Thursday, 16 March 2017

ಹುಟ್ಟು ಹಬ್ಬದ ಶುಭಾಶಯಗಳು ಕಂದಾ..



ನನ್ನ ಅಥರ್ವ. ನೀನು ಹುಟ್ಟಿ ಇಂದಿಗೆ ಒಂದು ವರ್ಷ. 2015 ಮುಗಿದು 2016 ಕಾಲಿಡ್ತಾ ಇದ್ದಂತೆ ನೀ ನನ್ನ ಮಡಿಲಿಗೆ ಬಂದೆ. ಅಂದಿನಿಂದ ನನ್ನ ಪ್ರತಿ ದಿನ, ಪ್ರತಿ ಕ್ಷಣ ಎಲ್ಲವೂ ಅಥರ್ವಮಯ. ಈ ಒಂದು ವರ್ಷದಲ್ಲಿ ನಾನು ನಿನ್ನ ಬಿಟ್ಟು ಇರೋ ನಿಮಿಷಗಳೇ ಬೆರಳೆಣಿಕೆಯಷ್ಟು. ಅಕ್ಷರಷಃ ಅದನ್ನ ಲೆಕ್ಕಹಾಕಬಹುದೇನೋ.

ಅದೆಷ್ಟು ಬೇಗ ಒಂದು ವರ್ಷ ಕಳೆದುಹೋಯ್ತು ಕಂದ..! ಮೊನ್ನೆ ಮೊನ್ನೆಯಷ್ಟೇ ನೀ ನನ್ನ ಜೀವನಕ್ಕೆ ಬಂದ ಹಾಗಿದೆ. ನೀ ಬಂದ ಮೇಲಂತೂ ದಿನಗಳು ಓಡುತ್ತಿವೆ. ಪ್ರತಿ ಬೆಳಗೂ ನನಗೆ ಹೊಸತು. ನಿನ್ನ ಬೆಳವಣಿಗೆಯೇ ನನಗೆ ದೊಡ್ಡ ಕೌತುಕ. ನಾನೊಂದು ಕ್ಷಣ ಮರೆಯಾದರೂ ನೀ ನನ್ನ ಹುಡುಕುವ ರೀತಿ.., ನಾ ಕಂಡ ಕ್ಷಣ ನಿನ್ನ ಕಣ್ಣಲ್ಲಿ ಕಾಣೋ ಹೊಳಪು.., ನನಗಾಗಿ ನೀ ಹಂಬಲಿಸೋ ಪರಿ ಇವೆಲ್ಲ ನನಗೇನೋ ಸುಖ ನೀಡುತ್ವೆ. ಅದು ತಾಯ್ತನದ ಹೆಮ್ಮೆಯೋ..ಗೊತ್ತಿಲ್ಲ. ನೀ ನನಗಾಗಿ ಹುಡುಕಾಡ್ತಾ ಅಳ್ತಾ ಇದ್ರೆ, ಎರಡು ಕ್ಷಣ ಮರೆಯಲ್ಲಿ ನಿಂತು ನಾ ನಿನ್ನ ನೋಡ್ತೀನಿ. ನೀ ನನ್ನ ಮತ್ತಷ್ಟು ಹಂಬಲಿಸಲಿ ಅನ್ನೋ ಸ್ವಾರ್ಥ ಅದು. ನನ್ನ ಬಾಯಲ್ಲೀಗ..ಪದೆ ಪದೆ ಬರೋ ಚಿನ್ನು, ಚಿನ್ನುಮರಿ, ಪುಟಾಣಿ, ಪುಟ್ಟು, ಜಾಣು,ಕಂದ, ಗುಬ್ಬಿ, ಗುಬ್ಬಚ್ಚಿ, ಪಾಪಚ್ಚಿ ಅನ್ನೋ ಮುದ್ದು ಶಬ್ಧಗಳದ್ದೇ ಕಾರುಬಾರು. ಮುಂಚೆ ಎಲ್ಲಿದ್ದವೋ ಆ ಪದಗಳು..!

ನೀನು ಹುಟ್ಟುತ್ತಿದ್ದಂತೆ..ನಾನೂ ಕೂಡ ಹುಟ್ಟಿದೆ, ನಿನ್ನ ಅಮ್ಮನಾಗಿ..!  ಹೊಟ್ಟೆಯಿಂದ ಆಗಷ್ಟೇ ಹೊರಬಂದ ನಿನ್ನ ಎತ್ತಿಕೊಳ್ಳುವುದರಿಂದ ಹಿಡಿದು ಎಲ್ಲವೂ ನನಗೆ ಹೊಸತು. ಮಗುವಿನ ಪಾಲನೆಯ ಶಾಲೆಗೆ ನಿನ್ನಜ್ಜಿ ಶಿಕ್ಷಕಿಯಾದ್ರೆ ನಾನು ವಿದ್ಯಾರ್ಥಿನಿ. ಆಕೆ ಹೇಳಿಕೊಟ್ಟ ಎಲ್ಲವನ್ನೂ ನಿನಗಾಗಿ  ಕಲಿಯೋಕೆ ಶುರುಮಾಡಿದೆ.

ನೀ ಅತ್ತರೆ ಸಾಕು, 'ಲಾಲಿ ಎಂದರೆ ಬಾಲ.. ಆಲೈಸಿ ಕೇಳುವನು... ಹಾಲ ಹಂಬಲನೆ ಮರೆವನು.'. ಎಂಬ ಜೋಗುಳ ಪದ್ಯ ಶುರುವಾಗುತ್ತಿತ್ತು. ಆ ಜೋಗಳಕ್ಕೆ ನಿನ್ನ ಅಳುವಿನ ಹಿನ್ನಲೆ. ನಿನ್ನಿಂದಾಗಿ ನನ್ನಜ್ಜಿಯ ಜೋಗುಳ ಪದ ಮನೆ-ಮನ ತುಂಬಿಕೊಂಡಿತ್ತು. ಪುಟ್ಟ ಪುಟ್ಟ ಬಟ್ಟೆಗಳು, ಬಣ್ಣ ಬಣ್ಣದ ದುಪ್ಪಟಿ, ಧೂಪದ ಪರಿಮಳ, ಜೋಗುಳದ ದನಿ, ತೊಟ್ಟಿಲಿನ ಕಿರ್‌ ಅನ್ನೋ ಶಬ್ಧ ಇವೆಲ್ಲ ನೀ ಬಂದ ಸಡಗರವನ್ನ ಹೇಳ್ತಾ ಇದ್ದವು. ಬಟ್ಟೆ ಒಣಹಾಕೋ ಹಗ್ಗ ಕೂಡ ನಿನ್ನ ಬಟ್ಟೆಗಳಿಗೇ ಮೊದಲ ಪ್ರಾಶಸ್ತ್ಯ ಕೊಟ್ಟುಬಿಟ್ಟಿತ್ತು. ಅಷ್ಟರಮಟ್ಟಿಗೆ ನನ್ನಮ್ಮನ ಮನೆಯ ಪ್ರತಿ ವಸ್ತುವೂ ನಿನ್ನ ಆಗಮನವನ್ನ ಸಂಭ್ರಮಿಸೋಕೆ ಶುರು ಮಾಡಿದ್ದವು. ಒಂದು ವರ್ಷದಿಂದ ಅವಕ್ಕೆಲ್ಲ ನೀನೇ ಸ್ಪೂರ್ತಿಯಂತೆ..!

ಹುಟ್ಟಿ ಒಂದು ತಿಂಗಳಾಗುವಷ್ಟರಲ್ಲಿ ನನ್ನ ಮುಖ ನೋಡಿ ನಕ್ಕಿದ್ದೆ. ನಿನ್ನ ಆ ಒಂದು ಮುದ್ದು ನಗೆ ಕೋಟಿ ಗೆದ್ದಷ್ಟು ಖುಷಿಕೊಟ್ಟಿತ್ತು ನನಗೆ. ಮೊದಲು ನೀನು ಮಗುಚಿದ್ದು, ಮುಂದಕ್ಕೆ ಹೋದದ್ದು, ಅಂಬೆಗಾಲಿಟ್ಟಿದ್ದು, ಹೆಜ್ಜೆಇಟ್ಟು ನಡೆದಿದ್ದು ಈ ಎಲ್ಲ ನಿನ್ನ ಮೊದಲುಗಳೂ.. ನನ್ನ ಖುಷಿಯ ಮೈಲುಗಲ್ಲುಗಳು...!

ನನ್ನ ಮುದ್ದು ಕಂದನ ಮೊದಲ ಹುಟ್ಟು ಹಬ್ಬ ಇಂದು. ಇಂಥ ನೂರಾರು ಹುಟ್ಟು ಹಬ್ಬಗಳು ನಿನ್ನ ಬಾಳಲ್ಲಿ ಬರಲಿ.

