Sunday, 23 June 2013

ಮೊದಲ ಬಾರಿ ಶಾಲೆಗೆ ಸೇರುವಾಗ......

ಆ 3 ಮೂರು ವರ್ಷದ ಪುಟಾಣಿ, ತಾನು ಹುಟ್ಟಿರುವುದೇ ಶಾಲೆಗೆ ಹೋಗುವುದಕ್ಕಾಗಿ ಅಂತ ಅಂದುಕೊಂಡುಬಿಟ್ಟಿದೆಯೋ ಏನೋ, ಏನೇನೂ ಗಲಾಟೆ ಮಾಡದೆ ಸ್ಕೂಲ್ ಬ್ಯಾಗ್‌ನ್ನು ಬೆನ್ನಿಗೆ ಹಾಕಿಕೊಂಡು, ಕೈಯಲ್ಲೊಂದು ಟಿಫಿನ್ ಕ್ಯಾರಿಯರ್ ಹಿಡಿದುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಸ್ಕೂಲ್ ಬಸ್ಸು ಹತ್ತಿ ಹೋಗುತ್ತಿರೋದನ್ನು ನೋಡಿದ್ರೆ ಆಶ್ಚರ್ಯ ಆಗುತ್ತದೆ.

ಹುಟ್ಟಿ 4 ತಿಂಗಳಿಗೇ ಬೇಬಿ ಸಿಟ್ಟಿಂಗ್‌ನಲ್ಲಿ ಕುಳಿತು ಬೆಳೆದ ಮಗು ಅದು. ಅದಕ್ಕೆ ತಾನು ದಿನದ ೨೪ ಗಂಟೆಯೂ ಮನೆಯಲ್ಲಿದ್ದು, ಅಭ್ಯಾಸವೇ ಇಲ್ಲ. ಆ ಮಗುವಿನ ತಾಯಿ ತನ್ನ ಕಚೇರಿಗೆ ರಜಾ ಹಾಕಿ ಮನೆಯಲ್ಲಿರುವ ಸಮಯದಲ್ಲಿಯೂ ಕೂಡ, ಮಗುವನ್ನು ಬೇಬಿ ಸಿಟ್ಟಿಂಗ್ನಲ್ಲಿಯೇ ಬಿಟ್ಟು ಬರುತ್ತಾ ಇದ್ದಳು, ಅದೇ ಕಾರಣಕ್ಕಾಗಿಯೋ ಏನೋ.. ಆ ಮಗುವಿಗೆ ತನ್ನ ಮನೆಯ ಮೇಲೆ, ಅಂಥ ಮಮತೆ, ಸೆಳೆತ ಇಲ್ಲ ಅನ್ನಿಸುತ್ತೆ. ಇಂದಿನ ಮಕ್ಕಳಿಗೆ ತಾನು ಶಾಲೆಗೆ ಸೇರಿದ್ದೇ ನೆನಪಿರೋದಿಲ್ಲ. ಏಕೆಂದರೆ, ಅಷ್ಟು ಚಿಕ್ಕ ವಯಸ್ಸಿಗೇ ಅವರೆಲ್ಲ ಸ್ಕೂಲ್‌ ಮೆಟ್ಟಿಲು ಹತ್ತಿರುತ್ತಾರೆ.

ಮನೆಯಮುಂದೆ ಬಸ್ಸು ಬಂದು ಶಬ್ದ ಮಾಡಿದ ತಕ್ಷಣ, ತನ್ನಮ್ಮನಿಗೆ ಬಾಯ್ ಮಾಡಿ ಬಸ್ಸು ಹತ್ತಿ ಹೋದ ಆ ಪುಟಾಣಿಯನ್ನು ನೋಡುತ್ತಾ ಇದ್ದ ನನಗೆ ನನ್ನ ಬಾಲ್ಯ ನೆನಪಾಯ್ತು. ಶಾಲೆಯ ಹೆಸರು ಕೇಳಿದರೆ, ಅಲ್ಲಿಂದ ಕಾಲು ಕೀಳುತ್ತಿದ್ದವಳು ನಾನು. ನನ್ನನ್ನು ಶಾಲೆಗೆ ಸೇರಿಸಲು, ನಮ್ಮಪ್ಪ ಅಮ್ಮ ಕಷ್ಟಪಟ್ಟಿದ್ದು ನೆನಪಾಯಿತು. ಮನೆಯಲ್ಲಿ ಮುದ್ದು ಮಗಳಾಗಿ ೬ ವರ್ಷ ಆಟವಾಡಿಕೊಂಡಿದ್ದ ನನ್ನ, ಒಮ್ಮೆಲೇ ಶಾಲೆಗೆ ಹೋಗು ಅಂದರೆ..? ನನಗೆ ಬಹಳ ಕಷ್ಟವಾಗಿತ್ತು. ಈ ಶಾಲೆ ಯಾಕಾದರೂ ಇದೆಯೋ ಅನ್ನಿಸುತ್ತಿತ್ತು.
ನಮ್ಮ ಪುಟ್ಟ ಹಳ್ಳಿಯಲ್ಲಿ ನಮ್ಮದು 5 ಮನೆಗಳು ಒಟ್ಟಿಗೇ ಇರುವ ದೊಡ್ಡ ಕೇರಿ, ಆ ಕೇರಿಯಲ್ಲಿ ಮೂಲೆಯ ಮನೆ ನಮ್ಮದು, ಮನೆಯ ಮಂದೆ ಪುಟ್ಟ ಅಂಗಳ, ಅಂಗಳಕ್ಕೆ ತಾಗಿಯೇ ಇರುವ ದನದ ಕೊಟ್ಟಿಗೆ. ಕೊಟ್ಟಿಗೆಯ ತುಂಬಾ ದನಗಳು, ಕರುಗಳು. ಎಲ್ಲರ ಮನೆಯ ಕೊಟ್ಟಿಗೆಗೂ ಹೋಗಿ, ಕರುಗಳ ಜೊತೆ ಆಡವಾಡುತ್ತಿದ್ದೆ ನಾನು. ಮನೆಯಲ್ಲಿದ್ದ ಬೆಕ್ಕಿನ ಮರಿ, ನಾಯಿ ಮರಿ ಜೊತೆಯೇ ಕಾಲ ಕಳೆಯುತ್ತಿದ್ದೆ.

