ಆಗಷ್ಟೇ
2020 ಪ್ರಾರಂಭವಾಗಿ ಕೆಲವೇ ಕೆಲವು ದಿನಗಳು ಕಳೆದಿದ್ವು
ಅಷ್ಟೆ. ಆವತ್ತು ನಾನು ಅಡುಗೆ ಮನೆಯ ಗಡಿಬಿಡಿ
ಕೆಲಸದಲ್ಲಿದ್ದಾಗ, ನನ್ನ
ಪತಿರಾಯ ವಿನಯ್ ಗಾಬರಿಯಿಂದ ‘ಅಮೃತ್, ಚೀನಾದಲ್ಲಿ ಅದೇನೋ ರೋಗ ಬಂದಿದ್ಯಂತೆ, ಸಾವಿರ ಸಾವಿರ ಜನ ಸಾಯ್ತಾ
ಇದಾರಂತೆ. ಈ ವಿಷಯ ನಿಂಗೊತ್ತಾ..?’ ಅಂತ ಕೇಳಿದ್ರೆ, ನಾನು ಸಾಂಬಾರ್ಗೆ ಒಗ್ಗರಣೆ ಹಾಕ್ತಾ..
‘ಹೌದು
ಹೌದು.. ಗೂಗಲ್ನ್ಯೂಸ್ನಲ್ಲಿ ನಾನೂ ಓದಿದ್ದೀನಿ. ಅದೇನ್ ರೋಗನೋ
ಏನೋ.. ನಮ್ಮ ದೇಶಕ್ಕೇನಾದ್ರೂ ಈ ರೋಗ ಬಂದ್ರೆ, ಇರುವೆಗಳ ಥರ
ನಮ್ಮ ಜನ ಸತ್ಹೋಗ್ತಾರೆ ಅನ್ಸುತ್ತೆ.’ ಅಂದೆ. ಪಲ್ಯ ಬೇಯುತ್ತಿದ್ದ ಬಾಣಲೆಯ ಮುಚ್ಚಳ ತೆಗೆದು ನೋಡುತ್ತಾ ‘ಅದೆಲ್ಲ ಸರಿ...... ನೀವು ಹೋಗ್ತಿರೋ ಕುವೈತ್ನಲ್ಲಿ ಕೊರೊನಾ ಇಲ್ಲ
ತಾನೇ..? ಕೇಳಿದೆ.
‘ಇಲ್ಲ ಇಲ್ಲ... ಚೀನಾದಲ್ಲಿ ಮಾತ್ರ ಇದೆ
ಅಷ್ಟೆ. ಹೋದ ವರ್ಷ ಅದ್ಯಾವ್ದೋ ಎಬೊಲಾ ಅನ್ನೋ
ರೋಗ ಬಂದಿರಲಿಲ್ವಾ...? ಅಂಥದ್ದೇ ಇದು ಅನ್ಸುತ್ತೆ. ಇಂಥ
ರೋಗಗಳು ಆಗಾಗ ಬರುತ್ವೆ ಹೋಗುತ್ವೆ ಅಂದ್ರು ಅವರು.
ಅಲ್ಲಿಗೆ ಆವತ್ತಿನ ಆ ಟಾಪಿಕ್ ಮುಗಿದಿತ್ತು. ಆದರೆ, ನಾವೇನೋ ಮಾತಾಡಿ
ಮುಗ್ಸಿದೀವಿ ಅಂತ, ರೋಗ ಮುಗಿದು ಹೋಗುತ್ತಾ..?
ಮೊದಮೊದಲು
ಚೀನಾದಲ್ಲಿ ಕೊರೊನಾ ಕಾಡ್ತಾ ಇದೆ ಅಂದಾಗ, ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ.
ನಾವೂ ಅಷ್ಟೆ ನ್ಯೂಸ್ ಪೇಪರ್, ನ್ಯೂಸ್ಚಾನಲ್ಗಳಲ್ಲಿ ಚೀನಾ ಜನರ ಸಾವಿನ ಸುದ್ದಿ ಕೇಳಿ ಲೊಚಗುಟ್ಟಿ ಅಯ್ಯೋ ಪಾಪ ಅಂದುಬಿಟ್ಟಿದ್ವಿ. ದೂರದ ಚೀನಾದಲ್ಲಿ ತಾನೇ ರೋಗ ಬಂದಿರೋದು..? ’ ಅನ್ನೋ ಮನೋಭಾವ ಇತ್ತು ಆಗ. ಆದರೆ ಚೀನಾದ ಸಾವಿನ ಸಂಖ್ಯೆ 2 ಸಾವಿರ ದಾಟಿ 3 ಸಾವಿರ ತಲುಪಿದ ಸುದ್ದಿ,ಕೇಳಿ ಸಣ್ಣ ಭಯ ಕಾಣಿಸಿಕೊಂಡಿತ್ತು. ಕೊರೊನಾ
ಜನ್ಮಸ್ಥಾನದಿಂದ ಈ ರೋಗ ಶರವೇಗದಲ್ಲಿ ಜಗತ್ತಿಗೆಲ್ಲ
ಹಬ್ಬುತ್ತಿರುವುದನ್ನ ನೋಡಿ ನಾವೂ ಬೆಚ್ಚಿಬಿದ್ವಿ .