ಹುಟ್ಟು ಹಬ್ಬದ ಶುಭಾಶಯಗಳು ಕಂದಾ..

ಮುದುಡಿದ ಮನಸ್ಸು..




ಪೆನ್ನಿಗಾಗಿ ಹುಡುಕಾಡ್ತಾ ನನ್ನ ಬ್ಯಾಗ್ ತೆರೆದೆ, ಕೈಗೆ ಸಿಕ್ಕವು ಆರೆಂಟು ಚಾಕ್ಲೇಟುಗಳು. ಆ ಚಾಕಲೇಟುಗಳ ರ್ಯಾಪರ್ ಸದ್ದಿನಿಂದ ನನ್ನ ಮನಸ್ಸಿಗೇನೋ ಚುಚ್ಚಿದ ಅನುಭವ. ಮನಸ್ಸಿಗೆ ತಾಕಿದ ಆ ಶಬ್ಧಕ್ಕೆ ಕಣ್ಣೀರು ಒತ್ತರಿಸಿಬಂದು ಕಣ್ಣಾಲೆಗಳು ತುಂಬಿಕೊಂಡ್ವು. ಹೇಳಲಸಾಧ್ಯ ನೋವು ಎದೆಗಂಟಿದಂತೆ ಭಾಸವಾಯ್ತು. ಚಾಕ್ಲೇಟುಗಳಿರೋ ಆ ಖಾನೆಯನ್ನೇ ಮುಚ್ಚಿ ಬ್ಯಾಗ್ನ್ನ ಪಕ್ಕಕ್ಕಿಟ್ಟು ನೀರು ಗುಟುಕಿಸಿದೆ. ಉಮ್ಮಳಿಸಿ ಬರುತ್ತಿದ್ದ ದುಃಖದಿಂದಲೋ ಏನೋ ನೀರು ಕೂಡ ಗಂಟಲಿನಿಂದಿಳಿಯಲಿಲ್ಲ. ಕೊನೆಗೂ ದುಃಖ ತಡೆಯದೇ ಕಣ್ಣಿನಿಂದಿಳಿದು ಬಂತು ಕಣ್ಣೀರು.. ಸಹೋದ್ಯೋಗಿ ಗೆಳತಿಯ ಸಾಂತ್ವನದ ಸ್ಪರ್ಷಕ್ಕೆ ಉತ್ತರಿಸಿದ್ದೂ ಕೂಡ ನನ್ನ ಕಂಬನಿಯೇ..

ಆ ಪುಟಾಣಿಯ ಮೇಲೆ ನನಗೇಕೋ ತುಂಬು ಅಕ್ಕರೆ. ಹೇಳಿಕೊಳ್ಳಲಾಗದ ಪ್ರೀತಿ. ಅವಳ ಗುಳಿಬೀಳುವ ಕೆನ್ನೆಗಳು, ಚುರುಕು ನೋಟ, ಆಟ ಪಾಠ ಎಲ್ಲವೂ ನನಗೆ ಅಚ್ಚುಮೆಚ್ಚು. ಒಂದು ದಿನ ಅವಳು ನನಗೆ ಕಂಡಿಲ್ಲವೆಂದರೂ ಅದೇನೋ ಕಳೆದುಕೊಂಡ ಭಾವ. ನಾನು ಕಚೇರಿಯಿಂದ ಬರುವುದನ್ನೇ ಕಾಯುತ್ತಿದ್ದ ಅವಳು, ನಾನು ಬಂದ ತಕ್ಷಣ ಓಡಿಬಂದು ಆಗಷ್ಟೇ ಮೊಳಕೆಯೊಡೆಯೊತ್ತಿದ್ದ ಮುಂದಿನೆರಡು ಹಲ್ಲುಬಿದ್ದ ದಂತದಲ್ಲಿಯೇ ಮುದ್ದು ನಗು ನಕ್ಕುಬಿಡುವವಳು.  ಇಡೀ ದಿನ ಶಾಲೆಯಲ್ಲಿ  ತಾನು ಕಲಿತದ್ದು, ಆಡಿದ್ದು ಓಡಿದ್ದನ್ನೆಲ್ಲ ನನಗೆ ಹೇಳಿದಂತೂ ಆಕೆಗೆ ಸಮಾಧಾನವೇ ಇಲ್ಲ. ಎಲ್ಲ ಸುದ್ದಿಯೂ ಮುಗಿದ ಮೇಲೆ ನಿಧಾನವಾಗಿ ನನ್ನ ಬ್ಯಾಗ್ ಹುಡುಕಿ ಅದರಲ್ಲಿದ್ದ ಚಾಕ್ಲೇಟುಗಳನ್ನ ಕೈತುಂಬಿಸಿಕೊಂಡು ಕಣ್ಣಲ್ಲೇ ನಗುವವಳು. ಚಾಕ್ಲೇಟ್ ತಿನ್ನುತ್ತಾ ಮೆಟ್ಟಿಲಿಳಿಯದೇ ಹಾರಿಕೊಂಡು ಹೋಗುವ ಚೂಟಿ ಬೇರೆ..!  'ಹೇ ಪುಟ್ಟಾ... ಬೀಳ್ತಿಯಾ ನಿಧಾನಕ್ಕೆ ಹೋಗು..' ಎಂಬ ನನ್ನ ಎಚ್ಚರಿಕೆ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳದೇ ಓಡಿಹೋಗುವವಳು.  ಪುಟಾಣಿ ಪುಟ್ಟಿ ನನಗೆ ಯಾವಾಗ ಸಿಕ್ಕರೂ ಅವಳ ಕೈಯ್ಯಲ್ಲೊಂದು ಚಾಕ್ಲೇಟು ಇಟ್ಟು, ಆ ಮುಗ್ಧ ಮುಖದ ಮುದ್ದು ನಗು ನೋಡಬೇಕು ಎಂಬ ಕಾರಣಕ್ಕೆ ನನ್ನ ಬ್ಯಾಗ್ನಲ್ಲಿ ಚಾಕ್ಲೇಟುಗಳಿಗೊಂದಷ್ಟು ಜಾಗ. ಅಂಗಡಿಗಳಲ್ಲಿ ಚಿಲ್ಲರೆಯ ಬದಲಾಗಿ ಚಾಕ್ಲೇಟ್ ಕೊಟ್ಟರೂ ನನಗೆ ಮೊದಲು ನೆನಪಾಗುವುದೇ ಪುಟ್ಟಿಯ ಮುದ್ದು ಮುಖ.

ಪುಟ್ಟಿಯ ಚಾಕ್ಲೇಟು ಆಸೆ ಅವರಮ್ಮನಿಗೂ ಗೊತ್ತಿದೆ. ಅದೆಷ್ಟು ಪ್ರಯತ್ನ ಮಾಡಿದರೂ ಅವರಿಂದ ಪುಟ್ಟಿಯ ಚಾಕ್ಲೇಟು ಆಸೆಯನ್ನ ಬಿಡಿಸೋಕಾಗಿಲ್ಲ. ಅವಳು ಚಾಕ್ಲೇಟು ತಿಂದಿರುವ ವಿಷಯವನ್ನ ಅಮ್ಮನಿಗೆ ಹೇಳೋದಿಲ್ಲ ಅಂತ ನಾನು ದಿನವೂ ಅವಳಿಗೆ ಪ್ರಾಮಿಸ್ ಮಾಡಲೇಬೇಕು. ಪ್ರಾಮಿಸ್ ಮಾಡುವತನಕ ಆಕೆ ಸುಮ್ಮನಾಗೋದಿಲ್ಲ. ಆಯ್ತಮ್ಮ ತಾಯಿ.. ಹೇಳಲ್ಲ ಪ್ರಾಮಿಸ್.. ಅಂತ ನಾನು ಹೇಳಿದಮೇಲೆಯೇ ಅವಳಿಗೆ ಸಮಾಧಾನ.