ತೋಟಗಳಲ್ಲಿ ಅಲೆದು, ಗುಡ್ಡ ಬೆಟ್ಟಗಳಲ್ಲಿ ಬೆಳೆದ ಹಣ್ಣುಗಳನ್ನು ತಿನ್ನುತ್ತಾ ಓಡಾಡಿಕೊಂಡಿದ್ದ ಬಾಲ್ಯ ನಮ್ಮದು. ಪೇರಲು ಹಣ್ಣು ಕೀಳಲು ಮರಹತ್ತಿ ಇಳಿಯುವುದಕ್ಕೆ ಬಾರದೇ ಕೂಗಿ ಕೂಗಿ, ಬಾಯಾರಿ ಗಂಟಲು ಒಣಗಿ, ಮರದ ಮೇಲೆಯೇ ಕುಳಿತಿದ್ದ ನನ್ನನ್ನು ಆ ದಾರಿಯಾಗಿ ಮನೆಗೆ ಹೋಗುತ್ತಿದ್ದ ನಮ್ಮ ಮನೆಯ ಆಳು ಶೇಕರ ಕಂಡು, ನನ್ನನ್ನು ಮರದಿಂದ ಇಳಿಸಿದ್ದ, ಅಂದಿನ ಆ ದೃಶ್ಯವನ್ನು ಇಂದಿಗೂ ರಸವತ್ತಾಗಿ ಹೇಳುತ್ತಾನೆ ಅವನು.

ನನ್ನಮ್ಮನ ಸೀರೆಯನ್ನು ಸುತ್ತಿಕೊಂಡು, ಅಂಗಳದಲ್ಲಿ ಬಿಂಕದಿಂದ ನಡೆದಾಡುತ್ತಿದ್ದ ನನ್ನನ್ನು ಪಕ್ಕದ ಮನೆಯವರೆಲ್ಲ ನೋಡಿ ನಕ್ಕು ಸಂತೋಷ ಪಡುತ್ತಿದ್ದರು, ಇಡೀ ಕೇರಿಯೂ ನನ್ನದೇ, ಅಲ್ಲಿ ಯಾರ ಮನೆಯಲ್ಲಾದರೂ ನನ್ನ ಊಟ, ತಿಂಡಿ ಮುಗಿದುಹೋಗುತ್ತಿತ್ತು.
ಅಣ್ಣಂದಿರ ಜೊತೆ ಹೊಳೆಗೆ ಹೋಗುವುದು, ಅವರು ಈಜಾಡುವುದನ್ನು ನೋಡಿ, ಖುಷಿ ಪಡುವುದು, ನನಗೂ ಕಲಿಸಿಕೊಡಿ ಅಂತ ಹಟ ಮಾಡೋದು, ಅವರು ನನ್ನನ್ನು ಸಂಬಾಳಿಸಿ ಮನೆಗೆ ಕರೆದುಕೊಂಡುಬರೋದು ಮಾಮೂಲಿಯಾಗಿತ್ತು.. ನನ್ನ ಹಟ ಅವರಿಗೆ ಅಭ್ಯಾಸವಾಗಿಹೋಗಿತ್ತು.

ಪುಟ್ಟಮಗುವಾಗಿದ್ದ ನನ್ನ ತಂಗಿ ತೊಟ್ಟಿಲಲ್ಲಿ ಮಲಗಿ, ಕಿಲ ಕಿಲ ನಗುತ್ತಿದ್ದಳು. ಅವಳನ್ನು ನಗಿಸಲು ಕುಣಿಯುತ್ತಾ, ಮಲಗಿಸಲು ಹಾಡು ಹೇಳುತ್ತಾ ಇದ್ದೆ, ಮನೆಯ ತುಂಬಾ ಓಡಾಡಿಕೊಂಡು ಹಾಯಾಗಿರುತ್ತಿದ್ದೆ. ಹಗಲು ಹೊತ್ತಿನಲ್ಲೆಲ್ಲ ಆಟವಾಡಿ, ಕುಣಿದು ಸುಸ್ತಾಗಿ ನಿದ್ದೆಹತ್ತಿದ ಕಣ್ಣಿನಲ್ಲಿರುವ ನನಗೆ ಊಟ ಮಾಡಿಸುವವಳು ನನ್ನ ಅಜ್ಜಿ. ಊಟವಾದ ತಕ್ಷಣ ಹಾಸಿಗೆ ಹಾಸಿ ನನ್ನನ್ನು ಮಲಗಿಸುವ ಜವಾಬ್ದಾರಿ ನನ್ನಪ್ಪನದು. ದಿನವೂ ಬೇರೆ ಬೇರೆ ರಸವತ್ತಾದ ಕಥೆ ಕೇಳುತ್ತಾ, ಅಪ್ಪನ ಮಡಿಲಿನಲ್ಲಿಯೇ ನಿದ್ದೆ ಮಾಡುತ್ತಿದ್ದೆ ನಾನು.

