೃತಿ ಅದ್ಭುತವಾಗಿದೆ ಎಂದಷ್ಟೇ ಹೇಳಬಲ್ಲೆ. 










 

Tuesday 20 April 2021

ಕೋತಿಗಳೂ ಮೊಟ್ಟೆ ತಿನ್ನುತ್ತವೆ ಅನ್ನೋ ವಿಷಯ ಗೊತ್ತಾಗಿದ್ದೇ ಆವತ್ತು ನನಗೆ...

 

ಆವತ್ತು ನಾನು ಅವನಿಗೆ ಸ್ವಲ್ಪ ಗಾಬರಿಯಿಂದ್ಲೇ ಫೋನ್ಮಾಡಿದ್ದೆ.  ದನಿಯಲ್ಲಿ ಸ್ವಲ್ಪ ಕಂಪನವಿತ್ತು. ಕಣ್ಣಿನಲ್ಲಿ ನೀರು ಹರಳುಗಟ್ಟಿತ್ತು.   ಮನಸ್ಸು ನಿಜಕ್ಕೂ ನೊಂದಿತ್ತು. 

ಆ ಜೋಡಿಗಳು ಎಷ್ಟೋ ದಿನದಿಂದ ಕಂದನನ್ನ ನೋಡಲು ಕಾತರಿಸುತ್ತಾ  ಇದ್ದವು. ಹಗಲು ರಾತ್ರಿ ಎನ್ನದೆ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಾ ಇದ್ದವು. ಇಂದೋ ನಾಳೆಯೋ ಹೊರ ಜಗತ್ತಿಗೆ ಅಡಿ ಇಡುತ್ತಿದ್ದ ಆ ಕಂದಮ್ಮಳು ಅದೆಷ್ಟು ಬೆಳೆದಿದ್ದವೋ ಏನೋ. ಆದ್ರೆ ಅವು ಕಣ್ಣುಬಿಡುವುದಕ್ಕೂ ಮುಂಚೆಯೇ ಕಣ್ಮುಚ್ಚಿದ್ದವು.   ಮಕ್ಕಳನ್ನ ಬದುಕಿಸಿಕೊಳ್ಳುವಲ್ಲಿ ಆ ತಂದೆ ತಾಯಿಯೂ ಸೋತಿದ್ದರು. ಅವಕ್ಕೆ ಸಹಾಯ ಮಾಡಲಾಗದೇ ನಾನೂ ಸೋತಿದ್ದೆ.

ಎರಡು ವರ್ಷದ ಹಿಂದಿನ ಕಥೆ ಇದು.  ನಾಲ್ಕಂತಸ್ಸಿನ ಅಪಾರ್ಟ್‌ಮೆಂಟ್‌ನ  ಕೊನೆಯ ಮಹಡಿಯಲ್ಲಿ ನಮ್ಮ ಮನೆ. ಅಪಾರ್ಟ್ಮೆಂಟ್ನ ಹಿಂದೆ ದಟ್ಟ ಮರಗಳಿರುವ ಸರ್ಕಾರಿ ಜಾಗ. ಹಸಿರಿಗೆ ಹತ್ತಿರದಲ್ಲಿದ್ದ ಈ ಅಪಾರ್ಟ್ಮೆಂಟ್ ಕೇವಲ ಮನುಷ್ಯರಿಗೊಂದೇ ವಾಸಸ್ಥಾನವಲ್ಲ..! ಜೇನು, ಪಾರಿವಾಳಗಳಿಗೂ ಅಲ್ಲಿತ್ತು ಪರ್ಮನೆಂಟ್ ಅವಕಾಶ. ಕೋತಿಗಳು ಮಾತ್ರ ಅನಿರೀಕ್ಷಿತ ಆಗಂತುಕರು. ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ನಮ್ಮ ಅಪಾರ್ಟ್ಮೆಂಟ್ ಲಗ್ಗೆ ಇಡದೇ ಬಿಡುವವಲ್ಲ ಆ ಕೋತಿಗಳ ದಂಡು.

 ಕೋತಿಗಳು ಬಂದವೆಂದರೆ, ಎಲ್ಲರ ಮನೆಯ ಕಿಟಕಿಗಳು, ಗ್ಯಾಲರಿ ಗಾಜುಗಳು ಭದ್ರವಾಗಲೇಬೇಕು. ಅಪ್ಪಿ ತಪ್ಪಿ ಇಲ್ಲವೆಂದುಕೊಳ್ಳಿ, ಅವು ಮನೆಯೊಳಗೆ ಬಂದವೆಂದೇ ಅರ್ಥ.  ಒಳಗೆ ಬಂದ ತಕ್ಷಣ ತೀರ ಪರಿಚಿತರಂತೆ, ರಾಜಾರೋಷವಾಗಿ ಅಡುಗೆ ಮನೆಗೇ ದಾಳಿ ಇಡುವ ಅವು ಹಣ್ಣು, ತರಕಾರಿ, ತೆಂಗಿನಕಾಯಿ, ಹಾಲು, ಮೊಸರು ಪ್ಯಾಕ್ನ ಆದಿಯಾಗಿ ಏನು ಸಿಕ್ಕರೂ ಹೊತ್ತಯ್ದು ಬಿಡುತ್ತಿದ್ದವು.

 ಒಂದುಬಾರಿಯಂತೂ ನಮ್ಮ ಮನೆಯ ಅಡುಗೆ ಮನೆಯ ಮೂಲೆಯಲ್ಲಿಟ್ಟಿದ್ದ ತಾಜಾ ಎಳೆನೀರನ್ನು ಹೊತ್ತೊಯ್ದಿತ್ತು ಕೋತಿ.  ಗ್ಯಾಲರಿ ಕಿಂಡಿಯಲ್ಲಿ ತನ್ನ ಜತೆ ತೂರಿಕೊಳ್ಳದ ಎಳೆನೀರು ಕಾಯಿಯನ್ನ ಅಲ್ಲಿಯೇ ಒಡೆದು ನೀರುಕುಡಿದು ಖಾಲಿಮಾಡಿ ಅದನ್ನಲ್ಲಿಯೇ ಇಟ್ಟು, ಅಸಹಾಯಕಿಯಾದ ನನ್ನ ನೋಡಿ ಕಣ್ಣು ಪಿಳುಕಿಸಿತ್ತು.     

 ಇಂಥ ಕೋತಿ ಕಾಟವಿದ್ದ ನಮ್ಮ ಮನೆಯಲ್ಲಿ ನಮ್ಮ ಜತೆ ಇನ್ನೊಂದು ಸಂಸಾರ ವಾಸವಿತ್ತು. ಅದೊಂದು ಪಾರಿವಾಳದ ಸಂಸಾರ.  ಆ ಹಕ್ಕಿಗಳು, ಕಿಟಕಿ ತೆಗೆದೇ ಇದ್ದರೂ ಕೂಡ ಯಾವತ್ತೂ ಮನೆಯೊಳಗೆ ಬಂದಿದ್ದಿಲ್ಲ. ಗ್ಯಾಲ್ರಿ ಕಂಬಿಯ ಮೇಲೆ ಸದಾ ಕೂತು ಸಪ್ಪಳ ಮಾಡ್ತಾ ತಮ್ಮದೇ ಲೋಕದಲ್ಲಿ ಹಾಯಾಗಿರುವ ಅವನ್ನ ನೋಡಿದ್ರೆ, ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂಬ ಕವನ ನೆನಪಾಗ್ತಿತ್ತು. 

ಆಗ ಮೂರು ವರ್ಷದ ಪುಟಾಣಿಯಾಗಿದ್ದ ನನ್ನ ಮಗನಿಗಂತೂ ಆ ಪಾರಿವಾಳಗಳೆಂದರೆ ಖುಷಿಯೋ ಖುಷಿ.  ದಿನದಲ್ಲಿ ಅದೆಷ್ಟು ಬಾರಿ ಬೇಕಾದ್ರೂ , ತನಗೆ ನೆನಪಾದಾಗಲೆಲ್ಲ ಅವಕ್ಕೆ ಅಕ್ಕಿ ಹಾಕ್ತಿದ್ದ.  ಅವು ತಿನ್ನೋದನ್ನ ನೋಡ್ತಾ ಖುಷಿ ಪಡ್ತಿದ್ದ. ನಮಗೆಲ್ಲ ಆ ಪಾರಿವಾಳಗಳ ಮೇಲೆ ಅದೇನೋ ಹೇಳತೀರದ ಮಮತೆ.

ಅವುಗಳ ಆಟಪ್ರೀತಿ, ಎಂದೆಂದೂ ಬಿಟ್ಟಿರದ ಅವುಗಳ ಬಂಧವನ್ನ ನೋಡೋದೇ ಚೆಂದ. ನಮ್ಮ ಮನೆಯ ಹೂ ಗಿಡದ ಪಾಟ್‌ಅವುಗಳ ಮೀಟಿಂಗ್ ಸ್ಪಾಟ್‌. ಎಂದೆಂದೂ ಅಲ್ಲೇ ಅವುಗಳ ಸರಸ ಸಲ್ಲಾಪ. ಅಲ್ಲಿದ್ದ ಖಾಲಿ ಪಾಟ್‌ಅವುಗಳ ಮನೆಯಾಯ್ತು. ಬರ್ತಾ ಬರ್ತಾ ಅವುಗಳ ಸಂಭ್ರಮ ಹೇಳತೀರದು.  ಒಣ ಕಡ್ಡಿಗಳು, ಹುಲ್ಲುಗಳು, ಎಲೆಗಳನ್ನ ತಂದು ಪಾಟ್‌ನಲ್ಲಿ ಹಾಕಿ ಒಂದು ಮುದ್ದಾದ ಗೂಡೂ ಕೂಡ ಅಲ್ಲಿ ಸಿದ್ಧವಾಗಿಬಿಟ್ಟಿತ್ತು. ಅವುಗಳ ತಯಾರಿ ನೋಡಿಯೇ ಅಂದುಕೊಂಡಿದ್ದೆ ಇವರ ಸಂಸಾರ ದೊಡ್ಡದಾಗ್ತಿದೆ ಅಂತ. ಒಂದು ದಿನ ನನ್ನ ಎಕ್ಸಪೆಕ್ಟೇಶನ್‌ನಿಜವಾಗಿತ್ತು. ಆ ದಿನ ಬೆಳ್ಳಂಬೆಳಗ್ಗೆ ಕಣ್ಣು ಉಜ್ಜಿಕೊಳ್ತಾ ಬಂದು ನೋಡ್ತೀನಿಗೂಡಲ್ಲಿದ್ವು ಎರಡು ಪುಟಾಣಿ ಮೊಟ್ಟೆಗಳು..!   ಆವತ್ತು ನನ್ನ ಮಗ ಕುಣಿದಾಡಿಬಿಟ್ಟಿದ್ದ. ಮೊಟ್ಟೆಗಳನ್ನ ನಾವು ಮುಟ್ಟಬಾರದು ಅಂದಿದ್ದಕ್ಕೆ ಹೂಂಗುಟ್ಟಿದ್ದ ಅವನು, ತನ್ನ ಪುಟಾಣಿ ಕಾತುರ ಕಣ್ಣುಗಳಲ್ಲಿ ಅವುಗಳನ್ನ ಹತ್ತಿರದಿಂದ ನೋಡ್ತಾ ಇದ್ದ.

ಆ ಪಾರಿವಾಳಗಳಿಗೆ ನಮ್ಮ ಮೇಲೆ ನಂಬಿಕೆಯೋ ಅಥವಾ ಮೊಟ್ಟೆಗಳ ಮೇಲಿನ ಮೋಹವೋ ಗೊತ್ತಿಲ್ಲ, ಮೊಟ್ಟೆಗಳು ಹುಟ್ಟಿದಾಗಿನಿಂದ ಅವಕ್ಕೆ ಧೈರ್ಯ ಜಾಸ್ತಿಯಾಗಿತ್ತು. ಮೊದಲೆಲ್ಲ ನಾವು ಹತ್ತಿರ ಹೋದಾಗ ಪುರ್‌ಎಂದು ಹಾರಿಹೋಗುತ್ತಿದ್ದ ಪಾರಿವಾಳಗಳು ಈಗ ನಾವು ಅವುಗಳ ಗೂಡಿಗೆ ಎಡತಾಕಿದರೂ ಅಲುಗಾಡುತ್ತಲೂ ಇರಲಿಲ್ಲ.  ಮಕ್ಕಳು ಬಂದಾಗ ಮನಸ್ಸೆಷ್ಟು ಗಟ್ಟಿಯಾಗುತ್ತೆ ಅಲ್ವಾ.. ಅಂತೆನಿಸಿತ್ತು ನಂಗೆ.

ಆ ಜೋಡಿ ಪಾರಿವಾಳಗಳು ಮೊಟ್ಟೆಯನ್ನ ಕಾಯ್ತಾ ಇದ್ದುದು ಪಾಳಿಯ ಮೇಲೆ. ಸಾಮಾನ್ಯವಾಗಿ ತಾಯಿ ಹಕ್ಕಿ ತಾಸುಗಟ್ಟಲೇ ಮೊಟ್ಟೆಗಳ ಮೇಲೆ ಕೂತಿರುತ್ತಿತ್ತು. ಆದರೆ ತಾಯಿ ಇಲ್ಲದಾಗ ತಂದೆ ಮೊಟ್ಟೆಗಳನ್ನ ನೋಡಿಕೊಳ್ತಿತ್ತು. ಎಂದೆಂದೂ ಆ ಜೋಡಿಗಳು ಮೊಟ್ಟೆಗಳನ್ನ ಬಿಟ್ಟು ಹೋದದ್ದಿಲ್ಲ.

 ಕಳೆದ ಹದಿನೈದು ದಿನಗಳಿಂದ ಅಪಾರ್ಟ್‌ಮೆಂಟ್‌ಕಡೆ ಸುಳಿಯದಿದ್ದ ಕೋತಿಗಳು ಆವತ್ತು ಮಧ್ಯಾಹ್ನ ಪ್ರತ್ಯಕ್ಷವಾಗಿದ್ವು.  ಎರಡು ಕೋತಿಗಳು ನಮ್ಮ ಗ್ಯಾಲರಿ ಕಂಬಿಗಳನ್ನ ಹಿಡಿದು ನೇತಾಡ್ತಾ ಬಂದು ಪಾಟ್‌ಪಕ್ಕದಲ್ಲಿಯೇ ಕೂತಿದ್ದೇ, ಗೂಡಿನಲ್ಲಿದ್ದ ತಾಯಿ ಪಾರಿವಾಳ ಭಯದಿಂದ ಹಾರಿಹೋಗಿತ್ತು. ಮೊಟ್ಟೆಗಳ ಭಾರವನ್ನ ನನ್ನ ಮೇಲೆ ಬಿಟ್ಟು..!

ಮನೆಯಲ್ಲಿದ್ದವಳು ನಾನೊಬ್ಬಳೇ..! ಏನು ಮಾಡಲಿ..? ಆ ಗೂಂಡಾ ಕೋತಿಗಳಂದ್ರೆ ನನಗೂ ಭಯ ತಾನೇ..? ಗ್ಯಾಲರಿ ಗಾಜು ಜರುಗಿಸಿ ಕೋತಿಗಳನ್ನ ಓಡಿಸುವಷ್ಟು ಧೈರ್ಯವಂತೆ ಅಲ್ಲ ನಾನು.  ಗಾಜು ತೆರೆದರೆ ಮನೆಯೊಳಗೇ ನುಗ್ಗುವ ಆ ಮರ್ಕಟಗಳು ಸಾಮಾನ್ಯ ಧರೋಡೆಕೋರರಲ್ಲ..!  ಆದರೂ ಗ್ಯಾಲರಿ ಗಾಜುಗಳ ಬಳಿ ನಿಂತು, ಹುಷ್‌... ಹುಷ್‌... ಅನ್ನುತ್ತಾ ಪೊರಕೆಯನ್ನ ಗಾಜಿಗೆ ತಾಕಿಸಿ ಅಲುಗಾಡಿಸಿದೆ.  ನನ್ನ ಬೆದರಿಕೆಗೆ ಕ್ಯಾರೇ ಅನ್ನದ ಕೋತಿಗಳು, ಗೂಡಿನಲ್ಲಿದ್ದ ಎರಡೂ ಮೊಟ್ಟೆಗಳನ್ನ ಕೈಯ್ಯಲ್ಲಿ ತೆಗೆದುಕೊಂಡ್ವು. ನನ್ನ ಕಣ್ಣಾರೆ, ಆ ಮೊಟ್ಟೆಗಳು ಮಣ್ಣಾಗೋದನ್ನ ನೋಡಬೇಕಲ್ಲಾ..! ಏಯ್‌ಮಂಗ, ಮೊಟ್ಟೆ ಅಲ್ಲೇ ಇಡು ಪಾಪಿ...! ಅಂತ ಕಿರುಚಿಕೊಳ್ತಾ ಗಾಜನ್ನ ಡಬ್‌ಡಬ್‌ಅಂತ ಬಡಿದೆ. ಶಬ್ಧದಿಂದ ವಿಚಲಿತಗೊಂಡ ಆ ಕೋತಿಗಳು ನನ್ನ ನೋಡಿ ಕೆಸ್‌..ಎಂದ್ವೇ ಹೊರತು ಮೊಟ್ಟೆಗಳನ್ನ ಬಿಟ್ಟಿಲ್ಲ. ಬದಲಾಗಿ ಅವನ್ನ ಹಲ್ಲಲ್ಲಿ ಕಚ್ಚಿ ಒಡೆದುಕೊಂಡು, ಒಳಗಿದ್ದ ರಸವನ್ನ ಹೀರಿಬಿಟ್ಟಿದ್ದವು..! ಚಿಪ್ಪನ್ನೂ ಬಿಡದೆ ನೆಕ್ಕಿ ಅಲ್ಲೇ ಎಸೆದು ಕಾಲ್ಕಿತ್ತವು. ಕೋತಿಗಳೂ ಮೊಟ್ಟೆ ತಿನ್ನುತ್ತವೆ ಅನ್ನೋ ವಿಷಯ ಗೊತ್ತಾಗಿದ್ದೇ ಆವತ್ತು ನನಗೆ .  ತುಂಬಾ ನೋವಾಗಿತ್ತು.  ಮೊಟ್ಟೆಗಳನ್ನ ರಕ್ಷಿಸೋಕೆ ನನ್ನಿಂದಲೂ ಆಗಿಲ್ಲವಲ್ಲ ಎಂಬ ಪಾಪಪ್ರಜ್ಞೆ..! ಆಗಲೇ ನಾನು ನನ್ನ ಗಂಡನಿಗೆ ಫೋನಾಯಿಸಿ, ನನ್ನ ಅಸಹಾಯಕತೆಯನ್ನ ಹೇಳಿಕೊಂಡಿದ್ದೆ.