ಆದರೆ, ಆವತ್ತು ನಡೆದಿದ್ದೇನು ಎಂಬುದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಚಾಕ್ಲೇಟು ಆಸೆ ತೋರಿಸಿಯೇ ಪುಟ್ಟಿಯನ್ನ ಅವರು ಕರೆದೊಯ್ದಿರಬಹುದು ಅನ್ನೋದು ನಮ್ಮ ಊಹೆ.  ಅಲ್ಲಿ ಏನಾಯ್ತು ಅನ್ನೋದನ್ನ ಹೇಳೋಕೆ ಪುಟ್ಟಿಯಲ್ಲಿ ತ್ರಾಣವಿಲ್ಲ. ಕೃತಕ ಉಸಿರಾಟದ ಕವಚವನ್ನ ಮೂಗಿಗೆ ಹಾಕಿಕೊಂಡು, ಡ್ರಿಪ್ ಚುಚ್ಚಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಪುಟ್ಟಿ. ಆಕೆ ದಾಖಲಾಗಿರುವ ಆಸ್ಪತ್ರೆಗೆ ಗಣ್ಯರೇ ಬಂದು ಹೋದರೂ, ಎಷ್ಟೇ ಆಶ್ವಾಸನೆಗಳನ್ನ, ಸಾಂತ್ವನ ನೀಡಿದರೂ ಅವಳಮ್ಮನ ಕಿವಿಗಳಿಗೇನೂ ಕೇಳಿಸದು. ಅರೆಜೀವವಾಗಿ ಮಲಗಿರುವ ಮಗಳ ಚಿಂತೆಯಲ್ಲಿ ಐಸಿಯು ಕೊಠಡಿಯ ಹೊರಗೆ ಕುಸಿದು ಕುಳಿತಿದ್ದಾಳೆ ಆ ತಾಯಿ.  ಮಗಳ ಸ್ಥಿತಿಗೆ ಮನಸ್ಸು ಮರುಗುತ್ತಿದ್ದರೂ, ಹೆಂಡತಿಗೆ ಸಮಾಧಾನ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ ಆ ತಂದೆ..!
ಆಸ್ಪತ್ರೆಯ ಹೊರಗೆ, ಶಾಲೆಯ ಸುತ್ತ ತುಂಬಿರುವ ಜನ, ನಡೆಯುತ್ತಿರುವ ಪ್ರತಿಭಟನೆ, ಶಾಲಾ ಮುಖ್ಯಸ್ಥರ ಕಣ್ಣಾಮುಚ್ಚಾಲೆ ಇದ್ಯಾವುದರ ಪರಿವೆಯೂ ಇಲ್ಲ ನೊಂದ ಆ ಜೀವಗಳಿಗೆ.

ಹೇಳಿಕೊಳ್ಳುವದಕ್ಕದು ಪ್ರತಿಷ್ಠಿತ ಶಾಲೆ. ಆ ಶಾಲೆಯ ಒಳಗೆ ನಡೆದಿರೋದು ಮಾತ್ರ ವಿಕೃತತೆಯ ಪರಮಾವಧಿ.  ಆ ಮುದ್ದು ಮಗುವಿನ ಮೈಮೇಲೆ ನಡೆದದ್ದು ಬೆಚ್ಚಿಬೀಳಿಸುವ ಪೈಶಾಚಿಕ ಕೃತ್ಯ. ಕೃತ್ಯವೆಸಗಿದ ರಾಕ್ಷಸರ್ಯಾರೋ ಗೊತ್ತಿಲ್ಲ. ಅದನ್ನ ಹೇಳುವುದಕ್ಕೆ ಪುಟ್ಟಿಗಿನ್ನೂ ಎಚ್ಚರವೇ ಆಗಿಲ್ಲ. ಶಾಲೆಯೊಳಗೆ ತನಿಖೆ ನಡೆಯುತ್ತಿದೆ, ಹೊರಗೆ ಜನ ಸೇರಿದ್ದಾರೆ, ಮಾಧ್ಯಮಗಳು ನಿರಂತರ ಸುದ್ದಿ ಪ್ರಸಾರ ಮಾಡುತ್ತಿವೆ.. ವೈದ್ಯರು ಅವರ ಕೆಲಸ ಮಾಡಿದ್ದಾರೆ..  ಆದ್ರೆ, ಪುಟ್ಟಿಗೆ ಮಾತ್ರ ಪ್ರಜ್ಞೆಯೇ ಬಂದಿಲ್ಲ. ಅನುಮಾನಿತರನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರೂ ಕೂಡ ಪುಟ್ಟಿ ಎಚ್ಚರಗೊಳ್ಳುವುದನ್ನೇ ಕಾಯುತ್ತಿದ್ದಾರೆ.

ಕಚೇರಿಯಲ್ಲಿ ಕೂರಲಾಗದೇ ಮನೆಗೆ ಬಂದರೆ, ಅಲ್ಲಿ ಮನಸ್ಸಿಗೆ ಇನ್ನಷ್ಟು ಹಿಂಸೆ. ಪುಟ್ಟಿಯ ಮನೆಗೆ ಬೀಗ ಬಿದ್ದಿದೆ.. ಅವರೆಲ್ಲ ಆಸ್ಪತ್ರೆಯಲ್ಲಿಯೇ ಇದ್ದಾರೆ.. ಚೂಟಿ ಪುಟ್ಟಿಯ ಆಟ, ಓಡಾಟ, ಕುಣಿದಾಟವಿಲ್ಲದೆ ಶಾಂತವಾಗಿರುವ ನಮ್ಮ ವಠಾರ ಜೀವ ಕಳೆಯನ್ನೇ ಕಳೆದುಕೊಂಡಂತಿದೆ. ವಠಾರದ ಹೆಂಗಸರ ಗುಂಪು ಮಾತನಾಡುತ್ತಿರುವುದೂ ಅದನ್ನೇ. ಅಲ್ಲಲ್ಲಿ ಎರಡು ಮೂರು ಹೆಂಗಸರು ನಿಂತು ನಡೆದ ಘಟನೆಯನ್ನ ನೆನೆದು ನೆನೆದು ಲೊಚಗುಟ್ಟುತ್ತಿದ್ದಾರೆ.

ಹೆಂಗಸರ ಮೆಲುದನಿಯ ಮಾತುಗಳ ಶಬ್ಧ, ನನ್ನ ಕಿವಿಗೆ ಬೀಳಬಾರದೆಂಬ ಕಾರಣಕ್ಕೆ ಮನೆಯೊಳ ನಡೆದೆ. ಆದರೆ ಟಿವಿಯಲ್ಲಿ ಬರುತ್ತಿದ್ದ ನಿರಂತರ ವಾತರ್ೆಯ ಸದ್ದು ಕಿವಿಗೆ ಬಡಿಯುತ್ತಿತ್ತು. ಸುದ್ದಿವಾಹಿನಿಗಳಲ್ಲೂ ಎರಡು ದಿನಗಳಿಂದ ಬರೀ ಅದೇ ಸುದ್ದಿ.  ಆದರೆ, ಪ್ರಯೋಜನ ಏನು..? ಇಂಥ ಘಟನೆಗಳು ನಡೆದಾಗ  ಒಂದೆರಡು ದಿನ ಸುದ್ದಿ ಪ್ರಸಾರ ಮಾಡಿ ಮಾಧ್ಯಮಗಳು ಕೈತೊಳೆದುಕೊಂಡಂತೆ, ಜನರೂ ಮರೆತುಬಿಡುತ್ತಾರೆ. ಪ್ರಕರಣ ದಾಖಲಾಗುತ್ತೆ, ಪೊಲೀಸರೇನೋ ತನಿಖೆ ಮಾಡ್ತಾರೆ.. ಅಪರಾಧಿಗಳು ಸಿಕ್ಕರೆ ನಮ್ಮ ಅದೃಷ್ಟ.  ಸಿಕ್ಕ ಅಪರಾಧಿಗಳಿಗೂ ತಪ್ಪಿಸಿಕೊಳ್ಳೋಕೆ ಸಾವಿರ ತೂತುಗಳು ನಮ್ಮ ಕಾನೂನಲ್ಲಿ. ಇನ್ನೊಂದು ಇಂಥ ಘಟನೆಯಾಗುವ ತನಕ ಯಾರಿಗೂ ಈ ಅಮಾನವೀಯ ಕೃತ್ಯದ ನೆನಪು ಕೂಡ ಇರುವುದಿಲ್ಲ.

ಪುಟ್ಟಿಯಂಥ ಮುಗ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ. ನಮ್ಮ ದೇಶದಲ್ಲಂತೂ ಯಾವಾಗ ಬೇಕಾದರೂ ಲೈಂಗಿಕ ದೌರ್ಜನ್ಯ ಯಾವ ವಯಸ್ಸಿನ ಹೆಣ್ಣಿನ ಮೇಲೆ ಬೇಕಾದರೂ ನಡೆದುಹೋಗಬಹುದು.  ಪುಟ್ಟ ಹಸುಳೆಗಳ ಮೇಲೆ, ಪುಟಾಣಿ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನ ನೋಡಿದರೆ ನಾವಿರುವುದು ಎಂಥ ನರಕದಲ್ಲಿ ಎಂಬ ಅಸಹ್ಯ ಮೂಡುತ್ತದೆ. ಎಂಥ ಪೈಶಾಚಿಕ ಮನಸ್ಸಿನವರ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಭಾವ ಭಯ ಹುಟ್ಟಿಸುತ್ತದೆ.  ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳಿಗೆ ಸಮಾಜದ ಭದ್ರತೆ ಕೊಡುವಂಥ, ಮಾನಸಿಕ ಸ್ಥೈರ್ಯ ತುಂಬುವಂಥ, ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಧೈರ್ಯ ನೀಡುವಂಥ ವ್ಯವಸ್ಥೆ ನಮ್ಮ ದೇಶದಲ್ಲಿ ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ನೊಂದ ಜೀವಗಳು ಪ್ರಕರಣ ದಾಖಲಿಸುವುದಕ್ಕೇ ಹಿಂಜರಿಯುತ್ತಾರೆ. ಹೀಗಾಗಿ ಅಮಾನವೀಯ ಕೃತ್ಯಗಳು ಮುಚ್ಚಿಹೋಗುವ ಸಾಧ್ಯತೆಗಳೇ ಹೆಚ್ಚು.