ಜನವರಿಯ
ಕೊನೆಯಲ್ಲಿ ಕೊರೊನಾ ಕೇರಳಕ್ಕೂ ಬಂತು ಎಂಬ ಸುದ್ದಿ ಟಿವಿಯಲ್ಲಿ ನ್ಯೂಸ್ಪೇಪರ್ನಲ್ಲಿ
ಹರಿದಾಡ್ತಿತ್ತು. ಆದರೆ, ಡಿಸೆಂಬರ್ನಿಂದಲೇ
ಹೊಸ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡ್ತಾ
ಇದ್ದ ನನ್ನ ಬಿಜಿ ಗಂಡ ವಿನಯ್ ಅದಾಗಲೇ, ಕುವೈತ್ಗೆ ಹೋಗೋ ಸಿದ್ಧತೆಯಲ್ಲಿದ್ದರು.
ನನ್ನ ಅಮ್ಮ, ಅಪ್ಪ ಫೋನ್ಮಾಡಿ, ಅದೇನೋ
ರೋಗ ಎಲ್ಲಕಡೆ ಹಬ್ಬುತ್ತಾ ಇದೆಯಂತೆ, ಈಗ ಹೋಗಲೇ ಬೇಕಂತಾ ಕುವೈತ್ಗೆ
ಅಂತ ಕೇಳ್ತಾ ಇದ್ರೆ, ನಾನು
ನಕ್ಕಿದ್ದೆ.
ಅವು ಫೆಬ್ರವರಿ
ಆರಂಭದ ದಿನಗಳು. ನನ್ನ ಪತಿರಾಯನಿಗೆ ತಲೆ ತುರಿಸಲೂ
ಪುರುಸೊತ್ತಿಲ್ಲದ ಆ ಕಾಲದಲ್ಲಿಯೇ ನಾವಿದ್ದ ಮನೆಯ ಮಾಲಿಕರು ಮನೆ ಖಾಲಿ ಮಾಡಲು ಹೇಳಿಬಿಟ್ರು. ನನ್ನ ಗಂಡನಿಗೋ ಅತ್ತ ದರಿ, ಇತ್ತ ಪುಲಿ ಅನ್ನೋ ಹಾಗಾಗಿತ್ತು. ಆದರೂ
ಕುವೈತ್ ಕ್ಲೈಂಟ್ನ ಪ್ರಾಜೆಕ್ಟ್ ಕೆಲಸವನ್ನೂ ನಿಭಾಯಿಸುತ್ತಾ, ಸೂಕ್ತ ಬಾಡಿಗೆ ಮನೆಯನ್ನೂ ಹುಡುಕಲು ಶುರು
ಮಾಡಿದ್ದರು ನನ್ನ ಗಂಡ ಬಡಪಾಯಿ..! ದೇವರ ದಯೆ..!
ಬಹು ಬೇಗ ಒಂದೊಳ್ಳೆ ಮನೆಯೂ ಸಿಕ್ತು. ವಾರ ಕಳೆಯುವಷ್ಟರಲ್ಲಿಯೇ
ವಿನಯ್ ನಮ್ಮನ್ನ ಹತ್ತಿರದ ಅಪಾರ್ಟ್ಮೆಂಟ್ನ ಮನೆಯೊಂದಕ್ಕೆ ಶಿಫ್ಟ್ ಮಾಡಿಟ್ಟು ವಿಮಾನು ಹತ್ತಿ ಹಾರಿಹೋದರು. ಆದರೆ, ವಿನಯ್ಗಿದ್ದಷ್ಟೇ
ತರಾತುರಿ ಕೊರೊನಾಕ್ಕೂ ಇತ್ತು ನೋಡಿ..! ಅಲ್ಲಿಯ ತನಕ
ಕುವೈತ್ನಲ್ಲಿ ಪತ್ತೆಯಾಗಿರದ ಕೊರೊನಾ ಫೆಬ್ರವರಿ ಕೊನೆಯ ವಾರದಲ್ಲಿ ಕುವೈತ್ನಲ್ಲಿಯೂ ಕಾಣಿಸಿಕೊಂಡ್ತು.
ನಮ್ಮ
ದೇಶದಲ್ಲಿ ಅದಾಗಲೇ ಕೊರೊನಾ ಕುರಿತಾದ ಭಯದ ಬಿರುಗಾಳಿಯಾಗಿ ಬೀಸ್ತಾ ಇತ್ತು. ರೋಗ ಹಬ್ಬುವ ತೀವ್ರತೆ, ಅಪಾಯಗಳು, ಅದರಿಂದ
ಪಾರಾಗುವ ಉಪಾಯಗಳು, ಬರದಂತೆ
ತಡೆಯುವ ಕ್ರಮಗಳು, ಸುಳ್ಳುಸುದ್ದಿಗಳು, ಕೊರೊನಾ ಜೋಕ್ಗಳು, ಹಾಡುಗಳು, ಡಾನ್ಸ್ಗಳು ಹೀಗೆ ಇನ್ನೂ ಏನೇನೋ ವಾಟ್ಸ್ಯಾಪ್,
ಫೇಸ್ಬುಕ್ನಲ್ಲಿ ಹರಿದಾಡ್ತಾ ಇದ್ರೆ, ನ್ಯೂಸ್ ಚಾಲನ್ಗಳು
ಕರೊನಾದಿಂದ ಸಂಭವಿಸುತ್ತಿರುವ ಸಾವನ್ನು ವೈಭವೀಕರಿಸುತ್ತಿದ್ವು. ನಾಲ್ಕು ವರ್ಷದ ಪುಟ್ಟ ಮಗನ ಜತೆ ಮನೆಯಲ್ಲಿ ಒಬ್ಬಳೇ
ಇರೋ ನನಗೆ ಕೊರೊನಾ ಭಯ ಇನ್ನಿಲ್ಲದಂತೆ ಕಾಡೋಕೆ ಶುರುವಾಯ್ತು. ವಿದೇಶಕ್ಕೆ ಹೋಗಿಯೋ ಗಂಡ,
ಕ್ಷೇಮವಾಗಿ ಮನೆಗೆ ಬಂದ್ರೆ ಸಾಕು ಅನ್ನೋ ಆತಂಕ ಬೇರೆ ..!