 ಇದನ್ನೆಲ್ಲ ದೂರದಲ್ಲೆಲ್ಲೋ ಕುಳಿತು ಪಾರಿವಾಳ ನೋಡಿತ್ತೋ ಏನೋ ಗೊತ್ತಿಲ್ಲ.  ಎಷ್ಟು ಹೊತ್ತು ಕಾದರೂ ಪಾರಿವಾಳಗಳ ಪತ್ತೆಯೇ ಇರಲಿಲ್ಲ. ಸಾಯಂಕಾಲ ವಾಪಾಸ್‌ಗೂಡಿಗೆ ಬಂದದ್ದು ಒಂದೇ ಪಾರಿವಾಳ.  ಅದು ತಾಯಿಯೋ..? ತಂದೆಯೋ..? ಗೊತ್ತಾಗಲಿಲ್ಲ ನನಗೆ.   ಅಲ್ಲಿ ಚದುರಿ ಬಿದ್ದಿದ್ದ ಮೊಟ್ಟೆಗ ಚಿಪ್ಪುಗಳನ್ನ ನೋಡ್ತಾ ಅಲ್ಲೇ ಸ್ವಲ್ಪ ಹೊತ್ತು ಕೂತಿತ್ತು.  ಅದು ಮೌನವಾಗಿ ಕೂತಿದ್ದನ್ನ ನೋಡಿ ನನಗೆ ಕರುಳು ಕಿವುಚಿತ್ತು.  ಕ್ಷಮಿಸಿ ಮಕ್ಕಳೇ ಎನ್ನುವ ಮಾತು ಅದರ ಗಂಟಲಲ್ಲಿತ್ತೇನೋ ಪಾಪ..! 

ಮರುದಿನ ಅದೇ ಜಾಗದಲ್ಲಿ ಮತ್ತದೇ ಜೋಡಿ ಬಂದು ಕೂತಿತ್ತು. ಪ್ರಕೃತಿಯ ಈ ಆಟಕ್ಕೆ ನಾನು ಬೆರಗಾಗಿದ್ದೆ!  ಕಣ್ಣಾರೆ ಮಕ್ಕಳನ್ನ ಕಳೆದುಕೊಂಡು ಎಲ್ಲವನ್ನೂ ಮೌನವಾಗಿ ಸಹಿಸಿದ ಆ ಪಾರಿವಾಳಗಳು ಆವತ್ತು ತಾಳ್ಮೆಯ ಮೂರ್ತಿಗಳಂತೆ ಕಾಣುತ್ತಿದ್ವು. ಎಲ್ಲವನ್ನೂ ಮತ್ತೆ ಸೃಷ್ಟಿಸುವ ಅವುಗಳ ಆತ್ಮವಿಶ್ವಾಸ  ಎಂಥವರಿಗೂ ಧೈರ್ಯ ಹೇಳುವಂತಿತ್ತು.  

 

 

Wednesday 20 January 2021

ಶ್...ಶ್... ಶಬ್ಧ ಮಾಡಬೇಡಿ..!

 

                                            ಚಿತ್ರ ಕೃಪೆ - ವಿನಯ್‌ ಕೆ.ಪಿ


’ಮಗುವನ್ನ ಮಲಗಿಸಬೇಕು’ ಇದು ತಾಯಿಯಾದವಳ ಪ್ರಮುಖ ಗುರಿ.  ಒಂದುವೇಳೆ ಮಗು ಮಲಗಿದೆ ಅಂತಿಟ್ಟುಕೊಳ್ಳಿ ಆಗ ಅವಳ ಪರಮ ಕರ್ತವ್ಯವೇನಾಗಿರಬಹುದು ಹೇಳಿ....
? ಮಗುವಿಗೆ ಎಚ್ಚರವಾಗದಂತೆ ಎಲ್ಲೆಲ್ಲೂ ನಿಶ್ಯಬ್ಧವನ್ನ ಕಾಪಾಡೋದು’!   ಹಾಗೇ ಅವಳ ಉತ್ಕಟ ಆಸೆ ಅಂತೇನಾದ್ರೂ ಇದ್ದರೆ ಅದು ಸಧ್ಯದ ಮಟ್ಟಿಗೆ  ’ಇವತ್ತಾದರೂ  ನನ್ನ ಮಗು ಸಮಯಕ್ಕೆ ಸರಿಯಾಗಿ ಮಲಗಲಿ’  ಅನ್ನೋದಷ್ಟೇ..!

 ಹೌದಪ್ಪ ಹೌದು.  ಮೊನ್ನೆ ನನ್ನ ತಂಗಿ ಅವಳ ಒಂದುವರೆ ವರ್ಷದ ಮಗಳನ್ನ ಮಲಗಿಸೋಕೆ ಹರಸಾಹಸ ಪಡ್ತಾ ಇರೋದನ್ನ ನೋಡಿ ಅಯ್ಯೋ ಅನ್ನಿಸಿತ್ತು.  ಅಂತೂ ಇಂತೂ ಮಗಳು ಮಲಗಿಸಿ  ಕೋಣೆಯಿಂದ ಹೊರಗಡೆ ಬರುಬರುತ್ತಲೇ  ’ಶ್... ಶ್... ಶಬ್ಧ ಮಾಡಬೇಡಿ’! ಅಂದಳು.    ಅವಳ ಆ ಕೋರಿಕೆಗೆ ಮಿಲಿಯನ್‌ ಡಾಲರ್‌ ಬೆಲೆ  ಇದೆ ಅನ್ನೋದು ನನಗಷ್ಟೇ ಅರ್ಥವಾಯ್ತು.    ಯಾಕಂದ್ರೆ, ನನ್ನ ಸ್ಟೋರಿ ಸ್ವಲ್ಪ ಡಿಫರೆಂಟ್‌ ಆಗಿದ್ರೂ ಕೂಡನಾನೂ ಒಬ್ಬಳು ಅನುಭವಸ್ತೆಯೇ ತಾನೇ..?  ಶಿಶುವಿನಮ್ಮನ ಬಾಯಿಯಿಂದ ಬರೋ ಆ ’ಶ್...ಶ್’, ಎಂಬೆರಡು ಈ ಅಕ್ಷರಗಳಲ್ಲಿ ಅದೆಷ್ಟು ತೂಕವಿರುತ್ತೆ ಗೊತ್ತಾ..?  ಆಜ್ಞೆ, ಕಳಕಳಿ, ವಿನಂತಿ, ಅಸಹಾಯಕತೆಯಂಥ ಅದೆಷ್ಟೋ ಭಾವಗಳ ಹೊಯ್ದಾಟವಿರುತ್ತೆ.  

 ಅಂದ್ಹಾಗೆ, ಈ ಜೋಗಳುಗಳು, ಲಾಲಿ ಹಾಡುಗಳು ಹುಟ್ಟಿದ್ದಾದರೂ ಯಾಕೆ ಹೇಳಿ ? ಮಕ್ಕಳು ಬೇಗ ಮಲಗಲಿ ಅನ್ನೋ ಉದ್ದೇಶಕ್ಕೇ ಅಲ್ವೇ..ಮಗು ಮಲಗಿ, ತಮಗೂ ಸ್ವಲ್ಪ ಸಮಯ ಸಿಗಲಿ ಎಂಬುದು ತಲತಲಾಂತರದಿಂದಲೂ ಅಮ್ಮಂದಿರ ಆದ್ಯ ಹಂಬಲವೇ.

 ಶಿಶುವಿನ ತಾಯಿಯಾದವಳ ಕಷ್ಟ ಅಷ್ಟಿಷ್ಟಲ್ಲ ಬಿಡಿ. ಅವಳು ಊಟ ಮಾಡ್ತಾ ಇರಲಿ , ಸ್ನಾನಕ್ಕೆ ಹೋಗಿರಲಿ, ಶೌಚಕ್ಕೆ ಹೋಗಿರಲಿ,  ಆ ಸಮಯಕ್ಕೆ ಸರಿಯಾಗಿಯೇ ಮಗುವಿಗೆ ಅಮ್ಮ ಬೇಕೆನಿಸಿಬಿಡುತ್ತೆ.!  ಗಾಢ ನಿದ್ದೆಯಲ್ಲಿದ್ದ ಮಗುವಿಗೆ ಅದ್ಯಾವ ಟೆಲಿಪತಿ ಸಂದೇಶ ಹೋಗುತ್ತೋ ಗೊತ್ತಿಲ್ಲಆಗಿದಾಂಗ್ಗೆ ಅಮ್ಮ ಮಾಡುತ್ತಿದ್ದ ಕೆಲಸ ಅರ್ಧಕ್ಕೇ ಬಿಟ್ಟು ಓಡಿ ಬಂದುಬಿಡಬೇಕು..! ಅಂಥ ಭಯಂಕರ ಅಳು..! ಅಷ್ಟರ ಮಟ್ಟಿಗೆ   ಶೌಚಾಲಯದಲ್ಲೂ ನೆಮ್ಮದಿ ಇಲ್ಲದ ಜೀವನ ಅದು.

 ಮಗುವನ್ನ ಮಲಗಿಸೋ ಅಮ್ಮಂದಿರ ಹರಸಾಹಸಗಾಥೆ ಹೇಳೋಕೆ ಹೊರಟರೆ ಅದು ಮುಗಿಯೋದಿಲ್ಲ.  ನಿದ್ದೆ ಮಾಡೋಕೆ ಕೆಲ ಮಕ್ಕಳಿಗೆ ತೊಟ್ಟಿಲೇ ಬೇಕು. ಮತ್ತೆ ಕೆಲವಕ್ಕೆ ಜೋಲಿ, ಇನ್ಕೆಲವಕ್ಕೆ ಹಾಸಿಗೆಯೇ ಬೇಕು.  ನನ್ನ ಗೆಳತಿಯ ಮಗುವಿಗಂತೂ ಅದರಪ್ಪನ ಹೆಗಲೇ ಬೇಕಂತೆ..!  ಅಮ್ಮನ ತೊಡೆಯಿಂದ ಇಡೀರಾತ್ರಿ ಕೆಳಗಿಳಿಯದೇ ನಿದ್ದೆಹೊಡೆಯುವ ಮಕ್ಕಳೆಷ್ಟೋ.ನಿದ್ದೆ ಕಣ್ಣಿಗೆ ಹತ್ತಿದರೂ ಪ್ಯಾಸಿಫಾಯರ್‌ ಬಾಯಿಗಿಡದಿದ್ದರೆ ನಿದ್ದೆ ಮಾಡದೇ ಅಳುವ ಕಂದಮ್ಮಗಳನ್ನೂ ಕಂಡಿದ್ದೀನಿ.  ಕೈತೋಳು ಬಿದ್ಹೋಗುವಷ್ಟು ತಟ್ಟಿತಟ್ಟಿ ಮಲಗಿಸೋ ಅಮ್ಮಂದಿರ ಗೋಳನ್ನೂ ಕೇಳಿದ್ದೀನಿ.  ರಾತ್ರಿ ಇಡೀ ಹಾಡು ಹಾಡ್ತಾ ಮಗುವನ್ನ ಮಲಗಿಸೋ ಅಮ್ಮಅಪ್ಪಂದಿರ ಕಷ್ಟ ನೋಡಿ ಲೊಚಗುಟ್ಟಿದ್ದೀನಿ.

 ನನ್ನ ಮಗನಿನ್ನೂ ಶಿಶುವಾಗಿದ್ದಾಗ, ದೊಡ್ಡ ಮಕ್ಕಳ ತಾಯಿಯರನ್ನ, ಇನ್ನೂ ಮದುವೆಯಾಗದ ಹುಡುಗಿಯರನ್ನ, ಮದುವೆಯಾದರೂ ಮಗು ಮಾಡಿಕೊಳ್ಳದ ಜಾಲಿ ಬೆಡಗಿಯರನ್ನ ಕಂಡರೆ ನನಗೇನೋ ಭಯಂಕರ ಹೊಟ್ಟೆಕಿಚ್ಚು.  ಅಯ್ಯೋ ಅವರೆಲ್ಲ ಎಷ್ಟು ಆರಾಮಾಗಿದ್ದಾರಪ್ಪಾ..!  ರಾತ್ರಿಯಿಂದ ಬೆಳಗಿನ ತನಕ ಆರಾಮಾಗಿ ನಿದ್ದೆ ಮಾಡ್ತಾರೆ, ಈ ಭಾಗ್ಯ ನನಗೆ ಇನ್ಯಾವತ್ತೋ..ಅನ್ನಿಸ್ತಾ ಇತ್ತು ಅನ್ನೋದು ನನ್ನಾಣೆ ಸುಳ್ಳಲ್ಲ.

 ನನ್ನ ಕೈಗಳು ತೊಟ್ಟಿಲು ತೂಗುತ್ತಿದ್ದರೆ, ತಲೆಯೊಳಗಂತೂ ನಾನಾ ಯೋಚನೆಗಳ ಹಾವಳಿ !   ಇವತ್ತು ಜೀವದ ಗೆಳತಿಗೆ ಫೋನಾಯಿಸಿ ಗಂಟೆಗಟ್ಟಲೆ ಹರಟಬೇಕು. ಅಂದೇ ತಂದಿಟ್ಟಿರುವ ಕಿವಿಯೋಲೆಯನ್ನ ಇಂದಾದರೂ ಹಾಕಿ ನೋಡಬೇಕು. ಕಬೋರ್ಡ್‌ನಲ್ಲಿ ಮುದ್ದೆಯಾಗಿ  ಬಿದ್ದಿರೋ ಡ್ರೆಸ್ಗಳನ್ನ ಮಡಿಸಿಡಬೇಕುಮಸ್ತಕದೊಳಗೆ ಗಿರಕಿ ಹೊಡೆಯುತ್ತಿರೋ ಆ ಕವನದ ಸಾಲುಗಳನ್ನ ಮರೆತುಹೋಗುವ ಮೊದಲು ಗೀಚಿಬಿಡಬೇಕು. ಮೂಲೆಯಲ್ಲಿ ಬಿದ್ದಿರೋ ಲ್ಯಾಪ್‌ಟಾಪ್‌ಮೇಲೆ  ಧೂಳು ಕೂತಿದೆ.. ಇವತ್ತಾದರೂ ಒರೆಸಿಬಿಡಬೇಕು.  ಅನ್ನೋ ಇಂಥ ಅದೆಷ್ಟೋ ಮುಗಿಯದ ಲೆಕ್ಕಾಚಾರ ಮನಸ್ಸಿನಲ್ಲಿ ಹರಿದಾಡ್ತಾ ಇದ್ದರೆ, ಬಾಯಿ ಮಾತ್ರ ಜೋಜೋ ಹಾಡ್ತಾ ಇತ್ತು.

 ಯಾಕೋ ಆವತ್ತು ನನ್ನ ಮಗ ಬೇಗ ಮಲಗುವ ಲಕ್ಷಣವಿರಲಿಲ್ಲ. ಹೇಗೆ ಮಲಗಿಸಿಕೊಂಡು ತಟ್ಟಿದರೂ ಈತ ಕಣ್ಣುಮುಚ್ಚುತ್ತಿಲ್ಲವಲ್ಲ ಎಂಬ ಚಿಂತೆ. ಈತನಿಗೆ ನಿದ್ದೆ ಬಾರದೇ ನಾನು ಎದ್ದು ಹೋಗುವ ಹಾಗಿಲ್ಲ.  ಹೊರಗೆ ಜೋರಾಗಿ ಗಾಳಿ ಬೀಸುತ್ತಿತ್ತು, ಒಂದೆರಡು ಹನಿ ಕೂಡ ಬಿದ್ದ ಶಬ್ಧವಾಗುತ್ತಿತ್ತು.  ಬೆಳಗ್ಗೆಯಷ್ಟೇ ತೊಳೆದು ತಾರಸಿಯ ಮೇಲೆ ಒಣಗಿಸಿದ್ದ ಬಟ್ಟೆಗಳ ನೆನಪಾಯ್ತು.  ಮಧ್ಯಾಹ್ನದ ಬಿಸಿಲಿಗೆ ಗರಿ ಗರಿ ಒಣಗಿತ್ತು..! ಥೋ..! ತಂದಿಡಬೇಕಿತ್ತು ಮೊದಲೇ..! ಲೊಚಗುಟ್ಟುತ್ತಾ ಮಗುವ ತಲೆಯನ್ನ ಬೇಗ ಬೇಗ ತಟ್ಟಿದೆ.  ತಟ್ಟಿದ್ದು ಸ್ವಲ್ಪ ಗಟ್ಟಿಯಾಗಿ ಮತ್ತೆ ಕಣ್ಬಿಟ್ಟು ಕುಯ್ಯಿ ಅಂದ. ಸಂತೈಸಿ ಮೆತ್ತಗೆ ತಟ್ಟಿದೆ.  ಅಂತೂ ಇಂತೂ ಮಗುವಿಗೇನೋ ನಿದ್ದೆ ಬಂತು.. ಹಾಗೇ.. ಮಳೆ ಕೂಡ..!  ಆ ಬಟ್ಟೆಗಳ ಗತಿಯನ್ನ ಮತ್ತೆ ನಾನು ಹೇಳಬೇಕಾಗಿಲ್ಲ ಅಲ್ವಾ...?   ಕೊನೆಗೂ ನನ್ನ ಮಗ ಮಲಗಿದ್ದ.   ಸ್ವಲ್ಪ ಹೊತ್ತು ರಿಲ್ಯಾಕ್ಸ್ಆಗಿ ಟಿವಿ ನೋಡೋಣ ಅಂದುಕೊಂಡು ಸೋಫಾದ ಮೇಲೆ ಕೂತಿದ್ದೇ ಕೂತಿದ್ದು ರೂಂನಿಂದ ಮತ್ತದೇ ಕುಸು ಕುಸು ಶಬ್ಧ!   ಮಗ ಮಲಗಿದ್ದಲ್ಲಿಯೇ ಹೊರಳಾಡುತ್ತಾ ನನ್ನನ್ನೇ ಹುಡುಕುತ್ತಿದ್ದ.  ಪೂರ್ತಿ ಎಚ್ಚರಾಗುವ ಮೊದಲು  ಮಲಗಿಸಿ ಬಂದು ಬಿಡಬೇಕು ಎಂದು ಹೋದದ್ದೇ ತಪ್ಪಾಯ್ತು ನೋಡಿ..!   ನನ್ನ ಮಗು ಎದ್ದು ಕುಳಿತು ನನ್ನ ಮುಖ ಸವರುತ್ತಾ ನಗುತ್ತಿದ್ದಾಗಲೇ ನನಗೆ ಎಚ್ಚರವಾದದ್ದು..!  ಆಗಲೇ ನನಗೆ ಅರ್ಥವಾಗಿತ್ತು ನಾನೂ ಒಂದುವರೆ ಗಂಟೆ ಮಲಗಿಬಿಟ್ಟಿದ್ದೆ ಎಂಬುದು. ಅಂಥ ದಿವ್ಯ ನಿದ್ದೆ ಅದು..! ಅಲ್ಲಿಗೆ ನಾನು ಮಾಡಬೇಕಿದ್ದ ಎಲ್ಲ ಕೆಲಸಗಳೂ ಹಾಗೇ ಉಳಿದಿದ್ವು!  ಹೇಳ್ತಾ ಹೋದರೆ ಇಂಥ ಉದಾಹರಣೆಗಳು  ಅದೆಷ್ಟೋ..!?