ಅಂತೂ ಇಂತೂ ಶಾಲೆಗೆ ಸೇರುವ ದಿನ ಬಂದೇಬಿಟ್ಟಿತ್ತು. ನೀನು ನಾಳೆಯಿಂದ ಶಾಲೆಗೆ ಹೋಗಬೇಕು, ಅಲ್ಲಿ ಓದುವುದಕ್ಕೆ ಬರೆಯುವುದಕ್ಕೆ ಹೇಳಿಕೊಡುತ್ತಾರೆ, ನೀನು ಕಲಿತು ದೊಡ್ಡವಳಾಗಿ ಸ್ಕೂಲ್‌ಟೀಚರ್‌ಆಗಬೇಕು ಅಂತ ನನಗೆ ನಿಧಾನವಾಗಿ ಹೇಳ್ತಾ ಇದ್ದಳು ನಮ್ಮಮ್ಮ. ಅವಳು ಎಷ್ಟೇ ಹೇಳಿದರೂ ನನಗೆ ಶಾಲೆ ಇಷ್ಟವೇ ಇರಲಿಲ್ಲ. ಅವಳು ಹೇಳುವ ಕಥಯನ್ನೆಲ್ಲ ಕೇಳಿ ನಂತರ ಕೊನೆಯಲ್ಲಿ ನಾನು ಶಾಲೆಗೆ ಹೋಗೋದಿಲ್ಲ ಅಂತಿದ್ದೆ. ನನ್ನನ್ನು ಶಾಲೆಗೆ ಕಳಿಸುವುದಾದರೂ ಹೇಗಪ್ಪ ಅನ್ನೋದೇ ಅಮ್ಮನ ಚಿಂತೆಯಾಗಿತ್ತು.
ಅವತ್ತು ಜೂನ್‌೧, ಬೆಳಿಗ್ಗೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹಾಸಿಗೆಯಲ್ಲಿ ಬೆಚ್ಚಗೆ ಮಲಗಿದ್ದ ನನ್ನ ಬೇಗನೆ ಎಬ್ಬಿಸಿ, ಸ್ನಾನ ಮಾಡಿಸಿ, ಬಿಳಿ ಅಂಗಿ ನೀಲಿ ಸ್ಕರ್ಟು ತೊಡಿಸಿ, ರೆಡಿ ಮಾಡಿಬಿಟ್ಟಿದ್ದಳು ಅಮ್ಮ. ಹಾಸಿಗೆಯಿಂದ ಎದ್ದಾಗಿನಿಂದ ಸೊಳ್ಳೆರಾಗದಲ್ಲಿ ಅಳುತ್ತಿದ್ದ ನಾನು ಶಾಲೆಗೆ ಹೋಗುವ ಸಮಯ ಹತ್ತಿರ ಬಂದಾಗ, ಅಯ್ಯೋ ನಾನು ಶಾಲೆಗೆ ಹೋಗೋದಿಲ್ಲ ಎಂದು ಜೋರಾಗಿ ಅಳಲು ಶುರುವಿಟ್ಟುಕೊಂಡೆ, ನನ್ನ ಸಂಬಾಳಿಸುವುದೇ ಅಪ್ಪ ಅಮ್ಮಂಗೆ ತಲೆ ನೋವಾಗಿಹೋಯ್ತು.

ಅಪ್ಪ ಅಮ್ಮ ಏನೇ ಹೇಳಿದರೂ, ಸಮಾಧಾನ ಮಾಡಿ ಶಾಲೆಗೆ ಕರೆದೊಯ್ಯಲು ಎಷ್ಟೇ ಕಷ್ಟಪಟ್ಟರೂ ನಾನು ಸುಮ್ಮನಾಗಲೇ ಇಲ್ಲ. ಎಷ್ಟು ಚೆಂದದ ಪುಸ್ತಕ ನೋಡು, ಎಷ್ಟು ಸುಂದರ ಬಳಪ ನೋಡು ಶಾಲೆಯಲ್ಲಿ ನಿನ್ನಂತೆ ಇರುವ ಮಕ್ಕಳ ಜೊತೆ ನೀನು ಆಟವಾಡಬಹುದು ಎಂದೆಲ್ಲ ಹೇಳಿ ನನ್ನ ಅಳುವನ್ನು ಕಡಿಮೆ ಮಾಡಲು ಪ್ರಯತ್ನ ಪಟ್ಟರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ನನ್ನ ಅಜ್ಜಿ, ತುಂಬ ಅಳುತ್ತಾಳೆ, ಶಾಲೆಗೆ ನಾಳೆ ಕರೆದುಕೊಂಡು ಹೋಗಪ್ಪ ಅಂತ ನಮ್ಮಪ್ಪಂಗೆ ಹೇಳಿದರೂ ಅಪ್ಪ ಕೇಳಲೇ ಇಲ್ಲ. ನನ್ನ ಕಿರುಚಾಟ ಮುಂದುವರೆಯುತ್ತಲೇ ಇತ್ತು.

ಅಲ್ಲಿಯೇ ನಿಂತಿದ್ದ ಶೇಕರನ ಹತ್ತಿರ, ಬುಟ್ಟಿ ತೆಗೆದುಕೊಂಡು ಬಾ ಅವಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹೊತ್ತುಕೊಂಡು ಹೋಗುತ್ತೇನೆ ಅಂದರು ನಮ್ಮಪ್ಪ. ಆಗ ನಾನು ಅಲ್ಲಿಂದ ಎದ್ದು ಓಡಲು ಪ್ರಾರಂಭ ಮಾಡಿದೆ. ನನ್ನ ಅಟ್ಟಿಸಿಕೊಂಡು ಬಂದ ಅಪ್ಪನಿಗೆ ನಾನು ಸಿಗಲಿಲ್ಲ. ಓಡಿಹೋಗಿ ಬಚ್ಚಲು ಮನೆಯ ಬಾಗಿಲು ಹಾಕಿಕೊಂಡುಬಿಟ್ಟೆ. ತುಂಬಾ ಹೊತ್ತು ಅಲ್ಲೇ ಇದ್ದೆ. ಅಮ್ಮ ಹೊರಗಿನಿಂದ ನನ್ನ ಕರೆದು ಕರೆದು ಸುಸ್ತಾದಳು. ಬಚ್ಚಲು ಮನೆಯಲ್ಲೇ ನಿಂತಿದ್ದ ನನಗೂ ಕೂಡ ಅತ್ತೂ ಅತ್ತೂ ಸುಸ್ತಾಗಿತ್ತು. ನಿಧಾನವಾಗಿ ಬಾಗಿಲು ತೆಗೆದು ಅಡಿಗೆ ಮನೆಗೆ ಹೋಗಿ ಅಮ್ಮನನ್ನು ಅಪ್ಪಿಕೊಂಡೆ.