ಕುವೈತ್ನಲ್ಲಿ
ಬೆರಳೆಣಿಕೆಯಷ್ಟು ಕೊರೊನಾ ಕೇಸ್ಗಳು ದಾಖಲಾಗ್ತಾ ಇದ್ದಂತೆ, ಆ
ದೇಶದಲ್ಲಿ ಎಚ್ಚರಿಕೆಯ ಕ್ರಮಗಳು ಜಾರಿಗೆ ಬಂದ್ವು. ಬೇರೆ ದೇಶದಿಂದ ಬಂದ ಎಲ್ಲರನ್ನೂ ವಾಪಾಸ್ಕಳಿಸಲು ಕುವೈತ್ಸರ್ಕಾರ ಕ್ರಮ ಕೈಗೊಳ್ತಾ ಇದೆ ಅನ್ನೋ ಸುದ್ದಿ
ಬಂದಿದ್ದೇ ವಿನಯ್ ಕಂಪನಿ ಅವರನ್ನು
ವಾಪಾಸ್ಕರೆಸಿಕೊಳ್ಳುವ ತಯಾರಿ
ಮಾಡಿಕೊಂಡಿತ್ತು.
ಅಂದ್ಹಾಗೆ, ಮಾರ್ಚ್ ಮೊದಲನೇ ವಾರದಲ್ಲಿ ಅಂದ್ರೆ,
ಇನ್ನೂ ನಮ್ಮ ದೇಶದಲ್ಲಿ ಲಾಕ್ಡೌನ್ಆರಂಭವಾಗಿರಲಿಲ್ಲ ನೋಡಿ, ಆವಾಗಲೇ ವಿನಯ್ ಕುವೈತ್ನಿಂದ ಗಂಟು ಮೂಟೆ
ಕಟ್ಟಿಕೊಂಡು ಎದ್ನೋ ಬಿದ್ನೋ ಅಂತ ಓಡಿ ಬರೋಕೆ ತಯಾರಿ ಮಾಡಿಕೊಂಡ್ರು. ಅದೇ ಗಡಿಬಿಡಿಯಲ್ಲಿ ನನಗೆ ಕಾಲ್ ಮಾಡಿ, ನಾನೀಗ ಕುವೈತ್ನಿಂದ ಮನೆಗೇ ಬರಬೇಕಾ..? ಅಂತ ಕೇಳಬೇಕೆ...? ಆ ಅನಿರೀಕ್ಷಿತ ಪ್ರಶ್ನೆಯಿಂದ ಗಾಬರಿಗೊಂಡ
ನಾನು, ಯಾಕ್ರೀ..? ಮನೆಗೆ ಬರೋಕೆ ಇಷ್ಟ ಇಲ್ವಾ..?
ಅಂದೆ. ‘ಪೆದ್ದಿ, ನಾಳೆಯಿಂದ ಎಲ್ಲಾ ಫ್ಲೈಟ್ ಕ್ಯಾನ್ಸಲ್..!
ಇದೇನು ತಮಾಷೆ ಮಾಡೋ ಸಮಯವಾ ? ಫ್ಲೈಟ್ನಲ್ಲಿ ಬರುವಾಗ ಕೊರೊನಾ ಅಂಟಿಕೊಳ್ಳೋ ಪಾಸಿಬಲಿಟೀಸ್ ಇರೋದ್ರಿಂದ
ನಾನು ನಿನ್ನ ಹತ್ರ ಹೀಗೆ ಕೇಳ್ತಿರೋದು. ನನ್ನ ಜತೆ
ಇರೋ ಕಲೀಗ್ಸ್ ಬೆಂಗಳೂರಿಗೆ ಬಂದ ತಕ್ಷಣ ಲಾಡ್ಜ್ಗೆ ಹೋಗ್ತಿದಾರೆ. ನಾನೂ ಹಾಗೇ ಮಾಡ್ಲಾ..? ಅಥವಾ ಒಂದು ಹದಿನೈದು ದಿನ ಮಗನ ಜತೆ ನೀನೇ ಊರಿಗೆ ಹೋಗ್ತಿಯಾ?’ ಅಂತ ಅಷ್ಟನ್ನೂ ಒಂದೇ ಉಸುರಿಗೆ ಹೇಳಿದರು. ಕುವೈತ್ ಏರ್ಪೋರ್ಟ್ನಲ್ಲಿ ಕುಳಿತು ಹೀಗೆ ಕೇಳ್ತಾ ಇದ್ರೆ,
ದಿಢೀರನೆ ನಾನು ಏನಂತ ಹೇಳಲಿ..?
ಆ ಕ್ಷಣಕ್ಕೆ ಆಯ್ತು ನಾವೇ
ಊರಿಗೆ ಹೋಗ್ತೀವಿ, ನೀವು ಮನೆಗೇ ಬನ್ನಿ ಪರವಾಗಿಲ್ಲ ಅಂದೆ.