 ಕಾಮಿಡಿ ವಿಷಯ ಏನು ಗೊತ್ತಾ..? ನಾನು ಅಮ್ಮ ಆಗೋಕೂ  ಮುಂಚೆ ನನಗೆ ನಿದ್ದೆ ಬರಬೇಕು ಅಂದ್ರೆ, ಎಲ್ಲಿಯೂ ಸುಕ್ಕಿರದ ಶಿಸ್ತಾಗಿರುವ ಹಾಸಿಗೆ ಬೇಕಿತ್ತು.  ಲೈಟ್ ಆನ್  ಇದ್ದರೆ ಕಣ್ಣಿಗೆ ನಿದ್ದೆ ಹತ್ತುತ್ತಿರಲಿಲ್ಲ. ಫ್ಯಾನ್‌ಸೌಂಡ್‌ಬಿಟ್ಟು, ಯಾವ ಸದ್ದೂ ಆಗುವಂತಿರಲಿಲ್ಲ.  ಆದ್ರೆ ನನಗೇ ಗೊತ್ತಿರದೇ ಆಗಿನ ಮತ್ತು ಈಗಿನ ಸ್ಥಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿಬಿಟ್ಟಿದೆ.  ಎಂಥದೇ ಪರಿಸ್ಥಿತಿ ಇದ್ದರೂ ನಿದ್ರಾ ದೇವಿ ಅದ್ಭುತವಾಗಿ ನನ್ನನ್ನು ಆವರಿಸಿಕೊಂಡಿರುತ್ತಾಳೆ.   ಮಗನ ಚೇಷ್ಠೆಗೆ ಬೇಸತ್ತು ಅವನಪ್ಪ ಎಂದೋ ಎದ್ದು ಹೋಗಿ ಪಕ್ಕದ ರೂಮ್ನಲ್ಲಿ ಮಲಗಿದ್ದೂ ಕೂಡ  ನನ್ನ ಅರಿವಿಗೆ ಬಂದಿರುವುದಿಲ್ಲ.!  

 ಈಗ ನನ್ನ ಮಗನಿಗೆ ಐದು ವರ್ಷ. ಈಗವನು ದಿನಕ್ಕೊಂದೇ ನಿದ್ರೆ ಮಾಡುತ್ತಾನೆ.  ಈಗ ತಟ್ಟುವುದೂ ಬೇಡ, ಜೋಗುಳವೂ ಬೇಡ.  ಅವನ ಪಾಡಿಗೆ ಅವನು ಮಲಗಿಬಿಡ್ತಾನೆ.  ಆದರೆ ಕಂಡೀಶನ್ಸ್  ಅಪ್ಲೈಯ್ ..! ರಾತ್ರಿ ಹಾಸಿಗೆಗೆ ಹೋದಮೇಲೆ ಅವನು ಕೇಳಿದಷ್ಟು ಕಥೆಗಳನ್ನು ನಾವು ಹೇಳಬೇಕು. (ಕಥೆ ಹೇಳಲು ತಡವಾದ್ರೆ ಅವನ ನಿದ್ದೆಯ ಟೈಮೂ ಪೋಸ್ಟ್ಫೋನ್ ಆಗುತ್ತೆ).    ಇಡೀ ಮನೆಯ ಲೈಟ್ ಆಫ್ ಆಗಿ ಅಪ್ಪ ಅಮ್ಮ  ಅವನ ಅಕ್ಕಪಕ್ಕ ಮಲಗಬೇಕು.  ಅವನ ಇಷ್ಟದ ಆಟಿಗೆಗಳನ್ನ ತಬ್ಬಿ ಹಿಡಿದೇ ಮಲಗಲು ಅವಕಾಶ ಕೊಡಬೇಕು.  ಈ ಎಲ್ಲಾ ಶರತ್ತುಗಳು ಅನ್ವಹಿಸುವುದರಿಂದ ಈಗಲೂ ನನಗೆ ನಿದ್ದೆ ಬಂದಾಗ ಕಣ್ತುಂಬಾ ನಿದ್ದೆ ಮಾಡೋದು ಕನಸಿನ ಮಾತಾಗಿಯೇ ಉಳಿದುಬಿಟ್ಟಿದೆ.  ಯಾಕಂದ್ರೆ, ಮಗನಿಗೆ ನಿದ್ದೆ ಬಂದಮೇಲೆ ಹಾಸಿಗೆಯಲ್ಲೆಲ್ಲ ಹರಡಿ ಚುಚ್ಚುತ್ತಿರುವ ಆಟಿಕೆಗಳನ್ನ ತೆಗೆದಿಡಬೇಕಲ್ಲ..!  ಆ ಕೆಲಸದ ಪಾಳಿ  ಸಧ್ಯಕ್ಕೆ ನನ್ನದೇ..! ಹೀಗಾಗಿ  ಈಗಲೂ ನನ್ನ ಆಸೆ ಒಂದೇ  ‘ ಮಗ ಬೇಗ ಮಲಗಲಿ’ ಅನ್ನೋದು.

 

Sunday 20 December 2020

'ಪಾಂಡಿಚೇರಿ' ತುಂಬಾ ಚೆನ್ನಾಗಿದೆ.. ಆದರೆ...




ಈಗ ಸರಿಯಾಗಿ ಒಂದು ವರ್ಷದ ಹಿಂದಿನ ಕಥೆ ಇದು.  ಕ್ರಿಸ್ತ ಶಕ ಕರೊನಾ ಪೂರ್ವ ಕಾಲ ಅನ್ನಿ. ಆವತ್ತು ನಮ್ಮ ಮೂವರ ಸವಾರಿ ಗಿರಿನಗರದ ಗಣೇಶ್‌ ಮಾನಸಾ ಮನೆಗೆ ಹೋಗಿತ್ತು.  ಮಾತುಗಳ ಮಧ್ಯೆ ನಮ್ಮಲ್ಲಿಯೇ ಯಾರೋ ಪ್ರವಾಸದ ಪ್ರಸ್ತಾಪ ಮಾಡಿದ್ದರು.  ನಾವ್ಯಾರೂ ಇನ್ನೂ ನೋಡಿರದ ಪಾಂಡೀಚೇರಿಯೇ ನಮ್ಮ ಪ್ರವಾಸಕ್ಕೆ ಸೂಕ್ತ ಎಂಬ ನಿರ್ಣಯೂ ಅಲ್ಲಿಯೇ ಆಗೋಯ್ತು.   ಆದರೆ ಹೋಗುವ ದಿನ ಗೊತ್ತು ಮಾಡುವ ಜವಾಬ್ದಾರಿಯನ್ನ ಸಿ.ಎ ಎಕ್ಸಾಮ್‌ಗೆ ತಯಾರಿಯಲ್ಲಿದ್ದ ನವ ಜೋಡಿ ಗಣೇಶ, ಮಾನಸಾ ಅವರಿಗೇ ಕೊಟ್ವಿ.

ಅಂತೂ ಇಂತೂ ಅದೆಷ್ಟೋ ಕಲಾಪಗಳ ನಂತರ 2019 ರ ಡಿಸೆಂಬರ್‌ ೮ ಮತ್ತು ೯ ದಿನಾಂಕದಲ್ಲಿ ಬರುವ ವಾರಾಂತ್ಯವೇ ಫಿಕ್ಸ್‌ ಆಯ್ತು.  ಇನ್ನೂ ತಿಂಗಳುಗಳ ಕಾಲ ಸಮಯವಿದ್ರೂ ನನ್ನ ಗಂಡ ವಿನಯ್‌ ಹೊಟೆಲ್‌ ಸರ್ಚ್ ಮಾಡೋದ್ರಲ್ಲಿ ತಲ್ಲೀನನಾದ.   ಎಲ್ಲ ಹೊಟೆಲ್‌ಗಳನ್ನ ಒಂದೊಂದಾಗಿ ನೋಡಿ, ರಿವ್ಯೂವ್‌ಓದಿಬೇಕೋ ಬೇಡವೋ ಡಿಸೈಡ್ ಮಾಡಿ , ಮಾನಸಾ ಗಣೇಶರ ಮಾತಿಗೂ ಬೆಲೆಕೊಟ್ಟು ಒಂದು ಅಂದದ  ಹೊಟೆಲ್‌ನಲ್ಲಿ ಎರಡು ಚೆಂದದ ರೂಮ್ಸ್‌ ಬುಕ್‌  ಮಾಡಿದ್ದಾಯ್ತು. 

 ಹೊಟೆಲ್‌  ಬುಕ್‌  ಆಗಿದ್ದೇ ಆಗಿದ್ದು, ನನ್ನೊಳಗೆ ಆಹಾ ಅದೆಷ್ಟು ಉಲ್ಲಾಸಉತ್ಸಾಹ ಅಂತೀರಾ..ನಾನಂತೂ ಪಾಂಡಿಚೇರಿ ಟೂರ್‌ಗಾಗಿ ಶಾಪಿಂಗ್‌ಕೂಡ ಶುರು ಹಚ್ಚಿಬಿಟ್ಟಿದ್ದೆ.  ಎಲ್ಲ ಶಾಪಿಂಗ್‌ ವೆಬ್‌ಸೈಟ್‌ಗಳಿಗೂ ಭೇಟಿಕೊಟ್ಟು, ನನ್ನ ಗಂಡನ ತಲೆಯನ್ನೂ ಸ್ವಲ್ಪ ತಿಂದು ಒಂದೆರಡು ಡ್ರೆಸ್‌  ಕೂಡ ತಗೊಂಡು ಕಬೋರ್ಡ್‌  ಒಳಗೆ ಸೇರಿಸಿಬಿಟ್ಟಿದ್ದೆ.  ನಾವೆಲ್ಲ ಪಾಂಡಿಚೇರಿಯಲ್ಲಿ ಎಲ್ಲಿಲ್ಲಿ ಸುತ್ತಬೇಕುಅಲ್ಲಿ ಏನೇನು ಶಾಪಿಂಗ್‌  ಮಾಡಬೇಕು..? ಅಲ್ಲಿರುವ ಫೇಮಸ್‌  ಟೂರಿಸ್ಟ್ ಅಟ್ರಾಕ್ಷನ್‌ಗಳೆಲ್ಲ ಯಾವ್ಯಾವ್ದು ಅನ್ನೋ ಲಿಸ್ಟ್‌ ವಿನಯ್‌ ಮೊಬೈಲ್‌ನಲ್ಲಿ ರೆಡಿಯಾಗ್ತಿತ್ತು. ಪೋರ್ಚುಗೀಸರ ಕಾಲದ ಕಲರ್‌ ಕಲರ್‌ ಬಿಲ್ಡಿಂಗ್‌ಗಳುಸಮುದ್ರ ತೀರಗಳುಫುಡ್‌ಸ್ಟ್ರೀಟ್‌, ವಾವ್‌ ..! ಅಲ್ಲಿ ಏನುಂಟು ಏನಿಲ್ಲ..?   ಪಾಂಡೀಚೇರಿಯ ಎಲ್ಲ ಟೂರಿಸ್ಟ್‌  ಸ್ಪಾಟ್‌ಗಳನ್ನೂ ಗೂಗಲ್‌ನಲ್ಲಿ ನೋಡಿ ಹಿರಿ ಹಿರಿ ಹಿಗ್ಗಿದ್ದ ನಂಗಂತೂ ಯಾವಾಗಪ್ಪ ಪಾಂಡೀನ ನೋಡ್ತೀನಿ ಅನ್ನಿಸೋಕೆ  ಶುರುವಾಗಿತ್ತು.   ಲ್ಯಾ‌ಪ್‌ಟಾಪ್‌ಮುಂದೆ ನನ್ನ 4 ವರ್ಷದ ಮಗನನ್ನೂ ಕೂರಿಸಿಕೊಂಡು, ಅವನಿಗೂ ಪಾಂಡಿಚೇರಿಯ ಬೀಚ್‌ ತೋರಿಸಿದ್ದೆ.   ಮಗಾ ನೋಡು... ನಾವು ಇದೇ ಬೀಚ್‌ನೋಡೋಕೆ ಹೋಗ್ತಿದೀವಿ. ಅಂತ ಅವನೊಳಗೂ ಕನಸು ಬಿತ್ತಿದ್ದೆ.  ಅವನು ನಂಗೆ ಬೀಚ್‌ನಲ್ಲಿ ಆಟ ಆಡೋಕೆಸ್ಯಾಂಡ್‌ಟಾಯ್ಸ್‌ಕೊಡ್ಸಮ್ಮ ಅಂತ ದುಂಬಾಲು ಬಿದ್ದ.

ಅಂತೂ ನಾವೆಲ್ಲ ಕಾಯುತ್ತಿದ್ದ ದಿನಕ್ಕೆ ಇನ್ನೊಂದೇ ವಾರ ಬಾಕಿ ಇತ್ತು. ಆಗಲೇ ಆಲ್‌ಮೋಸ್ಟ್‌  ನನ್ನ ಪ್ಯಾಕಿಂಗ್‌ಕೂಡ ಮುಗಿದಿತ್ತು.  ಆಗ ಫೋನ್‌ಮಾಡಿದ ಗಣೇಶ, ಒಂದು ಶಾಕಿಂಗ್‌ ನ್ಯೂಸ್‌  ಒಂದನ್ನ ಹೇಳಿದ.  ’ಡಿಸೆಂಬರ್‌  ೯  ನೇ ತಾರಿಖು ಪಾಂಡಿಯಲ್ಲಿ ಮಳೆಯಾಗುತ್ತೆ ಅಂತ ಗೂಗಲ್‌  ವೆದರ್‌  ಹೇಳ್ತಿದೆಯಲ್ಲಾ’ ಅಂದ.   ಅಲ್ಲೇ ಲ್ಯಾಪ್‌ಟಾಪ್‌ನಲ್ಲಿ ನಾವೂ ಚೆಕ್‌ಮಾಡಿ  ’ಓಹೋ ಹೌದಾ... ಲೆಟ್ಸ್‌ಸೀನಾವು ಹೊರಡೋದಿನ್ನೂ ವಾರ ಇದೆ ತಾನೆ..ವೆದರ್‌ಚೇಂಜ್‌  ಆಗ್ಲೂ ಬಹುದು ಅಲ್ವಾ..? ಅಂತ ನಮ್‌ನಮ್ಮೊಳಗೇ ಸಮಾಧಾನ ಮಾಡಿಕೊಂಡ್ವಿ.  ಆವತ್ತಿನಿಂದ ಬೆಳಗ್ಗೆ ಎದ್ದ ತಕ್ಷಣ ಗೂಗಲ್‌ವೆದರ್‌ನಲ್ಲಿ ಪಾಂಡಿಚೇರಿಯ ಹವಾಮಾನವನ್ನ ಚೆಕ್‌ಮಾಡೋದೊಂದು  ನಿತ್ಯ ಕರ್ಮದೊಳಗೊಂದಾಯ್ತು ನಮಗೆ.  ಆದ್ರೆ, ವಾರ ಕಳೆದರೂ ವೆದರ್‌ನಲ್ಲಿ ಯಾವ ಚೇಂಜಸ್‌  ಕೂಡ ಆಗಲಿಲ್ಲ.  ಆದರೂ ನಮ್ಮೊಳಗೆ ಅದೇನೋ ಬಂಢ ಧೈರ್ಯ.  ಅಥವಾ ಮಳೆಯ ಕಾರಣಕ್ಕೆ ತಿಂಗಳುಗಳಿಂದ ಪ್ಲ್ಯಾನ್ ಮಾಡಿದ್ದ ನಮ್ಮ ಟೂರ್‌  ಕ್ಯಾನ್ಸಲ್‌  ಆಗಿಬಿಟ್ಟರೆ..ಅನ್ನೋ ಭಯವೂ ಇದ್ದಿರಬಹುದು. ಹೀಗಾಗಿ ನಾವ್ಯಾರೂ ಟ್ರಿಪ್‌ಕ್ಯಾನ್ಸಲ್‌  ಮಾಡೋ ಬಗ್ಗೆ ಚಕಾರವೆತ್ತಲಿಲ್ಲ.