ಅಮ್ಮ ನನ್ನ ಎತ್ತಿಕೊಂಡು, ಸಮಾಧಾನ ಮಾಡಿ, ಶಾಲೆಗೆ ಹೋಗಲು ಧೈರ್ಯ ತುಂಬಿದಳು. ಕಣ್ಣೀರು ಒರೆಸಿ, ಮುಖ ತೊಳೆಸಿ ಸಿದ್ಧಗೊಳಿಸಿದಳು. ನನ್ನಪ್ಪ ನಗುತ್ತಾ ನಗತ್ತಾ ನನ್ನ ಬಳಿ ಬಂದು, ಮಧ್ಯಾಹ್ನದ ತನಕ ಶಾಲೆಯಲ್ಲಿರು, ಆ ನಂತರ ನಾನೇ ಬಂದು ನಿನ್ನ ಮನೆಗೆ ಕರೆತರುತ್ತೇನೆ ಎಂದು ಹೇಳಿ ನನ್ನ ಶಾಲೆಗೆ ಕರೆದುಕೊಂಡು ಹೋದರು.

ಶಾಲೆಗೆ ಹೋಗುವುದು ಅಂದ್ರೆ, ಅದೇನೋ ಕಳೆದುಕೊಂಡವರಂತೆ ಭಾಸವಾಗುತ್ತಿತ್ತು ನನಗೆ. ಶಾಲೆ ಸೇರಿದ ಮೇಲೆ, ಶಾಲೆಯ ಪ್ರೀತಿ ಬಂದಿತ್ತಾದರೂ, ನನ್ನ ಶಾಲೆಗೆ ಕಳಿಸುವಾಗ ನಮ್ಮಪ್ಪ ಅಮ್ಮಂಗೆ ಸಾಕುಬೇಕಾಗಿತ್ತು. ಅದೊಂದು ದೊಡ್ಡ ಪ್ರಹಸನವೇ ನಡೆದುಹೋಗಿತ್ತು.

ಅದನ್ನೆಲ್ಲ ನೆನಪಿಸಿಕೊಂಡ ನನಗೆ, ಬೆಂಗಳೂರೆಂಬ ಮಹಾ ನಗರಿಯಲ್ಲಿಯ ಪುಟ್ಟ ಪುಟ್ಟ ಮಕ್ಕಳು, ಹುಟ್‌ಹುಟ್ತಾನೇ ಶಾಲೆಗೆ ಹೋಗುತ್ತವೆ ಅಂದ್ರೆ, ನಂಬುವುದಕ್ಕೇ ಆಗುವುದಿಲ್ಲ. ನಾವು 6 ವರ್ಷ ವಯಸ್ಸಿನ ತನಕ ಅನುಭವಿಸಿದ ಆ ಖುಷಿ, ಆಟ, ಪಾಟ, ನಲಿವು ಈ ಮಕ್ಕಳಿಗೆ ಸಿಗುತ್ತಲೇ ಇಲ್ಲವಲ್ಲ.. ಅಂತ ಅನ್ನಿಸುತ್ತಿತ್ತು. ಏನೇನೂ ಗಲಾಟೆ ಮಾಡದೆ, ಅಮ್ಮ ಕೊಟ್ಟ ಟಿಫನ್‌ ಬಾಕ್ಸ್‌ಹಿಡಿದು, ಸ್ಕೂಲ್‌ಬ್ಯಾಗ್‌ಏರಿಸಿಕೊಂಡು, ಪಕ್ಕದಲ್ಲೇ ನಿಂತಿದ್ದ ನನಗೂ ಟಾಟಾ ಮಾಡಿ ಸ್ಕೂಲ್‌ಬಸ್‌ಹತ್ತಿಹೋದ ಆ 3 ವರ್ಷದ ಪುಟ್ಟಿಯ ಬಗ್ಗೆಯೇ ಯೋಚನೆ ಮಾಡ್ತಾ ಕಳೆದುಹೋದೆ..

ನೀನು ನಾನು

ಯಾಕೋ ನೀನು ಸುಮ್ಮನೆ ನೆನಪಾಗುತ್ತೀಯಾ...ಹಾಗೇ..ಮನದ ಪುಟದಲ್ಲಿ ಬಂದು ಹೋಗ್ತಿಯಾ...ಯಾವುದೋ ಮಾತು..ಇನ್ಯಾವುದೋ ಸನ್ನಿವೇಶ, ತಟ್ಟನೆ ನಿನ್ನ ನೆನಪು ಮಾಡುತ್ತೆ. ನೀನಾಡಿದ ಮಾತು, ನಸು ನಗುತ್ತಾ ನೀನು ನನ್ನ ಪ್ರಶ್ನೆಗೆ ಕೊಡುತ್ತಾ ಇದ್ದ ಉತ್ತರ, ಅದೆಲ್ಲ ಈಗಲೂ ನೆನಪಾಗುತ್ತೆ. ಮನಸ್ಸಿಗೆ ಎಷ್ಟು ಹತ್ತಿರ ಆಗಿದ್ದೆ ನೀನು. ಮೂರು ವರ್ಷ ಮೂರು ನಿಮಿಷದಂತೆ ಕಳೆದುಹೋಯ್ತು ಅಲ್ವಾ? ಸ್ನೇಹದ ಜೊತೆ ಜತೆಗೆ ನಮ್ಮೊಂದಿಗೆ ಹೆಸರಿಲ್ಲದ ಬಾಂಧವ್ಯ ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರ ತಂದಿತ್ತು ಅಲ್ವಾ? ಒಬ್ಬರನ್ನೊಬ್ಬರು ಬಿಟ್ಟಿರದ ಆ ಸ್ನೇಹ ಬಾಂಧವ್ಯ ಹೊಸ ರೂಪ ಪಡೆದುಕೊಂಡಿದ್ದು, ಅದು ನಮ್ಮಿಬ್ಬರಿಗೂ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ನಟಿಸುತ್ತಾ ಇದ್ವಿ ಅಲ್ವಾ...? ಏನು ಅಂದ್ರೆ ಇಬ್ಬರಿಗೂ ಗೊತ್ತಿರದ ಹೊಸ ನಂಟು ಬೆಸೆಯುತ್ತಾ ಇರೋದು ಇಬ್ಬರ ಅನುಭವಕ್ಕೂ ಬಂದಿತ್ತು ಅನ್ನೋದು. ನಾನು ಕಷ್ಟಪಟ್ಟು ಸುತ್ತಿ ಬಳಸಿ ಹೇಳಿದ ಎಷ್ಟೊಂದು ಮಾತುಗಲು...ಯಾವುದೂ ಅರ್ಥವೇ ಆಗಿಲ್ಲ ಅಂತಿದ್ದೆಯಲ್ಲ... ಎಂಥ ಚಾಲಾಕಿ ನೀನು..