ಅವರು ಮಾರ್ಚ್
12 ರಂದು ಬೆಳಗ್ಗೆ
10 ಗಂಟೆಗೆ ಕುವೈತ್ನಿಂದ ಹೊರಟು
ಮಧ್ಯಾಹ್ನ 12.30ಕ್ಕೆ
ಕತಾರ್ತಲುಪಿ, ಅದೇ ದಿನ ಸಂಜೆ 8.30 ರ ಫ್ಲೈಟ್ಗೆ ಕತಾರ್ನಿಂದ ಹೊರಟು ಮಾರ್ಚ್ 13ರ ಬೆಳಗ್ಗೆ ಬೆಂಗಳೂರಿಗೆ
ಬರೋ ಕಾರಣ, ನಾನು ಮಾರ್ಚ್
12 ರಂದೇ ರಾತ್ರಿ ಬೆಂಗಳೂರು ಬಿಡಬೇಕಾಗಿತ್ತು. ನನ್ನ ಪುಣ್ಯಕ್ಕೆ
ಅದೇ ದಿನ ರಾತ್ರಿ ಬಸ್ನಲ್ಲಿ ಸೀಟ್ ಕೂಡ ಸಿಕ್ಕಿತ್ತು.
ದಿನಿನಿತ್ಯ
ತಪ್ಪದೇ ನ್ಯೂಸ್ ಚಾನೆಲ್ಗಳನ್ನ ನೋಡಿ ನೋಡಿ ತಲೆಯ ತುಂಬಾ ಕಲರ್ ಕಲರ್ ಕೊರೊನಾವನ್ನ ತುಂಬಿಕೊಂಡಿದ್ದ
ನಾನು ಅದೇ ಪ್ರಚಂಡ ಭಯದೊಂದಿಗೆ ಮಗನನ್ನೂ ಕಟ್ಟಿಕೊಂಡು ಊರಿಗೆ ಹೊರಟೆ.
ಅಂತೂ ಶಿರಸಿ ತಲುಪಿದ್ದೆ.
ಊರಿಗೆ ಬಂದಮೇಲೆ, ವಾಟ್ಸ್ಯಾಪ್ನೋಡಿದ್ರೆ,
ನನ್ನ ಗಂಡನ ಮೆಸೇಜ್ ಇತ್ತು. ಕೈಗೆ
ಗ್ಲೌಸ್, ಮುಖಕ್ಕೆ ಮಾಸ್ಕ್, ಪ್ಯಾಂಟ್ ಕಿಸೆಯಲ್ಲಿಯೇ
ಸ್ಯಾನಿಟೈಸರ್ ಬಾಟಲ್ ಇಟ್ಟುಕೊಂಡು
ಅತೀವ ಜಾಗರೂಕತೆಯಿಂದ ತಾನು ಫ್ಲೈಟ್ ಸೀಟ್ನಲ್ಲಿ
ಕುಳಿತಿರೋ ಫೋಟೋ ಕಳಿಸಿದ್ದರು. ಜತೆಗೆ ‘ರೀಚ್ಡ್
ಸೇಫ್ಲಿ’ ಅಂತ ಮುದ್ದಾಗಿ ಟೈಪಿಸಿದ್ದರು. ನನಗೋ ಕುವೈತ್ನಿಂದ
ಸುರುಕ್ಷಿತವಾಗಿ ಮನೆಗೆ ರೀಚ್ ಆದ್ರಲ್ಲಾ ಅನ್ನೋ ಸಮಾಧಾನ
ಒಂದ್ಕಡೆಯಾದ್ರೆ, ಕರೊನಾ ಅಂಟಿದೆಯೋ ಇಲ್ವೋ ಅಂತ ತಿಳ್ಕೊಳೋಕೆ ಇನ್ನೂ
15 ದಿನ ಕಾಯಲೇಬೇಕು ಅನ್ನೋ ಚಡಪಡಿಕೆ ಇನ್ನೊಂದು ಕಡೆ
!.
ವಿನಯ್ ಬಂದು 11 ದಿನ ಕಳೆಯುವಷ್ಟರಲ್ಲಿ ಅಂದ್ರೆ, ಮಾರ್ಚ್ 24 ರಿಂದ 21 ದಿನಗಳು ಸಂಪೂರ್ಣ ಲಾಕ್ಡೌನ್ ಘೋಷಣೆಯಾಯ್ತು.
ಪ್ರತಿಯೊಬ್ಬರೂ ಮನೆಯೊಳಗೆ ಬಂಧಿಯಾದರು. ಬಸ್ಸು, ರೈಲು,
ವಿಮಾನು ಸಂಚಾರ ನಿಂತುಹೋಯ್ತು. ಅಂಗಡಿಗಳು, ಆಫೀಸ್ಗಳು,
ಶಾಲಾ ಕಾಲೇಜುಗಳು, ಶಾಪಿಂಗ್ ಮಾಲ್ಗಳು, ಸಿನಿಮಾ ಥಿಯೇಟರ್ಸ್ ಹೀಗೆ ಎಲ್ಲವೂ ಬಂದ್ ಆದ್ವು. ಹದಿನೈದು ದಿನಕ್ಕಾಗಿ ಊರಿಗೆ ಬಂದಿರೋ ನಾನು ಮತ್ತು
ನನ್ನ ಮಗ ಊರಿನಲ್ಲೇ ಉಳಿದುಹೋದ್ವಿ.
