ಎಲ್ಲ ಹೆಣ್ಣುಮನಸ್ಸಿನ ಹೃದಯಗಳಿಗೂ "ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು"
ಪುಸ್ತಕದ ಹೆಸರು -
ಬಕುಲದ ಬಾಗಿಲಿನಿಂದ
ಲೇಖಕಿ - ಸುಧಾ ಆಡುಕಳ
ಪುಸ್ತಕದ ಬೆಲೆ - ೨೦೦ ರೂಪಾಯಿಗಳು
ಪ್ರಕಾಶನ - ಬಹುರೂಪಿ ಪ್ರಕಾಶನ ಬೆಂಗಳೂರು
ಲಭ್ಯತೆ - Bahuroopi.in ಆನ್ ಲೈನ್ ಬುಕ್ ಸ್ಟೋರ್
"ಬಕುಲದ ಬಾಗಿಲಿನಿಂದ" ಇತ್ತೀಚೆಗೆ ನಾನು ಓದಿದ ಅತ್ಯಂತ ಅಪರೂಪದ ಪುಸ್ತಕ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಈ ಪುಸ್ತಕದ ಬಗ್ಗೆ ಬರೆಯಲೇ ಬೇಕು ಎಂಬ ಕಾರಣಕ್ಕೆ ನಾನು ಮತ್ತೊಮ್ಮೆ ಓದಿ ಎದೆಗಿಳಿಸಿಕೊಂಡೆ. ಪುರಾಣಗಳ ಕಾಲದಿಂದ ಇಲ್ಲಿಯ ತನಕ ಹೆಣ್ಣು ಸಾಗಿ ಬಂದ ಕಥೆಗಳು ಇಲ್ಲಿವೆ. ಪುರಾಣಕ್ಕೂ ವಾಸ್ತವಕ್ಕೂ ಕೊಂಡಿ ಹಾಕಿ ಹೆಣ್ಣಿನ ನಾನಾ ರೂಪವನ್ನು ವಿಷ್ಲೇಶಿಸಿ ಚಿತ್ರಿಸಿರುವ ಕಥನಗಳ, ಹೆಣ್ಣಿನ ಸಂವೇದನೆಗಳ ಗೊಂಚಲು ಇದು. ಹೀಗಾಗಿ ಇವತ್ತಿಗಾಗಿ ಈ ಪುಸ್ತಕವನ್ನೇ ನಾನು ಆಯ್ಕೆ ಮಾಡಿಕೊಂಡೆ.
ಈ ಪುಸ್ತಕವು ಕವನ ಸಂಕಲನವೂ ಅಲ್ಲ, ಕಥಾ ಸಂಕಲನವೂ ಅಲ್ಲ. ಅವೆರಡೂ ಹದವಾಗಿ ಮಿಳಿತಗೊಂಡ ಅದ್ಭುತ ರುಚಿಯ ಮಾಕ್ಟೇಲ್ ಇದು. ಅಂದಿನ ಹೆಣ್ಣಿನ ಕಥನಗಳನ್ನು ಇಂದಿನ ಕಣ್ಣಲ್ಲಿ ನೋಡಿ, ಸೃಜಿಸಿದ ಅಂಕಣ ಬಹರದ ಸಂಗ್ರಹ ರೂಪವಿದು. ಆತ್ಮೀಯ ಭಾಷೆಯಲ್ಲಿ ಹೆಣ್ಣಿನ ಕಥೆಗಳನ್ನು ಹೇಳುತ್ತಾ ಓದುಗರ ಮನಸ್ಸಿನ ಕದ ತೆರೆಸುತ್ತಾ, ಸಾಗುವ ಲೇಖಕಿ ಅಲ್ಲಲ್ಲಿ ಚೆಂದದ ಕವನದ ಸಾಲುಗಳನ್ನು ಸೇರಿಸಿ ಓದುಗರ ಹೃದಯ ಮೀಟುತ್ತಾರೆ.