ನಮ್ಮಿಬ್ಬರಿಗೂ ಅಂದು ಕಾಲೇಜಿನ ಕೊನೆಯ ದಿನ.. ಆ ಭಾವುಕ ಕ್ಷಣ ನೀನು ನೆನಪಾದಾಗಲೆಲ್ಲ ನೆನಪಾಗುತ್ತೆ ಕಣೇ... ಅಂದು ನೀನು, ತುಂಬಿದ ಕಣ್ಣುಗಳಲ್ಲಿ ನನ್ನ ಕೇಳಿದ ಪ್ರಶ್ನೆಗಳು ಇಂದಿಗೂ ನನ್ನ ಕಾಡುತ್ತವೆ. ಕಾಲೇಜು ಮುಗಿದ ಮೇಲೆ ನಾವು ಬೇರೆ ಬೇರೆ ಆಗುತ್ತೀವಾ..? ನಾನು ನೀನು ನಮ್ಮ ನಮ್ಮ ವಯಕ್ತಿಕ ಜೀವನದಲ್ಲಿ ಮುಳುಗಿ ಈಗಿರುವ ಬಾಂಧವ್ಯ ಕಳೆದುಕೊಂಡುಬಿಡ್ತೀವಾ..? ನಿನಗೆ ಹೊಸ ಗೆಳೆಯ ಗೆಳತಿಯರು ಸಿಕ್ಕಮೇಲೆ ನನ್ನ ಮರೆತುಬಿಡ್ತೀಯಾ..? ಅಂತ.. ಅದಕ್ಕೆ ನನ್ನ ಉತ್ತರ ಏನಿತ್ತು ಹೇಳು.. ಹಾಗೆಲ್ಲ ಆಗಲ್ಲ ಎಂಬ ಭಾವವಿದ್ದ ನನ್ನ ಕಣ್ಣಿನಲ್ಲಿ ಜಿನುಗಿದ ಭಾವುಕ ಕಣ್ಣೀರು. ನಾವಿಬ್ಬರು ಬೇರೆ ಆಗುತ್ತೀವಿ ಎಂಬ ಪರಿಸ್ಥಿತಿಯನ್ನು ಸುಮ್ಮನೇ ಕಲ್ಪಿಸಿಕೊಳ್ಳೋಕೂ ನನಗೆ ಸಾಧ್ಯವಿರದ ಸ್ಥಿತಿ ನಂದಾಗಿತ್ತು. ಕಣೇ..

ಹೌದು. ನಿಜ. ನೀನು ಹೇಳಿದಂತೆ ಇವತ್ತು ಬೇರೆ ಬೇರೆ ಆಗಿದ್ದೀವಿ. ನೀನು ನನಗೆ ಆ ಪ್ರಶ್ನೆಗಳನ್ನು ಕೇಳಿ ಈಗ ೫ ವರ್ಷಗಳು ಕಳೆದುಹೋಗಿವೆ. ಈಗ ನಾವಿಬ್ಬರೂ ಎಂದಿಗೂ ಭೇಟಿಯಾಗಲು ಸಾಧ್ಯವಿಲ್ಲದಷ್ಟು ದೂರಾಗಿಹೋಗಿದ್ದೀವಿ. ಅದಕ್ಕೆಲ್ಲ ಕಾರಣ ನಾನೇ ಎಂಬ ಭಾವ ನಿನ್ನದು ಅನ್ನೋದು ಕೂಡ ಗೊತ್ತಿದೆ ನನಗೆ. ಆದರೆ ನಿನ್ನ ಸ್ನೇಹವನ್ನು ಕಳೆದುಕೊಳ್ಳೋಕೆ ನನಗೂ ಮನಸ್ಸಿರಲಿಲ್ಲ. ನನ್ನ ಮನಸ್ಸು ನಾನು ನಿನ್ನಿಂದ ದೂರಾಗುವುದನ್ನು ಸಹಿಸುತ್ತಿರಲಿಲ್ಲ. ಆದರೆ, ಬುದ್ದಿ ಹೇಳಿದಂತೆ ಕೇಳಲೇಬೇಕಾದ ಅನಿವಾರ್ಯತೆ ಇತ್ತು ಕಣೇ.. ನಮ್ಮ ಸಂಬಂಧ ನೀನು ಹೇಳಿದಂತೆಯೇ ಇದ್ದಿದ್ದರೆ., ನಮ್ಮಿಬ್ಬರ ಮನೆಯಲ್ಲಿಯೂ ನಾವಿಬ್ಬರೂ ನಿಷ್ಟುರರಾಗಬೇಕಾಗಿತ್ತು. ನಮ್ಮನ್ನೇ ನಂಬಿಕೊಂಡಿದ್ದ ಆ ಹಿರಿ ಜೀವಗಳಿಗೆ ನೋವು ಕೊಡಬೇಕಾಗಿತ್ತು. ಸಂಪ್ರದಾಯ ಮೀರಿ ಸಮಾಜದ ರೀತಿ ನೀತಿ ಮೀರಿ ನಿನ್ನೊಂದಿಗೆ ಬರುವುದಕ್ಕೆ ನನ್ನ ಬುದ್ದಿ ಹಿಂಜರಿದಿತ್ತು. ಈ ಸತ್ಯವನ್ನು ನಿನಗೆ ನಾನು ಹೇಳಲು ಎಷ್ಟು ಕಷ್ಟಪಟ್ಟೆ ಅನ್ನೋದು ನನಗೇ ಗೊತ್ತು. ನಂತರ ಎಂಥ ನೋವು ಅನುಭವಿಸಿದ್ದೀನಿ ಗೊತ್ತಿದೆಯಾ..? ನಿನ್ನ ಸ್ನೇಹ ಮುರಿದುಕೊಂಡು ಒಂಟಿಯಾಗಿದ್ದಾಗ ನನ್ನ ಮನಸ್ಸು ಎಷ್ಟು ಚಡಪಡಿಸಿದೆ ಗೊತ್ತಾ? ಮನಸ್ಸು ಹಿಂಡಿ ಹಿಂಡಿ ಹಿಪ್ಪೆಯಾಗಿತ್ತು. ಇಡೀ ಜಗತ್ತೇ ನೋವಿನಲ್ಲಿ ಮುಳುಗಿದೆಯೇನೋ ಎಂಬಂತೆ ಭಾಸವಾಗುತ್ತಾ ಇತ್ತು. ನೋವಿನ ಭಾವ ತುಂಬಿದ ಸಂಗೀತ ಕೇಳುವುದೇ ನನ್ನ ಹವ್ಯಾಸವಾಗಿಹೋಗಿತ್ತು. ನೆಮ್ಮದಿಗಾಗಿ ಹಾತೊರೆಯುವ ಪಾಡು ನನ್ನದಾಗಿಹೋಗಿತ್ತು ಕಣೇ.. ಅವೆಲ್ಲ ನನ್ನ ಬದುಕಿನ ಅತೀ ಭಾವುಕ ದಿನಗಳು.. ಎಂದೆಂದಿಗೂ ಅನುಭವಿಸಿರದ ಅತ್ಯಂತ ನೋವಿನ ಕ್ಷಣಗಳನ್ನು ನಾನು ನೋಡಿಬಿಟ್ಟೆ.. ನಿನಗೂ ಇಷ್ಟೇ ನೋವಾಗಿತ್ತು ಅನ್ನೋದು ಗೊತ್ತಿತ್ತು ನನಗೆ.. ಆದರೆ, ನನ್ನ ಸ್ಥಿರ ನಿರ್ಧಾರ ಮಾತ್ರ ಬದಲಾಗಲೇ ಇಲ್ಲ.