ದಿನದಿಂದ
ದಿನಕ್ಕೆ ಕೊರೊನಾ ಸಂಖ್ಯೆ ಜಾಸ್ತಿ ಆಗ್ತಿದ್ದಂತೆ, ಸುಳ್ಳುಸುದ್ದಿಗಳ ಹಾವಳಿಯೂ
ಜಾಸ್ತಿಯಾಗ್ತಾ ಹೋಯ್ತು. ’ಅದ್ಯಾವುದೋ ನಗರ,
ಆ ನಗರದ ಮೂಲೆ ಮೂಲೆಗಳಲ್ಲಿ ರೋಗಿಗಳು ! ಅವರೆಲ್ಲ ಸಾವು ಬದುಕಿನ ನಡುವೆ
ಹೆಣಗಾಡ್ತಾ ಇದ್ರೆ, ರಸ್ತೆಯಲ್ಲಿ ಹೋಗ್ತಿರೋ ಜನ ದೂರದಿಂದಲೇ ಇವರ ನರಳಾಟ ನೋಡ್ತಾ ತಮ್ಮಪಾಡಿಗೆ ತಾವು ಹೊರಟು
ಹೋಗ್ತಿದ್ದಾರೆ. ಇಂಥ ಕರುಣಾ ಜನಕ ವೀಡಿಯೋ ಅಸಹ್ಯ
ಭಯ ಹುಟ್ಟಿಸ್ತಾ ಇತ್ತು. ಮತ್ತೊಂದು
ವಿಡಿಯೋದಲ್ಲಂತೂ, ಕೊರೊನಾ
ರೋಗಿ ಅಂತ ಬಿಂಬಿಸಲಾಗಿದ್ದ ಒಬ್ಬ ಯುವಕ ಸೋಫಾದ ಮೇಲೆ ಮಲಗಿ ಉಸಿರಾಡಲು ಹರಸಾಹಸ ಪಡ್ತಿದ್ದ. ಯಾರೋ
ಆತನ ಉಸಿಗಟ್ಟಿಸಿ ಸಾಯಿಸ್ತಾ ಇದ್ದಾರೇನೋ ಎಂಬಂತೆ ಚಡಪಡಿಸ್ತಾ ಇದ್ದ ಆತನ ಕಷ್ಟವನ್ನ ನೋಡಿದ್ರೆ ಮೈ ಬೆವೆತುಹೋಗುತ್ತಿತ್ತು. ಇಡೀದಿನ ಇಂಥ ವಿಡಿಯೋಗಳ ಬಗ್ಗೆ ಯೋಚಿಸ್ತಾ ಇದ್ದ ನನಗೆ
ರಾತ್ರಿ ನಿದ್ದೆಯಲ್ಲಿಯೂ ಇಂಥದ್ದೇ ಕನಸು!
ಕೊರೊನಾ ಕುರಿತು ಬಂದ ಈ ಎಲ್ಲ ಸುಳ್ಳು ಸುದ್ದಿಗಳನ್ನ ಓದುತ್ತಿರುವ
ನಾನಂತೂ ಅದು ಸುಳ್ಳೋ, ನಿಜವೋ ಎಂಬುದನ್ನ ನಿರ್ಧರಿಸಲೂ ಆಗದ
ಮನಸ್ಥಿತಿಯಲ್ಲಿದ್ದೆ. ದೇವರಾಣೆ ಹೇಳ್ತೀನಿ.. ನಾವೆಲ್ಲ ಇನ್ನೆಷ್ಟ್ ದಿನ ಬದುಕ್ತೀವೋ ಏನೋ
ಅನ್ಕೊಂಡಿದ್ದೆ.
ಅಂತೂ
ಇದೆಲ್ಲದರ ಜೊತೆಗೆ ವಿನಯ್ ಕುವೈತ್ನಿಂದ ಬಂದು ಯಶಸ್ವಿ
13 ದಿನಗಳು ಕಳೆದಿದ್ದವು. ವಿನಯ್ಗೆ ಅದ್ಯಾವ ತಂಡಿ ಜ್ವರ ಕೆಮ್ಮು ಸೀನು ಕೂಡ ಬಂದಿರಲಿಲ್ಲ. ಆದರೆ ಕ್ವಾರಂಟೈನ್
ದಿನಗಳು ಮುಗಿಯಲು ಇನ್ನೊಂದೇ ದಿನ ಬಾಕಿ ಇದೆ ಅನ್ನುವಾಗಲೇ
ಮನೆಗೆ ಬಂದಿದ್ದ ಕೊರೊನಾ ಕಾರ್ಯಕರ್ತರು, ವಿನಯ್ಕೈಗೆ ಕ್ವಾರಂಟೈನ್
ಸೀಲ್ಹಾಕಿ ಹೋಗಿದ್ದರು. ಅಷ್ಟೇ ಅಲ್ದೇ,
ನಾವಿದ್ದ ಅಪಾರ್ಟ್ಮೆಂಟ್ನ ಎಂಟ್ರೆಸ್ನಲ್ಲಿ ಹೋಮ್ ಕ್ವಾರಂಟೈನ್ಒಬ್ಬರು ಇಲ್ಲಿದ್ದಾರೆ ಎಂದು ಸೂಚಿಸುವ ನೊಟೀಸ್ ಕೂಡ ಅಂಟಿಸಿಬಿಟ್ಟಿದ್ದರು. ಹೊಸದಾಗಿ ಅಪಾರ್ಟ್ಮೆಂಟ್ಗೆ ಬಂದಿದ್ದ ನಮ್ಮನ್ನು ವಿಶೇಷವಾಗಿ
ನೋಡುತ್ತಿದ್ದ ಇಲ್ಲಿಯ ಜನ ಈಗ ವಿನಯ್ನ್ನ ಕಂಡ್ರೆ
ಮೂರಡಿ ಮುಂದಕ್ಕೆ ಹಾರಲು ಶುರುಹಚ್ಚಿಕೊಂಡ್ರು.