 ನಾವೆಲ್ಲ ಹೊರಡುವ ಹಿಂದಿನ ದಿನ ಸಂಜೆ, ನನಗೆ ಒಂದು ಸಣ್ಣ ಆಶ್ಚರ್ಯ ಕಾದಿತ್ತು.   ವಿನಯ್‌  ತರಾತುರಿಯಲ್ಲಿ ಆಫೀಸ್‌ನಿಂದಲೇ ಕಾಲ್‌ಮಾಡಿಈಗಿದೀಂಗ ಮಗನ ಜತೆ ತಯಾರಾಗಿರು  ನಾವು ಇವಾಗಲೇ ಪಾಂಡಿಗೆ ಹೊರಡ್ತಿದ್ದೀವಿ ಅನ್ನಬೇಕೆ..? ಶನಿವಾರ ಬೆಳ್ಳಂಬೆಳಗ್ಗೆ ೫ ಗಂಟೆಗೆ ಬೆಂಗಳೂರು ಬಿಟ್ಟು ಮಧ್ಯಾಹ್ನದ ವೇಳೆಗೆ ಪಾಂಡಿಗೆ ತಲುಪುವ ಯೋಜನೆಯಲ್ಲಿ ಬದಲಾವಣೆ ಮಾಡಿದ್ದ ಈ ಗಂಡುಗೋವಿಗಳು ನಮ್ಮನ್ನ ಹೊರಡಿಸಿಕೊಂಡು ಆವತ್ತೇ ರಾತ್ರಿ ಹೊರಟಿದ್ದರು.  ಆವತ್ತು ರಾತ್ರೋ ರಾತ್ರಿ ಬೆಂಗಳೂರು ಮತ್ತು ಪಾಂಡೀ ನಡುವಿನ ಅದ್ಯಾವುದೋ ವೆಲ್ಲೂರು ಎಂಬಲ್ಲಿ ಒಂದು ಹೋಟೆಲ್‌ ಕೂಡ ಬುಕ್‌  ಮಾಡಿದ್ರು ಸರ್‌ಪ್ರೈಸ್‌ಆಗಿ..! ಅಲ್ಲಿ ರಾತ್ರಿ ಉಳಿದುಬೆಳಗ್ಗೆ ಅಲ್ಲಿಂದ ಪಾಂಡಿಗೆ ಹೋಗುವ ದಿಢೀರ್‌  ಯೋಚನೆ ಬಂದಿದ್ದಲ್ಲದೇ..ಅದನ್ನ ಕಾರ್ಯರೂಪಕ್ಕೂ ತಂದಾಗಿತ್ತು.  ಅದೆಲ್ಲ ನನಗೆ ಮತ್ತು ಮಾನಸಾಗೆ ಗೊತ್ತಾಗಿದ್ದೇ ಕಾರ್‌ನಲ್ಲಿ ಹೋಗುತ್ತಿದ್ದಾಗ...!  ಗಡಬಡಾಯಿಸಿಕೊಂಡು ಕಾರು ಹತ್ತಿ ಹೊರಟಿದ್ದ ನಾನು ಮತ್ತು ಮಾನಸಾ ರಾವಣನ ಪುಷ್ಪಕ ವಿಮಾನದಲ್ಲಿ ಕೂತು ಹಾರಿಹೋದ ಸೀತೆಯಂತಾಗಿದ್ವಿ ...! ಆದ್ರೆ ಇಲ್ಲಿ ರಾವಣರ‍್ಯಾರೂ ಇರಲಿಲ್ಲ ಅನ್ನೋದೇ ಸಮಾಧಾನ..!

 ರಾತ್ರೋ ರಾತ್ರಿ ಹೊರಟಿದ್ದ ನಮ್ಮ ಕಾರು, ವೆಲ್ಲೂರನ್ನ ತಲುಪಿದಾಗ ರಾತ್ರಿ 12 ಗಂಟೆಯ ಮಧ್ಯರಾತ್ರಿ.  ಗೂಗಲ್‌ಮ್ಯಾಪ್‌ನಮ್ಮನ್ನ ಆ ಹೋಟೆಲ್‌ನ ಹತ್ತಿರ ಕರೆದೊಯ್ತಾ ಇತ್ತು.  ಯಾವುದೋ ಮೇನ್‌ರೋಡು.  ಇನ್ಯಾವುದೋ ರೈಟು.   ಮತ್ಯಾವುದೋ ಲೆಫ್ಟು.   ಗೂಗಲ್‌ಮ್ಯಾಪ್‌  ಕನ್ಯೆ ಹೇಳಿದ್ದೇ ದಾರಿ!  ಆ ಸುಮಧುರ ಅಶರೀರ ವಾಣಿಯ ಆಣತಿಯಂತೆ ಒಳ ರೋಡ್‌  ಒಂದರಲ್ಲಿ ಎಡಕ್ಕೆ ಹೊರಳಿತು ಕಾರು, ಆ ರಸ್ತೆ ಹೋಗ್ತಾ ಹೋಗ್ತಾ ಕಿರಿದಾಗುತ್ತಾ ಸಾಗುತ್ತಿತ್ತು.  ಅಂಗಡಿ ಮುಂಗುಟ್ಟುಗಳಿದ್ದ ಓಣಿಯಂಥ ಕಿರಿದಾದ ದಾರಿಯಲ್ಲಿಯೇ ಕಾರು ಮುನ್ನುಗ್ಗುತ್ತಿತ್ತು.  ಯಾರನ್ನಾದರೂ ಒಂದು ಮಾತು ಕೇಳೋಣ ಅಂದ್ರೆಆ ಮಧ್ಯ ರಾತ್ರಿಯಲ್ಲಿ ನಮಗೆ ಯಾರು ಸಿಕ್ಕಾರು..ಗೂಗಲ್‌ಕನ್ಯೆ ತೋರಿಸುತ್ತಿರುವ ದಾರಿ ಮಾತ್ರ ತುಂಬಾ ಅನುಮಾನಾಸ್ಪದವಾಗಿತ್ತು.  ಕೊನೆಗೆ ಒಂದು ಬೈಕ್‌ಕೂಡ ದಾಟಿ ಹೋಗದಂಥ ಕಿರಿದಾದ  ಸೇತುವೆಯ ಬಳಿ ಕರೆದುಕೊಂಡು ಬಂದಿದ್ದ ಗೂಗಲ್ ಮ್ಯಾಪ್‌,  ’ಗೊ ಸ್ಟ್ರೇಟ್‌200 ಮೀಟರ‍್ಸ್‌  ಆಂಡ್‌  ಟೇಕ್‌  ಲೆಫ್ಟ್‌’  ಅಂತ ಗೈಡ್‌ಮಾಡ್ತಾನೇ ಇತ್ತು.  ನಮಗೆ ಆಗಲೇ ಗೊತ್ತಾಗಿದ್ದು ಗೂಗಲ್‌ಮ್ಯಾಪ್‌ಅಕ್ಷರ ಷಃ ನಮ್ಮನ್ನ ಹಳ್ಳಹಿಡಿಸಿದೆ ಅಂತ.   ಇನ್ನೇನು..? ಆ ರಸ್ತೆಯಲ್ಲಿ ಹೋಗಲು ಸಾಧ್ಯವೇ ಇಲ್ಲ ಅಂತ ಗೊತ್ತಾದಾಗ ಕಾರ್‌ನ್ನ ಟರ್ನ್‌ಮಾಡಲೇ ಬೇಕಲ್ಲಾ..! ಕಾರ್‌ನ್ನ ರಿವರ್ಸ್ ತರೋಕೂ ಆಗದ ಹಾವಿನಂಥ ರಸ್ತೆ ಅದು..! ಹರ ಸಾಹಸ ಪಟ್ಟು ಗಣೇಶ ಕಾರ್‌ನ್ನ ಟರ್ನ್‌ಮಾಡಿದ್ದ. ನಾವೆಲ್ಲ ನಿಟ್ಟುಸಿರು ಬಿಟ್ವಿ.

 

ಆ ಗಲ್ಲಿ ರಸ್ತೆ ದಾಟಿ,  ಕಾರು ಮೇನ್‌ರೋಡ್‌ಗೆ ಬರುತ್ತಿದ್ದ ಹಾಗೆ,  ರಾತ್ರಿ ಡ್ಯೂಟಿಯಲ್ಲಿದ್ದ ಪೊಲೀಸ್ ಜೀಪ್‌, ನಮ್ಮನ್ನ ಎದುರಾಯ್ತು.   ರಾತ್ರಿ 12.30 ಸಮಯದಲ್ಲಿ ಅನುಮಾನಾಸ್ಪದವಾಗಿ ರೋಡು ರೋಡು ಅಲೆಯುತ್ತಿರುವ ನಮ್ಮ ಕಾರ್‌ನ್ನ ಫಾಲೋ ಮಾಡಿಕೊಂಡು ಬಂದ ಅವರು, ನಮ್ಮನ್ನ ವಿಚಾರಿಸಲು ಪ್ರಯತ್ನಪಟ್ಟರು.  ತಮಿಳಿನಲ್ಲಿ ಅವರು ಅದೇನೋ ಕೇಳ್ತಾ ಇದ್ರೆ, ವಿನಯ್‌  ಇಂಗ್ಲೀಷ್‌ನಲ್ಲಿ ಉತ್ತರಿಸ್ತಾ ಇದ್ರು. ಗಣೇಶ್‌  ಹಿಂದಿಯಲ್ಲಿ ಅವರಿಗೆ ಅರ್ಥ ಮಾಡಿಸ್ತಾ ಇದ್ದ. ಈ ಎರಡೂ ಭಾಷೆಯ ಸಹಾಯದಿಂದ  ಮತ್ತು ನಮ್ಮ ಗಂಡುಗೋವಿಗಳ ಹಾವ ಭಾವದಿಂದ ಅಲ್ಪ ಸ್ವಲ್ಪ ಅರ್ಥ ಮಾಡಿಕೊಂಡು,  ಹೊಟೆಲ್‌  ಹೆಸರು ಗುರುತಿಸಿದ ಅವರು, ಹೊಟೆಲ್‌ಗೆ ಹೋಗೋ ದಾರಿ ತೋರಿಸಿದ್ದರು. 

 ಬೆಳ್ಳಂಬೆಳಗ್ಗೆ 6 ಗಂಟೆಗೇ ರೆಡಿಯಾಗಿನಾವೆಲ್ಲ ಅಲ್ಲಿಯೇ ಇದ್ದ ಫೇಮಸ್‌ ಹೋಟೆಲ್‌ ‘ಸರವಣ ಭವನ್‌’ನಲ್ಲಿ ಗಡದ್ದಾಗಿ ತಿಂಡಿ ತಿಂದು ಅಲ್ಲಿಂದ ಪಾಂಡಿಚೇರಿಯ ಹಾದಿ ಹಿಡಿದ್ವಿ.  ಮಧ್ಯಾಹ್ನ 1.30 ರ ಸುಮಾರಿಗೆ ಪಾಂಡಿಚೇರಿ ಸಿಟಿಯ ಹತ್ತಿರದಲ್ಲಿದ್ವಿ.  ಕನ್ನಡ ಸಾಂಗ್‌ಗಳನ್ನ ಕೇಳ್ತಾ, ಡ್ರೈವ್‌ಎಂಜಾಯ್‌ಮಾಡ್ತಿದ್ದ ನಮಗೆ ದೂರದಲ್ಲಿ ಕರಿಗಪ್ಪು ಮೋಡ ಆವರಿಸಿದ್ದು ಕಾಣಿಸ್ತಾ ಇತ್ತು.   ಚೆಂದದ ಹೆದ್ದಾರಿಯಲ್ಲಿ ಪಾಂಡಿಚೇರಿಯ ಕಡೆಗೆ ಓಡುತ್ತಿರುವ ನಮ್ಮ ಕಾರನ್ನ ಮುಖ ಗಂಟಿಕ್ಕಿಕೊಂಡೇ ಕೆಕ್ಕರಿಸಿ ನೋಡುತ್ತಿತ್ತು ಕರಿಗಪ್ಪು ಮೋಡದ ರಾಶಿ..!  ಪಾಂಡಿಚೇರಿಗೆ ಹತ್ತಿರ ಹತ್ತಿರವಾಗ್ತಾ ಇದ್ದಂತೆ ಕಾರ್ಗಪ್ಪು ಮಳೆ ಮೋಡ ಆಕಾಶದಲ್ಲಿ ಚಪ್ಪರಗಟ್ಟುತ್ತಿರುವುದು ಕಾಣಿಸ್ತಾ ಇತ್ತು.   ವಾರದಿಂದ ಅದೇ ಗೂಗಲ್‌ವೆದರ್‌ ರಿಪೋರ್ಟ್‌  ನೋಡ್ತಿದ್ದ ನಮಗೆ ನಮ್ಮ ಪ್ರವಾಸದ ಭವಿಷ್ಯ ಕಣ್ಮುಂದೆ ಬರೋಕೆ ಇನ್ನೂ ಸಮಯ ಬೇಕಿರಲಿಲ್ಲ.  ಎಂಥ ಮೋಡವಪ್ಪ ಇದು..? ಈ ಮೋಡದ ರಾಶಿಯನ್ನ ನೋಡಿದರೆ.. ಭಯವಾಗ್ತಿದೆ. ಅನ್ನೋ ಉದ್ಘಾರ ಎಲ್ಲರ ಬಾಯಲ್ಲಿ..! ನೋಡ ನೋಡುತ್ತಿದ್ದಂತೆ ಬೃಹತ್‌ಗಾಳಿ ನಮ್ಮ ಕಾರನ್ನ ಅಪ್ಪಳಿಸಿತ್ತು.  ಗಾಳಿಯ ಜೊತೆ ಜೊತೆಗೇ ಮಳೆಯೂ ಆರಂಭವಾಗಿಎರಡೂ ಸೇರಿಕೊಂಡು ’ಈಗ್ಯಾಕೆ ಬಂದ್ರಿ ಇಲ್ಲಿ..?’ ಅಂತ ಅಬ್ಬರಿಸುತ್ತಿದ್ವು.   ವೈಪರ್‌ವೇಗಕ್ಕೂ ಕ್ಯಾರೇ ಎನ್ನದ ಮಳೆಮುಂದಿನ ದಾರಿ ಕಾಣದಷ್ಟು ಓತಪ್ರೋತವಾಗಿತ್ತು. 

ಮಳೆಯಲ್ಲಿಯೇ ನಾವು ಬುಕ್‌ಮಾಡಿದ್ದ ಹೊಟೆಲ್‌ತಲುಪಿದ್ದಾಯ್ತು. ಮಧ್ಯಾಹ್ನ 2.30ಕ್ಕೆ ಕಾರ್‌ನಿಂದ ಹೊರಗಿಳಿಯಲೂ ಸಾಧ್ಯವಾಗಷ್ಟು ಕುಂಭದ್ರೋಣ ಮಳೆ ಅದು. ಹೇಗ್ಹೇಗೋ ಸಾವರಿಸಿಕೊಂಡು ಅಂತೂ ರೂಮ್‌ಒಳಗೆ ಸೇರಿಕೊಂಡ್ವಿ.  ನಮ್ಮ   ’ಲೋಟಸ್‌ ಬೇ ವ್ಯೂವ್‌ ಹೋಟೆಲ್‌’ ರೂಮ್‌ಗಳಷ್ಟೇ ಅದರ ಕಿಟಕಿಗಳೂ ಅಂದವಾಗಿದ್ವು.  ಅಂದು ಹೊಟೆಲ್‌ರೂಮ್‌ನ ಕಿಟಕಿಗೂ ಅದ್ಭುತ ಬೆಲೆ ಬಂದಿತ್ತು. ಕಿಟಕಿಯ ಹತ್ತಿರ ಕೂತು ಹೊರಗಿನ ಮಳೆಗೆ ಕಣ್ಣು ನೆಟ್ಟು ಕೂತಿದ್ದೆ ನಾನು.  ಬಳಿಯೇ ಕೂತಿದ್ದ ನನ್ನ ಮಗ  ’ಅಮ್ಮ ಬೀಚ್‌ಗೆ ಹೋಗೋದು ಯಾವಾಗಮ್ಮ..? ಅಂದ.  ಕೈಯಲ್ಲಿ ಸ್ಯಾಂಡ್‌ಟಾಯ್ಸ್ ಹಿಡಿದುಕೊಂಡು..! 

 ಕಿಟಕಿಯಿಂದ್ಲೇ ಮಳೆಯನ್ನ ನೋಡಿ ನೋಡಿ ಸಂಜೆ 6 ಗಂಟೆಯಾಗಿತ್ತು. ಆ ವೇಳೆಗೆ ಮಳೆ ಯಾಕೋ ಸ್ವಲ್ಪ ಬಿಡುವು ಪಡೆದುಕೊಂಡ್ತು. ಆದರೆ ಆಕಾಶವೇನೂ ತಿಳಿಯಾಗಿರಲಿಲ್ಲ.    ಹೊಟೆಲ್‌ಗೆ ಅತೀ ಹತ್ತಿರದಲ್ಲಿದ್ದ ರಾಕ್‌ಬೀಚ್‌ನಿಂದ್ಲೇ ನಮ್ಮ ಸೈಟ್‌ಸೀಯಿಂಗ್‌ಶುರು ಮಾಡೋಣ ಅಂದುಕೊಂಡುಬೀಚ್‌ನತ್ತ ಹೊರಟಿದ್ವಿ. ಮೋಡ ಕಟ್ಟಿದ್ದ ಆಕಾಶವನ್ನೇ ನೋಡ್ತಾ  ಕಾರ್‌ಪಾರ್ಕ್‌ಮಾಡಿ ಬೀಚ್‌ನಲ್ಲಿ ಸ್ವಲ್ಪ ಹೊತ್ತು ನಿಲ್ಲಬೇಕೆನ್ನುವಷ್ಟರಲ್ಲಿ ಮಳೆ ಶುರುವಾಯ್ತು.  ಸಮುದ್ರದ ಕಡೆಯಿಂದ ಧೋ ಎಂದು ಸುರಿಯುತ್ತಾ ನಮ್ಮ ಅಟ್ಟಿಸಿಕೊಂಡು ಬಂತು ಧೂರ್ತ ಮಳೆ.   ಮತ್ತೆ ಎದ್ನೋ ಬಿದ್ನೋ ಅಂತ ಓಡೋಡಿ ಬಂದು ಕಾರ್‌ಹತ್ತಿ ಕುಳಿತದ್ದಾಯ್ತು.   ಆಗಲೇ ಸಾಯಂಕಾಲವಾಗಿದ್ದರಿಂದ ಮತ್ತೆಲ್ಲಿಗೆ ಹೋಗೋದು..ಎಲ್ಲೆಲ್ಲೂ ಮಳೆ..! ಎಲ್ಲೆಲ್ಲೂ ನೀರು..!

ಈ ಮಳೆಯಲ್ಲಿ ಎಲ್ಲಿಗೂ ಹೋಗೋದು ಬೇಡ. ನಾಳೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಎಷ್ಟಾಗುತ್ತೋ ಅಷ್ಟು ಸೈಟ್ ಸೀಯಿಂಗ್ ಮಾಡೋಣ ಎಂಬ ಗಣೇಶನ ಮಾತಿಗೆ ನಾವೆಲ್ಲ ಹೂಂ ಗುಟ್ಟಿ ವಾಪಾಸ್‌ಹೊಟೆಲ್‌ಗೆ ಬಂದಿದ್ದಾಯ್ತು.  ಸ್ಯಾಂಡ್‌ಟಾಯ್ಸ್‌‌ನ ಕವರ್‌ನ್ನ ಕೈಯಲ್ಲೇ ಹಿಡಿದುಕೊಂಡು ವಾಪಾಸ್‌ರೂಮ್‌ಗೆ ಬಂದ ನನ್ನ ಮಗನಿಗೆ ಸ್ವಲ್ಪ ಜಾಸ್ತಿಯೇ ನಿರಾಸೆಯಾಗಿತ್ತು. ಅವನನ್ನ ಸಮಾಧಾನ ಮಾಡೋದೇ ದೊಡ್ಡ ಸವಾಲಾಗಿ ಹೋಯ್ತು. ನಿಜಕ್ಕೂ ಅವನ ಮುಖ ನೋಡಿದರೆ ಪಾಪ ಅನ್ನಿಸ್ತಿತ್ತು.