"ಬಕುಲದ ಬಾಗಿಲಿನಿಂದ" ಒಳಹೊಕ್ಕ ನನಗೆ ಕೇಳಿಸಿದ್ದು ಲೇಖಕಿಯ ಭಾವಗಾನದ ಅನುರಣನ. ಕೃತಿಯನ್ನ ಓದುತ್ತಾ ಓದುತ್ತಾ ಹೆಣ್ಣಿನ ಭಾವ ಕೊಳದೊಳಕ್ಕೇ ಬಿದ್ದ ಅನುಭವವಾಯ್ತು ನನಗೆ. ಯಾಕಂದರೆ ಇಲ್ಲಿ ಹೆಣ್ಣಿನ ಧಿಟ್ಟತನದ ಕಥೆಯಿದೆ, ಹುಮ್ಮಸ್ಸಿದೆ, ಆತ್ಮವಿಶ್ವಾಸವಿದೆ, ಆತ್ಮಪ್ರೀತಿಯಿದೆ, ಅಧಮ್ಯ ಪ್ರೇಮವಿದೆ, ಶೃಂಗಾರವಿದೆ, ಹತಾಶೆಯಿದೆ, ಯಾತನೆಯಿದೆ, ಅಸಹಾಯಕತೆಯಿದೆ, ಕೋಪವಿದೆ, ತ್ಯಾಗವೂ ಇದೆ.
ಈ ಕೃತಿಯಲ್ಲಿರುವ ಎಲ್ಲ ಲೇಖನಗಳೂ, ಪುಸ್ತಕವಾಗುವುದಕ್ಕೂ ಮುಂಚೆ "ಬಕುಲದ ಬಾಗಿಲಿನಿಂದ" ಎಂಬ ಹೆಸರಿನಲ್ಲಿಯೇ ಅವಧಿ ವೆಬ್ಸೈಟ್ನಲ್ಲಿ ಅಂಕಣವಾಗಿ ಪ್ರಕಟವಾಗುತ್ತಿದ್ದವು. ಆ ಲೇಖನಗಳೆಲ್ಲವನ್ನೂ ಸೇರಿಸಿ ಗುಚ್ಛ ಮಾಡಿಕೊಟ್ಟ ಬಹೂರೂಪಿ ಪ್ರಕಾಶನಕ್ಕೆ ಧನ್ಯವಾದಗಳು. "ಈ ಅಂಕಣವನ್ನು ಬರೆಯುವಷ್ಟೂ ಕಾಲ ಒಂದೊಂದು ವಾರ ನಾನು ಒಬ್ಬ ಹೆಣ್ಣುಮಗಳೊಂದಿಗೆ ಮುಖಾಮುಖಿಯಾಗಿದ್ದೇನೆ. ಅವಳನ್ನು ಪ್ರೀತಿಯಿಂದ ಮಾತನಾಡಿಸಿ ಮೈದಡವಿದ್ದೇನೆ. ಅವರು ನಗುವಾಗ ನಕ್ಕು ಅಳುವಾಗ ಅತ್ತು ಹಗುರಾಗಿದ್ದೇನೆ." ಎನ್ನುತ್ತಾರೆ ಲೇಖಕಿ ಸುಧಾ ಆಡುಕಳ. ಖಂಡಿತ ಓದುವಾಗಲೂ ನನಗೆ ಅಂಥದ್ದೇ ಅನುಭವವಾಯ್ತು. ಓದುತ್ತಾ ಓದುತ್ತಾ ಅವರು ಬರೆದ ಆ ಪಾತ್ರಗಳೊಳಗೆ ಹೋಗಿ ಉಸಿರಾಡಿದ್ದೇನೆ. ನಕ್ಕಿದ್ದೇನೆ. ಅತ್ತಿದ್ದೇನೆ.