ಪುಟ್ಟಿ ಚೇತರಿಸಿಕೊಂಡ ಮೇಲೆ ಅವಳನ್ನ ಆ ಆಘಾತದಿಂದ ಹೊರಗೆ ತರುವ ಸವಾಲಿದೆ ನಮ್ಮ ಮುಂದೆ.  ಆಗಷ್ಟೇ ಕಣ್ಣುಬಿಟ್ಟ ಪುಟ್ಟಿಯನ್ನ ಮುತ್ತಿಕೊಂಡು ಪೊಲೀಸರೇನೇನು ಪ್ರಶ್ನೆ ಕೇಳುತ್ತಾರೋ.. ಅದರಿಂದ ಅವಳ ಮನಸ್ಸಿಗೆ ಏನೇನು ಆಘಾತವಾಗುತ್ತೋ ಅನ್ನೋ ಭಯ ನನಗೆ. ಆದರೆ ಆ ಪಾಪಿಗಳು ಸಿಗಬೇಕು ಅಂದರೆ ಅವಳನ್ನ ಮಾತನಾಡಿಸಲೇ ಬೇಕಲ್ಲ.

ಅದೆಷ್ಟೋ ಹೊತ್ತಿನಿಂದ ಟಿವಿಯ ಮುಂದೆಯೇ ಕುಳಿತಿದ್ದೇನೆ. ಪುಟ್ಟಿಯ ಮೇಲೆ ನಡೆದ ಅಮಾನವೀಯ ಕೃತ್ಯದ ಬಗ್ಗೆ ಮತ್ತೆ ಮತ್ತೆ ಅದೇ ಸುದ್ದಿಯನ್ನ ಕೇಳಲು ಸಾಧ್ಯವಾಗದೇ ಚಡಪಡಿಸುತ್ತಿದೆ ನನ್ನ ಮನಸ್ಸು. ವಾಹಿನಿಗಳು,ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಲೇಬೇಕು. ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮದ ಜವಾಬ್ಧಾರಿಯಿದೆ ಅನ್ನೋದನ್ನ ನಾನು ಒಪ್ಪಿಕೊಳ್ಳುತ್ತೇನೆ ಆದರೆ, ಕೇವಲ ಘಟನೆ ನಡೆದ ಎರಡು ದಿನ ಅದೇ ಅದೇ ಸುದ್ದಿಯನ್ನ ಪ್ರಸಾರ ಮಾಡಿ, ಚಚರ್ೆ ನಡೆಸಿ ಬಿಟ್ಟುಬಿಟ್ಟರೆ ಸಂತ್ರಸ್ತೆಗೆ ನ್ಯಾಯ ಸಿಕ್ಕಂತಾಗುತ್ತದೆಯೇ..? ಆ ಪ್ರಕರಣದ ತನಿಖೆ ಎಲ್ಲಿಯ ತನಕ ಬಂದಿದೆ, ಹೇಗೆ ನಡೆಯುತ್ತಿದೆ ಅಪರಾಧಿಗಳು ಯಾರು ಅನ್ನೋದರ ಬಗ್ಗೆ ಸಕರ್ಾರಕ್ಕೆ, ಕಾನೂನಿಗೆ, ಪೊಲೀಸರಿಗೆ ಎಚ್ಚರಿಸುವ ಕೆಲಸವನ್ನ ಮಾಧ್ಯಮಗಳ ಮಾಡಬಹುದಲ್ಲವೇ? ಹಿಂದಿನ ಪ್ರಕರಣ ನೆನಪಾಗಲು ಮತ್ತೊಂದು ಪ್ರಕರಣವೇ ನಡೆಯಬೇಕೆ..?  ಇಂಥ ನನ್ನ ಗೊಂದಲದ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು..? ದೂರದರ್ಶನದ ಶಬ್ಧವನ್ನ ಕಡಿಮೆ ಮಾಡಿ, ನನ್ನ ಕೊಠಡಿ ಸೇರಿಕೊಂಡೆ.

ನೊಂದ ಮನಸ್ಸಿನೊಳಗೆ ಯೋಚನೆಗಳದೇ ಹೊಡೆದಾಟ. ಹಾಸಿಗೆಗೆ ಒರಗಿಕೊಂಡು ಕುಳಿತ ನನಗೆ ನನ್ನ ಹಳ್ಳಿ ನೆನಪಾಯ್ತು. ಹದಿನೈದು ವರ್ಷಗಳ ಹಿಂದೆ ಅಲ್ಲಿಯೂ ನಡೆದಿದ್ದ ಒಂದು ಘಟನೆ ಕಣ್ಣೆದುರು ಬಂದುಹೋಯ್ತು.  ರಾಕ್ಷಸರ ಕೈಗೆ ಸಿಕ್ಕು ನಲುಗಿಹೋಗಿದ್ದ ಆ ಬಾಲೆ, ಹಳ್ಳಿಗರ ದೃಷ್ಠಿಯಲ್ಲಿ ಶೀಲ ಕಳೆದುಕೊಂಡವಳಾಗಿಬಿಟ್ಟಿದ್ದಳು. ಅವಳು ಸಿಕ್ಕಾಗಲೆಲ್ಲಾ ಪದೇ ಪದೇ ಅವಳ ಮೇಲೆ ನಡೆದ ದೌರ್ಜನ್ಯವನ್ನ ನೆನಪಿಸಿ, ಪ್ರಶ್ನೆಗಳನ್ನ ಕೇಳಿ, ಮಾನಸಿಕವಾಗಿ ಹಿಂಸೆ ನೀಡಿ ಇನ್ನು ತನ್ನ ಜೀವನವೇ ವ್ಯರ್ಥ ಎಂಬ ಭಾವ ಅವಳಲ್ಲಿ ಮೂಡುವಂತೆ ಮಾಡಿಬಿಟ್ಟಿದ್ದರು. ಆಗಷ್ಟೇ ಅರಳುತ್ತಿದ್ದ ಆ ಹೂವಿನ ಜೀವನಪ್ರೀತಿಯನ್ನೇ ಕಸಿದುಕೊಂಡುಬಿಟ್ಟರು.  ಇಂಥ ಜನರು ನಗರ ಪ್ರದೇಶದಲ್ಲಿ ಇಲ್ಲವೆಂದಲ್ಲ.. ಇಲ್ಲಿಯೂ ಅಂತಹ ಜನರಿದ್ದಾರೆ.. ಆದರೆ ನಮ್ಮ ಪುಟ್ಟಿಯ ಕುಟುಂಬ ಮನೆಯನ್ನ, ಶಾಲೆಯನ್ನೇ ಬದಲಾಯಿಸಿ ಅವಳನ್ನ ಬೇರೆ ಊರಿನಲ್ಲಿಯೋ, ಅಥವಾ ಇದೇ ನಗರದ ಇನ್ನೊಂದು ಮೂಲೆಯಲ್ಲಿಯೋ ಮನೆ ಮಾಡಿ ಮಗಳನ್ನ ನೋಡಿಕೊಳ್ಳಬಹುದು. ಪ್ರಕರಣ ಗೊತ್ತಿರುವ ಜನರಿಂದ, ಅವರ ಮಾತುಗಳಿಂದ ಪುಟ್ಟಿಯನ್ನ ದೂರವಿಡಬಹುದು.  ಪುಟ್ಟಿ ಗುಣವಾಗಿ ಬಂದಮೇಲೆ ಅವಳ ತಾಯಿಯ ಬಳಿ ಈ ಬಡಾವಣೆಯನ್ನೇ ಬಿಟ್ಟು ಬೇರೆಯ ಕಡೆ ಮನೆ ಹುಡುಕಿಕೊಳ್ಳಿ ಎಂಬ ಸಲಹೆ ನೀಡಲೇಬೇಕು ನಾನು.