ನಿರಾಸೆಯಲ್ಲಿಯೇ ರಾತ್ರಿ ಮಲಗಿಬೆಳಗ್ಗೆ ಕಣ್ಣುಬಿಟ್ಟು ನೋಡ್ತೀವಿ ಮಳೆಯ ಪ್ರತಾಪಕ್ಕೆ ಹೊಟೆಲ್‌ಹಿಂಭಾಗವೆಲ್ಲ ನೀರಿನಿಂದ ಆವ್ರತವಾಗಿತ್ತು. ಮಳೆಯಂತೂ ನಿಮಿಷವೂ ಬಿಡುವಿಲ್ಲದೆ ಸುರಿಯುತ್ತಲೇ ಇತ್ತು.  ಬ್ರಮನಿರಸನ ಅಂತಾರಲ್ಲ, ಅದರ  ಸ್ಪಷ್ಟ ಭಾವಾರ್ಥ ಆವತ್ತು ನಮಗಾಗಿತ್ತು..!

 ಹೊಟೆಲ್‌ನಲ್ಲಿಯೇ ರುಚಿಯಾಗಿದ್ದ ಬಿಸಿ ಬಿಸಿ ಬ್ರೇಕ್‌ಫಾಸ್ಟ್‌ಮುಗಿಸಿಚೆಕ್‌ಔಟ್‌ ಮಾಡಿ ಆ ಚೆಂದದ ಹೋಟೆಲ್‌ಗೆ ಗುಡ್‌ಬೈ ಹೇಳಿ ಕಾರ್ ಹತ್ತಿದ್ವಿ.   ನಾವು ತಿಂಡಿತಿಂದು ಚೆಕ್‌ಔಟ್‌  ಪ್ರೋಸೆಸ್‌ ಮುಗಿಸುವ ತನಕ  ಸುಮ್ಮನಿದ್ದು ನೋಡ್ತಾ ಇದ್ದ ಆ ವರ್ಷಿಣಿನಾವು ಕಾರು ಹತ್ತಿದ ತಕ್ಷಣ ಪ್ರತ್ಯಕ್ಷವಾದಳು.  ಅಷ್ಟರ ಮಟ್ಟಿಗೆ ಹೊಟ್ಟೆಕಿಚ್ಚಿನ ಪಾಪಿ ಮಳೆಯಾಗಿತ್ತದು.

 ಅಲ್ಲಿಂದ ಇಲ್ಲಿಗೆ ಬಂದಿದ್ದಕ್ಕೆ, ‘ವಿ ಎಂಜಾಯ್ಡ್‌ ಅ ಲಾಟ್‌ ಇನ್ ಪಾಂಡಿ’ ಅಂತ ಬರೆದು ಒಂದೆರಡು ಫೋಟೋಗಳನ್ನಾದರೂ ವಾಟ್ಸ್ಯಾಪ್‌ ಸ್ಟೇಟಸ್‌ಗೆ ಹಾಕಬೇಡ್ವೆ..ಫ್ರೆಂಚ್‌ಸ್ಟ್ರೀಟ್‌ಲ್ಲಾದ್ರೂ ಒಂದೆರಡು ಫೋಟೋ ಕ್ಲಿಕ್ಕಿಸಿಕೊಳ್ಳೋಣ ಅಂದ್ರೆಆ ನಮ್ಮ ಆಸೆಗೂ ಈ ಮಳೆ ತಣ್ಣೀರು ಎರಚಿತ್ತು.  ಆದರೆ ನಾವು ಹೆದರಲಿಲ್ಲ ನೋಡಿ...!  ಕಾರ್‌ನಲ್ಲಿಯೇ ಫ್ರೆಂಚ್‌ಸ್ಟ್ರೀಟ್‌ನ್ನ ಸುತ್ತುಹಾಕಿಒಂದೆರಡುಕಡೆ ಫೋಟೋವನ್ನೂ ಕ್ಲಿಕ್ಕಿಸಿಕೊಂಡು, ನಮ್ಮ ವಾಟ್ಸ್ಯಾಪ್‌ಫೇಸ್‌ಬುಕ್‌  ಸ್ನೇಹಿತರಿಗೆ  ‘ಪಾಂಡಿಚೇರಿಯಲ್ಲಿಯ ನಮ್ಮ ಭರಪೂರ ಎಂಜಾಯ್‌ಮೆಂಟ್‌’ನ್ನ  ತೋರಿಸಿ ಕೊಟ್ವಿ..!  ನಮ್ಮ ಸ್ಟೇಟಸ್‌ಬರೋ ಕಮೆಂಟ್‌ಗಳಿಗೆ ಖುಷಿಯಿಂದ ಉತ್ತರಿಸ್ತಾನಮ್ಮ ಟ್ರಿಪ್‌ಟೋಟಲೀ ಹಳ್ಳ ಹಿಡಿದಿದ್ದಕ್ಕೆ ಲೊಚಗುಟ್ಟುತ್ತಾ ವಾಪಾಸ್ ಬೆಂಗಳೂರಿನ ದಾರಿ ಹಿಡ್ದ್ವಿ.

 ------------------

 

 

Friday 4 December 2020

ನಮ್ಮ WhatsApp ಚಾಟ್‌ನಲ್ಲೀಗ ನಂಬರ್‌ಗಳದೇ ಲೇವಾದೇವಿ..!



ವತ್ತು ನಮ್ಮ ಮನೆಯ ಹಾಲ್‌ ರಣರಂಗವಾಗಿತ್ತು..!  ನಮ್ಮಿಬ್ಬರ ನಡುವೆ ದೊಡ್ಡ ಜಗಳವೇ ಎದ್ದಿತ್ತು.  ‘ನೀನ್ಯಾಕೆ ನಾನು ಓದುತ್ತಿರುವ ಪುಸ್ತಕದ ಬುಕ್‌ಮಾರ್ಕ್‌ ತೆಗೆದು ಹಾಕ್ತೀಯಾ...?’  ಅಂತ ನಾನು ಸ್ವಲ್ಪ ಸಿಟ್ಟಿನಿಂದ್ಲೇ ನನ್ನ ಗಂಡನನ್ನ ಕೇಳಿದ್ದೆ.  ‘ಅಯ್ಯೋ ನಾನು ತೆಗೆದಿಲ್ಲ ಕಣೆ,  ನೀನೇ ತೆಗೆದಿಟ್ಟಿರಬಹುದು..?’  ಅಂದ ಅವನು.  ನಾನೇ ಓದುತ್ತಿರೋ ಬುಕ್‌ನಲ್ಲಿರೋ ಬುಕ್‌ಮಾರ್ಕ್‌‌ನ್ನ ನಾನೇ ತೆಗಿದಿಡ್ತೀನಾ.?  ನೋಡು ಇಲ್ಲಿ..! ನಾನು ಈ ಪುಸ್ತಕದಲ್ಲಿ ಇಟ್ಟುಕೊಂಡಿದ್ದ ಬುಕ್‌ಮಾರ್ಕ್ ನೀನು ಓದುತ್ತಿರುವ ಬುಕ್‌ನಲ್ಲಿ ಹೇಗೆ ಬಂತು..? ಅಂತ ರೆಡ್‌ಹ್ಯಾಂಡ್‌ಆಗಿ ನನ್ನ ಬುಕ್‌ಮಾರ್ಕ್‌ನ್ನ ಕೈಯ್ಯಲ್ಲಿ ಹಿಡಿದು ನಾನು ಕೇಳ್ತಾ ಇದ್ರೆ,   ‘ದೇವರಾಣೆ ನನಗೆ ಗೊತ್ತಿಲ್ಲಮ್ಮಾ ತಾಯಿ.. ಕೆಳಗೆ ಬಿದ್ದಿದ್ದನ್ನ ನಾನು ನನ್ನ ಬುಕ್‌ನೊಳಗೆ ಹಾಕಿದ್ದೀನಿ ಅಷ್ಟೆ. ಅಂತ ಅವನು ಕೈ ಮುಗಿದು ಸಮಜಾಯಿಶಿ ಕೊಡ್ತಾ ಇದ್ದ.   ನಾನು ಓದುತ್ತಿರುವ ಪೇಜ್‌ಕಳೆದು ಹೋಗಿದ್ದಕ್ಕೆ ನಾನು ಕಿರಿಕಿಯಿಂದ ಬುಸುಗುಡುತ್ತಿದ್ರೆ, ನನ್ನ ಗಂಡನ ಮುಖ ಗಡಿಗೆಯಂತಾಗಿತ್ತು.  ಎರಡು ವರ್ಷಗಳ ಹಿಂದೆ ಪದೇ ಪದೇ ನಮ್ಮ ನಡುವೆ ನಡೀತಿದ್ದ ಕಾಮನ್‌ ಜಗಳ ಇದು. 

ಪುಸ್ತಕ ಓದುವ ಹವ್ಯಾಸಿಗರಾಗಿರುವ ನಾವು ಒಟ್ಟೊಟ್ಟಿಗೆ ಎರಡ್ಮೂರು ಬುಕ್‌ಗಳ ಹಿಂದೆ ಬಿದ್ದಿರ್ತೀವಿ.  ನನಗೋ ಅದೇನೋ ವಿಚಿತ್ರ ಚಟ.  ಒಂದನ್ನ ಓದುವಾಗ ಇನ್ನೊಂದರ ಕಡೆ ಆಕರ್ಷಣೆ ಜಾಸ್ತಿ. ಒಂದೇ ಗುಕ್ಕಿನಲ್ಲಿ ಇಡೀ ಪುಸ್ತಕವನ್ನಂತೂ ಓದೋಕಾಗಲ್ವಲ್ಲ.. ಹೀಗಾಗಿ ಸದಾ ಕನಿಷ್ಠ ಎರಡು ಪುಸ್ತಕಗಳಲ್ಲಿ ಬುಕ್‌ಮಾರ್ಕ್‌ ಅಂತೂ ಇದ್ದೇ ಇರುತ್ತೆ.  ಹಾಲ್‌ನಲ್ಲಿ,  ಬೆಡ್‌ರೂಮ್‌ನಲ್ಲಿ,  ಕಿಚನ್‌ನಲ್ಲಿ ಹೀಗೆ ಎಲ್ಲೆಲ್ಲಿಯೂ ಪುಸ್ತಕಗಳೇ ಇರೋ ನಮ್ಮನೆಯಲ್ಲಿ ಬುಕ್‌ಮಾರ್ಕ್ ಮಾಯವಾಗೋ ಸಮಸ್ಯೆ ಹೊಸದಾಗಿ ಶುರುವಾಗಿತ್ತು. ಆ ಬುಕ್‌ಮಾರ್ಕ್‌ಮಾಯವಾಗೋದು ಯಾರಿಂದ..? ಅನ್ನೋದನ್ನ ಕಂಡು ಹಿಡಿಯೋಕೂ ಸಮಯವೇನೂ ಹಿಡಿಯಲಿಲ್ಲ ಎನ್ನಿ..!

ನನ್ನ ಮಗ ಅಥರ್ವ ಇನ್ನೂ ಎರಡು ವರ್ಷದ ಕಂದ ಆಗ. ಅವನಿಗೋ ನಮ್ಮ ಪುಸ್ತಕಗಳಲ್ಲಿರುವ  ಬುಕ್‌ಮಾರ್ಕ್ ಮೇಲೆ ಅದೇನೋ ಅಟ್ರಾಕ್ಷನ್‌. ಟೇಬಲ್‌ಮೇಲೆ, ಟಿವಿ ಸ್ಟ್ಯಾಂಡ್‌ಮೇಲೆ, ಕಾಟ್‌ಮೇಲೆ ಪುಸ್ತಕಗಳನ್ನ ಕಂಡರೆ ಸಾಕು,  ಬೇಗ ಬೇಗ ಹೋಗಿ ಅವುಗಳನ್ನ  ತಡಕಾಡಿ ಅದರಲ್ಲಿರೋ ಬುಕ್‌ಮಾರ್ಕ್‌ನ್ನ ತೆಗೆದುಕೊಂಡು, ಅದರ ಜತೆ ಆಟವಾಡ್ತಿದ್ದ. ನನ್ನ ಮಗನ ಬುಕ್‌ಮಾರ್ಕ್ ಅಟ್ರಾಕ್ಷನ್‌ಕುರಿತು ಹೇಳೋ ಮೊದಲು ನನ್ನದನ್ನೂ ಒಂಚೂರು ಹೇಳಿಬಿಡ್ತೀನಿ ಕೇಳಿ.  

ನನಗೂ ಕೂಡ ಬುಕ್‌ಮಾರ್ಕ್‌ಗಳ ಮೇಲೆ ಅದೇನೋ ಅವಿನಾಭಾವ ಸೆಳೆತ.  ಬುಕ್‌ಸ್ಟಾಲ್‌ಗಳಲ್ಲಿ ಪುಸ್ತಕಗಳನ್ನ ಕೊಂಡಾಗ ತಪ್ಪದೇ ನಾನು ಎರಡು ಹೆಚ್ಚೇ ಬುಕ್‌ಮಾರ್ಕ್‌‌ಗಳನ್ನ ಕೇಳಿ ಪಡೆಯೋದು ನನ್ನ ಅಭ್ಯಾಸ. ಕೆಲವು ಅಂಗಡಿಯವರು ಖುಷಿಯಿಂದ ಕೊಟ್ಟರೆ,  ಇನ್ಕೆಲವು ಮಳಿಗೆಯವರು ನನ್ನ ಬುಕ್‌ಮಾರ್ಕ್ ಚಪಲ ನೋಡಿ ಮುಖ ಗಂಟಿಕ್ಕಿದ್ದೂ ಇದೆ.  ಇರಲಿ ಬಿಡಿ.  ನಮ್ಮನ್ನ ಮದುವೆಗೆ ಆಹ್ವಾನಿಸಿ ಕೊಡುವ ಚೆಂದದ ಮಂಗಳ ಪತ್ರಗಳೂ ಕೂಡ ನನ್ನ ಕೈಯ್ಯಲ್ಲಿ ಬುಕ್‌ಮಾರ್ಕ್‌ಗಳಾಗಿ ಅವತಾರವೆತ್ತಿಬಿಡುತ್ತವೆ.  ಅದಲ್ಲದೆ,  ಕಾರ್ಡ್‌ಬೋರ್ಡ್‌ಶೀಟ್‌ಗಳನ್ನೂ ಕತ್ತರಿಸಿ ಅದರಮೇಲೆ ಚೆಂದದ ಚಿತ್ರ ಬಿಡಿಸಿಟ್ಟುಕೊಂಡು ಬುಕ್‌ಮಾರ್ಕ್‌ಆಗಿ ಉಪಯೋಗಿಸುತ್ತಿದ್ದ ದಿನಗಳೂ ಇದ್ವು. ಹೊಸ ಬಟ್ಟೆಗಳ ಜತೆ ಬರುವ ಟ್ಯಾಗ್‌ಳಂತೂ ನಮ್ಮ ಪುಸ್ತಕಗಳೊಳಗೆ ಬೆಚ್ಚಗೆ ಕೂರೋದು ಸರ್ವೇ ಸಾಮಾನ್ಯ.  ಹೀಗಾಗಿ ಹೊಸ ಬಟ್ಟೆ ಕೊಳ್ಳುವಾಗ ಅದರ ಟ್ಯಾಗ್‌ಗೂ ನಾನು ಇಂಪಾರ್ಟೆನ್ಸ್‌ಕೊಡ್ತೀನಿ ಅಂದ್ರೆ, ನೀವೆ ಲೆಕ್ಕ ಹಾಕಿ ನನಗಿರೋ ಬುಕ್‌ಮಾರ್ಕ್ ಹುಚ್ಚು ಎಂಥದಿರಬಹುದು ಅಂತ.

ಇಂತಿಪ್ಪ ಅಮ್ಮನ ಮಗನಿಗೆ ಬುಕ್‌ಮಾರ್ಕ್‌ಗಳ ಮೇಲೆ ಆಸೆಯಿರೋದೇನೂ ಆಶ್ಚರ್ಯವೇನಲ್ಲ ಬಿಡಿ.  ಆದರೆ ಅವನು ಈಗ ಅಂದಿಗಿಂತ ಎರಡು ವರ್ಷ ದೊಡ್ಡವನು. ಆದರೆ ಈ ಅಭ್ಯಾಸ ನಿಂತಿಲ್ಲ. ಬದಲಾಗಿ ಅದನ್ನ ಇನ್ನಷ್ಟು ಇಂಪ್ರೂವೈಸ್ ಮಾಡಿಕೊಂಡಿದ್ದಾನೆ. ಈಗಂತೂ ಬುಕ್‌ಮಾರ್ಕ್ ತೆಗೆದಿಟ್ಟು,  ತರಲೆ ಮಾಡೋದೇ ಅವನ ಮನೋರಂಜನೆಯಾಗಿಬಿಟ್ಟಿದೆ. ನಾವು ಹಾಕಿಟ್ಟ ಬುಕ್‌ಮಾರ್ಕ್ ಇಲ್ಲದಿದ್ದಾಗ ನಮ್ಮ ಮುಖದಲ್ಲಿ ಕಾಣೋ ಕಿರಿಕಿರಿ ಭಾವ ಅವನಿಗೆ ತುಂಬಾ ಇಷ್ಟ. ಹೀಗಾಗಿ ಅವನು ಹುಡುಕಿ ಹುಡುಕಿ  ಬುಕ್‌ಮಾರ್ಕ್‌ಮಾಯ ಮಾಡುತ್ತಾನೆ. 