ಬಕುಲದ ಬಾಗಿನಿಲಿನೊಳಗೆ ನನಗೆ ಮೊದಲು ಸಿಕ್ಕಿದ್ದು "ರಾಧೆ". ಬೃಂದಾವನದಲ್ಲಿ ತನ್ನ ಬಿಟ್ಟು ಹೋದ ಶ್ಯಾಮನಿಗಾಗಿ ಕಾಯದೇ ಕೊರಗದೇ, ಅವನನ್ನ ತನ್ನ ಹೃದಯದಲ್ಲಿಯೇ ಇರಿಸಿಕೊಂಡು ಜೀವನವೆಂಬ ದಿನದ ಸೂರ್ಯಾಸ್ತದ ಕೊಟ್ಟ ಕೊನೆಯ ಕ್ಷಣದವರೆಗೂ ಬದುಕಿದ ರಾಧೆಯ ಕಥೆ ಅದು. ಈ ಕಥೆಯ ಕೊನೆಯಲ್ಲಿ, ಅಂತೂ ಬದುಕಿನ ಮುಸ್ಸಂಜೆಯ ಹೊತ್ತಲ್ಲಿ ಶ್ಯಾಮ ರಾಧೆಯನ್ನರಸಿ ಬರುತ್ತಾನೆ, ಪುನಃ ಅವರು ರಾಧಾಕೃಷ್ಣರಾಗುತ್ತಾರೆ.
ರಾಧೆ ಕಥೆಯ ಕೊನೆಯಲ್ಲಿರುವ ಕವನದ ಸೊಗಸು ಹೀಗಿದೆ ನೋಡಿ.
ಶ್ಯಾಮ ಬಂದ ರಾಧೆಯೆಡೆಗೆ ಸೂರ್ಯನಿಳಿವ ಹೊತ್ತು
ರಾಧೆಯೀಗ ಹಣ್ಣುಮುದುಕಿ ಕುಳಿತಿದ್ದಳು ಕೌದಿಯ ಹೊದ್ದು
ಬಂದೇ ರಾಧೆ ಎಂದ ಶ್ಯಾಮ, ಬರುವಿಯೆಂದು ಗೊತ್ತು
ಕಾಯುತ್ತಿದ್ದೆಯೇನು ರಾಧೆ ? ಶ್ಯಾಮ ನುಡಿದ ಸೋತು
ಕಾಯುವ ಮಾತು ಯಾಕೆ ಬಂತು? ಇಲ್ಲೇ ಇದ್ದೆ ನೀನು
ಹೋದೆ ಕಾದೆ ಎಂಬುದೆಲ್ಲ ಬರಿಯ ಭ್ರಮೆಯ ತಂತು
ರಾಧೆ ಕೈಯ್ಯ ಹಿಡಿದ ಶ್ಯಾಮ ಕೈಯ್ಯ ತುಂಬ ಸುಕ್ಕು
ಇಷ್ಟು ಒರಟು ! ಎಷ್ಟು ದುಡಿದೆ ? ಎಂದ ಮುತ್ತನಿಟ್ಟು
ಲೆಕ್ಕಕ್ಕಿಲ್ಲಿ ಜಾಗವಿಲ್ಲ ಸುರಿದ ಬೆವರ ಧಾರೆ
ಹನಿಹನಿಯಲು ನೀನೆ ಇದ್ದೆ ಈಗ ಬಂದೆ ಎದುರಿಗೆ
ಸುಕ್ಕಲ್ಲ ಇದು ನಿನ್ನ ರುಜು ನನ್ನೆಲ್ಲ ಶ್ರಮದ ದುಡಿಮೆಗೆ
ಹಸಿರ ರಾಶಿ ವನದ ತುಂಬ ಸಾಕ್ಷಿಯಾಗಿದೆ ಒಲವಿಗೆ
ಬೃಂದಾವನವೇ ವಲಸೆ ಬಂದು ನೆಲೆಸಿದಂತಿದೆ ಇಲ್ಲಿಯೆ
ನಾನು ಬರದೆ ಹೇಗೆ ಇರಲಿ ? ಶ್ಯಾಮ ನುಡಿದ ರಾಧೆಗೆ
ಕಣ್ಣಾ ನಿನ್ನ ಮೈಯ್ಯ ನುಣುಪು ಚಿಗುರ ತುದಿಯ ನವಿರಲಿ
ನಿನ್ನ ಕೊಳಲ ಮಧುರಗಾನ ಹೂವಿನ ಪಿಸುಮಾತಲಿ
ಕೌದಿಯೊಳಗೆ ಬಿಸಿಯ ಗಾಳಿ ಶ್ಯಾಮನೆದೆಯ ಸೋಕಿತು
ಸುಕ್ಕುಗಟ್ಟಿದ ರಾಧೆ ಕರವು ಪ್ರೇಮ ಕವನವಾಯಿತು.