ಆವತ್ತೇ ನ್ಯೂಸ್ಚಾನಲ್ನಲ್ಲೊಂದು ಸುದ್ದಿ ಹೈಪ್ ಆಗಿತ್ತು. ಕ್ವಾರಂಟೈನ್ ಸೀಲ್ ಹಾಕಿಸಿಕೊಂಡಿದ್ದ ವ್ಯಕ್ತಿಯೊಬ್ಬ ಅಲೆದಾಡುತ್ತಿರುವ, ಮತ್ತು ಅವನನ್ನು ಪೊಲೀಸರು ಬಂಧಿಸಿರುವ ದೃಶ್ಯ ಮತ್ತೆ ಮತ್ತೆ ಪ್ರಸಾರವಾಗ್ತಾ ಇತ್ತು. ಜತೆಗೆ ಬ್ಯಾಕ್ಗ್ರೌಂಡ್ನಲ್ಲಿ
‘ ಇಂಥವರನ್ನ ಜೈಲಿಗೆ ಹಾಕಿ ನಾಲ್ಕು ದಿನ ರುಬ್ಬಬೇಕು, ಹಾಗೇ ಬಿಡಬಾರ್ದು
ಇವ್ರನ್ನ’ ಅನ್ನೋ ಆಂಕರ್ನ ಧ್ವನಿ..! ಈ ನ್ಯೂಸ್
ನೋಡ್ತಾ ನೋಡ್ತಾ ನನ್ನ ಗಂಟಲು ಒಣಗಿತ್ತು. ಆಗಿಂದಾಗ್ಲೇ ವಿನಯ್ಗೆ ಕಾಲ್ಮಾಡಿ ಆ ಸೀಲ್ ಅಳಿಸಿ ಹೋಗೋವರೆಗೂ ಹೊರಗೆ ಮಾತ್ರ ಹೋಗಬೇಡಿ ದಮ್ಮಯ್ಯ.! ಅಂತ ಕೈ ಮುಗಿದಿದ್ದೆ.
ಈ
ಮಧ್ಯೆ , ಕೊರೊನಾ ವಾರಿಯರ್ಸ್ಗೆ ಗೌರವ
ಸೂಚಕವಾಗಿ ಚಪ್ಪಾಳೆ ತಟ್ಟಿ , ಜಾಗಟೆ ಬಾರಿಸಿ ದೀಪ ಬೆಳಗಿ
ಗೌರವ ಸೂಚಿಸುವ ಮೋದಿಜಿ ಕರೆಗೆ ನಾವೆಲ್ಲ
ಊರಲ್ಲೇ ಒಟ್ಟಾಗಿ ಓಗುಟ್ಟುತ್ತಿದ್ದರೆ, ವಿನಯ್ ಒಬ್ಬರೇ, ಯಾರ್ಯಾರೂ ಪರಿಚಯವಿರದ ಅಪಾರ್ಟ್ಮೆಂಟ್ನ ಮನೆಯಲ್ಲಿ ಒಬ್ಬರೇ ಕುಳಿತು ಜಾಗಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದರಂತೆ. ಪಾಪ!
ಈ ಪರಿಸ್ಥಿತಿಗೆ ನಗಬೇಕೋ, ಅಳಬೇಕೋ ನನಗೆ ತಿಳಿದಿರಲಿಲ್ಲ ನೋಡಿ..!
ಹೀಗೆ
ಒಂದನೇ ಲಾಕ್ಡೌನ್ಮುಗಿದು, ಎರಡನೇ ಲಾಕ್ಡೌನ್ ಸಂಪನ್ನಗೊಂಡು, ಮೂರನೇ ಲಾಕ್ಡೌನ್ ಕೂಡ ಮುಗಿತಾ
ಬಂದಿತ್ತು. ಅಂದ್ರೆ, ಅದಾಗಲೇ ಮೇ ತಿಂಗಳು ಆರಂಭವಾಗಿತ್ತು. ಆದರೆ,
ಮಾರ್ಚ್ನಲ್ಲಿ ಊರಿಗೆ
ಬಂದಿದ್ದ ನಾನು ಮತ್ತು ನನ್ನ ಮಗ ಮಾತ್ರ ಇನ್ನೂ
ಊರಲ್ಲೇ ಇದ್ವಿ. ವಿನಯ್ ಒಬ್ಬರೇ ಗಡ್ಡಧಾರಿಯಾಗಿ ಮನೆಯಲ್ಲಿಒಂಟಿಯಾಗಿದ್ದರು. ತುಂಬಾ ದಿನಗಳಿಂದ ಅಪ್ಪನ್ನ ನೋಡದ ಮಗನಿಗಂತೂ ಅಪ್ಪನನ್ನ ಎಂದು ಕಂಡೆನೋ ಅನ್ನೋ ಹಂಬಲ.
ಅಂತೂ
ಮೂರನೇ ಲಾಕ್ಡೌನ್ಕೂಡ ಮುಗಿದಮೇಲೆ ನಾವು ಬೆಂಗಳೂರಿಗೆ ಹೋಗಲೇಬೇಕು ಅಂತ ನಿರ್ಧಾರ
ಮಾಡಿದ್ವಿ. ಆದರೆ, ಹೇಗೆ ಹೋಗೋದು ಎಂಬುದರ ಬಗ್ಗೆ ಏನೂ ಸ್ಪಷ್ಟತೆ ಇರಲಿಲ್ಲ. ಆ ಸಮಯದಲ್ಲಿ ಬೆಂಗಳೂರಿನಿಂದ ಯಾರೂ ಶಿರಸಿಗೆ
ಬರುವಂತಿರಲಿಲ್ಲ. ಬಂದ್ರೂ ಅವರು, 14 ದಿನಗಳ ಕಾಲ ಇನ್ಸ್ಟಿಟ್ಯೂಶನಲ್
ಕ್ವಾರಂಟೈನ್ ಆಗಿರಬೇಕಿತ್ತು. ಆದರೆ, ಸ್ವಂತ ವಾಹನದಲ್ಲಿ
ಬಂದು ಆಗಿಂದಾಗ್ಗೆ ಹೊರಟುಹೋಗುವುದಿದ್ದರೆ ಮಾತ್ರ ಬರಲು ಅವಕಾಶವಿತ್ತು. ಆಗಲೇ, 24 ಗಂಟೆಗಳ ’ಒನ್ಡೇ ಪಾಸ್’ ವಿನಯ್ ಗೆ
ಸಿಕ್ಕಿತ್ತು.