ಒಂದು ದಿನ ನಮ್ಮ ಈ ಪುಟಾಣಿ ಬುಕ್‌ಮಾರ್ಕ್ ಕಳ್ಳನನ್ನ ಹತ್ತಿರ ಕೂರಿಸಿಕೊಂಡು, ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟೆ. ಇದಕ್ಕೂ ಮೊದಲು ಪ್ರಯತ್ನ ಪಟ್ಟಿಲ್ಲವೇ ? ಅಂತ ಕೇಳಬೇಡಿ. ಅದೆಷ್ಟೋ ಬಾರಿ ಇಂಥ ಸಂಧಾನಗಳು ಆಗಿದ್ದೂ ಇದೆ, ನಂತರ ವಿಫಲವಾಗಿದ್ದೂ ಇದೆ.  ಆದ್ರೂ  ಆವತ್ತು ಅವನನ್ನ ಹತ್ತಿರ ಕೂರಿಸಿಕೊಂಡು ಮುದ್ದಿಸಿ ನಿಧಾನಕ್ಕೆ ಹೇಳಿದ್ದೆ, ‘ ಪುಟ್ಟಾ ನಾವು ಓದ್ತಾ ಇರೋ ಬುಕ್‌ನಿಂದ ಬುಕ್‌ಮಾರ್ಕ್ ತೆಗಿಬೇಡಾ ಆಯ್ತಾ..? ನೀನು ಅದನ್ನ ತೆಗೆದರೆ, ಈ ದಪ್ಪ ಪುಸ್ತಕದ ಪುಟವನ್ನ ಹುಡುಕಿ ಹುಡುಕಿ ಓದೋದು ಅಮ್ಮ ಅಪ್ಪಂಗೆ ಕಷ್ಟವಾಗಲ್ವಾ..?  ಎಂಬ ನನ್ನ ಪ್ರಶ್ನೆಗೆ  ಅವನು ಅಷ್ಟೇ ಮುದ್ದಾಗಿ ’  ಬುಕ್‌ಮಾರ್ಕ್‌ನಂಗೂ ಇಷ್ಟ ಅಮ್ಮಾ..  ನಾನೂ ನನ್ನ ಸ್ಟೋರಿ ಬುಕ್ಸ್‌ನಲ್ಲಿ ಅದನ್ನ ಹಾಕಿಟ್ಟಿದೀನಿ ಗೊತ್ತಾ..?’ ಅನ್ನುತ್ತಾ,  ಅವನ ಸ್ಟೋರಿ ಬುಕ್ಸ್‌ತಂದು ತೋರಿಸಿದ್ದ.  ಅವನ ಎಲ್ಲಾ ಕಥ ಪುಸ್ತಕಗಳಲ್ಲಿಯೂ ನಾಲ್ಕೈದು ಬುಕ್‌ಮಾರ್ಕ್‌ಗಳನ್ನ ನೀಟಾಗಿ ಜೋಡಿಸಿಟ್ಟಿದ್ದ.  ಆ ಬುಕ್‌ಮಾರ್ಕ್‌ಗಳನ್ನ ತನ್ನ ಪುಸ್ತಕಗಳಲ್ಲಿಟ್ಟು ಜೋಪಾನ ಮಾಡಿದ್ದ.  ಇದನ್ನೆಲ್ಲ ನೋಡಿ ನನಗೆ, ಪಾಪ..! ಅನ್ನಿಸಿಬಿಡ್ತು. 

ನಂತರ ನಾವಂದುಕೊಂಡ್ವಿ,  ಈ ಬುಕ್‌ಮಾರ್ಕ್‌  ಉಸಾಪರಿಯೇ ಬೇಡ.  ಪುಸ್ತಕದ ಹಾಳೆಯನ್ನೇ ತುದಿಯಲ್ಲಿ ಸ್ವಲ್ಪ ಮಡಿಸಿಟ್ಟುಬಿಡೋಣ ಅಂತ.  ಈ ಕುರಿತು ಇಬ್ಬರೂ ಗುಟ್ಟಿನಲ್ಲಿ ಮಾತನಾಡಿಕೊಂಡು ಹೊಸ ಉಪಾಯ ಶುರುವಿಟ್ಟುಕೊಂಡ್ವಿ.  ಈ ನಮ್ಮ ಹೊಸ ಐಡಿಯಾದ ಬಗ್ಗೆ ಅವನಿಗೆ ಗೊತ್ತಿರಲಿಲ್ಲವಲ್ಲ ಹೀಗಾಗಿ ಸ್ವಲ್ಪ ದಿನಗಳು ನಾವು ನೆಮ್ಮದಿಯಾಗಿದ್ವಿ.  ಓಹೋ ನಮ್ಮ ಯೋಜನೆ ವರ್ಕ್‌ಔಟ್‌ ಆಗ್ತಿದೆಯಲ್ಲಾ ಅಂತ ಖುಷಿ ಪಟ್ಟು ನಾವು ಚಾಪೆ ಕೆಳಗೆ ನುಸುಳಿದ ಸಂತೋಷದಲ್ಲಿದ್ದಾಲೇ, ಅವನು ರಂಗೋಲಿ ಕೆಳಗೇ ನುಸುಳಿಯಾಗಿತ್ತು. ನಮ್ಮ ಐಡಿಯಾದ ಮರ್ಮವನ್ನ ಅದ್ಹೇಗೋ ಅರ್ಥಮಾಡಿಕೊಂಡಿದ್ದ ನಮ್ಮ ಕುಲದೀಪಕ ನಾವು ಮಡಿಸಿಟ್ಟ ಹಾಳೆಯನ್ನೂ ಬಿಡಿಸಿಟ್ಟು, ಅದರಂತೆ ಇನ್ನೊಂದಷ್ಟು ಹಾಳೆಯನ್ನ ಎಪರಾ ತಪರಾ ಫೋಲ್ಡ್‌ ಮಾಡಿಟ್ಟು ತಂಟೆ ಮಾಡಿದ್ದ.   ಅದೇನೋ ಹೇಳ್ತಾರಲ್ಲ....     ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.. ಅಂತ ಹಾಗಾಯ್ತು ನಮ್ಮ ಪರಿಸ್ಥಿತಿ. 

ಪುಸ್ತಕಗಳ ಹಾಳೆಗಳು ಹೇಗ್ಹೇಗೋ ಮುಡುಗಿ ಹೋಗಿದ್ದನ್ನ ಕಂಡು, ನಿಜಕ್ಕೂ ಬೇಜಾರಾಗಿತ್ತು ನಮಗೆ. ಆಮೇಲೆ ಪುಸ್ತಕದ ಹಾಳೆಗಳನ್ನ ಮಡಿಸಿಡೋದು ಬೇಡ್ವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದು, ಚಿಕ್ಕ ನಾಣ್ಯವನ್ನ ಬುಕ್‌ಮಾರ್ಕ್ ಆಗಿ ಉಪಯೋಗಿಸಲು ಪ್ರಾರಂಭ ಮಾಡಿದ್ವಿ.  ಅದನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರೋ ನಮ್ಮ ಮಗಧೀರ ಆ ನಾಣ್ಯಗಳನ್ನೆಲ್ಲ ತೆಗೆದುಕೊಂಡು ಹೋಗಿ ಅವನದೇ ಪಿಗ್ಗಿಬ್ಯಾಂಕ್‌ಲ್ಲಿ ಹಾಕಿಟ್ಟಿದ್ದಾನೆ..! 

ಇದೆಲ್ಲದರ ಮಧ್ಯೆ ನಾವು ಓದುತ್ತಿರುವ ಪುಸ್ತಕಳನ್ನ ಅವನಿಗೆ ಸಿಗದ ಹಾಗೆ ಕಬೋರ್ಡ್‌ನಲ್ಲಿ ಹಾಕಿಟ್ಟುಕೊಂಡ್ವಿ, ಆದರೆ ದಿನದಲ್ಲಿ ಬಿಡುವು ಸಿಕ್ಕಾಗೆಲ್ಲ ಪುಸ್ತಕ ಓದುವ ನಮಗೆ ಪ್ರತಿ ಬಾರಿ ಕಬೋರ್ಡ್‌‌ನಿಂದ ಪುಸ್ತಕ ತೆಗದು ತರುವುದು, ಓದಿದ ನಂತರ ಮತ್ತದೇ ಕಬೋರ್ಡ್‌ನಲ್ಲಿ ಹಾಕಿಡೋದು ಸ್ವಲ್ಪ ಕಿರಿಕಿರಿ ಅನ್ನಿಸ್ತಾ ಇತ್ತು. ತೃಪ್ತಿಕರವಾಗಿಲ್ಲದ ಈ ಐಡಿಯಾ ವರ್ಕ್‌‌ಔಟ್‌ಆಗಲೇ ಇಲ್ಲ.  

ಇನ್ನೇನ್‌ಮಾಡೋದು..?  ಈಗ ಪುಸ್ತಕದ ಪೇಜ್‌ನಂಬರ್‌ನ್ನ ನೆನಪಿಟ್ಟುಕೊಳ್ಳುತ್ತಿದ್ದೇವೆ.  ಪುಟದ ಸಂಖ್ಯೆ ನೆನಪಿರೋದಿಲ್ಲ ಅನ್ನೋ ಕಾರಣಕ್ಕೆ, ನಾವಿಬ್ಬರೂ ಒಬ್ಬರಿಗೊಬ್ಬರು ಪುಸ್ತಕದ ಪೇಜ್‌ನ ನಂಬರ್‌ನ್ನ ವಾಟ್ಸ್ಯಾಪ್‌ ಮಾಡಿಕೊಳ್ತಿದ್ದೇವೆ.  ಮಟಕಾ ದಂದೆ ಮಾಡುವವರ ಹಾಗೆ..! ನಮ್ಮದೀಗ ಬರೀ ನಂಬರ್‌ಗಳದೇ  ಲೇವಾದೇವಿ..!  ಈ ನಮ್ಮ ವಾಟ್ಸ್ಯಾಪ್‌ಚಾಟ್‌ಗಳನ್ನ ನೋಡಿ ನಾವೇ ಆಗಾಗ ನಗುತ್ತಿರುತ್ತೇವೆ.   ಆದ್ರೆ, ಸಧ್ಯಕ್ಕೆ ನನ್ನ ಮಗನಿಗಿನ್ನೂ ಈ ನಮ್ಮ ಪ್ಲ್ಯಾನ್‌ಬಗ್ಗೆ ಇನ್ನೂ ತಿಳಿದಿಲ್ಲ. ಅದೆಷ್ಟು ದಿನಗಳವರೆಗೆ ಇದು ನಡೆಯುತ್ತೋ ನಮಗೂ ಗೊತ್ತಿಲ್ಲ. 


-----------


Thursday 12 November 2020

ನಾಳೆಯಿಂದ ಎಲ್ಲಾ ಫ್ಲೈಟ್‌ ಕ್ಯಾನ್ಸಲ್‌..! ಇದೇನು ತಮಾಷೆ ಮಾಡೋ ಸಮಯವಾ..?

 


 

ಗಷ್ಟೇ 2020 ಪ್ರಾರಂಭವಾಗಿ ಕೆಲವೇ ಕೆಲವು ದಿನಗಳು ಕಳೆದಿದ್ವು ಅಷ್ಟೆ.  ಆವತ್ತು ನಾನು ಅಡುಗೆ ಮನೆಯ ಗಡಿಬಿಡಿ ಕೆಲಸದಲ್ಲಿದ್ದಾಗ,  ನನ್ನ ಪತಿರಾಯ ವಿನಯ್‌‌ ಗಾಬರಿಯಿಂದ  ಅಮೃತ್, ಚೀನಾದಲ್ಲಿ ಅದೇನೋ ರೋಗ ಬಂದಿದ್ಯಂತೆ,  ಸಾವಿರ ಸಾವಿರ ಜನ ಸಾಯ್ತಾ ಇದಾರಂತೆ.  ಈ ವಿಷಯ ನಿಂಗೊತ್ತಾ..?’ ಅಂತ ಕೇಳಿದ್ರೆ,  ನಾನು ಸಾಂಬಾರ್‌‌ಗೆ ಒಗ್ಗರಣೆ ಹಾಕ್ತಾ..  ಹೌದು ಹೌದು.. ಗೂಗಲ್‌ನ್ಯೂಸ್‌‌ನಲ್ಲಿ ನಾನೂ ಓದಿದ್ದೀನಿ.  ಅದೇನ್ ರೋಗನೋ  ಏನೋ.. ನಮ್ಮ ದೇಶಕ್ಕೇನಾದ್ರೂ ಈ ರೋಗ ಬಂದ್ರೆ, ಇರುವೆಗಳ ಥರ ನಮ್ಮ ಜನ ಸತ್ಹೋಗ್ತಾರೆ ಅನ್ಸುತ್ತೆ.’ ಅಂದೆ.    ಪಲ್ಯ ಬೇಯುತ್ತಿದ್ದ ಬಾಣಲೆಯ ಮುಚ್ಚಳ ತೆಗೆದು ನೋಡುತ್ತಾ ‘ಅದೆಲ್ಲ ಸರಿ...... ನೀವು ಹೋಗ್ತಿರೋ ಕುವೈತ್‌ನಲ್ಲಿ ಕೊರೊನಾ ಇಲ್ಲ ತಾನೇ..? ಕೇಳಿದೆ.   ‘ಇಲ್ಲ ಇಲ್ಲ...  ಚೀನಾದಲ್ಲಿ ಮಾತ್ರ ಇದೆ ಅಷ್ಟೆ.  ಹೋದ ವರ್ಷ ಅದ್ಯಾವ್ದೋ ಎಬೊಲಾ ಅನ್ನೋ ರೋಗ ಬಂದಿರಲಿಲ್ವಾ...?  ಅಂಥದ್ದೇ ಇದು ಅನ್ಸುತ್ತೆ.  ಇಂಥ ರೋಗಗಳು ಆಗಾಗ ಬರುತ್ವೆ ಹೋಗುತ್ವೆ ಅಂದ್ರು ಅವರು.   ಅಲ್ಲಿಗೆ ಆವತ್ತಿನ ಆ ಟಾಪಿಕ್ ಮುಗಿದಿತ್ತು. ಆದರೆ,  ನಾವೇನೋ  ಮಾತಾಡಿ  ಮುಗ್ಸಿದೀವಿ ಅಂತ, ರೋಗ ಮುಗಿದು ಹೋಗುತ್ತಾ..?

 ಮೊದಮೊದಲು ಚೀನಾದಲ್ಲಿ ಕೊರೊನಾ  ಕಾಡ್ತಾ ಇದೆ ಅಂದಾಗಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ನಾವೂ ಅಷ್ಟೆ ನ್ಯೂಸ್ ಪೇಪರ್, ನ್ಯೂ‌‌ಸ್‌ಚಾನಲ್‌ಗಳಲ್ಲಿ  ಚೀನಾ ಜನರ ಸಾವಿನ ಸುದ್ದಿ ಕೇಳಿ  ಲೊಚಗುಟ್ಟಿ ಅಯ್ಯೋ ಪಾಪ ಅಂದುಬಿಟ್ಟಿದ್ವಿ.   ದೂರದ ಚೀನಾದಲ್ಲಿ ತಾನೇ ರೋಗ ಬಂದಿರೋದು..? ’  ಅನ್ನೋ ಮನೋಭಾವ ಇತ್ತು ಆಗ.  ಆದರೆ ಚೀನಾದ ಸಾವಿನ ಸಂಖ್ಯೆ 2 ಸಾವಿರ ದಾಟಿ 3 ಸಾವಿರ ತಲುಪಿದ ಸುದ್ದಿ,ಕೇಳಿ ಸಣ್ಣ ಭಯ ಕಾಣಿಸಿಕೊಂಡಿತ್ತು.  ಕೊರೊನಾ ಜನ್ಮಸ್ಥಾನದಿಂದ ಈ ರೋಗ  ಶರವೇಗದಲ್ಲಿ ಜಗತ್ತಿಗೆಲ್ಲ ಹಬ್ಬುತ್ತಿರುವುದನ್ನ ನೋಡಿ ನಾವೂ ಬೆಚ್ಚಿಬಿದ್ವಿ . 

 ಜನವರಿಯ ಕೊನೆಯಲ್ಲಿ ಕೊರೊನಾ ಕೇರಳಕ್ಕೂ ಬಂತು ಎಂಬ ಸುದ್ದಿ ಟಿವಿಯಲ್ಲಿ ನ್ಯೂಸ್‌ಪೇಪರ್‌ನಲ್ಲಿ ಹರಿದಾಡ್ತಿತ್ತು. ಆದರೆ, ಡಿಸೆಂಬರ್‌ನಿಂದಲೇ  ಹೊಸ ಪ್ರಾಜೆಕ್ಟ್‌‌ನಲ್ಲಿ  ಕೆಲಸ ಮಾಡ್ತಾ ಇದ್ದ ನನ್ನ ಬಿಜಿ ಗಂಡ ವಿನಯ್ ಅದಾಗಲೇಕುವೈತ್‌‌ಗೆ ಹೋಗೋ ಸಿದ್ಧತೆಯಲ್ಲಿದ್ದರು.  ನನ್ನ ಅಮ್ಮ, ಅಪ್ಪ ಫೋನ್‌ಮಾಡಿ, ಅದೇನೋ ರೋಗ ಎಲ್ಲಕಡೆ ಹಬ್ಬುತ್ತಾ ಇದೆಯಂತೆ, ಈಗ ಹೋಗಲೇ ಬೇಕಂತಾ ಕುವೈತ್ಗೆ ಅಂತ ಕೇಳ್ತಾ ಇದ್ರೆನಾನು ನಕ್ಕಿದ್ದೆ.