ಈ ಆಶಾವಾದಿ ರಾಧೆಯ ಕತೆ ಕೇಳಿ ಮುಂದೆ ಹೋದರೆ, ನಮಗೆ ಸಿಗುವವಳೇ ಮಣಿಪುರದ ರಾಜಕುಮಾರಿ ಚಿತ್ರಾ. ತಾನು ಮೆಚ್ಚಿದ ಪುರುಷ ಅರ್ಜುನಿನಾಗಿ ಸಂಪೂರ್ಣ ಬದಲಾಗುವ ಚಿತ್ರಾಗೆ, ಮದನನೇ ಧರೆಗಿಳಿದು ಬಂದು ಹೆಣ್ಣಾಗುವುದನ್ನು ಕಲಿಸಿಹೋಗುತ್ತಾನೆ. ಬಯಸಿದ್ದು ಸಿಕ್ಕಮೇಲೆ ಅದೆಷ್ಟು ಹೊತ್ತು ಆ ಬದಲಾವಣೆಯ ಸೋಗು? ಪುನಃ ಆಕೆಗೆ ತನ್ನತನವನ್ನು ಮರಳಿ ಪಡೆಯುವ ಆಶೆಯಾಗುತ್ತದೆ. ಪಾರ್ಥನನ್ನು ಪಡೆಯುವ ತವಕದಲ್ಲಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಂಡ ಚಿತ್ರಾಗೆ ತನ್ನದೇ ಹೊಸ ರೂಪ ಚುಚ್ಚತೊಡಗುತ್ತದೆ. "ನನ್ನನ್ನು ನಾನಾಗಿಯೇ ಇರಲುಬಿಡು. ಈ ಕೃತಕ ಸೌಂದರ್ಯದ ಪರದೆಯನ್ನು ಸರಿಸಿಬಿಡು" ಎನ್ನುವ ಚಿತ್ರಾ ಮದನನಿಂದ ತನ್ನ ಮೊದಲ ರೂಪವನ್ನೇ ವಾಪಾಸ್ ಪಡೆಯುತ್ತಾಳೆ. ಈ ಕಥೆಯನನ್ನ ಬಂಡವಾಳಶಾಹಿ ಪದ್ಧತಿಯ ಪ್ರಭಾವಕ್ಕೆ ಬಿದ್ದು ನಮ್ಮ ಜೀವನಶೈಲಿಯ ದೃಷ್ಟಿಕೋನವನ್ನೇ ಬದಲಾಯಿಸಿಕೊಂಡು, ಕೂದಲು, ಚರ್ಮ, ದೇಹ ಎಲ್ಲವನ್ನೂ ಆಧುನಿಕವಾಗಿಸಿಕೊಳ್ಳಲು ಹೆಣಗಾಡುವ ಆಧುನಿಕ ಚಿತ್ರೆಯರಿಗೆ ಹೋಲಿಸಿ ಬರೆದಿದ್ದಾರೆ ಲೇಖಕರು.
