Sunday, 23 June 2013

ನೀನು ನಾನು

ಯಾಕೋ ನೀನು ಸುಮ್ಮನೆ ನೆನಪಾಗುತ್ತೀಯಾ...ಹಾಗೇ..ಮನದ ಪುಟದಲ್ಲಿ ಬಂದು ಹೋಗ್ತಿಯಾ...ಯಾವುದೋ ಮಾತು..ಇನ್ಯಾವುದೋ ಸನ್ನಿವೇಶ, ತಟ್ಟನೆ ನಿನ್ನ ನೆನಪು ಮಾಡುತ್ತೆ. ನೀನಾಡಿದ ಮಾತು, ನಸು ನಗುತ್ತಾ ನೀನು ನನ್ನ ಪ್ರಶ್ನೆಗೆ ಕೊಡುತ್ತಾ ಇದ್ದ ಉತ್ತರ, ಅದೆಲ್ಲ ಈಗಲೂ ನೆನಪಾಗುತ್ತೆ. ಮನಸ್ಸಿಗೆ ಎಷ್ಟು ಹತ್ತಿರ ಆಗಿದ್ದೆ ನೀನು. ಮೂರು ವರ್ಷ ಮೂರು ನಿಮಿಷದಂತೆ ಕಳೆದುಹೋಯ್ತು ಅಲ್ವಾ? ಸ್ನೇಹದ ಜೊತೆ ಜತೆಗೆ ನಮ್ಮೊಂದಿಗೆ ಹೆಸರಿಲ್ಲದ ಬಾಂಧವ್ಯ ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರ ತಂದಿತ್ತು ಅಲ್ವಾ? ಒಬ್ಬರನ್ನೊಬ್ಬರು ಬಿಟ್ಟಿರದ ಆ ಸ್ನೇಹ ಬಾಂಧವ್ಯ ಹೊಸ ರೂಪ ಪಡೆದುಕೊಂಡಿದ್ದು, ಅದು ನಮ್ಮಿಬ್ಬರಿಗೂ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ನಟಿಸುತ್ತಾ ಇದ್ವಿ ಅಲ್ವಾ...? ಏನು ಅಂದ್ರೆ ಇಬ್ಬರಿಗೂ ಗೊತ್ತಿರದ ಹೊಸ ನಂಟು ಬೆಸೆಯುತ್ತಾ ಇರೋದು ಇಬ್ಬರ ಅನುಭವಕ್ಕೂ ಬಂದಿತ್ತು ಅನ್ನೋದು. ನಾನು ಕಷ್ಟಪಟ್ಟು ಸುತ್ತಿ ಬಳಸಿ ಹೇಳಿದ ಎಷ್ಟೊಂದು ಮಾತುಗಲು...ಯಾವುದೂ ಅರ್ಥವೇ ಆಗಿಲ್ಲ ಅಂತಿದ್ದೆಯಲ್ಲ... ಎಂಥ ಚಾಲಾಕಿ ನೀನು..

ನಮ್ಮಿಬ್ಬರಿಗೂ ಅಂದು ಕಾಲೇಜಿನ ಕೊನೆಯ ದಿನ.. ಆ ಭಾವುಕ ಕ್ಷಣ ನೀನು ನೆನಪಾದಾಗಲೆಲ್ಲ ನೆನಪಾಗುತ್ತೆ ಕಣೇ... ಅಂದು ನೀನು, ತುಂಬಿದ ಕಣ್ಣುಗಳಲ್ಲಿ ನನ್ನ ಕೇಳಿದ ಪ್ರಶ್ನೆಗಳು ಇಂದಿಗೂ ನನ್ನ ಕಾಡುತ್ತವೆ. ಕಾಲೇಜು ಮುಗಿದ ಮೇಲೆ ನಾವು ಬೇರೆ ಬೇರೆ ಆಗುತ್ತೀವಾ..? ನಾನು ನೀನು ನಮ್ಮ ನಮ್ಮ ವಯಕ್ತಿಕ ಜೀವನದಲ್ಲಿ ಮುಳುಗಿ ಈಗಿರುವ ಬಾಂಧವ್ಯ ಕಳೆದುಕೊಂಡುಬಿಡ್ತೀವಾ..? ನಿನಗೆ ಹೊಸ ಗೆಳೆಯ ಗೆಳತಿಯರು ಸಿಕ್ಕಮೇಲೆ ನನ್ನ ಮರೆತುಬಿಡ್ತೀಯಾ..? ಅಂತ.. ಅದಕ್ಕೆ ನನ್ನ ಉತ್ತರ ಏನಿತ್ತು ಹೇಳು.. ಹಾಗೆಲ್ಲ ಆಗಲ್ಲ ಎಂಬ ಭಾವವಿದ್ದ ನನ್ನ ಕಣ್ಣಿನಲ್ಲಿ ಜಿನುಗಿದ ಭಾವುಕ ಕಣ್ಣೀರು. ನಾವಿಬ್ಬರು ಬೇರೆ ಆಗುತ್ತೀವಿ ಎಂಬ ಪರಿಸ್ಥಿತಿಯನ್ನು ಸುಮ್ಮನೇ ಕಲ್ಪಿಸಿಕೊಳ್ಳೋಕೂ ನನಗೆ ಸಾಧ್ಯವಿರದ ಸ್ಥಿತಿ ನಂದಾಗಿತ್ತು. ಕಣೇ..

ಹೌದು. ನಿಜ. ನೀನು ಹೇಳಿದಂತೆ ಇವತ್ತು ಬೇರೆ ಬೇರೆ ಆಗಿದ್ದೀವಿ. ನೀನು ನನಗೆ ಆ ಪ್ರಶ್ನೆಗಳನ್ನು ಕೇಳಿ ಈಗ ೫ ವರ್ಷಗಳು ಕಳೆದುಹೋಗಿವೆ. ಈಗ ನಾವಿಬ್ಬರೂ ಎಂದಿಗೂ ಭೇಟಿಯಾಗಲು ಸಾಧ್ಯವಿಲ್ಲದಷ್ಟು ದೂರಾಗಿಹೋಗಿದ್ದೀವಿ. ಅದಕ್ಕೆಲ್ಲ ಕಾರಣ ನಾನೇ ಎಂಬ ಭಾವ ನಿನ್ನದು ಅನ್ನೋದು ಕೂಡ ಗೊತ್ತಿದೆ ನನಗೆ. ಆದರೆ ನಿನ್ನ ಸ್ನೇಹವನ್ನು ಕಳೆದುಕೊಳ್ಳೋಕೆ ನನಗೂ ಮನಸ್ಸಿರಲಿಲ್ಲ. ನನ್ನ ಮನಸ್ಸು ನಾನು ನಿನ್ನಿಂದ ದೂರಾಗುವುದನ್ನು ಸಹಿಸುತ್ತಿರಲಿಲ್ಲ. ಆದರೆ, ಬುದ್ದಿ ಹೇಳಿದಂತೆ ಕೇಳಲೇಬೇಕಾದ ಅನಿವಾರ್ಯತೆ ಇತ್ತು ಕಣೇ.. ನಮ್ಮ ಸಂಬಂಧ ನೀನು ಹೇಳಿದಂತೆಯೇ ಇದ್ದಿದ್ದರೆ., ನಮ್ಮಿಬ್ಬರ ಮನೆಯಲ್ಲಿಯೂ ನಾವಿಬ್ಬರೂ ನಿಷ್ಟುರರಾಗಬೇಕಾಗಿತ್ತು. ನಮ್ಮನ್ನೇ ನಂಬಿಕೊಂಡಿದ್ದ ಆ ಹಿರಿ ಜೀವಗಳಿಗೆ ನೋವು ಕೊಡಬೇಕಾಗಿತ್ತು. ಸಂಪ್ರದಾಯ ಮೀರಿ ಸಮಾಜದ ರೀತಿ ನೀತಿ ಮೀರಿ ನಿನ್ನೊಂದಿಗೆ ಬರುವುದಕ್ಕೆ ನನ್ನ ಬುದ್ದಿ ಹಿಂಜರಿದಿತ್ತು. ಈ ಸತ್ಯವನ್ನು ನಿನಗೆ ನಾನು ಹೇಳಲು ಎಷ್ಟು ಕಷ್ಟಪಟ್ಟೆ ಅನ್ನೋದು ನನಗೇ ಗೊತ್ತು. ನಂತರ ಎಂಥ ನೋವು ಅನುಭವಿಸಿದ್ದೀನಿ ಗೊತ್ತಿದೆಯಾ..? ನಿನ್ನ ಸ್ನೇಹ ಮುರಿದುಕೊಂಡು ಒಂಟಿಯಾಗಿದ್ದಾಗ ನನ್ನ ಮನಸ್ಸು ಎಷ್ಟು ಚಡಪಡಿಸಿದೆ ಗೊತ್ತಾ? ಮನಸ್ಸು ಹಿಂಡಿ ಹಿಂಡಿ ಹಿಪ್ಪೆಯಾಗಿತ್ತು. ಇಡೀ ಜಗತ್ತೇ ನೋವಿನಲ್ಲಿ ಮುಳುಗಿದೆಯೇನೋ ಎಂಬಂತೆ ಭಾಸವಾಗುತ್ತಾ ಇತ್ತು. ನೋವಿನ ಭಾವ ತುಂಬಿದ ಸಂಗೀತ ಕೇಳುವುದೇ ನನ್ನ ಹವ್ಯಾಸವಾಗಿಹೋಗಿತ್ತು. ನೆಮ್ಮದಿಗಾಗಿ ಹಾತೊರೆಯುವ ಪಾಡು ನನ್ನದಾಗಿಹೋಗಿತ್ತು ಕಣೇ.. ಅವೆಲ್ಲ ನನ್ನ ಬದುಕಿನ ಅತೀ ಭಾವುಕ ದಿನಗಳು.. ಎಂದೆಂದಿಗೂ ಅನುಭವಿಸಿರದ ಅತ್ಯಂತ ನೋವಿನ ಕ್ಷಣಗಳನ್ನು ನಾನು ನೋಡಿಬಿಟ್ಟೆ.. ನಿನಗೂ ಇಷ್ಟೇ ನೋವಾಗಿತ್ತು ಅನ್ನೋದು ಗೊತ್ತಿತ್ತು ನನಗೆ.. ಆದರೆ, ನನ್ನ ಸ್ಥಿರ ನಿರ್ಧಾರ ಮಾತ್ರ ಬದಲಾಗಲೇ ಇಲ್ಲ.