ನೊಂದ ಹೆಣ್ಣಿನ ಮನಸ್ಸಿಗೆ ಮತ್ತಷ್ಟು ನೋವು ನೀಡುವ ನಮ್ಮ ಸಮಾಜದ ಯೋಚನಾ ಲಹರಿಯನ್ನ, ಪರಿಧಿಯನ್ನ ವಿಸ್ತರಿಸಬೇಕು. ನಮ್ಮ ಸಮಾಜದಲ್ಲಿರುವ ಹೆಣ್ಣಿನ ಶೀಲದ ಕುರಿತ ಪರಿಕಲ್ಪನೆಯನ್ನ ಆಧುನಿಕತೆಗೆ ತಕ್ಕಂತೆ ಮಾರ್ಪಡಿಸುವ ಕೆಲಸ ಮೊದಲು ನಡೆಯಬೇಕು. ಇಂಥ ಜಾಗೃತಿಯ ಕೆಲಸಗಳನ್ನ ಖುದ್ದು ಸಕರ್ಾರವೇ ನಡೆಸಬೇಕು.  ಹೆಣ್ಣುಮಕ್ಕಳಲ್ಲಿ ತಮ್ಮತನದ ಅರಿವು, ಗೆಲ್ಲುವ ವಿಶ್ವಾಸ, ಕಷ್ಟವನ್ನೆದುರಿಸುವ ಧೈರ್ಯ ತುಂಬಲು ಸಮಾಜದ ಕಣ್ತೆರೆಸಿ ನೊಂದ ಬಾಲೆಯರಿಗೆ ಆಧಾರವಾಗಿ ನಿಲ್ಲಬೇಕು ನಮ್ಮ ಮಾಧ್ಯಮಗಳು.  ಇಂಥ ಪ್ರಕರಣಗಳು ಆದಷ್ಟು ಬೇಗ ಮುಗಿದು, ಅಪರಾಧಿಗಳಿಗೆ ತಕ್ಕ  ಶಿಕ್ಷೆಯಾಗಬೇಕು. ತ್ಯಾಚಾರದಂಥ ಘೋರ ಕೃತ್ಯವೆಸಗಿದ ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಕರ್ಾರ, ಕಾನೂನಿನದ್ದಾದರೆ, ಆ ಅಪರಾಧಿಗಳಿಗೆ ವಿಧಿಸುವ ಶಿಕ್ಷೆಗಳನ್ನ ವಿವರವಾಗಿ ಬಿತ್ತರಿಸಿ, ವಿಕೃತ ಮನಸ್ಸುಗಳಿಗೆ ಎಚ್ಚರಿಸುವ ಕೆಲಸ ಮಾದ್ಯಮಗಳಿಂದ ನಡೆಯಬೇಕು. ಅತ್ಯಂತ ಆಳವಾಗಿ ಯೋಚನೆಯಲ್ಲಿ ಬಿದ್ದುಬಿಟ್ಟಿದ್ದೇನೆ ನಾನು. ಬರಿಯ ಯೋಚನೆಗಳಾಳದಲ್ಲಿ ಸಿಲುಕಿಕೊಂಡು, ಇಂಥ ಕೃತ್ಯಗಳ ವಿರುದ್ಧ ಮನಸಾರೆ ಹೋರಾಡುತ್ತಿದ್ದೇನೆ ನಾನು.

ಹೀಗಾಗಿ ಪುಟ್ಟಿಗೆ ಎಚ್ಚರ ಬಂದಿರುವ ಸುದ್ದಿ ಸಿಕ್ಕ ಮೇಲಾದರೂ, ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂಬ ಕಾರಣಕ್ಕೆ ಮತ್ತೆ ಟಿವಿಯ ಮುಂದೆ ಹೋಗಿ ಕುಳಿತೆ. ಆದರೆ, ಅಲ್ಲಿ ಪುಟ್ಟಿಯ ಚೇತರಿಕೆಯ ಸುದ್ದಿ ಇರಲೇ ಇಲ್ಲ. ಯಾರೋ ನಾಲ್ಕಾರು ಜನರನ್ನ ಕುಳ್ಳಿರಿಸಿಕೊಂಡು ಚಚರ್ೆ ಮಾಡುತ್ತಿದ್ದರು ಅಷ್ಟೆ. ಸ್ಕ್ರೋಲ್, ಬ್ರೇಕಿಂಗ್, ಟಾಪ್ ಬ್ಯಾಂಡ್ ಎಲ್ಲವನ್ನೂ ಪರೀಕ್ಷಿಸಿ ನೋಡಿದೆ ಅಲ್ಲಿ ಎಲ್ಲಿಯೂ ಪುಟ್ಟಿ ಆರೋಗ್ಯದ ಬಗ್ಗೆ ಸುದ್ದಿ ಕಾಣಿಸಲಿಲ್ಲ. ಮತ್ತೆ ಅಲ್ಲಿಂದೆದ್ದು ಬಂದು ದೇವರ ಮುಂದೆ ಕುಳಿತ ನನ್ನಲ್ಲಿ ಪುಟ್ಟಿಯದೇ ಯೋಚನೆ.  `ಹೆಣ್ಣು ಯಾರನ್ನ ನಂಬಬೇಕು.. ದೇವರೇ..? ಸರಸ್ವತಿ ದೇಗುಲದಲ್ಲಿಯೇ ಇಂಥ ಕೃತ್ಯಗಳು ನಡೆದುಹೋದರೆ..? ಈ ಕ್ರೌರ್ಯದ ಪರಮಾವಧಿಗೆ ಏನನ್ನಬೇಕು..?  ನಮ್ಮ ಸಮಾಜದ ದುರವಸ್ಥೆಯೇ..? ಶಿಕ್ಷಣ ಸಂಸ್ಥೆಗಳ ನಿರ್ಲಕ್ಯವೇ..? ನಮ್ಮ ಸಂಸ್ಕಾರ, ಮಾನವೀಯ ಮೌಲ್ಯಗಳ ಅದಃಪತನವೇ..?' ದೇವರನ್ನೇ ಪ್ರಶ್ನಿಸಿಬಿಟ್ಟೆ. ಆದರೆ ದೇವರೂ ಉತ್ತರಿಸಲಾರ..!  ಪುಟ್ಟಿ ಮರಳಿ ಬಂದರೆ ಸಾಕು ಅಂತ ಅದೇ ದೇವರಲ್ಲಿ ಬೇಡಿಕೊಂಡು, ದೀಪ ಹಚ್ಚಿಟ್ಟು ಅಲ್ಲಿಯೇ ಒರಗಿಕೊಂಡೆ.

Tuesday, 14 March 2017

ಮೆದುಳಿನ ಆರೋಗ್ಯವೃದ್ಧಿಗಾಗಿ ’ಓದು’



’ಓದು’ ಮಾನವನಿಗೆ ಮಾತ್ರ ಲಭಿಸಿರುವ ವಿಶಿಷ್ಠ ಶಕ್ತಿ.  ಓದು ಅಂದರೆ ಏನು..? ಓದು ಅಂದರೆ ಜ್ಞಾನಾರ್ಜನೆ .. ಪುಸ್ತಕಗಳಿಂದ ಜ್ಞಾನವನ್ನ ಹೆಚ್ಚಿಸಿಕೊಳ್ಳುವ ಮಾರ್ಗ. ಆದರೆ ಬಹಳ ಜನರಿಗೆ ಓದು ಎಂಬ ಪದದ ನಿಜವಾದ ಅರ್ಥ ಗೊತ್ತೇ ಇರುವುದಿಲ್ಲ. ಶಾಲೆಗೆ, ಕಾಲೇಜಿಗೆ ಹೋಗುವ ಮಕ್ಕಳಿಗೆ ಮಾತ್ರ ಸಂಬಂಧಪಟ್ಟ ಪದ ಇದು ಎಂಬ ಭಾವನೆಯಲ್ಲಿರುವವರೇ ಹೆಚ್ಚು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕೆ, ಒಳ್ಳೆಯ ಅಂಕಗಳನ್ನ ಪಡೆಯುವುದಕ್ಕಾಗಿ ಮಾತ್ರ ಓದುವುದು ಎಂಭ ಭಾವನೆಯಲ್ಲಿರುವವರೇ ಜಾಸ್ತಿ.  ಆದರೆ, ಅದೊಂದೇ ಅಲ್ಲ..! ಓದುವ ಹವ್ಯಾಸ ನಮ್ಮ ಮಾನಸಿಕ ಆರೋಗ್ಯವನ್ನ ಹೆಚ್ಚಿಸಬಲ್ಲದು. ಪುಸ್ತಕಗಳೊಂದಿಗಿನ ಸ್ನೇಹ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲ ದೈಹಿಕ ಆರೋಗ್ಯವನ್ನೂ ಕೂಡ ಕಾಪಾಡಬಲ್ಲದು. 