ನಂತರ ಬರುವವರೇ ಸೀತೆಯರು. ಗಂಡ ಕೊಡುವ ಕಷ್ಟ,ಅಪಮಾನಗಳನ್ನೆಲ್ಲ ಅವಡುಗಚ್ಚಿ ಸಹಿಸಿಕೊಂಡು ನಗುನಗುತ್ತ ಬದುಕ ಸಾಗಿಸುವ ಅಪ್ಪಟ ಸೀತೆಯರು ಅವರು. ಲೇಖಕಿ ಸುಧಾ ಆಡುಕಳ ಸೀತೆಯನ್ನ ತನ್ನ ತಾಯಿಗೆ ಹೋಲಿಸಿ ಬರೆದ ಈ ಲೇಖನ ನನ್ನೊಳಗೆ ಸಿಕ್ಕಿಹಾಕಿಕೊಂಡಿದ್ದ ಅಂಥದ್ಧೇ ಭಾವಕ್ಕೆ ದನಿಯಾಯಿತು. ಮಾಧವಿಯ ಕಥೆಯ ಮನಸ್ಸಿನೊಳಗೆ ನೋವಿನ ಚಳುಕು ನೀಡಿತು. ಗಾಲವನಂಥ ಅದೆಷ್ಟು ವ್ಯಕ್ತಿಗಳು ಈ ಸಮಾಜದಲ್ಲಿದ್ದಾರಲ್ಲವೇ..? ಮಾಧವಿಯಂಥ ಅದೆಷ್ಟು ಹೆಣ್ಣುಗಳು ಗಾಲವನಂಥವರಿಗೆ ಸಿಕ್ಕು ನರಳುತ್ತಿರಬಹುದು ಎಂದೆನಿಸಿತು ನನಗೆ. ಆಕೆಯ ಬವಣೆಯನ್ನ ಹಾಸು ಹೊದ್ದಿರುವ ಬಾಡಿಗೆ ತಾಯಿಯರೊಳಗೆ ಮಾಧವಿಯನ್ನ ಕಂಡರು ಲೇಖಕಿ.
ಮಾಧವಿಯ ನಂತರ ಬರುವವಳೇ ಊರ್ಮಿಳೆ, ಲಕ್ಷ್ಮಣನ ಹೆಂಡತಿ ಊರ್ಮಿಳೆ. ವನವಾಸಕ್ಕೆ ಹೋಗಿರುವ ಗಂಡನನ್ನ ನೆನೆಸಿಕೊಳ್ಳುತ್ತಾ ಆತನಿಗಾಗಿ ಪರಿತಪಿಸಿ ಅವಿರತ ಕಾದಿದ್ದಕ್ಕೂ, ಇಂದಿನ ಆಧುನಿಕ ಊರ್ಮಿಳೆಯರು ವಿದೇಶದಲ್ಲಿರುವ ಗಂಡನಿಂದ ದೂರವಿದ್ದು ಅವನ ಬರುವಿಕೆಗಾಗಿ ವರ್ಷವೆಲ್ಲ ಕಾಯುವುದಕ್ಕೂ ಸಾಮ್ಯತೆ ಕಂಡಿದ್ದಾರೆ ಲೇಖಕಿ. ಊರ್ಮಿಳೆಯ ನಂತರ ಹೊಯ್ಸಳ ಸಾಮ್ರಾಜ್ಯದ ರಾಣಿ ಶಾಂತಲೆ, ಅಕ್ಕಮಹಾದೇವಿ, ಮಹಾರಾಣಿ ಅವಧೇಶ್ವರಿ, ಅಹಲ್ಯೆ, ಯಶೋಧರೆ, ರವೀಂದ್ರ ನಾಥ ಠಾಕೂರರ ಚಂದ್ರಾ, ಬಂದು ಓದುಗರ ಒಳಗಿಳಿಯುತ್ತಾರೆ.
ಈ ಪುಸ್ತಕದಲ್ಲಿ ಹನ್ನೆರಡನೇಯವಳಾಗಿ ಬರುವವಳೇ "ನಂಗೇಲಿ". ನಂಗೇಲಿಯ ಕಥೆ ಓದುತ್ತಾ ಓದುತ್ತಾ ನನ್ನೆದೆಯೊಳಗೂ ನೋವಿನ ಚಳುಕು ಸೆಳೆದು ಕಣ್ಣೀರು ಹರಿಯತೊಡಗಿತ್ತು. ನಂಗೇಲಿ ಕೇರಳದ ದಲಿತ ಹೆಣ್ಣು. ೧೯ ನೇ ಶತಮಾನದ ಆರಂಭದಲ್ಲಿ ಬದುಕಿ, ತನ್ನ ಸುತ್ತಲಿದ್ದ ಕೆಟ್ಟ ಕಠೋರ ವ್ಯವಸ್ಥೆಯ ವಿರುದ್ಧ ಹೋರಾಡಿ ಬಲಿದಾನ ಮಾಡಿದ ಶೂರೆ. ಆ ಕಾಲದಲ್ಲಿ ಕೇರಳದ ಒಂದು ಭಾಗದಲ್ಲಿ ಜಾರಿಯಲ್ಲಿದ್ದ "ಬ್ರೆಸ್ಟ್ ಟ್ಯಾಕ್ಸ್" ( ಮೊಲೆ ಕರ ) ವ್ಯವಸ್ಥೆಯ ವಿರುದ್ಧ ಆಕೆ ಹೋರಾಡಿದ್ದಾಳೆ. ದಲಿತ ಹೆಣ್ಣುಮಕ್ಕಳು ಸೊಂಟಕ್ಕಿಂತ ಮೇಲೆ ಮತ್ತು ಮೊಣಕಾಲಿಗಿಂತ ಕೆಳಗೆ ಬಟ್ಟೆ ಧರಿಸುವಂತಿರಲಿಲ್ಲವಂತೆ. ಒಂದು ವೇಳೆ ಎದೆ ಬಟ್ಟೆಯನ್ನೇನಾದರೂ ಅವರು ಧರಿಸಿದರೆ ಅವರನ್ನು ತೀವ್ರ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು. ಬೆತ್ತಲೆ ಎದೆ ಹೊತ್ತು ಜೀವಿಸುತ್ತಿದ್ದ ಆ ಬುಡಕಟ್ಟು ಕುಟುಂಬದಲ್ಲಿಯೇ ಹುಟ್ಟಿದ ನಂಗೇಲಿ, ಧೈರ್ಯವಾಗಿ ಎದೆ ಬಟ್ಟೆ ಧರಿಸಿದ್ದಲ್ಲದೇ, ಶಿಕ್ಷೆ ವಿಧಿಸಲು ಮನೆ ಬಾಗಿಲಿಗೆ ಬಂದ ಅಧಿಕಾರಿಗೆ ತನ್ನೆರಡೂ ಮೊಲೆಗಳನ್ನೂ ಕತ್ತಿಯಲ್ಲಿ ಕುಯ್ದು ಬಾಳೆಎಲೆಯಲ್ಲಿ ಹಾಕಿ ಕೊಟ್ಟುಬಿಡುತ್ತಾಳೆ. ಮತ್ತು ಅತೀವ ರಕ್ತಸ್ರಾವದಿಂದ ಪ್ರಾಣ ಬಿಡುತ್ತಾಳೆ. ನಂಗೇಲಿ ಬಲಿದಾನ ಮಾಡಿದ ಜಾಗ ಇಂದಿಗೂ "ಮುಲಚಿಪರಂಬು" (ಮೊಲೆಯ ಕೊರೆದಿಟ್ಟವಳ ನಾಡು) ಎಂದೇ ಪ್ರಸಿದ್ಧವಾಗಿದೆಯಂತೆ. ಸುಧಾ ಆಡುಕಳರ ಭಾಷೆಯಲ್ಲಿ ನಂಗೇಲಿ ಕಥೆ ಓದಿ ಕಣ್ಣೀರಾದೆ.
ಧಿಟ್ಟ ಬರಹಗಾರ್ತಿ, ಕವಿಯತ್ರಿ ಸಾಹಿತಿ ಅಮೃತಾ ಪ್ರೀತಮ್ ಅವರ ಜೀವನ ಪ್ರೀತಿ, ಕಂಸನ ಮೋಸದ ಜಾಲಕ್ಕೆ ಬಿದ್ದ ಪೂತನಿಯ ಅಸಹಾಯಕತೆ, ತ್ರಿವಕ್ರೆಯ ನಿಷ್ಕಾಮ ಪ್ರೀತಿ ಓದುಗರನ್ನ ಕಾಡುತ್ತದೆ. ಮೀನಿನ ಹೊಟ್ಟೆಯಲ್ಲಿ ಸಿಕ್ಕ ಉಂಗುರದಿಂದ ಶಕುಂತಲೆಯನ್ನು ನೆನೆಪಿಸಿಕೊಂಡ ದುಶ್ಯಂತ ಅವಳನ್ನು ಅರಮನೆಗೆ ಕರೆಯಲು ಬಂದಾಗ, ತನ್ನ ಮಗನನ್ನು ಮಾತ್ರ ದುಶ್ಯಂತನೊಂದಿಗೆ ಕಳಿಸಿಕೊಡುವ ಶಕುಂತಲೆ, ಸ್ವೀಕಾರ ಮತ್ತು ನಿರಾಕರಣೆಗಳ ಸಂಗಮವಾಗಿ ನಿಂತುಬಿಡುತ್ತಾಳೆ. ಸುಖಕ್ಕಿಂತ ಜಾಸ್ತಿ ಕಷ್ಟಗಳನ್ನೇ ಹಾಸಿ ಹೊದ್ದಿರುವ ದ್ರೌಪದಿ ತನ್ನ ಒಡಲಾಳವನ್ನೆಲ್ಲ ಅರುಹಿ, ಕೃಷ್ಣ ಅವಳ ಪಾಲಿಗೆ ಏನಾಗಿದ್ದ ಎಂಬುದನ್ನ ಓದುಗರೊಂದಿಗೆ ಸೂಕ್ಷ್ಮವಾಗಿ ಹೇಳಿಕೊಳ್ಳುತ್ತಾಳೆ.