ಒಂದೇ
ದಿನ ಬೆಂಗಳೂರಿನಿಂದ ಶಿರಸಿಗೆ ಬಂದು ತಕ್ಷಣ
ವಾಪಾಸ್ ಹೋಗೋದು ಕಷ್ಟ ಎಂಬ ಕಾರಣಕ್ಕೆ, ಅರ್ಧ ದಾರಿಯನ್ನ ಉಳಿಸುವ
ಪ್ಲ್ಯಾನ್ ಮಾಡಿದ್ವಿ. ಚಿತ್ರದುರ್ಗವನ್ನ ನಮ್ಮ
ಮೀಟಿಂಗ್ ಪಾಯಿಂಟ್ ಮಾಡಿಕೊಂಡ್ವಿ. ಆದ್ರೆ,
ಶಿರಸಿಯಿಂದ ನಮ್ಮನ್ನ ಚಿತ್ರದುರ್ಗದ ತನಕ ಬಿಡಲು ಬಾಡಿಗೆ ಕಾರು ಬೇಕಲ್ಲಾ..? ಆ ಸಂದರ್ಭ ಹೇಗಿತ್ತೆಂದರೆ, ಎಷ್ಟು ದುಡ್ಡು ಕೊಟ್ಟರೂ ಬಾಡಿಗೆ
ಕಾರು ಕೂಡ ಸಿಗ್ತಾ ಇರಲಿಲ್ಲ. ಕೊನೆಗೆ ಉದಯವಾಣಿ ಪತ್ರಕರ್ತರಾದ ಗುರು ಹೆಗಡೆಯವರ ಸಹಾಯದಿಂದ ಬಾಡಿಗೆ ಕಾರಿನ ವ್ಯವಸ್ಥೆಯಾಯಿತು. ಹಾಗೇ, ಶಿರಸಿಯಿಂದ ಚಿತ್ರದುರ್ಗಕ್ಕೆ ಹೋಗಲು ಪಾಸ್ ಕೂಡ ಸಿಕ್ತು.
ಮೇ 5ನೇ ತಾರೀಖು ಅಂತೂ
ನಮ್ಮ ಸವಾರಿ ಬೆಳಗ್ಗೆ 6 ಗಂಟೆಗೆ ಶಿರಸಿಯಿಂದ ಹೊರಟರೆ, ಅದೇ ಸಮಯಕ್ಕೆ ಸರಿಯಾಗಿ ವಿನಯ್
ಸವಾರಿ ಬೆಂಗಳೂರಿನಿಂದ ಹೊರಟಿತ್ತು. ವಿನಯ್ಗೆ ಅವರ ತಮ್ಮ ವಿಜಯ್ಕೂಡ ಸಾಥ್ ನೀಡಿ ನಮ್ಮ ಕಾರ್ಗೆ
ಅವರೇ ಸಾರಥಿಯಾದ್ರು. ನಾಲ್ಕು ಜನರಿಗಾಗುವಷ್ಟು
ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಕಟ್ಟಿಕೊಂಡು, ಫೇಸ್ಮಾಸ್ಕ್ ಹಾಕಿಕೊಂಡು ಗಡಿಬಿಡಿಯಲ್ಲಿ ಬೆಳ್ಳಬೆಳಗ್ಗೆ ಹೊರಟಿದ್ದ ನನಗೆ, ನನ್ನ ಮಾವ ಬದಿಯಲ್ಲಿ ಕರೆದು
ಕಿವಿಯಲ್ಲಿ ಹೇಳಿದ್ದರು. ‘ ಪಾಪ ಆ ಡ್ರೈವರ್
ಏನ್ತಿಂದಿದಾರೋ ಇಲ್ವೋ ಗೊತ್ತಿಲ್ಲ, ತಿಂಡಿ ತಿನ್ನುವಾಗ ಅವರಿಗೂ ಸ್ಪಲ್ಪ ಕೊಟ್ಟುಕೊಂಡು ತಿನ್ನು ಆಯ್ತಾ..?’ ಅಂದ್ರು. ನಾನು ಆಯ್ತು ಮಾವಾ
ಅಂದೆ.