 ಅವು ಫೆಬ್ರವರಿ ಆರಂಭದ ದಿನಗಳು.  ನನ್ನ ಪತಿರಾಯನಿಗೆ ತಲೆ ತುರಿಸಲೂ ಪುರುಸೊತ್ತಿಲ್ಲದ ಆ ಕಾಲದಲ್ಲಿಯೇ ನಾವಿದ್ದ ಮನೆಯ ಮಾಲಿಕರು ಮನೆ ಖಾಲಿ ಮಾಡಲು ಹೇಳಿಬಿಟ್ರು.   ನನ್ನ ಗಂಡನಿಗೋ ಅತ್ತ ದರಿ, ಇತ್ತ ಪುಲಿ ಅನ್ನೋ ಹಾಗಾಗಿತ್ತು.  ಆದರೂ ಕುವೈತ್‌ ಕ್ಲೈಂಟ್‌ನ ಪ್ರಾಜೆಕ್ಟ್‌ ಕೆಲಸವನ್ನೂ ನಿಭಾಯಿಸುತ್ತಾಸೂಕ್ತ ಬಾಡಿಗೆ ಮನೆಯನ್ನೂ ಹುಡುಕಲು ಶುರು ಮಾಡಿದ್ದರು ನನ್ನ ಗಂಡ ಬಡಪಾಯಿ..!  ದೇವರ ದಯೆ..! ಬಹು ಬೇಗ ಒಂದೊಳ್ಳೆ ಮನೆಯೂ ಸಿಕ್ತು.  ವಾರ ಕಳೆಯುವಷ್ಟರಲ್ಲಿಯೇ ವಿನಯ್‌ ನಮ್ಮನ್ನ ಹತ್ತಿರದ ಅಪಾರ್ಟ್‌‌ಮೆಂಟ್‌‌ನ ಮನೆಯೊಂದಕ್ಕೆ  ಶಿಫ್ಟ್‌‌ ಮಾಡಿಟ್ಟು  ವಿಮಾನು ಹತ್ತಿ ಹಾರಿಹೋದರು.   ಆದರೆ, ವಿನಯ್‌ಗಿದ್ದಷ್ಟೇ ತರಾತುರಿ ಕೊರೊನಾಕ್ಕೂ ಇತ್ತು ನೋಡಿ..! ಅಲ್ಲಿಯ ತನಕ  ಕುವೈತ್‌ನಲ್ಲಿ ಪತ್ತೆಯಾಗಿರದ ಕೊರೊನಾ ಫೆಬ್ರವರಿ ಕೊನೆಯ ವಾರದಲ್ಲಿ ಕುವೈತ್‌ನಲ್ಲಿಯೂ ಕಾಣಿಸಿಕೊಂಡ್ತು.

 

ನಮ್ಮ ದೇಶದಲ್ಲಿ ಅದಾಗಲೇ ಕೊರೊನಾ ಕುರಿತಾದ ಭಯದ ಬಿರುಗಾಳಿಯಾಗಿ ಬೀಸ್ತಾ ಇತ್ತು.  ರೋಗ ಹಬ್ಬುವ ತೀವ್ರತೆ,  ಅಪಾಯಗಳು, ಅದರಿಂದ ಪಾರಾಗುವ ಉಪಾಯಗಳು,  ಬರದಂತೆ ತಡೆಯುವ ಕ್ರಮಗಳು, ಸುಳ್ಳುಸುದ್ದಿಗಳು,  ಕೊರೊನಾ ಜೋಕ್ಗಳು, ಹಾಡುಗಳು, ಡಾನ್ಸ್ಗಳು ಹೀಗೆ ಇನ್ನೂ ಏನೇನೋ ವಾಟ್ಸ್ಯಾಪ್, ಫೇಸ್ಬುಕ್ನಲ್ಲಿ ಹರಿದಾಡ್ತಾ ಇದ್ರೆ, ನ್ಯೂಸ್‌ ಚಾಲನ್‌ಗಳು ಕರೊನಾದಿಂದ ಸಂಭವಿಸುತ್ತಿರುವ ಸಾವನ್ನು ವೈಭವೀಕರಿಸುತ್ತಿದ್ವು.  ನಾಲ್ಕು ವರ್ಷದ ಪುಟ್ಟ ಮಗನ ಜತೆ ಮನೆಯಲ್ಲಿ ಒಬ್ಬಳೇ ಇರೋ ನನಗೆ ಕೊರೊನಾ ಭಯ ಇನ್ನಿಲ್ಲದಂತೆ ಕಾಡೋಕೆ ಶುರುವಾಯ್ತು. ವಿದೇಶಕ್ಕೆ ಹೋಗಿಯೋ ಗಂಡ, ಕ್ಷೇಮವಾಗಿ ಮನೆಗೆ ಬಂದ್ರೆ ಸಾಕು ಅನ್ನೋ ಆತಂಕ ಬೇರೆ ..! 

 ಕುವೈತ್‌ನಲ್ಲಿ ಬೆರಳೆಣಿಕೆಯಷ್ಟು ಕೊರೊನಾ ಕೇಸ್‌ಗಳು ದಾಖಲಾಗ್ತಾ ಇದ್ದಂತೆ, ಆ ದೇಶದಲ್ಲಿ ಎಚ್ಚರಿಕೆಯ ಕ್ರಮಗಳು ಜಾರಿಗೆ ಬಂದ್ವು. ಬೇರೆ ದೇಶದಿಂದ ಬಂದ ಎಲ್ಲರನ್ನೂ ವಾಪಾಸ್‌ಕಳಿಸಲು  ಕುವೈತ್‌ಸರ್ಕಾರ ಕ್ರಮ ಕೈಗೊಳ್ತಾ ಇದೆ ಅನ್ನೋ ಸುದ್ದಿ ಬಂದಿದ್ದೇ  ವಿನಯ್‌ ಕಂಪನಿ  ಅವರನ್ನು   ವಾಪಾಸ್‌ಕರೆಸಿಕೊಳ್ಳುವ  ತಯಾರಿ ಮಾಡಿಕೊಂಡಿತ್ತು.  

 ಅಂದ್ಹಾಗೆ, ಮಾರ್ಚ್ ಮೊದಲನೇ ವಾರದಲ್ಲಿ ಅಂದ್ರೆ,  ಇನ್ನೂ ನಮ್ಮ ದೇಶದಲ್ಲಿ ಲಾಕ್‌ಡೌನ್‌ಆರಂಭವಾಗಿರಲಿಲ್ಲ ನೋಡಿ, ಆವಾಗಲೇ ವಿನಯ್‌‌  ಕುವೈತ್‌ನಿಂದ ಗಂಟು ಮೂಟೆ ಕಟ್ಟಿಕೊಂಡು ಎದ್ನೋ ಬಿದ್ನೋ ಅಂತ ಓಡಿ ಬರೋಕೆ ತಯಾರಿ ಮಾಡಿಕೊಂಡ್ರು. ಅದೇ ಗಡಿಬಿಡಿಯಲ್ಲಿ  ನನಗೆ ಕಾಲ್ ಮಾಡಿ,   ನಾನೀಗ ಕುವೈತ್‌ನಿಂದ  ಮನೆಗೇ ಬರಬೇಕಾ..? ಅಂತ ಕೇಳಬೇಕೆ...?   ಆ ಅನಿರೀಕ್ಷಿತ ಪ್ರಶ್ನೆಯಿಂದ ಗಾಬರಿಗೊಂಡ ನಾನು, ಯಾಕ್ರೀ..? ಮನೆಗೆ ಬರೋಕೆ ಇಷ್ಟ ಇಲ್ವಾ..? ಅಂದೆ.  ‘ಪೆದ್ದಿ, ನಾಳೆಯಿಂದ ಎಲ್ಲಾ ಫ್ಲೈಟ್‌ ಕ್ಯಾನ್ಸಲ್‌..!  ಇದೇನು ತಮಾಷೆ ಮಾಡೋ ಸಮಯವಾ ? ಫ್ಲೈಟ್‌ನಲ್ಲಿ  ಬರುವಾಗ ಕೊರೊನಾ ಅಂಟಿಕೊಳ್ಳೋ ಪಾಸಿಬಲಿಟೀಸ್ ಇರೋದ್ರಿಂದ ನಾನು ನಿನ್ನ ಹತ್ರ ಹೀಗೆ ಕೇಳ್ತಿರೋದು.  ನನ್ನ ಜತೆ ಇರೋ ಕಲೀಗ್ಸ್‌ ಬೆಂಗಳೂರಿಗೆ ಬಂದ ತಕ್ಷಣ ಲಾಡ್ಜ್‌ಗೆ ಹೋಗ್ತಿದಾರೆ.  ನಾನೂ ಹಾಗೇ ಮಾಡ್ಲಾ..? ಅಥವಾ ಒಂದು ಹದಿನೈದು ದಿನ ಮಗನ ಜತೆ ನೀನೇ ಊರಿಗೆ ಹೋಗ್ತಿಯಾ?’   ಅಂತ ಅಷ್ಟನ್ನೂ ಒಂದೇ ಉಸುರಿಗೆ ಹೇಳಿದರು.  ಕುವೈತ್ ಏರ್‌ಪೋರ್ಟ್‌‌ನಲ್ಲಿ ಕುಳಿತು ಹೀಗೆ ಕೇಳ್ತಾ ಇದ್ರೆ, ದಿಢೀರನೆ ನಾನು ಏನಂತ ಹೇಳಲಿ..?   ಆ ಕ್ಷಣಕ್ಕೆ ಆಯ್ತು ನಾವೇ ಊರಿಗೆ ಹೋಗ್ತೀವಿ, ನೀವು ಮನೆಗೇ ಬನ್ನಿ ಪರವಾಗಿಲ್ಲ ಅಂದೆ.

 ಅವರು ಮಾರ್ಚ್ 12 ರಂದು  ಬೆಳಗ್ಗೆ 10 ಗಂಟೆಗೆ ಕುವೈತ್ನಿಂದ ಹೊರಟು  ಮಧ್ಯಾಹ್ನ 12.30ಕ್ಕೆ  ಕತಾರ್‌ತಲುಪಿ,  ಅದೇ ದಿನ ಸಂಜೆ 8.30 ರ ಫ್ಲೈಟ್‌‌ಗೆ  ಕತಾರ್‌ನಿಂದ ಹೊರಟು  ಮಾರ್ಚ್ 13ರ ಬೆಳಗ್ಗೆ ಬೆಂಗಳೂರಿಗೆ ಬರೋ ಕಾರಣ,    ನಾನು ಮಾರ್ಚ್ 12  ರಂದೇ  ರಾತ್ರಿ ಬೆಂಗಳೂರು ಬಿಡಬೇಕಾಗಿತ್ತು. ನನ್ನ ಪುಣ್ಯಕ್ಕೆ ಅದೇ ದಿನ ರಾತ್ರಿ ಬಸ್‌ನಲ್ಲಿ ಸೀಟ್‌ ಕೂಡ ಸಿಕ್ಕಿತ್ತು.

ದಿನಿನಿತ್ಯ ತಪ್ಪದೇ ನ್ಯೂಸ್‌ ಚಾನೆಲ್‌ಗಳನ್ನ ನೋಡಿ ನೋಡಿ ತಲೆಯ ತುಂಬಾ ಕಲರ್‌ ಕಲರ್‌ ಕೊರೊನಾವನ್ನ ತುಂಬಿಕೊಂಡಿದ್ದ ನಾನು ಅದೇ  ಪ್ರಚಂಡ ಭಯದೊಂದಿಗೆ  ಮಗನನ್ನೂ ಕಟ್ಟಿಕೊಂಡು ಊರಿಗೆ ಹೊರಟೆ.

 ಅಂತೂ ಶಿರಸಿ ತಲುಪಿದ್ದೆ. ಊರಿಗೆ ಬಂದಮೇಲೆ, ವಾಟ್ಸ್ಯಾಪ್‌ನೋಡಿದ್ರೆ, ನನ್ನ ಗಂಡನ ಮೆಸೇಜ್‌ ಇತ್ತು.  ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಪ್ಯಾಂಟ್‌‌  ಕಿಸೆಯಲ್ಲಿಯೇ  ಸ್ಯಾನಿಟೈಸರ್‌‌  ಬಾಟಲ್   ಇಟ್ಟುಕೊಂಡು  ಅತೀವ ಜಾಗರೂಕತೆಯಿಂದ  ತಾನು ಫ್ಲೈಟ್‌  ಸೀಟ್‌ನಲ್ಲಿ   ಕುಳಿತಿರೋ ಫೋಟೋ ಕಳಿಸಿದ್ದರು.  ಜತೆಗೆ ‘ರೀಚ್ಡ್‌ ಸೇಫ್‌ಲಿ’  ಅಂತ ಮುದ್ದಾಗಿ ಟೈಪಿಸಿದ್ದರು.  ನನಗೋ  ಕುವೈತ್‌ನಿಂದ ಸುರುಕ್ಷಿತವಾಗಿ ಮನೆಗೆ ರೀಚ್  ಆದ್ರಲ್ಲಾ ಅನ್ನೋ ಸಮಾಧಾನ ಒಂದ್ಕಡೆಯಾದ್ರೆ, ಕರೊನಾ ಅಂಟಿದೆಯೋ ಇಲ್ವೋ ಅಂತ ತಿಳ್ಕೊಳೋಕೆ ಇನ್ನೂ 15 ದಿನ ಕಾಯಲೇಬೇಕು ಅನ್ನೋ  ಚಡಪಡಿಕೆ ಇನ್ನೊಂದು ಕಡೆ !. 

ವಿನಯ್  ಬಂದು  11 ದಿನ ಕಳೆಯುವಷ್ಟರಲ್ಲಿ ಅಂದ್ರೆ, ಮಾರ್ಚ್ 24 ರಿಂದ 21 ದಿನಗಳು ಸಂಪೂರ್ಣ ಲಾಕ್‌ಡೌನ್‌  ಘೋಷಣೆಯಾಯ್ತು.  ಪ್ರತಿಯೊಬ್ಬರೂ ಮನೆಯೊಳಗೆ ಬಂಧಿಯಾದರು. ಬಸ್ಸು, ರೈಲು, ವಿಮಾನು ಸಂಚಾರ ನಿಂತುಹೋಯ್ತು. ಅಂಗಡಿಗಳು, ಆಫೀಸ್‌ಗಳು, ಶಾಲಾ ಕಾಲೇಜುಗಳು, ಶಾಪಿಂಗ್‌ ಮಾ‌ಲ್‌ಗಳು, ಸಿನಿಮಾ ಥಿಯೇಟರ್ಸ್  ಹೀಗೆ  ಎಲ್ಲವೂ ಬಂದ್ ಆದ್ವು.  ಹದಿನೈದು ದಿನಕ್ಕಾಗಿ ಊರಿಗೆ ಬಂದಿರೋ ನಾನು ಮತ್ತು ನನ್ನ ಮಗ ಊರಿನಲ್ಲೇ ಉಳಿದುಹೋದ್ವಿ.

 ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಜಾಸ್ತಿ ಆಗ್ತಿದ್ದಂತೆ,  ಸುಳ್ಳುಸುದ್ದಿಗಳ ಹಾವಳಿಯೂ ಜಾಸ್ತಿಯಾಗ್ತಾ ಹೋಯ್ತು.   ’ಅದ್ಯಾವುದೋ ನಗರ, ಆ ನಗರದ ಮೂಲೆ ಮೂಲೆಗಳಲ್ಲಿ ರೋಗಿಗಳು !  ಅವರೆಲ್ಲ ಸಾವು ಬದುಕಿನ ನಡುವೆ ಹೆಣಗಾಡ್ತಾ ಇದ್ರೆ, ರಸ್ತೆಯಲ್ಲಿ ಹೋಗ್ತಿರೋ ಜನ ದೂರದಿಂದಲೇ ಇವರ  ನರಳಾಟ ನೋಡ್ತಾ ತಮ್ಮಪಾಡಿಗೆ ತಾವು ಹೊರಟು ಹೋಗ್ತಿದ್ದಾರೆ.  ಇಂಥ ಕರುಣಾ ಜನಕ ವೀಡಿಯೋ ಅಸಹ್ಯ ಭಯ ಹುಟ್ಟಿಸ್ತಾ ಇತ್ತು.   ಮತ್ತೊಂದು ವಿಡಿಯೋದಲ್ಲಂತೂ,  ಕೊರೊನಾ ರೋಗಿ ಅಂತ ಬಿಂಬಿಸಲಾಗಿದ್ದ ಒಬ್ಬ ಯುವಕ ಸೋಫಾದ ಮೇಲೆ ಮಲಗಿ ಉಸಿರಾಡಲು ಹರಸಾಹಸ ಪಡ್ತಿದ್ದ. ಯಾರೋ ಆತನ ಉಸಿಗಟ್ಟಿಸಿ ಸಾಯಿಸ್ತಾ ಇದ್ದಾರೇನೋ ಎಂಬಂತೆ ಚಡಪಡಿಸ್ತಾ ಇದ್ದ ಆತನ ಕಷ್ಟವನ್ನ  ನೋಡಿದ್ರೆ ಮೈ ಬೆವೆತುಹೋಗುತ್ತಿತ್ತು.  ಇಡೀದಿನ ಇಂಥ ವಿಡಿಯೋಗಳ ಬಗ್ಗೆ ಯೋಚಿಸ್ತಾ ಇದ್ದ ನನಗೆ ರಾತ್ರಿ ನಿದ್ದೆಯಲ್ಲಿಯೂ ಇಂಥದ್ದೇ ಕನಸು!  ಕೊರೊನಾ ಕುರಿತು ಬಂದ ಈ ಎಲ್ಲ ಸುಳ್ಳು ಸುದ್ದಿಗಳನ್ನ ಓದುತ್ತಿರುವ ನಾನಂತೂ ಅದು ಸುಳ್ಳೋ, ನಿಜವೋ ಎಂಬುದನ್ನ ನಿರ್ಧರಿಸಲೂ ಆಗದ ಮನಸ್ಥಿತಿಯಲ್ಲಿದ್ದೆ. ದೇವರಾಣೆ ಹೇಳ್ತೀನಿ.. ನಾವೆಲ್ಲ ಇನ್ನೆಷ್ಟ್‌ ದಿನ ಬದುಕ್ತೀವೋ ಏನೋ ಅನ್ಕೊಂಡಿದ್ದೆ.

 ಅಂತೂ ಇದೆಲ್ಲದರ ಜೊತೆಗೆ ವಿನಯ್ ಕುವೈತ್‌ನಿಂದ   ಬಂದು ಯಶಸ್ವಿ 13 ದಿನಗಳು ಕಳೆದಿದ್ದವು.  ವಿನಯ್‌ಗೆ ಅದ್ಯಾವ ತಂಡಿ ಜ್ವರ ಕೆಮ್ಮು ಸೀನು ಕೂಡ ಬಂದಿರಲಿಲ್ಲ.  ಆದರೆ  ಕ್ವಾರಂಟೈನ್ ದಿನಗಳು ಮುಗಿಯಲು  ಇನ್ನೊಂದೇ ದಿನ ಬಾಕಿ ಇದೆ ಅನ್ನುವಾಗಲೇ ಮನೆಗೆ ಬಂದಿದ್ದ ಕೊರೊನಾ ಕಾರ್ಯಕರ್ತರು, ವಿನಯ್‌ಕೈಗೆ  ಕ್ವಾರಂಟೈನ್  ಸೀಲ್‌ಹಾಕಿ ಹೋಗಿದ್ದರು.  ಅಷ್ಟೇ ಅಲ್ದೇ, ನಾವಿದ್ದ ಅಪಾರ್ಟ್‌‌ಮೆಂಟ್‌‌ನ  ಎಂಟ್ರೆಸ್‌ನಲ್ಲಿ   ಹೋಮ್‌ ಕ್ವಾರಂಟೈನ್‌ಒಬ್ಬರು ಇಲ್ಲಿದ್ದಾರೆ  ಎಂದು ಸೂಚಿಸುವ ನೊಟೀಸ್  ಕೂಡ  ಅಂಟಿಸಿಬಿಟ್ಟಿದ್ದರು.  ಹೊಸದಾಗಿ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ನಮ್ಮನ್ನು ವಿಶೇಷವಾಗಿ ನೋಡುತ್ತಿದ್ದ ಇಲ್ಲಿಯ ಜನ ಈಗ ವಿನಯ್‌‌ನ್ನ  ಕಂಡ್ರೆ ಮೂರಡಿ ಮುಂದಕ್ಕೆ ಹಾರಲು ಶುರುಹಚ್ಚಿಕೊಂಡ್ರು.