ಆಹ್ವಾನವಿಲ್ಲದಿದ್ದರೂ ಸ್ವಯಂವರ ಪ್ರವೇಶಿಸಿ, ಎಲ್ಲ ರಾಜರನ್ನೂ ಸೋಲಿಸಿ, ಅಂಬೆ, ಅಂಬಾಲಿಕೆ, ಅಂಬಿಕೆಯರನ್ನ ಗೆದ್ದು ತಂದ ವೀರ ಭೀಷ್ಮ, ಆ ಹೆಣ್ಣುಗಳನ್ನು ತಾನೇ ವರಿಸದೇ ತಮ್ಮನಿಗೆ ಮದುವೆ ಮಾಡಿಕೊಡುತ್ತಿರುವುದರ ವಿರುದ್ಧ ಅಂಬೆ ಬಂಡಾಯವೇಳುತ್ತಾಳೆ. ಅವಮಾನಿತಳಾಗಿ ತೊಳಲಾಡುವ ಅವಳು ಕೊನೆಗೂ ಯಾರ ಸಹಾಯವೂ ದೊರಕದೆ ಮತ್ತೊಂದು ಜನ್ಮವೆತ್ತಿಬರುವುದಕ್ಕಾಗಿ ಜೀವ ಬಿಡುವುದಕ್ಕೆ ಸಿದ್ಧಳಾಗಿಬಿಡುತ್ತಾಳೆ. ಅಂಥ ಅಪ್ರತಿಮ ಧೈರ್ಯವಂತೆ ಅಂಬೆಯ ಅಂತರಾಳ ಮತ್ತೆ ಮತ್ತೆ ಕಾಡುತ್ತದೆ. ಸಮಾಜದ ಕಟ್ಟುಪಾಡುಗಳನ್ನು, ಓರೆಕೋರೆಗಳನ್ನು ಪ್ರಶ್ನಿಸದೇ ಹೊಂದಿಕೊಂಡು ಹೋಗುವ ಹೆಣ್ಮಕ್ಕಳು ನಮ್ಮ ಸಾಮಾಜದ ದೃಷ್ಟಿಯಲ್ಲಿ ಸಂಸ್ಕೃತಿಯ ಹರಿಕಾರ ದೇವತೆಗಳಾದರೆ, ಪ್ರಶ್ನಿಸುವ ಮನಸ್ಥಿತಿಯ ಹೆಣ್ಣು ಸಮಾಜ ನಿಂದನೆಗೊಳಗಾಗಿ, ಅವಮಾನಿತಳಾಗುವಂಥ ಪರಿಸ್ಥಿತಿ ಇಂದಿಗೂ ಇದೆ. ಎಂಬುದನ್ನು ಲೇಖಕಿ ಇಲ್ಲಿ ನೆನೆಪಿಸುತ್ತಾರೆ.