ಸರಿಸುಮಾರು1 ಲಕ್ಷ ವರ್ಷಗಳ ಹಿಂದೆ ಮಾನವ ಓದುವುದನ್ನ ಕಲಿತ. ಸಂವಹನಕ್ಕಾಗಿ ಭಾಷೆಯ ಬಳಕೆಯನ್ನ ಆತ ಪ್ರಾರಂಭಿಸುತ್ತಿದ್ದಂತೆ, ತನ್ನ ಭಾವನೆಗಳನ್ನ ವ್ಯಕ್ತಪಡಿಸುವುದಕ್ಕಾಗಿ ಬರೆಯುವುದನ್ನ ಕಲಿತ. ತಮ್ಮದೇ ಆದ ಸಂಕೇತಗಳನ್ನ ಬರೆದು ಉಳಿದವರಿಗೆ ತಿಳಿಸುವ ಪ್ರಯತ್ನ ಮಾಡಲು ಪ್ರಾರಂಭ ಮಾಡಿದ. ಆ ಸಂಜ್ಞೆ, ಸಂಕೇತಗಳನ್ನ ನೋಡಿ, ಅದನ್ನ ಅರ್ಥ ಮಾಡಿಕೊಳ್ಳಲು ಮಾನವ ಯಾವಾಗ ಪ್ರಾರಂಭ ಮಾಡಿದನೋ ಅಂದಿನಿಂದಲೇ ’ಓದು’ ಶುರುವಾಯ್ತು.  ನಾಗರಿಕತೆ ಬೆಳೆದ ಹಾಗೆ, ಮಾನವನ ಅಭ್ಯಾಸ ಕ್ರಮಗಳು ಬದಲಾದವು, ತಾಳೆಗರಿಗಳ ಕಾಲ ಮುಗಿದು ಪುಸ್ತಕಗಳು ಹುಟ್ಟಿಕೊಂಡವು. ಈಗ ಈ ಆಧುನಿಕ ಯುಗದಲ್ಲಿ ಓದುವುದಕ್ಕಾಗಿ ಸಾವಿರಾರು ಪುಸ್ತಕಗಳನ್ನ ತುಂಬಿಟ್ಟುಕೊಳ್ಳಬಲ್ಲ ಕಿಂಡಲ್‌ನಂಥ ಗ್ಯಾಜೆಟ್‌ಗಳೂ ಬಂದಿವೆ. ಇಂಟರ್‌ನೆಟ್‌ ಸಹಾಯದಿಂದ ಜಗತ್ತಿನ ಯಾವ ಮೂಲೆಯ, ವಿಶ್ವದ ಯಾವ ಬರಹಗಾರರ ಪುಸ್ತಕಗಳನ್ನ ಬೇಕಾದರೂ ಕೊಂಡು ಓದಬಹುದು.   

’ಓದು ಮತ್ತು ಮೆದುಳಿನ ಸಾಮರ್ಥ್ಯ’ ಎಂಬ ವಿಷಯದ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಯುನೈಟೆಡ್‌ ಸ್ಟೇಟ್ಸ್‌ನ ಚಿಕಾಗೊದಲ್ಲಿರುವ ’ರಶ್‌ ಯೂನಿವರ್ಸಿಟಿ ಮೆಡಿಕಲ್‌ ಸೆಂಟರ್‌’ ಒಂದು ಸಮೀಕ್ಷೆ ನಡೆಸಿತ್ತು. ಇಲ್ಲಿಯ ಅಧ್ಯಯನಕಾರ ರಾಬರ್ಟ್ ಎಸ್‌ ವಿಲ್ಸನ್‌ ಈ ಅಧ್ಯಯನದ ರೂವಾರಿಯನ್ನ ವಹಿಸಿಕೊಂಡರು.  ಈ ಸಮೀಕ್ಷೆಯಲ್ಲಿ ಸುಮಾರು 294 ಮಂದಿ ವೃದ್ಧರ ದಿನಚರಿಯನ್ನ, ಚಟುವಟಿಕೆಗಳನ್ನ ಅಭ್ಯಾಸ ಮಾಡಲಾಯ್ತು. ಈ ಅಧ್ಯಯನದ ಪ್ರಕಾರ,  ಅವರಲ್ಲಿ ಅತೀ ಚುರುಕು ಬುದ್ದಿಯ ವೃದ್ಧರು ಓದುವ ಹವ್ಯಾಸವನ್ನಿಟ್ಟುಕೊಂಡವರು. ಹೆಚ್ಚು ಹೆಚ್ಚು ಓದುವ ಹವ್ಯಾಸವಿರುವ ವೃದ್ಧರ ಮೆದುಳುಗಳು ಸಾಮಾನ್ಯ ವೃದ್ಧರಿಗಿಂತ ಶೇಕಡಾ 48ರಷ್ಟು ಜಾಸ್ತಿ ಚುರುಕಾಗಿದ್ದಿದ್ದು ತಿಳಿದುಬಂತು. ಹಾಗೆಯೇ, ಮರೆವು, ಡಿಮೆನ್ಶಿಯಾ ಮತ್ತು ಕಿನ್ನತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ವೃದ್ಧರಿಗೆ ಓದುವ ಹವ್ಯಾಸವೇ ಇರಲಿಲ್ಲವಂತೆ..!  

ಅಧ್ಯಯನಕಾರರಾದ ‘ರಾಬರ್ಟ್‌ ಎಸ್‌ ವಿಲ್ಸನ್‌’ ಹೇಳುವ ಪ್ರಕಾರ, ಮೊದಲಿನಿಂದಲೂ ಓದುವ ಹವ್ಯಾಸಿಗಳಲ್ಲಿ ಅವರ ಮೆದುಳು ಸಾಮಾನ್ಯರಿಗಿಂತ ಶೇಕಡಾ 48ರಷ್ಟು ಹೆಚ್ಚು ಚುರುಕಾಗಿರುತ್ತದೆಯಂತೆ. ಯಾರು ಹೆಚ್ಚು ಹೆಚ್ಚು ಓದುವ ಹವ್ಯಾಸವಿಟ್ಟುಕೊಂಡಿರುತ್ತಾರೋ ಅವರಲ್ಲಿ ವೈಚಾರಿಕ ಶಕ್ತಿ ಜಾಸ್ತಿ.  ಹೆಚ್ಚು ಹೆಚ್ಚು ಜ್ಞಾನವನ್ನ ಸಂಪಾದಿಸುತ್ತ ಸಾಗುವ ಮನುಷ್ಯ ವೃದ್ಧಾಪ್ಯದಲ್ಲಿಯೂ ಕೂಡ ಮೆದುಳಿನ ಸಾಮರ್ಥ್ಯವನ್ನ ಕಳೆದುಕೊಳ್ಳುವುದಿಲ್ಲ. ಓದು ಮನುಷ್ಯನನ್ನ ತಿದ್ದಬಲ್ಲದು. ಪುಸ್ತಕಗಳು ಮನಸಿನ ನೆಮ್ಮದಿಯನ್ನ ಕಾಪಾಡಬಲ್ಲವು ಎಂಬುದು ವಿಲ್ಸನ್‌ ಅಧ್ಯಯನದ ಅಭಿಪ್ರಾಯ. 