ಜಿಲ್ಲಾ
ಗಡಿಗಳಲ್ಲಿದ್ದ ಎಲ್ಲಾ ಚೆಕ್ಪೋಸ್ಟ್ಗಳಲ್ಲಿಯೂ
ನಮ್ಮ ಪಾಸ್ ತೋರಿಸ್ತಾ, ಅವರಿಂದ ಮುಂದೆ ಹೋಗಲು ಒಪ್ಪಿಗೆ
ಪಡೆದುಕೊಳ್ತಾ ಡ್ರೈವರ್ ನಮ್ಮನ್ನ ಗಡಿದಾಟಿಸ್ತಾ ಇದ್ರು. ಸಾಗರ, ಶಿವಮೊಗ್ಗ, ಚಿತ್ರದುರ್ಗದ ಹೀಗೆ ಎಲ್ಲ ಗಡಿಗಳಲ್ಲಿಯೂ ಹತ್ತತ್ತು ನಿಮಿಷ ನಿಂತಿದ್ದಾಯ್ತು. ನಮ್ಮ ಡ್ರೈವರ್ ಆ ಎಲ್ಲಾ ಚೆಕ್ಪೋಸ್ಟ್ನಲ್ಲಿಯೂ ನಮ್ಮ ಪಾಸ್ತೋರಿಸಿ ಅವರಿಂದ ಒಪ್ಪಿಗೆ ಪಡೆದೊಂಡು
ಬರ್ತಾ ಇದ್ರು. ಎಲ್ಲಾ ಚೆಕ್ಪೋಸ್ಟ್ಗಳಲ್ಲಿರುವ
ಪೊಲೀಸರೂ ಕೂಡ ನಮ್ಮನ್ನು ಪರೀಕ್ಷಿಸಿದ್ದಲ್ದೇ
ಎಲ್ಲಿಗೆ ಹೋಗ್ತಿದ್ದೀರಿ..? ಯಾಕೆ ಹೋಗ್ತಿದ್ದೀರಿ..?
ಅಂತ ಪ್ರಶ್ನಿಸ್ತಿದ್ರು. ಅವರು ಕೇಳುತ್ತಿರುವ ಪ್ರಶ್ನೆ ನೋಡಿದ್ರೆ, ಅದೆಲ್ಲಿ ನಮ್ಮನ್ನ ಮತ್ತೆ
ವಾಪಾಸ್ಕಳಿಸಿಬಿಡ್ತಾರೋ ಅನ್ನೋ ಭಯ ಬೇರೆ.
ಅದೃಷ್ಟವಶಾತ್ ನಮ್ಮನ್ನ ಅವರು
ವಾಪಾಸ್ಕಳಿಸಲಿಲ್ಲ. ಆದರೆ ಅದೇ ಟೆನ್ಶನ್ಲ್ಲಿದ್ದ ಡ್ರೈವರ್ ಚೆಕ್ಪೋಸ್ಟ್ ಕಂಡ ತಕ್ಷಣ
ಬೆವೆತು ಹೋಗ್ತಿದ್ರು. ಯಾವಾಗ ಇವರನ್ನ ಚಿತ್ರದುರ್ಗ ತಲುಪಿಸಿ, ವಾಪಾಸ್ಹೋಗ್ತೀನೋ.. ಅನ್ನೋ ಯೋಚನೆಯಲ್ಲಿಯೇ ಕಾರು ಓಡಿಸುತ್ತಿದ್ದ ಆ ಡ್ರೈವರ್ಗೆ
ನಾನು ಯಾವಾಗ ತಿಂಡಿ ಕೊಡಲಿ ಹೇಳಿ..?
ನಾನು ಮಾವಂಗೆ ಕೊಟ್ಟ
ಮಾತು ಮಾತ್ರ ಹಾಗೆ ಉಳಿದಿತ್ತು.
ಅಂತೂ
ಚಿತ್ರದುರ್ಗವನ್ನ ನಾವು ತಲುಪಿದಾಗ ಬೆಳಗ್ಗೆ 10 ಗಂಟೆ. ಸಮಯಕ್ಕೆ ಸರಿಯಾಗಿ ವಿನಯ್, ವಿಜಯ್
ಸವಾರಿ ಕೂಡ ಅಲ್ಲಿಗೆ ಬಂದಿತ್ತು. ನಾವು ಈ ಕಾರ್ನಿಂದ ಆ ಕಾರ್ಗೆ
ಲಗೇಜುಗಳ ಸಮೇತ ಶಿಫ್ಟ್ ಆದ್ವಿ.
ಬರೋಬ್ಬರಿ 4 ತಿಂಗಳುಗಳಿಂದ ದೂರವಿದ್ದ ನಮಗೆ ಪರಸ್ಪರ ಮುಖ ಮುಖ ನೋಡಿಕೊಳ್ಳೋದೇ ಒಂದು ಸಂಭ್ರಮ. ನನ್ನ ಮಗನಂತೂ ಅಪ್ಪಾ... ಅಂತ ಕಿರುಚುತ್ತ ಅಪ್ಪನ ಮೈ
ಹತ್ತಿ ಕುಳಿತೇಬಿಟ್ಟಿದ್ದ. ಇಲ್ಲಿಗೆ ವಿನಯ್ನ 3
ತಿಂಗಳ ಸುದೀರ್ಘ ಕ್ವಾರಂಟೈನ್ ಪೀರಿಯಡ್ ಅಂತೂ ಇಂತೂ ಮುಕ್ತಾಯ ಕಂಡಿತ್ತು.
ಆರಾಮಾಗಿ
ಬೆಂಗಳೂರಿಗೆ ಬಂದಿಳಿದ ಸುದ್ದಿ ತಿಳಿಸೋಕೆ ನಾನು ನನ್ನ ಮಾವಂಗೆ ಕಾಲ್ಮಾಡಿದರೆ, ಅವರು ಕೇಳಿದ ಮೊದಲ ಪ್ರಶ್ನೆ ಯಾವುದು
ಗೊತ್ತಾ..? `ಅದೆಲ್ಲ ಸರಿ...
ಬೆಳಗ್ಗೆ ಆ ಕಾರ್ ಡ್ರೈವರ್ಗೆ ತಿಂಡಿ ಕೊಟ್ಟಿದ್ಯಾ..?’ ಅಂತ..!