ಈಗ ನಮ್ಮಿಬ್ಬರ ಬದುಕಿನಲ್ಲಿಯೂ ಹೊಸ ದಾರಿ ಕಂಡಿದೆ. ನಾವು ನಮ್ಮದೇ ದಾರಿಯಲ್ಲಿ ಖುಷಿಯಾಗಿದ್ದೇವೆ. ನಾವು ತೆಗೆದುಕೊಂಡಿದ್ದ ಆ ನಿರ್ಧಾರದಿಂದ ಯಾವ ನಷ್ಟವೂ ಆಗಿಲ್ಲ ಅಂತ ಇಬ್ಬರಿಗೂ ಅರಿವಾಗಿದೆ. ನಾವಿಬ್ಬರೂ ನಮ್ಮ ವಯಕ್ತಿಕ ಜೀವನದಲ್ಲಿ ಅತ್ಯಂತ ಸಂತಸದಿಂದ ಇದ್ದೀವಿ ಅನ್ನೋದು ವಾಸ್ತವ ಕೂಡ.

‘ನೀನು -ನಾನು’ ಇದು ಸುಂದರ ನೆನಪು ಕಣೇ... ಬದುಕಿಗೆ ಹೊಸ ರಂಗು ನೀಡಿದ ಮಧುರ ಒಡನಾಟ ಅದು. ನಿನ್ನ ನೆನಪು ಯಾವಾಗಲೂ ನನ್ನಲ್ಲಿ ಇರುತ್ತೆ. ಆ ಸುಂದರ ಸ್ನೇಹ, ಸ್ನೇಹವನ್ನೂ ಮೀರಿದ ಬಾಂಧವ್ಯ, ಹೆಸರೇ ಇಲ್ಲದ ಆ ನಂಟು... ಯಾವಾಗಲೂ ನನ್ನ ಮನಸಿನಲ್ಲಿ ಹಚ್ಚ ಹಸಿರಾಗಿಯೇ ಇರುತ್ತೆ.. ಅದು ಹಾಗೇಯೇ ಇರಲಿ ಅಲ್ವಾ..?

ಖುಷಿ ಎಂದೆಂದಿಗೂ ನಿನ್ನೊಂದಿಗೆ ಇರಲಿ ಅನ್ನೋದು ನನ್ನ ಹಾರೈಕೆ ಕಣೇ..

ಇಂತಿ
ನಿನ್ನವ
(ನಿನ್ನಿಂದ ದೂರಾದವ)

ದೇವರ ಮನೆಯ ತುಪ್ಪದ ದೀಪ

ದೇವರೇ ಎದೆಯಲ್ಲಿರುವ ಅದ್ಯಾವುದೋ ಭಾವ, ಮನಸ್ಸನ್ನು ಚುಚ್ಚಿ ಕಣ್ಣೀರು ತರುತ್ತಿದೆ... ಹಾಗಂತ ಆ ಭಾವದ ಅರ್ಥ ಗೊತ್ತಿಲ್ಲವೆಂದಲ್ಲ. ಅದಕ್ಕೊಂದು ಹೆಸರು ಕೊಡಲು ನನಗೆ ಸಾಧ್ಯವಾಗುತ್ತಿಲ್ಲ ಅಷ್ಟೆ.