ನಮ್ಮಲ್ಲಿ ತುಂಬಾ ಜನರಿಗೆ ಓದುವ ಹವ್ಯಾಸಗಳೇ ಕಮ್ಮಿ. ಇಂದಿನ ಫೇಸ್‌ಬುಕ್‌, ವಾಟ್ಸ್ಯಾಪ್‌ ಲೋಕದಲ್ಲಿ ಕಳೆದು ಹೋಗಿರುವ ಮಂದಿ ಪುಸ್ತಕಗಳಕಡೆ ಮುಖ ಮಾಡುವುದೇ ಇಲ್ಲ. ಇತ್ತೀಚೆಗೆ ನೀವು ಓದಿರುವ ಒಳ್ಳೇ ಪುಸ್ತಕಗಳು ಯಾವವು ಎಂಬ ಪ್ರಶ್ನೆಯನ್ನಿಟ್ಟರೆ, ಅದಕ್ಕೊಂದು ಸರಿಯಾದ ಉತ್ತರ ಕೊಡುವವರ ಸಂಖ್ಯೆ ಬಹಳ ಕಡಿಮೆ ಇದೆ.   ’Use it or lose it’ ಎಂಬ ಮಾತು ಮೆದುಳಿನ ವಿಷಯಕ್ಕೆ ಶೇಕಡಾ 100ರಷ್ಟು ಸರಿಹೊಂದುತ್ತದೆ. ಉಪಯೋಗಿಸಿ ಇಲ್ಲಾ ಕಳೆದುಕೊಳ್ಳಿ ಎಂಬ ಅರ್ಥವಿದೆ ಅದಕ್ಕೆ. ಅಂದರೆ ಮೆದುಳನ್ನ ಹೆಚ್ಚು ಹೆಚ್ಚು ಉಪಯೋಗಿಸುತ್ತಾ ಇದ್ದರೆ ಅದು ಇನ್ನಷ್ಟು ಚುರುಕಾಗಿ ಕೆಲಸ ಮಾಡುತ್ತದೆ, ಬದಲಾಗಿ ಮೆದುಳಿಗೆ ಕೆಲಸ ಕೊಡುವುದನ್ನೇ ಬಿಟ್ಟುಬಿಟ್ಟರೆ  ಅದು ತನ್ನ ಸಾಮರ್ಥ್ಯವನ್ನ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.  ಹೀಗಾಗಿ ಸಮಯದ ಅಭಾವದಲ್ಲಿ ಓದುವುದು ಸಾಧ್ಯವಿಲ್ಲ ಎಂಬ ಉತ್ತರ ನೀಡದೆ, ಓದುವುದಕ್ಕಾಗಿ ದಿನದ 24 ಗಂಟೆಗಳಲ್ಲಿ 20 ನಿಮಿಷ ಕಾದಿರಿಸಿಕೊಳ್ಳಿ.ಮನಸ್ಸು ಮತ್ತು ದೈಹಿಕ ಆರೋಗ್ಯವನ್ನ ಕಾಪಿಡಿಕೊಳ್ಳುವುದಕ್ಕಾಗಿ, ಮೆದುಳಿನ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳುವುದಕ್ಕಾಗಿ ಪುಸ್ತಕಗಳಿಗೆ ನಿಮ್ಮ ಜೀವನದಲ್ಲಿ ಸ್ವಲ್ಪ ಜಾಗ ಕೊಡಿ. 

ಓದುವ ಹವ್ಯಾಸದಿಂದಾಗುವ ಲಾಭಗಳು:

1. ಓದು ಮನಸ್ಸಿನ ಒತ್ತಡವನ್ನ ಕಡಿಮೆ ಮಾಡಬಲ್ಲದು, ಬದುಕಿನ ಉತ್ಸಾಹವನ್ನ ಹೆಚ್ಚಿಸಬಲ್ಲದು 
2. ಓದುವ ಹವ್ಯಾಸದಿಂದ ಹೃದಯದ ಆರೋಗ್ಯ ವೃದ್ಧಿಯಾಗಬಲ್ಲದು
3. ಕಿನ್ನತೆಯಿಂದ, ಕೀಳರಿಮೆಯಂಥ ಮಾನಸಿಕ ಸಮಸ್ಯೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಓದು ಸಹಕಾರಿ
4. ಮಾನಸಿಕವಾಗಿ ಒಂಟಿತನ ಅನುಭವಿಸುವವರಿಗೆ ಓದು ಜೊತೆಯಾಗಬಲ್ಲದು 
5. ಓದು ಮೆದುಳಿಗೆ ಕೆಲಸ ನೀಡುವ ಪರಿಣಾಮ ರಾತ್ರಿಯಲ್ಲಿ ಒಳ್ಳೆಯ ನಿದ್ದೆ ಸಾಧ್ಯ
6. ಓದು ಜ್ಞಾನವನ್ನ ನೀಡುವುದರ ಜತೆಗೆ ವಿಷಯಗಳನ್ನ ಅರ್ಥೈಸಿಕೊಳ್ಳುವ, ವಿಶ್ಲೇಷಿಸುವ ಗುಣವನ್ನ ಬೆಳೆಸುತ್ತದೆ.
7.ಶಬ್ಧಕೋಶ ವಿಸ್ತರಣೆಯಾಗುತ್ತದೆ, ಈ ಮೂಲಕ ನಮ್ಮ ಮಾತಿನ ತೂಕವನ್ನ ಹೆಚ್ಚಿಸಬಲ್ಲದು
8. ಮೆದುಳಿಗೆ ಸಂಬಂಧಪಟ್ಟ ಡಿಮೆನ್ಶಿಯಾದಂಥ ರೋಗದಿಂದ ದೂರವಿರಲು ’ಓದು’ ಸಹಕಾರಿ
9. ಏಕಾಗ್ರತೆಯನ್ನ ಹೆಚ್ಚಿಸಿ, ನೆನಪಿನ ಶಕ್ತಿಯನ್ನ ಹೆಚ್ಚಿಸಬಲ್ಲದು
10.ಬರವಣಿಗಯ ನೈಪುಣ್ಯವನ್ನೂ ಸುಧಾರಿಸಬಲ್ಲದು
11. ಮನಸ್ಸಿಗೆ ನೆಮ್ಮದಿ, ಶಾಂತಿ ನೀಡಬಲ್ಲ ಶಕ್ತಿ ಅಧ್ಯಯನಕ್ಕಿದೆ. 

ಹೆತ್ತ ಕರುಳ ಕೂಗಿಗೆ ಉತ್ತರಿಸಲಾರೆಯಾ...ದೇವರೇ..


ಆ ಮಕ್ಕಳು ಏನು ತಪ್ಪು ಮಾಡಿದ್ದರು..? ಅವರು ಯಾರಿಗೆ ಮೋಸ ಮಾಡಿದ್ದರು..? ಪಾಪ..! ಯಾರದೋ ದ್ವೇಷಕ್ಕೆ, ಇನ್ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾಗಿಹೋದರು.   ಎಷ್ಟು ಹಸಿದಿತ್ತೋ ಅವರ ಹೊಟ್ಟೆ... ಹಾಸ್ಟೆಲ್‌ನಲ್ಲಿ ಕೊಟ್ಟ ಆ ವಿಷದ ಊಟವನ್ನ ಹೊಟ್ಟೆತುಂಬ ಉಂಡುಬಿಟ್ಟಿದ್ರು.  ಹಸಿದ ಹೊಟ್ಟೆಗೆ ಹೋದ ವಿಷ ಆ ಎಳೆಯರ ಪ್ರಾಣವನ್ನೇ ಕಿತ್ತು ತೆಗೆದುಬಿಟ್ಟಿತ್ತು.  ಎಂಥವರಿಗಾದ್ರೂ ಒಮ್ಮೆ ಮನಕರಗಿಸುವ ಘಟನೆಯಲ್ಲವೇ ಇದು..?  ಬುಧವಾರ ರಾತ್ರಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ನಡೆದ ಈ ಘಟನೆ ಎಂಥ ಆಘಾತಕಾರಿ ಅಲ್ವಾ..?

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಹತ್ತಿರ ಬರುತ್ತಿದೆ, ತಾವು ಚೆನ್ನಾಗಿ ಓದಿಕೊಳ್ಳಬೇಕು ಅನ್ನೋ ಕಾರಣಕ್ಕೆ ರಾತ್ರಿ ೮ಕ್ಕೆ ಬೇಗ ಬೇಗ ಊಟ ಮಾಡಿ ಓದಲು ಹೊರಟಿದ್ದರಂತೆ ಈ ಮಕ್ಕಳು. ಉಳಿದೆಲ್ಲ ಮಕ್ಕಳು ಚಪಾತಿ ಪಲ್ಯ ತಿಂದರೆ, ಆಕಾಂಕ್ಷ, ಶಾಂತಮೂರ್ತಿ ಮತ್ತು ಶ್ರೇಯಸ್‌ ಅನ್ನ ಸಾಂಬಾರ್‌ ಊಟ ಮಾಡಿದ್ದರಂತೆ. ಊಟ ಮಾಡಿ ಸ್ವಲ್ಪ ಹೊತ್ತಾಗುತ್ತಿದ್ದಂತೆ ವಾಂತಿ ಮಾಡಿಕೊಳ್ಳತೊಡಗಿದರು.  ಹೊಟ್ಟೆ ಅವಚಿಟ್ಟುಕೊಂಡು ವಾಂತಿ ಮಾಡುವುದನ್ನ ನೋಡಿ ಹಾಸ್ಟೆಲ್‌ ಸಿಬ್ಬಂದಿ ವೈದ್ಯರಿಗೆ ಬರಹೇಳಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನೆಲ್ಲಾ ನೀಡಿದರೂ ಸಮಸ್ಯೆ ಶಮನವಾಗದಿರುವಾಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿದ್ದಾರೆ, ಉಸಿರಾಟದ ಸಮಸ್ಯೆ ಕಾಣಿಸುತ್ತಿದ್ದಂತೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಜಿಲ್ಲಾಸ್ಪತ್ರೆ ತಲುಪುವಷ್ಟರಲ್ಲಿ ಬೆಳಿಗ್ಗೆ ೪ ಗಂಟೆಯಾಗಿಹೋಗಿತ್ತು. ಆದರೆ, ಕಾಲ ಮಿಂಚಿಹೋಗಿತ್ತು.   ಜಿಲ್ಲಾಸ್ಪತ್ರೆ ತಲುಪುವಷ್ಟರಲ್ಲಿಯೇ ಆ ಮೂವರು ಮಕ್ಕಳು ಯಮಯಾತನೆಯನ್ನ ಅನುಭವಿಸಿ ಜೀವಬಿಟ್ಟಿದ್ದರು.