ಹೆಣ್ಣು ನಿಜವಾದ ಅರ್ಥದಲ್ಲಿ ಹೆಣ್ಣಾಗುವ ಆ ದೈಹಿಕ ಬದಲಾವಣೆಯನ್ನೇ ಮೈಲಿಗೆ ಎಂದು ಕರೆದು, ಸಾಮಾಜಿಕವಾಗಿ, ವೈಯಕ್ತಿಕವಾಗಿ, ಕೌಟುಂಬಿಕವಾಗಿ ಆಕೆಯನ್ನು ದೂರವಿರಿಸಿ ಶಾಸ್ತ್ರ, ಕಟ್ಟಳೆಗಳನ್ನು ಮಾಡಿ ಹೆಣ್ಣುಮಕ್ಕಳಿಗೆ ಇನ್ನಿಲ್ಲದ ತೊಂದರೆ ಕೊಡುವ ಮೂಢ ನಂಬಿಕೆಯ ವಿರುದ್ಧವೂ ಸುಧಾ ದನಿಎತ್ತಿದ್ದಾರೆ. ಪೃಕೃತಿ ಹೆಣ್ಣಿಗೆ ಮಾತ್ರ ನೀಡಿರುವ "ಮುಟ್ಟು" ಎಂಬ ಶಕ್ತಿಯು ಮೈಲಿಗೆಯಾಗಿದ್ದಾದರೂ ಏಕೆ ? ಎಂಬ ಪ್ರಶ್ನೆಯನ್ನ ಓದುಗರ ಮುಂದೆಯೂ ಅವರು ಪ್ರಸ್ತಾಪಿಸಿದ್ದಾರೆ.
ಮತ್ತದೇ ಮಹಾಭಾರತದ ಇನ್ನೊಬ್ಬ ಅಸಹಾಯಕಿ ಹೆಣ್ಣು ಗಾಂಧಾರಿಯ ಮನದಿಂಗಿತ ಹೇಳುತ್ತಾ ಹೇಳುತ್ತಾ, "ಹೊರನೋಟವನ್ನು ಕಸಿದಿಟ್ಟ ಯಾವ ತಾಯಿಯೂ ಅನಾಹುತವನ್ನು ತಡೆಯಲಾರಳು. ತನ್ನ ಮಕ್ಕಳನ್ನು ಪೊರೆಯಲಾರಳು. ಹೆಣ್ಣನೋಟಕ್ಕೆ ಪಟ್ಟಿ ಕಟ್ಟದಿರೋಣ, ಮಕ್ಕಳ ಬದುಕನ್ನು ಹಸನುಗೊಳಿಸೋಣ" ಎಂಬ ಕರೆ ನೀಡುತ್ತಾರೆ. ಗುರುದೇವ ರವೀಂದ್ರರ ನಂದಿನಿ, ಮೃಣಾಲ್ ಎಲ್ಲ ಪಾತ್ರಗಳ ಕಥೆ ಹೇಳುತ್ತಾ, ಅವಳ ಭಾವನೆಗಳನ್ನು, ಹೆಣ್ತನದ ಒಡಲಾಳವನ್ನು, ಆ ಎಲ್ಲ ಹೆಣ್ಣುಗಳ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿವಿರಿಸುವ ಸುಧಾ ಅವರ ಭಾಷೆಯ ಸೊಗಸಿಗೆ ಅವರೇ ಸಾಟಿ. ಈ ಪುಸ್ತಕ ಓದುವಷ್ಟೂ ಹೊತ್ತು ನಾನೂ ಕೂಡ ಸಂಪೂರ್ಣ ಹೆಣ್ತನವನ್ನ ಅನುಭವಿಸಿದ್ದೇನೆ. ಅದು ಹೆಮ್ಮೆಯೋ, ?ಸಾರ್ಥಕ್ಯವೋ ? ಸಂಕಟವೋ ? ತಿಳಿಯೆ. ಅದ್ಯಾವುದೋ ಹೆಸರಿಲ್ಲದ ಭಾವದೊಳಗೆ ಮುಳುಗೆದ್ದ ನಾನು ಸುಧಾ ಅವರ "ಬಕುಲದ ಬಾಗಿಲಿನಿಂದ" ಕೃತಿ ಅದ್ಭುತವಾಗಿದೆ ಎಂದಷ್ಟೇ ಹೇಳಬಲ್ಲೆ.