ನಾನು ನನ್ನ ಮನಸ್ಸನ್ನು ಗಟ್ಟಿಗೊಳಿಸಿ, ವಾಸ್ತವಕ್ಕೆ ಹೊಂದಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ....ಈ ಭಾವ ನನ್ನ ಕಾಡಬಾರದಿತ್ತು. ಈ ಭಾವಕ್ಕೇನು ಹೇಳಲಿ..? ನನ್ನವರು ನನಗೇ ಸೇರಬೇಕೆಂಬ ಆಕಾಂಕ್ಷೆ ಇದು. ನನ್ನ ಪ್ರೀತಿಗೆ ಪ್ರತಿಯಾಗಿ ಅಷ್ಟೇ ಪ್ರೀತಿ ಸಿಗಬೇಕೆಂಬ ಹಂಬಲ ಇದು. ನನ್ನ ಪ್ರೀತಿಗೆ ಯಾವುದೇ ಅಡತಡೆ ಇರಬಾರದು ಎಂಬ ನಿರೀಕ್ಷೆ ಇದು. ಭೂತಕಾಲದ ಪ್ರಭಾವ ವಾಸ್ತವದ ಮೇಲೆ ಏಕಿದೆ ಎಂಬ ಘಾಡ ಪ್ರಶ್ನೆ ನನ್ನದು. ವಾಸ್ತವದ ಪ್ರೀತಿಯೆದುರು ಮುರಿದುಬಿದ್ದ ಆ ಭೂತಕಾಲದ ಪ್ರೀತಿಯ ಜೊತೆ ಮತ್ತೆ ಸಂಬಂಧ ಕುದುರಿಸುವ ಅವನ ಬಯಕೆಗೆ ಇರುವ ವಿರೋಧವಿದು. ಈ ಭಾವಕ್ಕೇನು ಹೆಸರು ಕೊಡಲಿ..?

ನನ್ನ ಪ್ರೀತಿಯಲ್ಲೇನಾದರೂ ಮೋಸವಿದೆಯಾ ...? ಅಥವಾ ಕೊರತೆ ಇದೆಯಾ? ಬೇಡವೆಂದು ಬಿಟ್ಟು ಹೊಸದೊಂದು ಸಂಬಂಧ ಕಟ್ಟಿಕೊಂಡ ಮೇಲೆ ಮತ್ತೆ ಹಿಂದುರಿಗಿ ನೋಡುವ ಅವನ ಮನಸ್ಸಿಗೆ ನನ್ನ ಧಿಕ್ಕಾರವಿದೆ. ಬದುಕಿನಲ್ಲಿಯ ಆಸೆಯೇ ಬತ್ತಿಹೋಗಿದ್ದ ಸಮಯದಲ್ಲಿ, ಅಭಿಲಾಶೆಯ ಚಿಲುಮೆಯೊಡೆದು ನಿರೀಕ್ಷೆಗಳ ದಾರಿ ತೋರಿದ ಹೊಂಬೆಳಕಿನಂತೆ ಅವನು. ಮನಸಿನಾಗಸದಲ್ಲಿ ಜೀವನ ಪ್ರೀತಿ ಎಂಬ ಸೂರ್ಯ ಉದಯಿಸಲು ಕಾರಣಕರ್ತನೇ ಅವನು. ದಯವಿಟ್ಟು ಅವನನ್ನು ಕಸಿದುಕೊಳ್ಳಬೇಡ ದೇವರೇ... ಎಂದು ಎಷ್ಟೋ ಹೊತ್ತಿನ ವರೆಗೆ ದೇವರನ್ನೇ ದಿಟ್ಟಿಸುತ್ತಾ ಮನಸಿನಲ್ಲಿಯೇ ದೇವರ ಜೊತೆ ಮಾತನಾಡುತ್ತಿರುವ ಅವಳು...ಎಲ್ಲೋ ಕಳೆದು ಹೋಗಿದ್ದಾಳೆ.. ಅಷ್ಟರಲ್ಲಿಯೇ ಮೊಬೈಲ್‌ ರಿಂಗಾಗಿದ್ದು ಕೇಳಿ ಅಲ್ಲಿಂದೆದ್ದು ಹೊರಟವಳಿಗೆ ಕೇಳಿದ್ದು ಮನೆಯ ಕಾಲಿಂಗ್ ಬೆಲ್‌. ಓಡೋಡಿ ಹೋಗಿ ಮನೆಯ ಬಾಗಿಲು ತೆರೆದಾಗ ಎದುರಿಗಿದ್ದವ ಅವಳ ಪ್ರೀತಿಯ ಗಂಡ. ಇಷ್ಟು ಬೇಗ ಆಫೀಸಿನಿಂದ ಬಂದಿರಾ ಎಂಬಂತೆ ಪ್ರಶ್ನಿಸುತ್ತಿದ್ದ ಅವಳ ಆಶ್ಚರ್ಯದ ಮುಖಭಾವಕ್ಕೆ ಸಿಕ್ಕಿದ್ದು, ಹೌದು ನಿನಗೋಸ್ಕರ ಬೇಗ ಬಂದೆ ಎಂಬ ಉತ್ತರ.

ನನ್ನೊಂದಿಗೆ ಇಷ್ಟು ಪ್ರೀತಿಯಿಂದ ಇರುವ ಈತ ಹಳೆಯ ಪ್ರೀತಿಯನ್ನೂ ಯಾಕೆ ನೆನಪಿಸಿಕೊಳ್ಳುತ್ತಾನೋ...? ಎಂಬ ನೋವಿನ ಪ್ರಶ್ನೆ ಮನಸ್ಸಿನಲ್ಲಿಯೇ ಉಳಿದು ಹೋಯಿತು.ಅವನು ನನ್ನಮೇಲಿಟ್ಟಿರುವ ಪ್ರೀತಿ ನಿಷ್ಕಲ್ಮಶ, ಆದರೆ, ಅವಳ ಜೊತೆಯಲ್ಲಿಯೂ ಒಡನಾಟವಿದೆ.. ಇದನ್ನು ಹೇಗೆ ಸಹಿಸಿಕೊಳ್ಳಲಿ... ಇವತ್ತು ಏನೇ ಆಗಲಿ ಈ ವಿಷಯ ಆತನಲ್ಲಿ ಚರ್ಚಿಸಲೇ ಬೇಕು.. ಎಂಬ ಧೃಢ ನಿರ್ಧಾರ ಅವಳ ಮನಸ್ಸಿನಲ್ಲಿ.