ಆ ಮಕ್ಕಳನ್ನ ಹೆತ್ತ ಕರುಳುಗಳಿಗೆ ಸುದ್ದಿ ತಲುಪುವಷ್ಟರಲ್ಲಿ ಸೂರ್ಯ ಬಂದಿದ್ದ.  ಬೆಳಬೆಳಗ್ಗೆ ಅವರಿಗೆ ಎಂಥ ಆಘಾತ..! ಹೆತ್ತ ಮಗುವಿನ ಶವದ ಮುಂದೆ ರೋಧಿಸೋ ತಾಯಿಯನ್ನ ಸಮಾಧಾನ ಮಾಡಲು ಸಾಧ್ಯವೇ..? ಕರುಳು ಕಿವುಚಿಬರುತ್ತೆ..! ಆ ಮಕ್ಕಳ ಜೀವವನ್ನ ಊಟವೇ ನುಂಗಿಬಿಟ್ಟಿತ್ತು. ಮುಗ್ಧವಾಗಿ ಹಸಿವು ನೀಗಿಸಿಕೊಂಡಿದ್ದ ಮಕ್ಕಳ ಪಾಲಿಗೆ ಅನ್ನವೇ ಯಮನಾಗಿಹೋಗಿದ್ದ..!

 ತಾವು ಹೆತ್ತು ಹೊತ್ತು ಸಾಕಿದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲಿ ಅನ್ನೋಕಾರಣಕ್ಕೆ ಆ ತಂದೆ ತಾಯಿಯರು ಇಂಥ ರೆಸೆಡೆನ್ಶಿಯಲ್‌ ಸ್ಕೂಲ್‌ಗೆ ಹಾಕಿರ್ತಾರೆ. ಮನೆಗಿಂತ ಹಾಸ್ಟೆಲ್‌ನಲ್ಲಿದ್ದರೆ ಅಭ್ಯಾಸದ ಕಡೆಗೆ ಹೆಚ್ಚಿನ ಗಮನವಿರುತ್ತದೆ ಎಂಬ ಉದ್ದೇಶದಿಂದಲೋ, ಮಕ್ಕಳು ತಮ್ಮ ಮೇಲೆ ಅವಲಂಬಿಗಳಾಗದಿರಲಿ ಅನ್ನೋ ಮನಸ್ಸಿನಿಂದಲೋ, ತಮ್ಮೂರಿನಲ್ಲಿ ಒಳ್ಳೆಯ ಶಾಲೆ ಇಲ್ಲವೆಂದೋ, ದೂರ ಪ್ರಯಾಣ ಮಾಡುವುದಕ್ಕಿಂದ ಹಾಸ್ಟೆಲ್‌ನಲ್ಲಿದ್ದು ಓದಿಕೊಳ್ಳಲಿ ಎಂಬ ಕಾರಣಕ್ಕೋ ತಮ್ಮ ಮಕ್ಕಳನ್ನ ಇಂಥ ಶಾಲೆಗಳಿಗೆ ಸೇರಿಸಿದ್ದರು. ತಾವು ಹೆತ್ತು ಸಾಕಿ ಬೆಳೆಸಿದ ಮಕ್ಕಳನ್ನ ಸಂಪೂರ್ಣ ಶಾಲೆಯವರನ್ನ ನಂಬಿ ಬಿಟ್ಟು ಹೋಗಿದ್ದರು.. ಆದರೆ ಆ ನಂಬಿಕೆಯ ಪರವಾಗಿ ಆ ತಾಯಿ ತಂದೆಯರಿಗೆ ಸಂದದ್ದೇನು..?ಮಕ್ಕಳನ್ನೇ ಕಿತ್ತುಕೊಳ್ಳೋ ಮಹಾ ಮೋಸ..!   

ಮೋಸದಿಂದ ವಿಷ ಉಂಡು ಅದೆಷ್ಟು ಪಾಡು ಪಟ್ಟವೋ ಆ ಮಕ್ಕಳು, ಎಷ್ಟು ನೋವು ತಿಂದು ಜೀವಬಿಟ್ಟವೋ.. ನೆನೆಸಿಕೊಂಡರೆ ಕಣ್ಣಲ್ಲಿ ನೀರು ತುಂಬುತ್ತೆ.  ಮನಸ್ಸಿನಲ್ಲಿ ಅದೆಷ್ಟು ಕನಸುಗಳನ್ನ ಹೊತ್ತಿದ್ದವೋ ಆ ಜೀವಗಳು. ವಿಷಾಹಾರ ಹಾಕಿ ಆ ಮುಗ್ಧ ಮಕ್ಕಳನ್ನ ಕೊಲ್ಲುವಷ್ಟು ದ್ವೇಷ ಯಾರಿಗಿದ್ದಿರಬಹುದು. ದ್ವೇಷವೋ, ಅಚಾತುರ್ಯವೋ, ನಿರ್ಲಕ್ಷ್ಯವೋ ಅದ್ಯಾವುದೋ ಕಾರಣಗಳಿರಬಹುದು.. ಅದು ಮುಂದೆ ತನಿಖೆಯಿಂದ ಬಯಲಾಗಲೇಬೇಕು.  ತಪ್ಪಿತಸ್ತರು ಸಿಕ್ಕಿ ಅವರಿಗೆ ಶಿಕ್ಷೆಯಾಗುತ್ತದೆ. ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌‌ ಸ್ಕೂಲ್‌  ಮಾಜಿ ಎಮ್‌ಎಲ್‌ಎ ಕಿರಣ್‌ ಕುಮಾರ್‌ ಅವರ ಒಡೆತನದ್ದಾದ್ದರಿಂದ ಸಧ್ಯಕ್ಕೆ ಅವರನ್ನ ಬಂಧಿಸಲಾಗಿದೆ. ಇದೆಲ್ಲವೂ ಹೌದು.. ಆದರೆ ಪುತ್ರಶೋಕದಲ್ಲಿರುವ ಆ ತಂದೆ ತಾಯಿಯರಿಗೆ ಮಕ್ಕಳು ಸಿಗುತ್ತಾರಾ ಹೇಳಿ.. ಪ್ರತಿದಿನ ಆ ಮಕ್ಕಳನನ್ನ ನೆನೆದು ನೆನೆದು ಜೀವಂತ ಶವವಾಗುತ್ತಾರೆ. ಉತ್ತಮ ಶಿಕ್ಷಣದ ಆಸೆಗಾಗಿ ತಮ್ಮ ಕುಡಿಯನ್ನ ರೆಸಿಡೆನ್ಶಿಯಲ್‌ ಸ್ಕೂಲ್‌ನಲ್ಲಿ ಬಿಟ್ಟಿದ್ದಕ್ಕೆ ಮುಮ್ಮಲ ಮರುಗುತ್ತಾರೆ.  ಮಕ್ಕಳನ್ನ ದೂರ ಇರಿಸಿದ್ದ ಪಶ್ಚಾತಾಪದಿಂದ ಕುಗ್ಗಿಹೋಗ್ತಾರೆ. ಇಂಥ ನೋವನ್ನ ಯಾವ ಪರಿಹಾರದಿಂದ ನೀಗಿಸಿಸಲು ಸಾಧ್ಯ..? 

ಅದ್ಯಾರೇ ಆಗಲಿ.. ಅವರು ಅದೆಷ್ಟೇ ಪ್ರಭಾವಿಗಳಾಗಲಿ.. ಮಕ್ಕಳನ್ನ ಕೊಂದ ಆ ಪಾಪಿಗಳಿಗೆ ಶಿಕ್ಷೆಯಾಗಲಿ..!  ಕರುಳಿನ ಕೂಗನ್ನ ಕೇಳಿಸಿಕೊಳ್ಳೋ ಆ ದೇವರೇ..ಈ ದುಃಖತಪ್ತ ತಂದೆ ತಾಯಿಯರಿಗೆ ನೋವನ್ನ ಸಹಿಸೋ ಶಕ್ತಿ ಕೊಡಲಿ.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...