ಈಗ ನಮ್ಮಿಬ್ಬರ ಬದುಕಿನಲ್ಲಿಯೂ ಹೊಸ ದಾರಿ ಕಂಡಿದೆ. ನಾವು ನಮ್ಮದೇ ದಾರಿಯಲ್ಲಿ ಖುಷಿಯಾಗಿದ್ದೇವೆ. ನಾವು ತೆಗೆದುಕೊಂಡಿದ್ದ ಆ ನಿರ್ಧಾರದಿಂದ ಯಾವ ನಷ್ಟವೂ ಆಗಿಲ್ಲ ಅಂತ ಇಬ್ಬರಿಗೂ ಅರಿವಾಗಿದೆ. ನಾವಿಬ್ಬರೂ ನಮ್ಮ ವಯಕ್ತಿಕ ಜೀವನದಲ್ಲಿ ಅತ್ಯಂತ ಸಂತಸದಿಂದ ಇದ್ದೀವಿ ಅನ್ನೋದು ವಾಸ್ತವ ಕೂಡ.

‘ನೀನು -ನಾನು’ ಇದು ಸುಂದರ ನೆನಪು ಕಣೇ... ಬದುಕಿಗೆ ಹೊಸ ರಂಗು ನೀಡಿದ ಮಧುರ ಒಡನಾಟ ಅದು. ನಿನ್ನ ನೆನಪು ಯಾವಾಗಲೂ ನನ್ನಲ್ಲಿ ಇರುತ್ತೆ. ಆ ಸುಂದರ ಸ್ನೇಹ, ಸ್ನೇಹವನ್ನೂ ಮೀರಿದ ಬಾಂಧವ್ಯ, ಹೆಸರೇ ಇಲ್ಲದ ಆ ನಂಟು... ಯಾವಾಗಲೂ ನನ್ನ ಮನಸಿನಲ್ಲಿ ಹಚ್ಚ ಹಸಿರಾಗಿಯೇ ಇರುತ್ತೆ.. ಅದು ಹಾಗೇಯೇ ಇರಲಿ ಅಲ್ವಾ..?

ಖುಷಿ ಎಂದೆಂದಿಗೂ ನಿನ್ನೊಂದಿಗೆ ಇರಲಿ ಅನ್ನೋದು ನನ್ನ ಹಾರೈಕೆ ಕಣೇ..

ಇಂತಿ
ನಿನ್ನವ
(ನಿನ್ನಿಂದ ದೂರಾದವ)

No comments:

Post a Comment

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...