ಹೆಂಡತಿಯ ಯೋಚನೆ ಮೊದಲೇ ತನಗೆ ತಿಳಿದಿರುವಂತೆ... ಚಿಂತಿಸಬೇಡ ಚಿನ್ನ... ಎಲ್ಲ ನೀನಂದುಕೊಂಡಂತೆಯೇ ಆಗುತ್ತಿದೆ... ಎಂಬ ನಸು ನಗುವಿನೊಂದಿಗೆ ಬಂದ ಆತನ ಮಾತು. ಅನಿರೀಕ್ಷಿತವಾಗಿ ಬಂತ ಉತ್ತರದಿಂದ ಅತ್ಯಂತ ಆಶ್ಚರ್ಯಗೊಂಡು ಆತನನ್ನೇ ದಿಟ್ಟಿಸಿ, ಏನೋ ಮಾತನಾಡಲು ಹೊರಟವಳಿಗೆ ಮತ್ತೆ ಕೇಳಿದ್ದು, ಮನೆಯ ಕಾಲಿಂಗ್‌ ಬೆಲ್‌. ತನ್ನ ಮಾತನ್ನು ಅಲ್ಲಿಗೆ ನಿಲ್ಲಿಸಿ ಬಾಗಿಲು ತೆರೆಯಲು ಎದ್ದವಳ ತಡೆಯದೇ ಶಾಂತನಾಗಿ ಕುಳಿತಿದ್ದ ಅವನು.

ಮನೆಯ ಬಾಗಿಲು ತೆರೆದಾಗ ಕಂಡವರು ಒಬ್ಬ ಹುಡುಗಿ ಮತ್ತು ಮಧ್ಯವಯಸ್ಕ ಹೆಣ್ಣು. ಅಪರಿಚಿತರಾದ ಅವರನ್ನು ಏನೂ ಪ್ರಶ್ನೆ ಮಾಡದೆ ಅವರಿಗೆ ಇವಳು ನೀಡಿದ್ದು ನಗುವಿನ ಆಹ್ವಾನ. ಅವರಿಬ್ಬರೂ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಎದ್ದು ಬಂದ ಆತನಿಂದಲೇ ಇವಳಿಗೆ ಸಿಕ್ಕಿದ್ದು ಅಪರಿಚಿತರ ಪರಿಚಯ. ಎಲ್ಲೋ ನೋಡಿದಂತಿರುವ ಈ ಹುಡುಗಿ ಯಾರು ಎಂಬುದು ಈ ಸ್ಪಷ್ಟವಾಯಿತು. ಇವಳೇ ಅವಳು ಎಂದು.
ತನ್ನ ಮದುವೆಗೆ ಆಹ್ವಾನ ಪತ್ರಿಕೆ ನೀಡಲು ತನ್ನ ತಾಯಿಯೊಂದಿಗೆ ಬಂದಿದ್ದ ಹುಡುಗಿಗೆ ಅರಿಶಿನ ಕುಂಕುಮ ಕೊಟ್ಟು, ಶುಭಹಾರೈಸಿದಳು. ಮನೆಯಲ್ಲಿದ್ದ ಸಿಹಿ ತಿನಿಸು ನೀಡಿ ಪುರಸ್ಕರಿಸಿದಳು. ಥೇಟ್‌ ತನ್ನ ಅಮ್ಮನಂತೆ ಭಾಸವಾದ ಹುಡುಗಿಯ ಅಮ್ಮನ ಮೃದು ಸ್ವಭಾವ ಅವಳಿಗೂ. ನಗುನಗುತ್ತಲೇ ತನ್ನೊಂದಿಗೆ ಬೆರೆತ ಅವರಿಬ್ಬರೂ ಇವಳಿಗೆ ಇಷ್ಟವಾದರು.

ಮುಂದಿನ ತಿಂಗಳವೇ ನನ್ನ ಮದುವೆ. ನೀವಿಬ್ಬರೂ ನನ್ನ ಮದುವೆಗೆ ಬರಲೇ ಬೇಕು ಎಂದು ಆಹ್ವಾನಿಸಿದ ಆ ಹುಡುಗಿ ಪರ ದೇಶದಲ್ಲಿರುವ ಗಂಡನ ಫೋಟೋ ತೋರಿಸಿದಳು. ತುಂಬಾ ಮುದ್ದಾದ ಜೋಡಿ ಅದು. ಮದುವೆಗೆ ಬಂದೇ ಬರುತ್ತೇವೆ ಎಂದ ಆತ ಮತ್ತು ಅವಳ ಭರವಸೆಯೊಂದಿಗೆ ತಾಯಿ, ಮಗಳು ಹೊರಟರು.

‘ನಿನ್ನ ನಾನು ತುಂಬಾ ಪ್ರೀತಿಸುತ್ತೇನೆ’, ನಿನ್ನಿಂದ ಎಂದಿಗೂ ದೂರಾಗುವುದಿಲ್ಲ ಎಂಬ ವಿಚಾರವನ್ನು ಈಗ ಸಂಪೂರ್ಣ ಒಪ್ಪುತ್ತೀಯಾ? ಎಂಬ ಆತನ ಪ್ರಶ್ನೆಗೆ ಅವಳ ಸಂತಸದ ಕಣ್ಣೀರು ಉತ್ತರಿಸಿತು. ನಿನ್ನಂತ ಸರಳ, ಸಾಧು ಮನಸ್ಸಿನ ಹುಡುಗಿ ನನಗೆ ಸಿಕ್ಕಿದ್ದು ನನ್ನ ಪುಣ್ಯ, ನೀನೇ ನನಗೆ ಎಲ್ಲ. ಎಂಬ ಗಂಡನ ಮಾತು, ಮನಸ್ಸಿನಲ್ಲಿ ಗುಡ್ಡದಂತೆ ಕೂತಿದ್ದ ಎಲ್ಲ ನೋವುಗಳನ್ನು ಬೆಣ್ಣೆಯಂತೆ ಕರಗಿಸಿಬಿಟ್ಟಿತ್ತು....

ಸಂತಸದಿಂದ ದೇವರ ಮನೆಗೆ ಓಡಿದ ಅವಳನ್ನು ಹಿಂಬಾಲಿಸಿಕೊಂಡು ಬಂದ ಆತನಿಗೆ ಕಂಡಿದ್ದು, ತನ್ನ ಹೆಂಡತಿ ಸಂತಸದಿಂದ ಬೆಳಗುತ್ತಿದ್ದ ‘ದೇವರ ಮನೆಯ ತುಪ್ಪದ ದೀಪ’.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...