 ಆವತ್ತೇ  ನ್ಯೂಸ್‌ಚಾನಲ್‌ನಲ್ಲೊಂದು  ಸುದ್ದಿ ಹೈಪ್‌ ಆಗಿತ್ತು.   ಕ್ವಾರಂಟೈನ್‌ ಸೀಲ್‌  ಹಾಕಿಸಿಕೊಂಡಿದ್ದ  ವ್ಯಕ್ತಿಯೊಬ್ಬ ಅಲೆದಾಡುತ್ತಿರುವ, ಮತ್ತು ಅವನನ್ನು ಪೊಲೀಸರು ಬಂಧಿಸಿರುವ ದೃಶ್ಯ ಮತ್ತೆ ಮತ್ತೆ  ಪ್ರಸಾರವಾಗ್ತಾ ಇತ್ತು.  ಜತೆಗೆ  ಬ್ಯಾಕ್‌ಗ್ರೌಂಡ್‌ನಲ್ಲಿ ‘ ಇಂಥವರನ್ನ ಜೈಲಿಗೆ ಹಾಕಿ ನಾಲ್ಕು ದಿನ ರುಬ್ಬಬೇಕು, ಹಾಗೇ ಬಿಡಬಾರ್ದು ಇವ್ರನ್ನ’ ಅನ್ನೋ ಆಂಕರ್‌ನ ಧ್ವನಿ..!   ಈ ನ್ಯೂಸ್‌ ನೋಡ್ತಾ ನೋಡ್ತಾ ನನ್ನ ಗಂಟಲು ಒಣಗಿತ್ತು.  ಆಗಿಂದಾಗ್ಲೇ  ವಿನಯ್‌ಗೆ ಕಾಲ್‌ಮಾಡಿ  ಆ ಸೀಲ್ ಅಳಿಸಿ ಹೋಗೋವರೆಗೂ  ಹೊರಗೆ ಮಾತ್ರ ಹೋಗಬೇಡಿ ದಮ್ಮಯ್ಯ.! ಅಂತ ಕೈ ಮುಗಿದಿದ್ದೆ.  

 ಈ ಮಧ್ಯೆ , ಕೊರೊನಾ ವಾರಿಯರ್ಸ್‌ಗೆ   ಗೌರವ  ಸೂಚಕವಾಗಿ ಚಪ್ಪಾಳೆ ತಟ್ಟಿ , ಜಾಗಟೆ ಬಾರಿಸಿ ದೀಪ ಬೆಳಗಿ ಗೌರವ ಸೂಚಿಸುವ ಮೋದಿಜಿ  ಕರೆಗೆ ನಾವೆಲ್ಲ ಊರಲ್ಲೇ  ಒಟ್ಟಾಗಿ ಓಗುಟ್ಟುತ್ತಿದ್ದರೆ,  ವಿನಯ್ ಒಬ್ಬರೇ, ಯಾರ‍್ಯಾರೂ  ಪರಿಚಯವಿರದ  ಅಪಾರ್ಟ್‌‌ಮೆಂಟ್‌‌ನ  ಮನೆಯಲ್ಲಿ ಒಬ್ಬರೇ ಕುಳಿತು ಜಾಗಟೆ ಬಾರಿಸಿ,  ಚಪ್ಪಾಳೆ ತಟ್ಟಿದ್ದರಂತೆ.  ಪಾಪ!   ಈ ಪರಿಸ್ಥಿತಿಗೆ ನಗಬೇಕೋ,  ಅಳಬೇಕೋ ನನಗೆ ತಿಳಿದಿರಲಿಲ್ಲ ನೋಡಿ..!

 ಹೀಗೆ ಒಂದನೇ ಲಾಕ್‌ಡೌನ್‌ಮುಗಿದು, ಎರಡನೇ ಲಾಕ್‌ಡೌನ್‌ ಸಂಪನ್ನಗೊಂಡು, ಮೂರನೇ ಲಾಕ್‌ಡೌನ್‌  ಕೂಡ ಮುಗಿತಾ ಬಂದಿತ್ತು. ಅಂದ್ರೆ, ಅದಾಗಲೇ ಮೇ ತಿಂಗಳು ಆರಂಭವಾಗಿತ್ತು.  ಆದರೆ,  ಮಾರ್ಚ್‌‌ನಲ್ಲಿ  ಊರಿಗೆ ಬಂದಿದ್ದ ನಾನು ಮತ್ತು  ನನ್ನ ಮಗ ಮಾತ್ರ ಇನ್ನೂ ಊರಲ್ಲೇ ಇದ್ವಿ.  ವಿನಯ್  ಒಬ್ಬರೇ ಗಡ್ಡಧಾರಿಯಾಗಿ  ಮನೆಯಲ್ಲಿಒಂಟಿಯಾಗಿದ್ದರು.  ತುಂಬಾ ದಿನಗಳಿಂದ  ಅಪ್ಪನ್ನ ನೋಡದ ಮಗನಿಗಂತೂ ಅಪ್ಪನನ್ನ  ಎಂದು ಕಂಡೆನೋ ಅನ್ನೋ ಹಂಬಲ.

 ಅಂತೂ ಮೂರನೇ ಲಾಕ್‌ಡೌನ್‌ಕೂಡ ಮುಗಿದಮೇಲೆ ನಾವು ಬೆಂಗಳೂರಿಗೆ ಹೋಗಲೇಬೇಕು ಅಂತ ನಿರ್ಧಾರ ಮಾಡಿದ್ವಿ.  ಆದರೆ, ಹೇಗೆ ಹೋಗೋದು ಎಂಬುದರ ಬಗ್ಗೆ ಏನೂ ಸ್ಪಷ್ಟತೆ ಇರಲಿಲ್ಲ.   ಆ ಸಮಯದಲ್ಲಿ ಬೆಂಗಳೂರಿನಿಂದ ಯಾರೂ ಶಿರಸಿಗೆ ಬರುವಂತಿರಲಿಲ್ಲ.  ಬಂದ್ರೂ ಅವರು, 14 ದಿನಗಳ ಕಾಲ ಇನ್‌ಸ್ಟಿಟ್ಯೂಶನಲ್‌  ಕ್ವಾರಂಟೈನ್‌ ಆಗಿರಬೇಕಿತ್ತು. ಆದರೆ, ಸ್ವಂತ ವಾಹನದಲ್ಲಿ ಬಂದು ಆಗಿಂದಾಗ್ಗೆ ಹೊರಟುಹೋಗುವುದಿದ್ದರೆ ಮಾತ್ರ ಬರಲು ಅವಕಾಶವಿತ್ತು. ಆಗಲೇ, 24 ಗಂಟೆಗಳ ’ಒನ್ಡೇ  ಪಾಸ್’ ವಿನಯ್‌ ಗೆ ಸಿಕ್ಕಿತ್ತು.

 ಒಂದೇ ದಿನ ಬೆಂಗಳೂರಿನಿಂದ ಶಿರಸಿಗೆ ಬಂದು  ತಕ್ಷಣ ವಾಪಾಸ್ ಹೋಗೋದು ಕಷ್ಟ ಎಂಬ ಕಾರಣಕ್ಕೆ, ಅರ್ಧ ದಾರಿಯನ್ನ ಉಳಿಸುವ ಪ್ಲ್ಯಾನ್‌ ಮಾಡಿದ್ವಿ.  ಚಿತ್ರದುರ್ಗವನ್ನ ನಮ್ಮ ಮೀಟಿಂಗ್ ಪಾಯಿಂಟ್ ಮಾಡಿಕೊಂಡ್ವಿ.   ಆದ್ರೆ, ಶಿರಸಿಯಿಂದ ನಮ್ಮನ್ನ ಚಿತ್ರದುರ್ಗದ ತನಕ ಬಿಡಲು ಬಾಡಿಗೆ ಕಾರು ಬೇಕಲ್ಲಾ..?  ಆ ಸಂದರ್ಭ ಹೇಗಿತ್ತೆಂದರೆ,  ಎಷ್ಟು ದುಡ್ಡು ಕೊಟ್ಟರೂ ಬಾಡಿಗೆ ಕಾರು ಕೂಡ ಸಿಗ್ತಾ ಇರಲಿಲ್ಲ. ಕೊನೆಗೆ ಉದಯವಾಣಿ ಪತ್ರಕರ್ತರಾದ ಗುರು ಹೆಗಡೆಯವರ ಸಹಾಯದಿಂದ  ಬಾಡಿಗೆ ಕಾರಿನ ವ್ಯವಸ್ಥೆಯಾಯಿತು. ಹಾಗೇ, ಶಿರಸಿಯಿಂದ ಚಿತ್ರದುರ್ಗಕ್ಕೆ ಹೋಗಲು ಪಾಸ್‌ ಕೂಡ ಸಿಕ್ತು.

 ಮೇ  5ನೇ ತಾರೀಖು ಅಂತೂ ನಮ್ಮ ಸವಾರಿ ಬೆಳಗ್ಗೆ 6 ಗಂಟೆಗೆ ಶಿರಸಿಯಿಂದ ಹೊರಟರೆ,  ಅದೇ ಸಮಯಕ್ಕೆ ಸರಿಯಾಗಿ ವಿನಯ್‌ ಸವಾರಿ ಬೆಂಗಳೂರಿನಿಂದ ಹೊರಟಿತ್ತು.  ವಿನಯ್‌ಗೆ  ಅವರ ತಮ್ಮ ವಿಜಯ್‌ಕೂಡ ಸಾಥ್‌ ನೀಡಿ ನಮ್ಮ ಕಾರ್‌ಗೆ ಅವರೇ ಸಾರಥಿಯಾದ್ರು.  ನಾಲ್ಕು ಜನರಿಗಾಗುವಷ್ಟು ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಕಟ್ಟಿಕೊಂಡು, ಫೇಸ್‌ಮಾಸ್ಕ್‌  ಹಾಕಿಕೊಂಡು  ಗಡಿಬಿಡಿಯಲ್ಲಿ ಬೆಳ್ಳಬೆಳಗ್ಗೆ ಹೊರಟಿದ್ದ ನನಗೆ,  ನನ್ನ ಮಾವ ಬದಿಯಲ್ಲಿ ಕರೆದು ಕಿವಿಯಲ್ಲಿ ಹೇಳಿದ್ದರು.  ‘ ಪಾಪ ಆ ಡ್ರೈವರ್‌ ಏನ್ತಿಂದಿದಾರೋ ಇಲ್ವೋ ಗೊತ್ತಿಲ್ಲ,  ತಿಂಡಿ ತಿನ್ನುವಾಗ ಅವರಿಗೂ ಸ್ಪಲ್ಪ ಕೊಟ್ಟುಕೊಂಡು ತಿನ್ನು ಆಯ್ತಾ..?’  ಅಂದ್ರು. ನಾನು ಆಯ್ತು ಮಾವಾ ಅಂದೆ.     

 ಜಿಲ್ಲಾ ಗಡಿಗಳಲ್ಲಿದ್ದ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿಯೂ  ನಮ್ಮ ಪಾಸ್‌  ತೋರಿಸ್ತಾ,  ಅವರಿಂದ ಮುಂದೆ ಹೋಗಲು ಒಪ್ಪಿಗೆ ಪಡೆದುಕೊಳ್ತಾ ಡ್ರೈವರ್‌  ನಮ್ಮನ್ನ  ಗಡಿದಾಟಿಸ್ತಾ ಇದ್ರು.  ಸಾಗರ, ಶಿವಮೊಗ್ಗ, ಚಿತ್ರದುರ್ಗದ ಹೀಗೆ ಎಲ್ಲ ಗಡಿಗಳಲ್ಲಿಯೂ ಹತ್ತತ್ತು ನಿಮಿಷ ನಿಂತಿದ್ದಾಯ್ತು.  ನಮ್ಮ ಡ್ರೈವರ್‌‌  ಆ ಎಲ್ಲಾ ಚೆಕ್‌ಪೋಸ್ಟ್‌ನಲ್ಲಿಯೂ  ನಮ್ಮ ಪಾಸ್‌ತೋರಿಸಿ ಅವರಿಂದ ಒಪ್ಪಿಗೆ ಪಡೆದೊಂಡು ಬರ್ತಾ ಇದ್ರು.   ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿರುವ ಪೊಲೀಸರೂ ಕೂಡ ನಮ್ಮನ್ನು ಪರೀಕ್ಷಿಸಿದ್ದಲ್ದೇ  ಎಲ್ಲಿಗೆ ಹೋಗ್ತಿದ್ದೀರಿ..? ಯಾಕೆ ಹೋಗ್ತಿದ್ದೀರಿ..? ಅಂತ ಪ್ರಶ್ನಿಸ್ತಿದ್ರು. ಅವರು ಕೇಳುತ್ತಿರುವ ಪ್ರಶ್ನೆ ನೋಡಿದ್ರೆ,  ಅದೆಲ್ಲಿ ನಮ್ಮನ್ನ ಮತ್ತೆ ವಾಪಾಸ್ಕಳಿಸಿಬಿಡ್ತಾರೋ ಅನ್ನೋ ಭಯ ಬೇರೆ.  ಅದೃಷ್ಟವಶಾತ್‌‌    ನಮ್ಮನ್ನ ಅವರು ವಾಪಾಸ್ಕಳಿಸಲಿಲ್ಲ. ಆದರೆ ಅದೇ  ಟೆನ್ಶನ್‌ಲ್ಲಿದ್ದ   ಡ್ರೈವರ್‌‌ ಚೆಕ್‌ಪೋಸ್ಟ್‌‌  ಕಂಡ ತಕ್ಷಣ  ಬೆವೆತು ಹೋಗ್ತಿದ್ರು. ಯಾವಾಗ ಇವರನ್ನ ಚಿತ್ರದುರ್ಗ ತಲುಪಿಸಿ, ವಾಪಾಸ್ಹೋಗ್ತೀನೋ.. ಅನ್ನೋ ಯೋಚನೆಯಲ್ಲಿಯೇ ಕಾರು ಓಡಿಸುತ್ತಿದ್ದ ಆ  ಡ್ರೈವರ್‌ಗೆ  ನಾನು ಯಾವಾಗ  ತಿಂಡಿ ಕೊಡಲಿ ಹೇಳಿ..?  ನಾನು ಮಾವಂಗೆ ಕೊಟ್ಟ ಮಾತು ಮಾತ್ರ ಹಾಗೆ ಉಳಿದಿತ್ತು.

 ಅಂತೂ ಚಿತ್ರದುರ್ಗವನ್ನ ನಾವು ತಲುಪಿದಾಗ ಬೆಳಗ್ಗೆ 10 ಗಂಟೆ.  ಸಮಯಕ್ಕೆ ಸರಿಯಾಗಿ ವಿನಯ್, ವಿಜಯ್‌ ಸವಾರಿ ಕೂಡ ಅಲ್ಲಿಗೆ ಬಂದಿತ್ತು.  ನಾವು ಈ ಕಾರ್‌ನಿಂದ  ಆ ಕಾರ್‌ಗೆ  ಲಗೇಜುಗಳ ಸಮೇತ ಶಿಫ್ಟ್  ಆದ್ವಿ. ಬರೋಬ್ಬರಿ 4 ತಿಂಗಳುಗಳಿಂದ ದೂರವಿದ್ದ ನಮಗೆ ಪರಸ್ಪರ  ಮುಖ ಮುಖ ನೋಡಿಕೊಳ್ಳೋದೇ ಒಂದು ಸಂಭ್ರಮ.  ನನ್ನ ಮಗನಂತೂ ಅಪ್ಪಾ... ಅಂತ ಕಿರುಚುತ್ತ ಅಪ್ಪನ ಮೈ ಹತ್ತಿ ಕುಳಿತೇಬಿಟ್ಟಿದ್ದ. ಇಲ್ಲಿಗೆ ವಿನಯ್‌ನ  3 ತಿಂಗಳ ಸುದೀರ್ಘ ಕ್ವಾರಂಟೈನ್‌ ಪೀರಿಯಡ್‌ ಅಂತೂ ಇಂತೂ ಮುಕ್ತಾಯ  ಕಂಡಿತ್ತು.

 ಆರಾಮಾಗಿ ಬೆಂಗಳೂರಿಗೆ ಬಂದಿಳಿದ ಸುದ್ದಿ ತಿಳಿಸೋಕೆ ನಾನು ನನ್ನ ಮಾವಂಗೆ ಕಾಲ್‌ಮಾಡಿದರೆ,  ಅವರು ಕೇಳಿದ ಮೊದಲ ಪ್ರಶ್ನೆ ಯಾವುದು ಗೊತ್ತಾ..?  `ಅದೆಲ್ಲ ಸರಿ... ಬೆಳಗ್ಗೆ ಆ ಕಾರ್‌ ಡ್ರೈವರ್‌ಗೆ ತಿಂಡಿ ಕೊಟ್ಟಿದ್ಯಾ..?’  ಅಂತ..!

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

"ಬಕುಲದ ಬಾಗಿಲಿನಿಂದ" - ಪುಸ್ತಕ ಪರಿಚಯ

  ಎಲ್ಲ ಹೆಣ್ಣುಮನಸ್ಸಿನ ಹೃದಯಗಳಿಗೂ "ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು" ಪುಸ್ತಕದ ಹೆಸರು - ಬಕುಲದ ಬಾಗಿಲಿನಿಂದ  ಲೇಖಕಿ -  ಸುಧಾ ಆಡುಕಳ ಪುಸ್ತಕದ ...